Advertisement

ಸಾರ್ವಜನಿಕ ಸಾರಿಗೆ ಬಳಸಲು ಮುಂದಾಗಿ

12:30 AM Jan 15, 2020 | Lakshmi GovindaRaj |

ಬೆಂಗಳೂರು: ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವ ಪಣತೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು. ಬೆಂಗಳೂರು ಸಂಚಾರ ಪೊಲೀಸ್‌ ಮತ್ತು ಸಾರಿಗೆ ಇಲಾಖೆ ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2020 ಉದ್ಘಾಟಿಸಿ ಮಾತನಾಡಿ, ಜೀವನೋ ಪಾಯಕ್ಕಾಗಿ ದೇಶದ ಎಲ್ಲೆಡೆಯಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.

Advertisement

ಹಾಗೆಯೇ ರಸ್ತೆಯಲ್ಲಿ ವಾಹನಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಸಂಚಾರ ದಟ್ಟಣೆ ತಗ್ಗಿಸಲು ಸಾರ್ವಜನಿಕ ಸಾರಿಗೆ ಬಳಸಬಹುದಾಗಿದೆ. ಸಾರ್ವಜನಿಕರು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ಪಣ ತೊಟ್ಟರೆ ಮಾತ್ರ ರಸ್ತೆ ಸುರಕ್ಷತಾ ಸಪ್ತಾಹ ಅರ್ಥಪೂರ್ಣವಾಗಲಿದೆ ಎಂದು ಹೇಳಿದರು.

ಮಕ್ಕಳಲ್ಲಿ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರೆ, ಸಂಚಾರ ಸುರಕ್ಷತೆಯ ಸಂಸ್ಕಾರದ ಅಡಿಯಲ್ಲಿ ಜೀವನ ಉಜ್ವಲವಾಗಿ ನೆಲೆಗೊಳ್ಳುತ್ತದೆ. ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಪಡಬೇಕು. ರಸ್ತೆ ಸುರಕ್ಷತೆಯ ನಿಯಮ ಪಾಲನೆ ಮತ್ತು ಅರಿವು ಮೂಡಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರದ ದೊಡ್ಡದಿದೆ ಎಂದರು.

ಭಾರತದಲ್ಲಿ ವರ್ಷಕ್ಕೆ 1.50ಲಕ್ಷಕ್ಕೂ ಅಧಿಕ ಜನರು ರಸ್ತೆ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಎಷ್ಟು ಅಗತ್ಯ ಎಂಬುದನ್ನು ಈ ಅಂಕಿಅಂಶ ತಿಳಿಸುತ್ತದೆ. ಕಳೆದ ವರ್ಷ ಕರ್ನಾಟಕದಲ್ಲಿ 10,317 ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 49,579 ಜನ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವುದು ನಿಜಕ್ಕೂ ದುರದೃಷ್ಟಕರ ಎಂದು ತಿಳಿಸಿದರು.

ವಾಹನ ಚಾಲನೆ ವೇಳೆ, ಮೊಬೈಲ್‌ ಬಳಕೆ ಹಾಗೂ ಮದ್ಯ ಸೇವನೆ ನಿಲ್ಲಿಸಬೇಕು ಹಾಗೂ ಮದ್ಯ ಸೇವಿಸಿ ಅಥವಾ ಅಡ್ಡಾದಿಟ್ಟಿ ವಾಹನ ಜೀವಹಾನಿಗೆ ಕಾರಣವಾಗಲಿದೆ ಎಂದು ಕಿವಿಮಾತು ಹೇಳಿದರು.ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಸ್ತೆ, ಸಿಗ್ನಲ್‌ ಹಾಗೂ ಕ್ರಾಸ್‌ ನಿರ್ವಹಣೆ ಜಾಗೃತಿ ಮೂಡಿಸಬೇಕು. ಅಪಘಾತವಾಗುವುದನ್ನು ತಡೆಯಲು ಅರಿವು ಮುಖ್ಯ ಎಂದು ಹೇಳಿದರು.

