Advertisement

ಇನ್ನೂ ಬಗೆಹರಿದಿಲ್ಲ ಹಸಿವಿನ ಸಮಸ್ಯೆ

02:42 PM Sep 16, 2018 | |

ಸುಮಾರು 20-25 ವರ್ಷಗಳ ಹಿಂದಿನ ಮಾತು. ಆಗ ಸುಡಾನಿನಲ್ಲಿ ತಲೆದೋರಿದ ಭೀಕರ ಬರಗಾಲದಿಂದ ಉದ್ಭವಿಸಿದ ಹಸಿವೆಯ ದಾರುಣವನ್ನು ತೋರಿಸಲು ಕೆವಿನ್‌ ಕಾರ್ಟರ್‌ ಎಂಬ ಹವ್ಯಾಸಿ ಛಾಯಾಗ್ರಾಹಕ ತೆಗೆದ ಛಾಯಾಚಿತ್ರಕ್ಕೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ಸಿಗುತ್ತದೆ. ಆಗ ಈ ಪ್ರಶಸ್ತಿ ಸುದ್ದಿ ಮಾಡಿದ್ದಕ್ಕಿಂತ ಹಸಿವಿನ ದಾರುಣತೆ ಹೆಚ್ಚು ಸುದ್ದಿ ಮಾಡುತ್ತದೆ. ಹಸಿವೆಯಿಂದ ಸಾಯುತ್ತಿದ್ದ ಸುಡಾನಿನ ಜನರಿಗೆ ಅಮೆರಿಕ ಸಂಯುಕ್ತ ಸಂಸ್ಥಾನ ಅಲ್ಲೊಂದು ಗಂಜಿ ಕೇಂದ್ರ ತೆಗೆದಿರುತ್ತದೆ. ಹಸಿವೆಯಿಂದ ಕಂಗಾಲಾಗಿ ನಡೆಯಲಾಗದ ಸ್ಥಿತಿಯಲ್ಲಿದ್ದ ಪುಟ್ಟ ಕಂದನೊಬ್ಬ ತೆವಳಿಕೊಂಡೇ ಗಂಜಿ ಕೇಂದ್ರದತ್ತ ಸಾಗುತ್ತಿರುವಾಗ ಇನ್ನೇನು ಈ ಪುಟ್ಟ ಬಾಲಕ ಸತ್ತೇ ಹೋಗುತ್ತಾನೆ. ಆಗ ಸತ್ತ ಆ ಕಂದ ತನಗೆ ಆಹಾರವಾಗಬಹುದು ಎಂಬ ನಿರೀಕ್ಷೆಯಲ್ಲಿ ರಣ ಹದ್ದೊಂದು ಹಿಂಬಾಲಿಸುತ್ತಿದೆ.
ಹೃದಯ ಹಿಂಡುವ ಈ ದೃಶ್ಯವನ್ನು ಕೆವಿನ್‌ ಕಾರ್ಟರ್‌ ತನ್ನ ಕೆಮರಾದಲ್ಲಿ ಸೆರೆ ಹಿಡಿಯುತ್ತಾರೆ ಮತ್ತು ಆ ಕಂದನನ್ನು ಎತ್ತಿಕೊಂಡು ಓಡುತ್ತಲೇ ಗಂಜಿಕೇಂದ್ರಕ್ಕೆ ಕೊಂಡು ಹೋಗುತ್ತಾರೆ. ಆದರೆ ಅದಾಗಲೇ ಹಸಿವೆಯಿಂದ ಆ ಕಂದ ಪ್ರಾಣಬಿಟ್ಟಿರುತ್ತದೆ. ಈ ಘಟನೆ ಕಾರ್ಟರ್‌ರನ್ನು ಬಹಳ ಅಸ್ವಸ್ಥಗೊಳಿಸಿ ಅವರು ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುತ್ತಾರೆ. ಮುಂದೆ ಆ ಛಾಯಾಚಿತ್ರಕ್ಕೆ ಪುಲಿಟ್ಜರ್‌ ಪ್ರಶಸ್ತಿ ಬರುತ್ತದೆ. ಆದರೆ ಅದು ಅವರಿಗೆ ಸಂತೋಷ ಕೊಡುವುದಿಲ್ಲ. ಮಗು ಸತ್ತ ಘಟನೆಯಿಂದ ನೊಂದ ಅವರು ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಹಾರ ಪೋಲು ಮಾಡುವುದರ ಬದಲು ಅದು ಹಸಿದವರ ಹೊಟ್ಟೆ ಸೇರಬೇಕು ಎಂದು ಅವರು ಡೈರಿಯಲ್ಲಿ ಬರೆದಿಟ್ಟ ವಾಕ್ಯ ಅವರ ಸಾವಿನಷ್ಟೇ ಸುದ್ದಿ ಮಾಡುತ್ತದೆ. ಹಸಿವು ಎಂಬುದು ಒಂದು ಜಾಗತಿಕ ವಿದ್ಯಮಾನವಾಗಿ ಇಂದಿಗೂ ಉಳಿದಿದೆ. 

