Advertisement

ಪ್ರಾಂಶುಪಾಲರ ಕೃಷಿ ಸಾಧನೆ ಯಶೋಗಾಥೆ

08:29 PM Nov 07, 2021 | Team Udayavani |

ಹುಬ್ಬಳ್ಳಿ: “ಅಂತಾರಾಷ್ಟ್ರೀಯ ಗುಣಮಟ್ಟದ ತರಕಾರಿ, ಪಲ್ಯ ಸ್ಥಳೀಯ ದರದಲ್ಲಿಯೇ ಗ್ರಾಹಕರಿಗೆ ದೊರೆಯುವಂತಾಗಬೇಕು. ಅದಕ್ಕಾಗಿಯೇ ಹಲವು ಪ್ರಯೋಗ ಕೈಗೊಂಡಿದ್ದೇನೆ. ವಿಷಮುಕ್ತ ತರಕಾರಿ-ಪಲ್ಯ, ಹಣ್ಣುಗಳು ಕೆಲವರಿಗೆ ಮಾತ್ರ ಸೀಮಿತ ಎಂಬ ಬ್ಯಾರಿಕೇಡ್‌ಗಳನ್ನು ಹೊಡೆದು ಹಾಕಿ ಎಲ್ಲರೂ ತಿನ್ನುವಂತಾಗಲು ಸ್ಥಳೀಯ ಮಾರುಕಟ್ಟೆ ದರದಲ್ಲೇ ಅದನ್ನು ನೀಡುವ ಸಾಹಸಕ್ಕೆ ಹೆಜ್ಜೆ ಇರಿಸಿದ್ದೇನೆ.’ -ಇದು, ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಹುದ್ದೆಗೆ ಶರಣು ಹೇಳಿ ಕೃಷಿ ಸಂಸ್ಕೃತಿ ಅಪ್ಪಿಕೊಂಡ, ಭೂ ತಾಯಿ ಒಡಲು ವಿಷಮುಕ್ತಗೊಳಿಸಿ ಜನರ ಆರೋಗ್ಯ ಸಂರಕ್ಷಣೆಗೆ ಅಳಿಲು ಸೇವೆಯ ಕಂಕಣತೊಟ್ಟ ಡಾ| ಪ್ರಕಾಶ ಹುಬ್ಬಳ್ಳಿ ಹಾಗೂ ಕುಸುಮಾ ಹುಬ್ಬಳ್ಳಿ ದಂಪತಿ ಸ್ಪಷ್ಟೋಕ್ತಿ.

Advertisement

ಕೆಎಲ್‌ಇಯಂತಹ ಪ್ರತಿಷ್ಠಿತ ಸಂಸ್ಥೆಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಹುದ್ದೆ ಬಿಟ್ಟು, ಯೋಜನಾಬದ್ಧ ಹಾಗೂ ಇರುವ ತಂತ್ರಜ್ಞಾನ ಬಳಸಿಕೊಂಡು ಬೆವರಿಳಿಸಿದರೆ ಕೃಷಿ ಲಾಭದಾಯಕ ಆಗಲಿದೆ ಎಂಬುದನ್ನು ಮಾದರಿಯಾಗಲಿಸಲು ಡಾ| ಪ್ರಕಾಶ ಮುಂದಾಗಿದ್ದಾರೆ. ಯುವಕರು ಕೃಷಿಯತ್ತ ವಾಲಬೇಕು ಅದರಲ್ಲೂ ವಿದ್ಯಾವಂತ ಯುವಕರು ಕೃಷಿಗೆ ಬಂದರೆ ಪ್ರಯೋಗ, ಹೊಸತನದೊಂದಿಗೆ ಉತ್ತಮ ಸಾಧನೆ ಸಾಧ್ಯವಾಗಲಿದೆ ಎಂಬುದು ಅವರ ಅನಿಸಿಕೆ. ಕೃಷಿ ಕಾಯಕಕ್ಕಿಳಿಯಲು ಮೂಡಿದ ಚಿಂತನೆ, ಪತ್ನಿಯ ಪ್ರೇರಣೆ, ವ್ಯವಸಾಯ ಬಗ್ಗೆ ಪ್ರಾಯೋಗಿಕ ಶ್ರಮದ ಪರಿಚಯವಿಲ್ಲದಿದ್ದರೂ ಬೆವರು ಸುರಿಸಲು ಮಣ್ಣಿಗಿಳಿದ ಸಾಹಸ, ಹೊಸ ಪ್ರಯೋಗ, ಕೈ ಹಿಡಿಯುತ್ತಿರುವ ಭೂ ತಾಯಿಯ ಪ್ರತಿಫಲದ ಸಂತಸ ಕುರಿತಾಗಿ ಡಾ| ಪ್ರಕಾಶ ಹುಬ್ಬಳ್ಳಿ, ಕುಸುಮಾ ಪ್ರಕಾಶ ಅವರು ತಮ್ಮ ಮನದಾಳದ ಮಾತುಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡರು.

