Advertisement

ಖಾಸಗಿ ಆಸ್ಪತ್ರೆ ಮುಷ್ಕರ: ಜನರ ತತ್ತರ

02:53 PM Nov 04, 2017 | |

ರಾಯಚೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಬೀಗ ಹಾಕಿ ವೈದ್ಯರು ಶುಕ್ರವಾರ ಮುಷ್ಕರಕ್ಕಿಳಿದ ಪರಿಣಾಮ ರೋಗಿಗಳು ಪರದಾಡುವಂತಾಯಿತು. ಕಾಯಿದೆಯಲ್ಲಿ ವೈದ್ಯರಿಗೆ ಸಮಸ್ಯೆಯಾಗುವಂಥ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ವೈದ್ಯರು ಸೇವೆಯಿಂದ ವಿಮುಖರಾಗಿದ್ದರು. ಬೆಳಗ್ಗೆಯಿಂದಲೇ ಆಸ್ಪತ್ರೆಗಳ ಬಾಗಿಲು ಮುಚ್ಚಿ ನೋಟಿಸ್‌ ಹಾಕಲಾಗಿತ್ತು. ಇದರರಿವಿಲ್ಲದೇ ಆಸ್ಪತ್ರೆಗಳಿಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ತೊಂದರೆ ಎದುರಿಸಿದರು.

Advertisement

ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಶಾಪ್‌ಗ್ಳಿಗೆ ಬೀಗ ಹಾಕಲಾಗಿತ್ತು. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಶುಶ್ರೂಷಕಿಯರೇ ಚಿಕಿತ್ಸೆ ನೀಡಿದರೆ, ಹೊರರೋಗಿಗಳಿಗೆ ಯಾವುದೇ ಚಿಕಿತ್ಸೆ ಸಿಗಲಿಲ್ಲ. ಗರ್ಭಿಣಿಯರಿಗೆ, ತುರ್ತುಸೇವೆ ಮತ್ತು ಒಳರೋಗಿಗಳಿಗೆ ಯಾವುದೇ ಸಮಸ್ಯೆಯಾಗಲಿಲ್ಲ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ವೈದ್ಯರು, ನಂತರ ಬೃಹತ್‌ ರ್ಯಾಲಿ ನಡೆಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಧ್ಯಾಹ್ನ ಡಿಸಿ ಕಚೇರಿಗೆ ಆಗಮಿಸಿದ ವೈದ್ಯಕೀಯ ಸಂಘದ ಸದಸ್ಯರು, ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಖಾಸಗಿ ವೈದ್ಯಕೀಯ ಕ್ಷೇತ್ರಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಸಮಾಜಿಕ, ಆರ್ಥಿಕ ಅಥವಾ ರಾಜಕೀಯ ಪ್ರೋತ್ಸಾಹ ಇಲ್ಲ. ಆದರೆ, ಕಟ್ಟುನಿಟ್ಟಿನ ಕಾನೂನು ಅಡೆತಡೆಗಳು ಮಾತ್ರ ಇವೆ. ಈ ಕ್ಷೇತ್ರಕ್ಕೆ ದೊರೆಯುವ ಸಾಲದ ಬಡ್ಡಿ, ವಿದ್ಯುತ್‌, ನೀರಿನ ದರಗಳು ಹಾಗೂ ತೆರಿಗೆಗಳು ಇತರಗಿಂತ ಹೆಚ್ಚಾಗಿರುತ್ತವೆ ಎಂದು ದೂರಿದರು.