Advertisement

ಪೊಲೀಸರು ರಸ್ತೆ ಸುರಕ್ಷತೆಯನ್ನು ದಕ್ಷತೆಯಿಂದ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ 88 ಹೈವೆ ಪೆಟ್ರೋಲ್‌ ವಾಹನಗಳಿಗೆ ಚಾಲನೆ ನೀಡಿದ್ದೇವೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ಕಡಿಮೆ ಮಾಡಲು ಸಾಧ್ಯವಾಗಿದೆ. ಅಲ್ಲದೆ, ಈ ವಾಹನದಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ ಕೂಡ ಇದ್ದು, ಪ್ರಾಣಾಪಾಯ ತಡೆಯಬಹುದಾಗಿದೆ. ತಿಂಗಳಲ್ಲಿ ಒಂದು ವಾರ ರಾಜ್ಯದ ಯಾವುದಾರೂ ಒಂದು ಸ್ಥಳದಲ್ಲಿ ರಸ್ತೆ ಸುರಕ್ಷತೆ ಸಪ್ತಾಹ ಆಚರಿಸುವ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಶಾಸಕರ ರಿಜ್ವಾನ್‌ ಅರ್ಷದ್‌ ಮಾತನಾಡಿದರು.ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯಲ್‌, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎನ್‌.ಶಿವಕುಮಾರ್‌, ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಇತರರಿದ್ದರು.

ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನೆ: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಬೆಂಗಳೂರು ನಗರದ ಸುಮಾರು 600 ಶಾಲೆಗಳ 30 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫ‌ುಟ್‌ಬಾಲ್‌ ಪಂದ್ಯಕ್ಕಾಗಿ ಅಳವಡಿಸಿರುವ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಸಂಚಾರ ನಿಯಮದ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಸಂಚಾರ ದಟ್ಟಣೆ: ರಸ್ತೆ ಸುರಕ್ಷತೆ ಸಪ್ತಾಹದ ಹಿನ್ನೆಲೆಯಲ್ಲಿ ಕಂಠೀವರ ಕ್ರೀಡಾಂಗಣದ ಸುತ್ತಲಿನ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನದವೆಗೂ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಕೆ.ಆರ್‌.ವೃತ್ತ, ನೃಪತುಂಗ ರಸ್ತೆ, ಹರ್ಡನ್‌ ವೃತ್ತ, ವಿಠಲ್‌ ಮಲ್ಯ ರಸ್ತೆ, ಕಸ್ತೂರ್‌ ಬಾ ರಸ್ತೆ, ಕಬ್ಬನ್‌ ಪಾರ್ಕ್‌ನ ಒಳಭಾಗದಲ್ಲಿರುವ ರಸ್ತೆಗಳಲ್ಲೂ ಟ್ರಾಫಿಕ್‌ ಜಾಮ್‌ ಆಗಿತ್ತು. ಪೊಲೀಸರ ವಾಹನ ಮತ್ತು ಶಾಲಾ ವಾಹನಗಳನ್ನು ರಸ್ತೆಯ ಬದಿಯಲ್ಲೇ ನಿಲ್ಲಿಸಲಾಗಿತ್ತು. ವಾಹನ ಸವಾರರು ಕೆಲಗಂಟೆಗಳ ಕಾಲ ಪರದಾಡಿದರು.