Advertisement

ಆಹಾರದ ಕೊರತೆಯಿಂದಾಗುವ ಹಸಿವೆ ಎಂಬುದು ಎಲ್ಲರನ್ನೂ ಕಾಡುವ ಅಂಶ. ಆಹಾರದ ಕೊರತೆ ಬಡತನವನ್ನು ಸೂಚಿಸಿದರೆ ಆಹಾರ ಪೋಲಾಗುವಿಕೆ ಉಳ್ಳವರ ದರ್ಪವನ್ನು ಸೂಚಿಸುತ್ತದೆ. ಆಹಾರವನ್ನು ಪೋಲು ಮಾಡುವುದು ಆರ್ಥಿಕ ಅಪವ್ಯಯ ಎಂಬುದು ಆರ್ಥಿಕ ತಜ್ಞರ ಅಭಿಮತ. ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಉತ್ಪಾದನೆಯಾಗುವ ಒಟ್ಟು ಆಹಾರದಲ್ಲಿ ಮೂರನೆಯ ಒಂದಂಶ ಹಸಿದವರ ಹೊಟ್ಟೆ ಸೇರದೆ ಪೋಲಾಗುತ್ತಿದೆ ಎಂಬುದು ಅಧ್ಯಯನ ತಿಳಿಸುತ್ತದೆ. ಚೆಲ್ಲಿದ ಆಹಾರ ಅಲ್ಲಿಯೇ ಕೊಳೆತರೆ ಮಿಥೇನ್‌ ಅನಿಲ ಉತ್ಪಾದನೆಯಾಗಿ ಅದು ಪರಿಸರ ಹಾಗೂ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕುರಿತು ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. 