ಯಾವುದೇ ಖಾಸಗಿ ಕ್ಷೇತ್ರಗಳಿಗೆ ಇಲ್ಲದಂಥ ಕಾನೂನು ಕಟ್ಟುಪಾಡುಗಳ ವೈದ್ಯಕೀಯ ಕ್ಷೇತ್ರಕ್ಕೆ ಹೇರಲಾಗಿದೆ. ಅನೇಕ ಕಾಯ್ದೆಗಳು ರೋಗಿ ಹಾಗೂ ವೈದ್ಯರ ಮಧ್ಯೆ ಇರುವಾಗಲೇ ಹೊಸದೊಂದು ಸವಾರ್ಧಿಕಾರ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರುವ ಕ್ರಮ ಖಂಡನೀಯ ಎಂದು ದೂರಿದರು. ಈ ಕಾಯ್ದೆ ತಿದ್ದುಪಡಿಯಿಂದ ದಂಡ, ಬಂಧನ, ಜೈಲುವಾಸ ಇತ್ಯಾದಿಗಳ ಶಿಕ್ಷೆಗಳನ್ನು ಒಳಗೊಂಡಿರುವುದರಿಂದ ವೈದ್ಯರಿಗೆ ಭಯದ ವಾತಾವರಣ ಸೃಷ್ಟಿಸಲಾಗಿದೆ. ರೋಗಿ ಮತ್ತು ವೈದ್ಯರ ಮಧ್ಯೆ ವಿಶ್ವಾಸದ ಸಂಬಂಧದ ಬದಲಿಗೆ ದ್ವೇಷಿಗಳನ್ನಾಗಿಸುವ ಉದ್ದೇಶವಾಗಿದೆ. 

ರೋಗನಿರ್ಣಯ ಹಾಗೂ ಚಿಕಿತ್ಸೆಗಳಿಗೆ ಅಗತ್ಯವಿರುವ ಸೌಲಭ್ಯಗಳ ವೆಚ್ಚ ದುಬಾರಿಯಾಗಿವೆ. ಆದರೆ, ಬಿಲ್‌ ಮಾತ್ರ ಕಡಿಮೆ ಇರಬೇಕು ಎಂದು ನಿರೀಕ್ಷಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಕೆಪಿಎಂಇ ಕಾಯ್ದೆ ಜಾರಿಗೊಳಿಸಿರುವ ಕ್ರಮವನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಲಿಂಗಸುಗೂರು ಖಾಸಗಿ ಆಸ್ಪತ್ರೆ ಬಂದ್‌

ಲಿಂಗಸುಗೂರು: ವೈದ್ಯಕೀಯ ವೃತ್ತಿಗೆ ಮಾರಕ ಕಾಯ್ದೆ ತಿದ್ದುಪಡಿ ಕೈಬಿಟ್ಟು ನ್ಯಾ| ವಿಕ್ರಮ್‌ಜೀತ್‌ ಸೇನ್‌ ಸಮಿತಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದವು.
ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್‌ ಕೌನ್ಸಿಲ್‌ಗ‌ಳು ರೋಗಿಗಳಿಗೆ ನ್ಯಾಯ ಒದಗಿಸಲು ಇರುವ ಸಂಸ್ಥೆಗಳಾಗಿದ್ದು, ತಪ್ಪಿತಸ್ಥರು ಎಂದು ತೀರ್ಮಾನವಾದಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶಗಳಿರುವಾಗ ಜಿಲ್ಲಾಮಟ್ಟದಲ್ಲಿ ಮತ್ತೂಂದು ಕುಂದು ಕೊರತೆ ಪರಿಹಾರ ಸಮಿತಿ ರಚನೆ ಅವಶ್ಯಕತೆ ಇದೆಯೇ. ಸದರಿ ತಿದ್ದಪಡಿ ಬಂದಲ್ಲಿ ಮತ್ತಷ್ಟು ದೂರುಗಳು ವೈದ್ಯರ ಹಾಗೂ ಆಸ್ಪತ್ರೆಗಳ ಮೇಲೆ ಹೆಚ್ಚಳವಾಗಿ ವೈದ್ಯರು ಸೇವೆ ಮಾಡುವುದನ್ನು ಬಿಟ್ಟು ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್‌ ಕೌನ್ಸಿಲ್‌ಗ‌ಳ ಜತೆಗೆ ಇನ್ನೊಂದು ಸಮಿತಿಗೂ ಒಟ್ಟಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಮಾನಸಿಕವಾಗಿ ಜರ್ಝರಿತರಾಗಿ ಗುಣಮಟ್ಟದ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ಸಾಧ್ಯವಾಗುತ್ತಿದೆಯೇ ಎನ್ನುವ ಅಂಶವನ್ನು  ಮನದಲ್ಲಿಟ್ಟುಕೊಂಡು ವೈದ್ಯರು ನೆಮ್ಮದಿಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತೆ ತಿದ್ದುಪಡಿಯಿಂದ ಕೈಬಿಡಬೇಕು ಎಂದು ವೈದ್ಯರು ಆಗ್ರಹಿಸಿದರು.