ರಸ್ತೆ ಸುರಕ್ಷತೆ ಮಾಹಿತಿ: ಕಂಠೀರವ ಕ್ರೀಡಾಂಗಣದ ಹೊರಭಾಗದಲ್ಲಿ ಸಂಚಾರ ಪೊಲೀಸ್‌, ಸಾರಿಗೆ ಇಲಾಖೆ, ಮೆಟ್ರೊ, ಬಿಎಂಟಿಸಿ ಮೊದಲಾದ ಸಂಸ್ಥೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ಸಂಚಾರ ನಿಯಮದ ಕರಪತ್ರಗಳು ಹಾಗೂ ಚಾಲನಾ ಪರವಾನಿಗೆ ಪಡೆಯುವುದು ಮತ್ತು ಸಂಚಾರ ಪೊಲೀಸರ ಸಮವಸ್ತ್ರ ಮತ್ತು ಕರ್ತವ್ಯ ಇತ್ಯಾದಿ ಮಾಹಿತಿ ವಸ್ತುಪ್ರದರ್ಶನದಲ್ಲಿ ಸಿಗಲಿದೆ.

ರಾಜಧಾನಿಯಲ್ಲಿ ಸಂಚಾರ ಅಪಾಯಕಾರಿ
ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ, ಮಂಗಳವಾರ ಮತ್ತು ಬುಧವಾರದಂದು ಹೆಚ್ಚು ರಸ್ತೆ ಅಪಘಾತ ನಡೆಯುತ್ತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಹೊರ ತಂದಿರುವ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.

ಸಂಚಾರಿ ಸಪ್ತಾಹ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. 2019ನೇ ಸಾಲಿನಲ್ಲಿ ಭಾನುವಾರ ಸರಾಸರಿ 140, ಸೋಮವಾರ 87, ಮಂಗಳವಾರ 126, ಬುಧವಾರ 105, ಗುರುವಾರ 95, ಶುಕ್ರವಾರ 97 ಹಾಗೂ ಶನಿವಾರ 94 ರಸ್ತೆ ಅಪಘಾತ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಪುಸ್ತಕದಲ್ಲಿ ಉಲ್ಲೇಖೀಸಿದ್ದಾರೆ.

ಬೆಂಗಳೂರು ನಗರದಲ್ಲಿ ಪ್ರತಿದಿನ ಸರಾಸರಿ ಇಬ್ಬರು ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಸರಾಸರಿ 30ಮಂದಿ ತೀವ್ರವಾಗಿ ಗಾಯಗೊಳ್ಳುತ್ತಿರುತ್ತಾರೆ. ಬೆಂಗಳೂರು ನಗರದಲ್ಲಿ 2017ರಲ್ಲಿ 5,065, 2018ರಲ್ಲಿ 4,611 ಹಾಗೂ 2019ರಲ್ಲಿ 4,688 ಆಫ‌ಘಾತ ಪ್ರಕರಣ ವರದಿಯಾಗಿದೆ.

ಮಾರಣಾಂ ತಿಕ ರಸ್ತೆ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ. 2017ರಲ್ಲಿ 609, 2018ರಲ್ಲಿ 633 ಹಾಗೂ 2019ರಲ್ಲಿ 744 ಪ್ರಕರಣ ದಾಖಲಾಗಿದೆ. 2019ರಲ್ಲಿ ಸಂಚಾರ ನಿಯಮದ ಉಲ್ಲಂ ಘಟನೆಯಡಿಯಲ್ಲಿ ಒಟ್ಟು 7925134 ಪ್ರಕರಣ ದಾಖಲಾ ಗಿದೆ. ಇದರಲ್ಲಿ ಅತಿವೇಗ, ಹೆಲ್ಮೆಟ್‌ ಧರಿಸದೇ ಇರುವುದು, ಮದ್ಯಪಾನ ಸೇವಿಸಿ ಚಾಲನೆ, ಸಿಗ್ನಲ್‌ ಜಂಪ್‌ ಎಲ್ಲವೂ ಸೇರಿಕೊಂಡಿದೆ.