ಭಾರತದಲ್ಲಿ ದಿನವೊಂದಕ್ಕೆ 15 ಸಾವಿರ ಟನ್‌ ಸಿದ್ಧ ಆಹಾರ ಪೋಲಾಗುತ್ತಿದೆ ಮತ್ತು ಬೆಂಗಳೂರು ನಗರ ಒಂದರಲ್ಲೇ ಪ್ರತೀದಿನ 900 ಟನ್‌ ಸಿದ್ಧ ಆಹಾರ ಮಣ್ಣುಪಾಲಾಗುತ್ತಿದೆ ಎಂದು ತಿಳಿದು ಬಂದ ಅಂಶ. ಪ್ರತಿನಿತ್ಯ ನೂರಾರು ಜನರು ಹೊಟ್ಟೆಗಿಲ್ಲದೆ ಸಾವಿಗೀಡಾಗುತ್ತಿರುವಾಗ ಇಂಥ ಆಹಾರ ಅಪವ್ಯಯ ತೀರಾ ಕಳವಳಕಾರಿಯಾದುದು ಎಂಬುದು ಬೆಂಗಳೂರಿನ ಇಂಜಿನಿಯರ್‌ ಪದ್ಮನಾಭನ್‌ ಅವರ ಆತಂಕ. ಆಹಾರದ ಅಪವ್ಯಯ ಸಲ್ಲದು ಎಂಬಂತೆ ಅವರು ಮದುವೆ ಮನೆಗಳಿಂದ, ಹೊಟೇಲುಗಳಿಂದ ಮಿಕ್ಕಿದ ಆಹಾರ ಸಂಗ್ರಹಿಸಿ ಹಸಿದವರಿಗೆ ಹಂಚುವ ಯೋಜನೆ ರೂಪಿಸಿಕೊಂಡಿದ್ದಾರೆ. ಮೊದಲೆಲ್ಲ ಸ್ಕೂಟರಿ ನಲ್ಲಿ ಹೋಗುತ್ತಿದ್ದ ಅವರಿಗೆ ಇವರ ಕಾಯಕವನ್ನು ಮೆಚ್ಚಿ ದಾನಿಯೊಬ್ಬರು ವಾಹನವೊಂದನ್ನು ನೀಡಿ ದ್ದಾರೆ. ಇದರ ಜತೆ 3-4 ಮಂದಿ ಸಮಾನ ಮನಸ್ಕ ಗೆಳೆಯರು ಇವರ ಜತೆಗೂಡಿದ್ದಾರೆ. ಹಾಗಾಗಿ ಕೆಲವೇ ವರ್ಷಗಳ ಹಿಂದೆ “ಆಹಾರ ಪೋಲು ಮಾಡಬೇಡಿ’ ಎಂದು ಹೆಸರಿಸಿದ ಇವರ ಅಭಿಯಾನಕ್ಕೆ ಹೆಚ್ಚು ಬಲ ಬಂದಿದೆ. ಮಗ ಇಂಜಿನಿಯರಿಂಗ್‌ ಕಲಿತು ಇಂಥ ಕೆಲಸ ಮಾಡುವುದು ಅವರ ಹೆತ್ತವರಿಗೆ ಸುತಾರಾಂ ಇಷ್ಟವಿಲ್ಲ. ಆದರೆ ಹೆತ್ತವರ ಅಸಮ್ಮತಿ ಮೀರಿ ಪದ್ಮನಾಭ ಅವರ ಬಡವರ ಪರವಾದ ಕಾಳಜಿ ಗಟ್ಟಿಯಾಗಿ ನಿಂತಿದೆ. ಇವರ ಇಂಥ ಕಾಳಜಿ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದರೆ ಅದರಲ್ಲಿ ಅಚ್ಚರಿ
ಯೇನಿಲ್ಲ. ಇದಕ್ಕನುಗುಣವಾಗಿ ಉತ್ತರ ಪ್ರದೇಶದ ಬುಂದೇಲ ಖಂಡ ನಿವಾಸಿ ಯೂಸುಫ್ ಮುಕಾಟಿ ಎಂಬ ವರು “ರೋಟಿ ಬ್ಯಾಂಕ್‌’ ಸ್ಥಾಪನೆ ಮಾಡಿದ್ದು ತೀರಾ ಇತ್ತೀಚಿನ ಬೆಳವಣಿಗೆ, ಇವರು ಸ್ಥಾಪಿಸಿದ “ಹಾರೂನ್‌ ಮುಕಾಟಿ ಇಸ್ಲಾಮಿಕ್‌ ಸೆಂಟರ್‌’ ಎಂಬ ಸ್ವಯಂ ಸೇವಾ ಸಂಸ್ಥೆ ಹದಿಹರೆಯದ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ದುಡಿಯುತ್ತಿದ್ದರೆ ಬಡವರ ಹಸಿವನ್ನು ಇಂಗಿಸಲು ಇವರು ಎರಡು ವರ್ಷಗಳ ಹಿಂದೆ ಬುಂದೇಲಖಂಡದಲ್ಲಿ ಸ್ಥಾಪಿಸಿದ ರೋಟಿ ಬ್ಯಾಂಕ್‌ ಎಲ್ಲರ ಮೆಚ್ಚುಗೆ ಪಡೆದಿದೆ. 