15 ಲಕ್ಷ ಕುಟಂಬಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿರುವ ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳ ಮೇಲೆ ಗದಾಪ್ರಹಾರ ನಡೆಸುವುದನ್ನು ಬಿಡಬೇಕು. ವೈದ್ಯಕೀಯ ವೃತ್ತಿಗೆ ಮಾರಕ ಅಂಶಗಳನ್ನು ಕೈಬಿಟ್ಟು ಉಳಿದ ತಿದ್ದುಪಡಿಗಳನ್ನು ಜಾರಿಗೆ ತಂದಲ್ಲಿ ನಮ್ಮದೇನೂ ಆಕ್ಷೇಪವಿಲ್ಲ ಅಥವಾ ಈ ತಿದ್ದುಪಡಿಗಳನ್ನು ಮಾಡಲು ಸರಕಾರವೇ
ನ್ಯಾ| ವಿಕ್ರಮಜೀತ್‌ ಸೇನ್‌ ಸಮಿತಿ ವರದಿ ಯಥಾವತ್ತಾಗಿ ಜಾರಿಯಾದರೆ ರಾಜ್ಯದ ಜನತೆಗೂ, ರೋಗಿಗಳಿಗೂ, ವೈದ್ಯರಿಗೂ ಒಳ್ಳೆಯದಾಗಲಿದೆ. ಈ ಬಗ್ಗೆ ಕೂಡಲೇ ವರದಿ ಜಾರಿಗೊಳಿಸುವಂತೆ ಆಗ್ರಹಿಸಿದರು

ಖಾಸಗಿ ಆಸ್ಪತ್ರೆಗಳ ಮುಷ್ಕರ:ರೋಗಿಗಳ ಪರದಾಟ

ದೇವದುರ್ಗ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರಕಾರದ ಧೋರಣೆ ವಿರೋಧಿ ಸಿ 10ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬಂದ್‌ ಆಗಿದ್ದರಿಂದ ರೋಗಿಗಳು ಪರದಾಡಿದರು.

ಈ ಕಾಯಿದೆ ಜಾರಿಗೆ ತರುವ ಮೂಲಕ ಖಾಸಗಿ ಆಸ್ಪತ್ರೆಗಳ ಹಾಗೂ ಅಲ್ಲಿನ ವೈದ್ಯರೂ ಸೇರಿದಂತೆ ಸಿಬ್ಬಂದಿ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ತಿದ್ದುಪಡಿ ಕಾಯಿದೆ ಜಾರಿ ನಿರ್ಧಾರ ಕೈಬಿಟ್ಟು ನ್ಯಾ| ವಿಕ್ರಮ್‌ಜಿತ್‌ ಸೇನ್‌ ಸಮಿತಿ ವರದಿ ಯಥಾವತ್‌ ಜಾರಿಗೆ ಆಗ್ರಹಿಸಿ ಬಹುತೇಕ ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಲಾಯಿತು. ನಿತ್ಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತ ನೂರಾರು ರೋಗಿಗಳು ಮುಷ್ಕರದಿಂದ ಅನೇಕ ತೊಂದರೆ ಅನುಭವಿಸಬೇಕಾಯಿತು. ಮಾಹಿತಿ ಕೊರತೆಯಿಂದ ಹಳ್ಳಿಗಳಿಂದ ಬಂದ ರೋಗಿಗಳು ಆಸ್ಪತ್ರೆ ಬಂದ್‌ ಆದ್ದರಿಂದ ವಾಪಸು ಹೋದರು. ಕೆಲವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಖಾಸಗಿ ಆಸ್ಪತ್ರೆಗಳಲ್ಲಿ ನಿತ್ಯ ಚಿಕಿತ್ಸೆ ಅವಲಂಭಿಸಿದ ಬಹುತೇಕ ರೋಗಿಗಳು ಮುಷ್ಕರದಿಂದ ಒಂದಿಲ್ಲೊಂದು ಸಮಸ್ಯೆ ಎದುರಿಸಬೇಕಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ಇರದೇ ಇರುವುದರಿಂದ ಪಟ್ಟಣದಲ್ಲಿ ಎರಡು ಖಾಸಗಿ ಮಕ್ಕಳ ಆಸ್ಪತ್ರೆ ಇದ್ದು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಬಂದಾದ್ದರಿಂದ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತ ಪರಿಸ್ಥಿತಿ ಎದುರಾಯಿತು ಎಂದು ಪಾಲಕರು ಆರೋಪಿಸಿದರು 