ನಗರದಲ್ಲಿ ಸಂಜೆ 6ರಿಂದ ರಾತ್ರಿ 9ರ ಅವರೆಗೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಬೆಳಗ್ಗೆ 6 ಗಂಟೆ ಅವಧಿಯಲ್ಲಿ 128, ಬೆಳಗ್ಗೆ 9ರಿಂದ ಮಧ್ಯಾಹ್ನ 12ರ ಅವಧಿಯಲ್ಲಿ 104, ಸಂಜೆ 6ರಿಂಂದ ರಾತ್ರಿ 9 ಗಂಟೆ ಅವಧಿಯಲ್ಲಿ 133 ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದೆ ಎಂದು ಪುಸ್ತಕದಲ್ಲಿ ಉಲ್ಲೇಖೀಸಿದೆ.

ಬೈಕ್‌ ಸವಾರರಿಗೆ ಆಪತ್ತು: ರಸ್ತೆ ಅಪಘಾತದಲ್ಲಿ ಹೆಚ್ಚು ಸಮಸ್ಯೆ ಈಡಾ ಗಿರುವವರಲ್ಲಿ ಬೈಕ್‌ ಸವಾರರು ಹಾಗೂ ಪಾದಚಾರಿಗಳು ಅಗ್ರ ಸ್ಥಾನದಲ್ಲಿದ್ದಾರೆ. 2019ನೇ ಸಾಲಿನ ರಸ್ತೆ ಅಪಘಾತದಲ್ಲಿ 356 ಬೈಕ್‌ ಸವಾರರು, 246 ಪಾದಚಾರಿಗಳು, 56 ಬೈಕ್‌ ಹಿಂಬದಿ ಸವಾರರು ಹಾಗೂ 46 ಮಂದಿ ಬೈಕ್‌ ಚಾಲಕರು, 11 ಸೈಕಲ್‌ ಸವಾರರು ಮರಣ ಹೊಂದಿದ್ದಾರೆ.

ಬಿಎಂಟಿಸಿಯಿಂದ 36, ಕೆಎಸ್‌ಆರ್‌ಟಿಸಿಯಿಂದ 18, ಲಾರಿಯಿಂದ 107, ಖಾಸಗಿ ಬಸ್‌ಗಳಿಂದ 19, ಕಾರುಗಳಿಂದ 99, ಆಟೀರಿಕ್ಷಾದಿಂದ 33, ಬೈಕ್‌ನಿಂದ 159, ಅಪರಿಚಿತ ವಾಹನಗಳಿಂದ 69, ಟ್ಯಾಂಕ್‌ನಿಂದ 28 ಹಾಗೂ ಇತರೆ ವಾಹನಗಳಿಂದ ಸುಮಾರು 100 ಮಾರಣಾಂತಿಕ ರಸ್ತೆ ಅಪಘಾತಗಳು ನಡೆದಿವೆ ಎಂದು ವಿಶ್ಲೇಷಿಸಿದೆ.

ದಾಖಲಾದ ಪ್ರಕರಣಗಳು
ವರ್ಷ ವೀಲ್ಹಿಂಗ್‌ ರೇಸಿಂಗ್‌ ಒಟ್ಟು
2017 168 2515 2683
2018 79 1235 1314
2019 38 627 665

ಸಂಚಾರ ನಿಯಮ ಉಲ್ಲಂಘನೆ
ಉಲ್ಲಂಘನೆ 2017 2018 2019
ಅತಿವೇಗ 1,30,868 90,942 51,531
ಮದ್ಯಪಾನ 73,741 53,092 40,602
ಸಿಗ್ನಲ್‌ ಜಂಪ್‌ 7,13,454 6,36,825 10,62,078
ನೋ ಪಾರ್ಕಿಂಗ್‌ 21,36,473 11,44,778 10,84,381
ಮೊಬೈಲ್‌ ಬಳಕೆ 2,79,917 2,69,225 2,36,867
ನೋ ಹೆಲ್ಮೆಟ್‌ 37,19,640 29,89,064 33,27,893

Advertisement

Udayavani is now on Telegram. Click here to join our channel and stay updated with the latest news.

Next