ಅಂದ ಹಾಗೆ ಇದರಲ್ಲಿ ರೋಟಿ ಬ್ಯಾಂಕ್‌ ಕಲ್ಪನೆ ಮಾಡಿದ್ದು ಹೇಗೆ? ಇವರು ವಾಸಿಸುವ ಪ್ರದೇಶದಲ್ಲಿ ಅಲ್ಲಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನರನ್ನು ನೋಡುತ್ತಿದ್ದಾಗ ಇವರಿಗೆ ವಿಷಾದವಾಗುತ್ತಿತ್ತು. ಹೊಟ್ಟೆ ತುಂಬಾ ಊಟ ಎಲ್ಲರ ಮೂಲಭೂತ ಹಕ್ಕು. ಇದು ನೈಸರ್ಗಿಕ ನ್ಯಾಯ ಕೂಡಾ. ಇದು ಇವರಿಗೆ ಕಾಡಿದ ವಿಷಯ, ಈ ಕುರಿತು ಮನೆಯವರೊಡನೆ ಚರ್ಚಿಸಿದಾಗ ಅವರಿಂದ ದೊರೆತ ಸಹಕಾರದ ಜತೆಗೆ ಜಾತ್ಯತೀತ ನೆಲೆಯಲ್ಲಿ ಊರ ಜನರ ಸಹಭಾಗಿತ್ವದೊಂದಿಗೆ 2011ರ ಡಿಸೆಂಬರ್‌ 5ರಂದು 250 ಸದಸ್ಯರ ನ್ನೊಳಗೊಂಡ ರೋಟಿ ಬ್ಯಾಂಕ್‌ ಜನ್ಮ 
ತಾಳಿತು. ಇದರ ಸದಸ್ಯರಾಗುವವರು ಒಂದು ಅರ್ಜಿ ಫಾರಂ ತುಂಬಿಸಿ ಕೊಟ್ಟರೆ ಅವರಿಗೊಂದು ಕೋಡ್‌ ನಂಬರ್‌ ನೀಡಲಾಗುತ್ತದೆ. ಸದಸ್ಯರಾದವರು ನಿತ್ಯ ಕನಿಷ್ಠ ಎರಡು ರೋಟಿ ಹಾಗೂ ಪಲ್ಯವನ್ನು ಬ್ಯಾಂಕಿಗೆ ತಂದೊಪ್ಪಿಸಬೇಕು. ಹೆಚ್ಚು ಕೊಟ್ಟರೂ ನಡೆಯುತ್ತದೆ. ಇದರ ಜತೆ ಈ ಬ್ಯಾಂಕಿನ ಸಂಘಟಕರು ದೊಡ್ಡ ದೊಡ್ಡ ಹೋಟೇಲುಗಳಲ್ಲಿ ಮದುವೆ ಮನೆಗಳಲ್ಲಿ ಕಾರ್ಖಾನೆ ಹಾಗೂ ವಿಮಾನದ ಕ್ಯಾಂಟೀನ್‌ಗಳಿಂದ ಹೆಚ್ಚುವರಿ ಯಾದ ಆಹಾರವನ್ನು ಸಂಗ್ರಹಿಸಿ ರೋಟಿ ಬ್ಯಾಂಕ್‌ ಮೂಲಕ ಹಸಿದವರಿಗೆ ಹಂಚುವ ಕೆಲಸ ಮಾಡುತ್ತಾರೆ. 
ಆಹಾರ ಸಂಗ್ರಹಿಸಿ ಇಡಲು ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆಯೂ ಇದೆ. ಹೀಗೆ ದಿನ ನಿತ್ಯ ಪೋಲಾಗುವ ಆಹಾರ ಹಸಿದವರ ಹೊಟ್ಟೆ ಸೇರುತ್ತದೆ ಎಂಬ ಸಮಾಧಾನ ಈ ಯೋಜನೆಯ ಸಂಘಟಕರದ್ದು. ಜಾತಿ ಮತ ಬೇಧವಿಲ್ಲದೆ ಎಲ್ಲರೂ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರ ಹಿಂದೆ ಸಿದ್ಧ ಉಡುಪು ಮಳಿಗೆ ಯುಸುಫ್ 
ಮುಕಾಟಿ ಅವರ ಸದಾಶಯದ ಚಿಂತನೆಯಿದೆ ಎಂಬುದು ಮೆಚ್ಚ ತಕ್ಕ ವಿಚಾರ ಇದು ಹಲವರಿಗೆ ಪ್ರೇರಣೆ ನೀಡಿರಲೂಬಹುದು. ಮುಂಬಯಿ , ಕೊಲ್ಕತ್ತಾ, ಹೈದ್ರಾಬಾದ್‌, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಉದ್ಯಮಿಗಳಾಗಿರುವ ಅನೇಕ ನವಕೋಟಿ ನಾರಾಯಣರಿದ್ದು ಇವರೆಲ್ಲ ಏಷ್ಯಾ ಪೆಸಿಫಿಕ್‌ ಬಹುಕೋಟಿ ಸಂಪತ್ತಿನ ಒಡೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಅಗ್ರಗಣ್ಯರು. ಅಲ್ಲದೇ ನಮ್ಮ ಅನೇಕ ಸಿನೇಮಾ ಹಾಗೂ ಕ್ರಿಕೆಟ್‌ ತಾರೆಗಳೂ ಬಹುಕೋಟಿ ಸಂಪತ್ತಿಗೆ ಒಡೆಯ ರಾಗಿದ್ದಾರೆ. ಇವರಲ್ಲಿ ಒಂದಷ್ಟು ಜನ ಯುಸೂಫ್ ಮುಕಾಟಿ ಯವರಂತೆ ಚಿಂತನೆ ನಡೆಸಿ ತಮ್ಮ ಗಳಿಕೆಯಲ್ಲಿ ಒಂದಿಷ್ಟು ಭಾಗವನ್ನೂ ಹಸಿದವರಿಗಾಗಿ ಮೀಸಲಿರಿಸು ವಂತಾದರೆ ಭಾರತದಲ್ಲಿ ಹಸಿವೆಯಿಂದ ಬಳಲುವವರನ್ನು ಹುಡುಕಲು ಸೂಕ್ಷ್ಮದರ್ಶಕ ಬೇಕಾಗಬಹುದು. ಆ ದಿನವೂ ಬೇಗ ಬರಲಿ 
ಎಂದು ಹಾರೈಸುವುದಷ್ಟೇ ನಮ್ಮ ಪಾಲಿನ ಕೆಲಸ.

ಕೆ. ಶಾರದಾ ಭಟ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next