ಹೊರ ರೋಗಿಗಳ ಸೇವೆ ಸ್ಥಗಿತ
ಸಿಂಧನೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ ಮಾಡಿರುವ ತಿದ್ದುಪಡಿ ಕೆಲವು ಅಂಶಗಳನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಯಿತು. ನಗರದ ಪ್ರತಿಷ್ಠಿತ ಸಹನಾ ಮಕ್ಕಳ ಆಸ್ಪತ್ರೆ, ಅನ್ನದಾನೇಶ್ವರ ಆಸ್ಪತ್ರೆ, ಶಂಕರ ಹೆರಿಗೆ ಆಸ್ಪತ್ರೆ, ಜನನಿ ಆಸ್ಪತ್ರೆ, ವೀರಗಂಗಾಧರ ಆಸ್ಪತ್ರೆ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದವು. ಆದರೆ ಮುಷ್ಕರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ರೋಗಿಗಳು ಬಂದು ಬೇಸರದಿಂದ ವಾಪಸ್ಸಾದರು. ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಕಿಕ್ಕಿರಿದು ತುಂಬಿದ್ದರು. ಎಲ್ಲಿ ನೋಡಿದರೂ ಬರೀ ರೋಗಿಗಳೇ ಕಾಣುತ್ತಿದ್ದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ವೈದ್ಯಾಧಿಕಾರಿಗಳು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಈ ಕುರಿತು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿ ಕಾರಿ ಡಾ| ನಾಗರಾಜ ಕಾಟ್ವಾ ಮಾತನಾಡಿ, ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಂಡಿದ್ದರಿಂದ ಬಹಳಷ್ಟು ಜನ ರೋಗಿಗಳು ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿದ್ದಾರೆ. ನಮ್ಮಲ್ಲಿ 24 ಗಂಟೆಗಳ ಕಾಲ ಸೇವೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಗಳಾಗದಂತೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ರಿಮ್ಸ್‌ನತ್ತ ಸುಳಿಯಲಿಲ್ಲ : ಖಾಸಗಿ ಆಸ್ಪತ್ರೆಗಳ ಮುಷ್ಕರದ ಹಿನ್ನೆಲೆಯಲ್ಲಿ ರಿಮ್ಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ರಜೆ ರದ್ದುಗೊಳಿಸಲಾಗಿತ್ತು. ಅಗತ್ಯ ಔಷಧ ಸಂಗ್ರಹ ಸೇರಿ ಸಿಬ್ಬಂದಿಯೂ ಅಗತ್ಯಕ್ಕಿಂತ ಹೆಚ್ಚಿದ್ದರು. ಆದರೆ, ಮಧ್ಯಾಹ್ನ ಎರಡು ಗಂಟೆಯಾದರೂ ರೋಗಿಗಳ ಸಂಖ್ಯೆಯಲ್ಲಿ ಯಾವುದೇ ವ್ಯಾತ್ಯಾಸ ಕಂಡು ಬರಲಿಲ್ಲ. ಎಂದಿನಂತೆ ಮಧ್ಯಾಹ್ನ 600 ಹೊರರೋಗಿಗಳು, 100 ಮರು ರೋಗಿಗಳು ಬಂದಿದ್ದರು. ನಿತ್ಯ ಸಾವಿರದಿಂದ 1200 ಹೊರರೋಗಿಗಳು, 200ಕ್ಕೂ ಅಧಿಕ ಮರು ಮತ್ತು ಒಳ ರೋಗಿಗಳು ಬರುತ್ತಾರೆ. ಆದರೆ, ಶುಕ್ರವಾರ ಈ ಪ್ರಮಾಣ ದುಪ್ಪಟ್ಟು ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಯಾವುದೇ ವ್ಯಾತ್ಯಾಸವಾಗಿಲ್ಲ ಎಂದು ಸಿಬ್ಬಂದಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next