ಸಾವಯವಕ್ಕೆ ಪತ್ನಿ ಪ್ರೇರಣೆ: ಡಾ| ಪ್ರಕಾಶ ಹುಬ್ಬಳ್ಳಿ ಅವರು ಕಳೆದ 7-8 ವರ್ಷಗಳ ಹಿಂದೆಯೇ ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 4 ಎಕರೆ ಜಮೀನು ಖರೀದಿಸಿದ್ದರು. ಕೋವಿಡ್‌ ವೇಳೆ ಏನನ್ನಾದರೂ ಮಾಡಬೇಕೆಂಬ ಚಿಂತನೆ ನಿಧಾನಕ್ಕೆ ಕೃಷಿ ಸಂಸ್ಕೃತಿ ಕಡೆ ವಾಲಿತ್ತು. ಅಷ್ಟೇನು ಫಲವತ್ತಲ್ಲದ ಭೂಮಿಯಲ್ಲಿ ಸಾವಯವ ಕೃಷಿ ಸಾಹಸಕ್ಕೆ ಮುಂದಾಗಿದ್ದರು. ಸಾವಯವ ೃಷಿಗೆ ಇಳಿಯುವ ನಿಟ್ಟಿನಲ್ಲಿ ಡಾ| ಪ್ರಕಾಶ ಅವರ ಪತ್ನಿ ಕುಸುಮಾ ಪ್ರಕಾಶ ಅವರ ಒತ್ತಾಸೆ, ಪ್ರೋತ್ಸಾಹ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಹಳ್ಳಿಯಲ್ಲಿದ್ದವರೇ ನಗರಕ್ಕೆ ಹೋಗಿ ಬದುಕಬೇಕು ಎಂದು ಆಸೆ ಪಡುವ ಇಂದಿನ ದಿನಗಳಲ್ಲಿ, ಹುಬ್ಬಳ್ಳಿಯ ಪ್ರತಿಷ್ಠಿತ ಬಡಾವಣೆಯಲ್ಲಿ ಉತ್ತಮ ಸೌಲಭ್ಯದ ಸ್ವಂತ ಮನೆ, ಪತಿಗೆ ಕೈ ತುಂಬ ವೇತನ ನೀಡುವ ಪ್ರಾಂಶುಪಾಲ ಹುದ್ದೆ ಇದ್ದರೂ, ಸಾವಯವ ಕೃಷಿಗೆ ಮುಂದಾಗಲು ಮಹತ್ವದ ಸಲಹೆ ನೀಡುವ ಮೂಲಕ, ನಗರ ಜಂಜಾಟ ತೊರೆದು ಹಳ್ಳಿಯ ಹೊಲದಲ್ಲಿಯೇ ವಾಸಕ್ಕೆ ಮುಂದಾಗುವ ಮೂಲಕ ಕುಸುಮಾ ಪ್ರಕಾಶ ಅವರು ಮಹತ್ವದ ಹೆಜ್ಜೆ ಇರಿಸಿದ್ದರು.

ಪತ್ನಿಯ ಸಾಥ್‌ನೊಂದಿಗೆ ಏನನ್ನಾದರೂ ಮಾಡಬೇಕೆಂಬ ಮನದೊಳಗಿನ ತುಡಿತಕ್ಕೆ ಪೂರಕವಾಗಿ ಡಾ| ಪ್ರಕಾಶ ಭೂತಾಯಿ ಸೇವೆಗೆ ಮುಂದಡಿ ಇರಿಸಿದ್ದರು. ಹೊಲವನ್ನು ಸಮತಟ್ಟು ಮಾಡುವುದು, ಬದುಗಳ ನಿರ್ಮಾಣ, ಕೃಷಿ ಹೊಂಡ, ವಿಷಮುಕ್ತವಾದ ಬೀಜಗಳ ಹುಡುಕಾಟ, ಜೀವಾಮೃತ, ಗೋ ಕೃಪಾಮೃತ ತಯಾರಿಕಾ ಘಟಕ ಹೀಗೆ ವಿವಿಧ ಶ್ರಮದ ಜತೆಗೆ, ವಿವಿಧ ರಾಜ್ಯ-ದೇಶಗಳಲ್ಲಿ ಕೈಗೊಳ್ಳಬಹುದಾದ ಮಾದರಿಗಳ ಅಧ್ಯಯನ, ಅದರ ಅನುಷ್ಠಾನದ ಕಾರ್ಯಕ್ಕೆ ಮುಂದಾಗಿದ್ದರು. ಇದೇ ವರ್ಷದ ಜನೆವರಿಯಲ್ಲಿ ತರಕಾರಿ -ಪಲ್ಯಗಳ ಬಿತ್ತನೆಗೆ ಶ್ರೀಕಾರ ಹಾಕಿದ್ದರು. ಇದೀಗ ಅವು ಫಲ ನೀಡತೊಡಗಿವೆ. ಹೊಲದಲ್ಲಿಯೇ ಸುಮಾರು ಐದು ಗುಂಟೆ ಜಾಗದಲ್ಲಿ ಮನೆ ನಿರ್ಮಿಸಿದ್ದು, ಅಲ್ಲಿಯೇ ವಾಸವಾಗಿದ್ದಾರೆ, ನಾಲ್ಕು ದೇಸಿ ಹಸು, ನಾಲ್ಕು ಕರುಗಳು ಇದ್ದು, ಸುಮಾರು 10 ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ.

