Advertisement

Prof. Narahalli Balasubrahmanya: ಗುರುಗಳು ಸಿಗುವುದಿಲ್ಲ, ನಾವು ಹುಡುಕಿಕೊಳ್ಳಬೇಕು…

03:43 PM Sep 03, 2023 | Team Udayavani |

ಮನುಷ್ಯ ತರಗತಿಯ ಒಳಗೆ ಕಲಿಯುವುದಕ್ಕಿಂತ ಬಯಲಿನಲ್ಲಿ ಕಲಿಯುವುದೇ ಹೆಚ್ಚು. ಶಿಕ್ಷಕರು ಮಾತ್ರವಲ್ಲ, ಅನೇಕರು ನಮಗೆ ಗುರುವಾಗಿ ಕಲಿಸುತ್ತಿರುತ್ತಾರೆ. ತಂತ್ರಜ್ಞಾನ ಮಾಹಿತಿಗಳನ್ನು ಕೊಡುತ್ತದೆಯೇ ಹೊರತು ಜ್ಞಾನವನ್ನಲ್ಲ. ಕಂಪ್ಯೂಟರ್‌, ಮೊಬೈಲ್‌ಗ‌ಳು ಎಂದಿಗೂ ಗುರುವಾಗಲು ಸಾಧ್ಯವಿಲ್ಲ ಎನ್ನುವ ಪ್ರೊ.  ನರಹಳ್ಳಿ ಬಾಲಸುಬ್ರಹ್ಮಣ್ಯ, ಗುರು-ಶಿಷ್ಯ ಪರಂಪರೆ ಮತ್ತು ಅದರ ಮಹತ್ವದ ಕುರಿತು ಮಾತಾಡಿದ್ದಾರೆ…

Advertisement

ಶಿಕ್ಷಕರ ದಿನಾಚರಣೆಯಂದು ಹುಟ್ಟಿದ ನಿಮಗೆ ಶಿಕ್ಷಕರಾಗುವ ಅವಕಾಶ ಒದಗಿಬಂದದ್ದು ವಿಶೇಷ. ನೀವು ಎಂದಾದರೂ ಶಿಕ್ಷಕರಾಗುವ ಕನಸು ಕಂಡಿದ್ದಿರಾ?

ಚಿಕ್ಕಂದಿನಲ್ಲಿ ಆ ಬಗೆಯ ಕನಸು ಇದ್ದ ನೆನಪಿಲ್ಲ. ಆದರೆ ಹುದ್ದೆಯನ್ನು ಆಯ್ದುಕೊಳ್ಳುವಾಗ ನಾನು ಖಚಿತ ನಿಲುವನ್ನು ಹೊಂದಿದ್ದೆ. ಎಂ. ಎ. ನಲ್ಲಿ ಪ್ರಥಮ ರ್‍ಯಾಂಕ್‌ ಪಡೆದಿದ್ದರೂ ವಿಶ್ವವಿದ್ಯಾಲಯದಲ್ಲಿ ಅಶೈಕ್ಷಣಿಕ ಕಾರಣದಿಂದ ಸಂಶೋಧನಾ ವಿದ್ಯಾರ್ಥಿಯಾಗಿ ಅಧ್ಯಯನ ಮುಂದುವರೆಸಲು ನನಗೆ ಅವಕಾಶ ಸಿಗಲಿಲ್ಲ. ಬೇರೆ ಉದ್ಯೋಗದ ಅವಕಾಶಗಳು ಒದಗಿ ಬಂದಿದ್ದವು. ಪ್ರಮುಖ ದಿನಪತ್ರಿಕೆಯೊಂದರಲ್ಲಿ ಉಪ ಸಂಪಾದಕನಾಗಿ, ಕಾರ್ಖಾನೆಯೊಂದರಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಕಾಲೇಜೊಂದರಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಆಯ್ಕೆಗಳಿದ್ದವು. ಮೊದಲೆರಡು ಆಕರ್ಷಕವಾಗಿದ್ದರೂ, ಕಡೆಯದಾಗಿದ್ದ ಉಪನ್ಯಾಸಕ ಹುದ್ದೆಯನ್ನೇ ನಾನು ಆಯ್ಕೆ ಮಾಡಿಕೊಂಡೆ.

ನಮ್ಮಲ್ಲಿ ಶಿಕ್ಷಣ ಎಂದರೆ ಗುರು-ಶಿಷ್ಯ ಪರಂಪರೆ ಎಂಬ ಮಾತಿದೆ. ಈ ಪರಂಪರೆಯನ್ನು ನೀವು ಯಾವ  ರೀತಿ ಗುರುತಿಸುತ್ತೀರಿ. ನಿಮಗೆ ಸಿಕ್ಕ ಗುರು ಪರಂಪರೆ ಬಗ್ಗೆ ಹೇಳಿ.