ಕಮಲಂ ಹಣ್ಣಿನ ವಿಶೇಷತೆ

Advertisement

ಮಹಾರಾಷ್ಟ್ರದಿಂದ ಸುಮಾರು 800 ಕಮಲಂ(ಡ್ರಾÂಗನ್‌ಫ್ರೂಟ್‌) ಸಸಿಗಳನ್ನು ನಾಟಿ ಮಾಡಲಾಗಿದೆ. ವಿಶೇಷವೆಂದರೆ ಇದು ಜಂಬೋ ಮಾದರಿ ಹಣ್ಣುಗಳಾಗಿವೆ. ಸಾಮಾನ್ಯವಾಗಿ ಕಮಲಂ ಹಣ್ಣಿನ ಒಳಭಾಗ ಬಿಳಿಯದಾಗಿರುತ್ತದೆ. ಆದರೆ, ಒಳಗಿನ ಭಾಗ ಕೆಂಪು ಬಣ್ಣದಲ್ಲಿ ಬರುವ ಸಸಿಗಳನ್ನು ನಾಟಿ ಮಾಡಲಾಗಿದೆ. ಬೆಳೆಗಳಿಗೆ ಬರುವ ಕೀಟಗಳ ನಿರ್ವಹಣೆ ಸವಾಲು-ಸಮಸ್ಯೆಯಾಗಿ ಕಾಡಿದಾಗ ಕ್ರಿಮಿನಾಶ ಬಳಸದೆ ನೈಸರ್ಗಿಕ ರೀತಿಯ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ತಕ್ಕಮಟ್ಟಿಗೆ ಕೀಟಬಾಧೆ ನಿಯಂತ್ರಣ ಕೈಗೊಂಡಿದ್ದಾರೆ. ಕೀಟಗಳ ಬಾಧೆ ತಪ್ಪಿಸುವುದಕ್ಕಾಗಿಯೇ ಹಸಿರು ಮನೆ ನಿರ್ಮಾಣದ ಪ್ರಯೋಗ ಮಾಡಿದ್ದು, ಮುಂದಿನ ದಿನಗಳಲ್ಲಿ ಇಡೀ ಹೊಲವನ್ನೇ ಪಾಲಿಹೌಸ್‌, ಟೆನಲ್‌ಹೌಸ್‌ ಮಾದರಿಯಾಗಿಸಲು ಕ್ರಮ ಕೈಗೊಂಡಿದ್ದಾರೆ.

ನೇರವಾಗಿ ಗ್ರಾಹಕರ ಕೈಗೆ

ನೇಚರ್‌ ಫಸ್ಟ್‌ ಫಾರ್ಮ್ ಬ್ರಾಂಡ್ ನ‌ಡಿ ತರಕಾರಿಗಳನ್ನು ಶುದ್ಧತೆಯೊಂದಿಗೆ ಪ್ಯಾಕಿಂಗ್‌ ಮಾಡುವ ಮೂಲಕ ನೇರವಾಗಿ ಗ್ರಾಹಕರಿಗೆ ಕೆಲವೊಂದು ಸೂಪರ್‌ ಮಾರ್ಕೆಟ್‌ಗಳಿಗೆ ನೀಡುತ್ತಿದ್ದಾರೆ. ತಾವು ಹಿಂದೆ ಕಾರ್ಯನಿರ್ವಹಿಸಿದ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಅಲ್ಲದೆ ಗುಂಪಿನ ಒಟ್ಟು ಸದಸ್ಯರಲ್ಲಿ ಶೇ.40 ವೈದ್ಯರಿಗೆ ವಿಷಮುಕ್ತ ತರಕಾರಿ ನೀಡುತ್ತಿದ್ದಾರೆ. ಬರುವ ಮೂರ್‍ನಾಲ್ಕು ತಿಂಗಳಲ್ಲಿ ಇನ್ನಷ್ಟು ತಳಿ ತರಕಾರಿ-ಪಲ್ಯವನ್ನು ನೀಡುವ ತವಕದಲ್ಲಿದ್ದಾರೆ.

58 ತರಹದ ತರಕಾರಿ-ಪಲ್ಯ

ಸುಮಾರು 4 ಎಕರೆ ಜಮೀನಿನಲ್ಲಿ ಪೇರು, ನಿಂಬೆ, ಸೀತಾಫಲ, ಸಿಹಿ ಹುಣಸೆ, ಚರ್ರಿ ಟೊಮಾಟೊ, ಟೊಮಾಟೊ, ಬೂದಕುಂಬಳಕಾಯಿ, ಬದನೇಕಾಯಿ, ಹಿರೇಕಾಯಿ, ಮೆಣಸಿನಕಾಯಿ, ಬೆಂಡೇಕಾಯಿ, ಸೌತೇಕಾಯಿ, ಪಾಕಲ್‌, ಮೆಂತ್ಯೆ ಹೀಗೆ ಗಡ್ಡೆ, ಬಳ್ಳಿ, ಕಾಯಿ, ಪಲ್ಯ ಸೇರಿದಂತೆ ಸುಮಾರು 58 ತರಹದ ತರಕಾರಿ-ಪಲ್ಯ ಬೆಳೆಯಲಾಗುತ್ತಿದೆ. ಇದರಲ್ಲಿ ಸುಮಾರು 20 ತರಹ ವಿದೇಶದಲ್ಲಿ ಬಳಕೆಯಾಗುವ ಇದೀಗ ಭಾರತದಲ್ಲೂ ನಗರವಾಸಿಗಳು ಬಳಕೆ ಮಾಡುವ ತರಕಾರಿಗಳು ಸೇರಿವೆ

ಕೃಷಿ ಮಾದರಿ, ಗುಣಮಟ್ಟದ ಕೃಷಿ ಉತ್ಪನ್ನಗಳ ವಿಚಾರ ಬಂದಾಗ ವಿಶ್ವದಲ್ಲೇ ಇಸ್ರೇಲ್‌ ಮಾದರಿ ಅತ್ಯುತ್ತಮ ಎನ್ನಲಾಗುತ್ತಿದೆ. ಅದೇ ರೀತಿ ಯೂರೋಪಿಯನ್‌ ದೇಶಗಳಲ್ಲಿ ಅತ್ಯುತ್ತಮ ಗುಣಮಟ್ಟದ ತರಕಾರಿ ಬಳಸಲಾಗುತ್ತದೆ. ನಮ್ಮಲ್ಲಿಯೂ ಅಲ್ಲಿನ ಗುಣಮಟ್ಟಕ್ಕೆ ಸರಿಸಮಾನವಾದ ತರಕಾರಿ-ಪಲ್ಯ ಬೆಳೆಯಬೇಕು, ಜನರಿಗೆ ವಿಷಮುಕ್ತ, ಅಂತಾರಾಷ್ಟ್ರೀಯ ಗುಣಮಟ್ಟದ ತರಕಾರಿ-ಪಲ್ಯ, ಹಣ್ಣುಗಳನ್ನು ಸ್ಥಳೀಯ ದರದಲ್ಲಿಯೇ ನೀಡಲು ಯಾಕೆ ಸಾಧ್ಯವಾಗದು ಎಂಬ ಚಿಂತನೆಯೊಂದಿಗೆ ಈ ಸಾಹಸಕ್ಕಿಳಿದಿದ್ದೇವೆ. ಉತ್ತಮ ಯೋಜನೆ ಇಲ್ಲದೆ, ಶ್ರಮ ವಹಿಸದೆ ಫಲ ಬೇಕೆಂದರೆ ಹೇಗೆ ಸಾಧ್ಯ. ಯುವಕರು ಹೆಚ್ಚು ಹೆಚ್ಚು ಕೃಷಿಯತ್ತ ವಾಲಬೇಕೆಂಬುದಷ್ಟೇ ನಮ್ಮ ಬಯಕೆ.

ಡಾ| ಪ್ರಕಾಶ ಹುಬ್ಬಳ್ಳಿ ಮತ್ತು ಕುಸುಮಾ ಪ್ರಕಾಶ ಹುಬ್ಬಳ್ಳಿ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next