ಗುರು-ಶಿಷ್ಯ ಪರಂಪರೆಗೆ ದೀರ್ಘ‌ ಇತಿಹಾಸವಿದೆ. ಶ್ರದ್ಧೆಯೇ ಇದರ ಮೂಲಾಧಾರ. ನಿಸ್ಸಂದೇಹವಾಗಿ ಇದು ಕಲಿಕೆಗೆ ಉತ್ತಮ ಮಾರ್ಗ. ಜ್ಞಾನದ ಸಾತತ್ಯವನ್ನು ಜತನವಾಗಿ ಪೋಷಿಸಿದ ಪರಂಪರೆಯಿದು. ಬಹುಮುಖೀ ನೆಲೆಯ ಅಧ್ಯಯನಕ್ಕೆ ಅಲ್ಲಿ ಅವಕಾಶವಿತ್ತು. ಆದರೆ ಈ ಪರಂಪರೆಯ ದೊಡ್ಡ ಮಿತಿ ಎಂದರೆ ಇಲ್ಲಿ ಎಲ್ಲರಿಗೂ ಅವಕಾಶವಿರಲಿಲ್ಲ. ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಆಧುನಿಕ ಶಿಕ್ಷಣ ಪದ್ಧತಿ ಸಾಮಾಜಿಕವಾಗಿ ಹೆಚ್ಚು ಅರ್ಥಪೂರ್ಣ. ಇನ್ನು ನನಗೆ ಸಿಕ್ಕ ಗುರು ಪರಂಪರೆಯ ವಿಚಾರದಲ್ಲಿ ನಾನು ಭಾಗ್ಯವಂತ. ಪ್ರಾಥಮಿಕ ಶಾಲೆಯಿಂದಲೂ ನನಗೆ ಉತ್ತಮ ಗುರುಗಳು ಸಿಕ್ಕಿದರು. ಅವರೆಲ್ಲ ಅಧ್ಯಯನಶೀಲ ವಿದ್ವಾಂಸರಾಗಿದ್ದರು. ಪ್ರೀತಿಯಿಂದ ಕಲಿಸಿದರು. ಪಾಠ ಮಾಡುವುದು ಅವರಿಗೆ ಅತ್ಯಂತ ಪ್ರಿಯ ಸಂಗತಿಯಾಗಿತ್ತು. ಪರಂಪರೆ ಹಾಗೂ ಆಧುನಿಕತೆ ಕುರಿತು ಅವರಿಗೆ ಅರಿವಿದ್ದುದರಿಂದ ನಾವು ಆರೋಗ್ಯಕರ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಯಿತು.

Advertisement

ನೀವು ಗುರುಗಳಿಗೆ ಕೊಟ್ಟ ಗೌರವವನ್ನು ನೀವು ಗುರುವಾದಾಗ ಪಡೆಯಲಾಯಿತೇ? ನೀವು ಗುರುವಾಗಿ ಯಾವ ಗುರುತುವಾದ ಕೆಲಸ ಮಾಡಿದ್ದೀರಿ?

ನಿಸ್ಸಂದೇಹವಾಗಿ, ಯಥೇತ್ಛ ಪಡೆದಿದ್ದೇನೆ. ಆಧುನಿಕ ಸಂದರ್ಭದಲ್ಲಿ ಗುರುಗಳ ಬಗ್ಗೆ ಗೌರವ ಕಡಿಮೆಯಾಗಿದೆ ಎಂಬ ತಪ್ಪು ತಿಳುವಳಿಕೆಯಿದೆ. ಅತ್ಯುತ್ತಮ ಅಧ್ಯಾಪಕರಾಗಿದ್ದು, ವ್ಯಕ್ತಿತ್ವದ ಘನತೆ ಕಾಪಾಡಿಕೊಂಡ ಗುರುಗಳಿಗೆ ಎಲ್ಲ ಕಾಲದಲ್ಲೂ ಗೌರವವಿದೆ. ಹಾದಿ ತಪ್ಪಿದ ಅನೇಕ ವಿದ್ಯಾರ್ಥಿಗಳಿಗೆ ಸರಿದಾರಿ ತೋರಿದ ಸಂತೃಪ್ತಿ ನನಗಿದೆ. ಅಂತಹ ಅನೇಕರು ಇಂದು ಜವಾಬ್ದಾರಿಯುತ ನಾಗರಿಕರಾಗಿ ಬದುಕುತ್ತಿದ್ದಾರೆ. ಶಿಕ್ಷಣ ಉದ್ಯೋಗ ಸಾಧನ ಮಾತ್ರವಲ್ಲ, ಒಳ್ಳೆಯ ನಾಗರಿಕರನ್ನು ಸೃಷ್ಟಿಸುವ ಮಾಧ್ಯಮವೂ ಹೌದು ಎಂಬ ನೆಲೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಸಮಾಧಾನವಿದೆ.

ಆಧ್ಯಾತ್ಮಿಕ ಸಾಧನೆ ಗುರುವಿನ ಮೂಲಕ ಸಾಧ್ಯ ಎನ್ನುತ್ತಾರೆ. ಎಲ್ಲರ ಆಶಯ ಅಭಿರುಚಿಗೆ ತಕ್ಕಂತೆ ಗುರು ಸಿಗುತ್ತಾರಾ?

ಗುರುಗಳು ಸಿಗುವುದಿಲ್ಲ, ನಾವು ಹುಡುಕಿಕೊಳ್ಳಬೇಕು. ನಮ್ಮ ಹುಡುಕಾಟದ ಹಾದಿಯಲ್ಲಿ ಅಂತಹ ಗುರುಗಳು ಅಕಸ್ಮಾತ್‌ ಎಂಬಂತೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನೇರವಾಗಿ ಅಲ್ಲದಿದ್ದರೂ ಅಪರೋಕ್ಷವಾಗಿ ನಮಗೆ ಅಂಥವರು ಗುರುಗಳಾಗಿಬಿಡುತ್ತಾರೆ. “ಏಕಲವ್ಯನ ಮಾದರಿ’ ಇದ್ದೇ ಇದೆಯಲ್ಲ! ಆದರೆ ಹೆಬ್ಬೆರಳು ಕೇಳದ ಹಾಗೆ ಅಥವಾ ನಾವು ನೀಡದ ಹಾಗೆ ಎಚ್ಚರ ವಹಿಸಬೇಕಷ್ಟೆ! ಆಧ್ಯಾತ್ಮಿಕ ಸಾಧನೆಗೆ ಮಾತ್ರವಲ್ಲ ಎಲ್ಲದಕ್ಕೂ ಇದು ಅನ್ವಯವಾಗುತ್ತದೆ.

ಹಿಂದೆ ಗುರುಗಳು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುತ್ತಿದ್ದರು. ಇಂದು ಶಿಕ್ಷಕರಿಗೇ ವಿದ್ಯಾರ್ಥಿಗಳು ಶಿಕ್ಷೆ ಕೊಡುವ ಮಾತುಗಳನ್ನಾಡುತ್ತಿದ್ದಾರೆ. ಈ ವಿಪರ್ಯಾಸಕ್ಕೆ ಹೇಗೆ ಸ್ಪಂದಿಸುವಿರಿ?

ಹಿಂದೆ ಗುರುಗಳು ಶಿಕ್ಷೆ ನೀಡುತ್ತಿದ್ದರು ಎಂಬುದು ತಪ್ಪು ಪರಿಕಲ್ಪನೆ. ನಿಜವಾದ ಗುರು ಯಾವ ಕಾಲದಲ್ಲಿಯೂ ಶಿಕ್ಷೆ ನೀಡುವುದಿಲ್ಲ, ನಿಜವಾದ ವಿದ್ಯಾರ್ಥಿ ಯಾವುದನ್ನೂ ಶಿಕ್ಷೆ ಎಂದು ಭಾವಿಸುವುದಿಲ್ಲ. ವಾಸ್ತವವೇನೆಂದರೆ, ನಿಜವಾದ ಗುರು ವೈಯಕ್ತಿಕ ರಾಗದ್ವೇಷಗಳಿಂದ ಮುಕ್ತನಾಗಿದ್ದು ಕಲಿಸುವುದರಲ್ಲಿ ನಿಷ್ಠುರನಾಗಿರುತ್ತಾನೆ. ಪ್ರೀತಿಯಿಲ್ಲದೆ ಕಲಿಸುವುದಾಗಲೀ, ಕಲಿಯುವುದಾಗಲೀ ಸಾಧ್ಯವಿಲ್ಲ.

ನಮ್ಮ ಶಿಕ್ಷಣ ಪರಂಪರೆಯಲ್ಲಿ ಗುರುವಿನ ಬಗ್ಗೆ ಭಕ್ತಿಯ ಭಾವವಿದೆ, ಆರಾಧನೆಯ ಮನೋಭಾವವಿದೆ, ಗುರುಗಳೂ ಇದನ್ನು ನಿರೀಕ್ಷಿಸುತ್ತಾರೆ. ಆದರೆ ಪಾಶ್ಚಾತ್ಯರಲ್ಲಿ ಈ ಬಗೆಯ ಭಕ್ತಿಭಾವವಾಗಲೀ, ಆರಾಧನೆಯ ಮನೋಭಾವವಾಗಲೀ ಇಲ್ಲ. ನಾನು ಕೆಲವು ವಿದೇಶೀ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ. ಆ ಸಂದರ್ಭದಲ್ಲಿ ಅರಿವಿಗೆ ಬಂದ ಸಂಗತಿ ಇದು. ಆದರೆ ವಿದೇಶಿ ವಿದ್ಯಾರ್ಥಿಗಳು ಹೆಚ್ಚು ಸ್ವತಂತ್ರವಾಗಿರುತ್ತಾರೆ. ಶ್ರದ್ಧೆಯಿಂದ ಕಲಿಯುತ್ತಾರೆ.

ಸಂದರ್ಶನ: ನ.ರವಿಕುಮಾರ

Advertisement

Udayavani is now on Telegram. Click here to join our channel and stay updated with the latest news.

Next