Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ಉನ್ನತೀಕರಣಕ್ಕೆ ಅನುದಾನ: ಸಿಎಂ

01:13 AM Dec 25, 2020 | sudhir |

ಬೆಂಗಳೂರು : ರಾಜ್ಯದ ಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಗುರುವಾರ ಆರೋಗ್ಯ ಕೇಂದ್ರಗಳ ಉನ್ನತೀಕರಣ ಸಂಬಂಧ ಪ್ರಾತ್ಯಕ್ಷಿಕೆ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಸೇವೆಯು ಸರಕಾರದ 20 ಅಂಶಗಳ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸು ವುದು ಸರಕಾರದ ಧ್ಯೇಯವಾಗಿದೆ.

ಆರೋಗ್ಯ ಉಪಕೇಂದ್ರ, ಪ್ರಾಥ ಮಿಕ ಆರೋಗ್ಯ ಕೇಂದ್ರ, ಸಮು ದಾಯ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿ ಅಗತ್ಯ ಸೇವೆ ಒದಗಿ ಸಿದರೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಜನ ಅಲೆದಾಡುವುದು ತಪ್ಪಲಿದೆ ಎಂದು ಹೇಳಿದರು.

12ರಿಂದ 20 ಹಾಸಿಗೆ, ಆ್ಯಂಬುಲೆನ್ಸ್‌
ರಾಜ್ಯದ ಎಲ್ಲ 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತ ಕಟ್ಟಡ ಒಳಗೊಂಡಂತೆ 12 ಅಥವಾ 20 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಹೆಚ್ಚುವರಿ ಸಿಬಂದಿ ನಿಯೋಜನೆ ಜತೆಗೆ ಅತ್ಯಾಧುನಿಕ ಉಪಕರಣ ಸಹಿತ ಮೂಲ ಸೌಕರ್ಯ ಕಲ್ಪಿಸ ಲಾಗುವುದು. ಪ್ರತಿ ಕೇಂದ್ರಕ್ಕೆ ಒಂದು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಸಚಿವ ಡಾ| ಕೆ. ಸುಧಾಕರ್‌, ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯ

Advertisement

– ವಾರದ ಏಳೂ ದಿನ 24 ಗಂಟೆ ಕಾರ್ಯ ನಿರ್ವಹಣೆ
–  ಹಾಲಿ ಒಬ್ಬ ವೈದ್ಯರ ಬದಲಿಗೆ 3-4 ವೈದ್ಯರ ನಿಯೋಜನೆ
– ಅದರಲ್ಲಿ ತಲಾ ಒಬ್ಬ ಮಹಿಳಾ ವೈದ್ಯರು, ಆಯುಷ್‌ ವೈದ್ಯರು
– ಹಾಸಿಗೆ ಸಾಮರ್ಥ್ಯ 6ರಿಂದ ಸುಮಾರು 20ಕ್ಕೆ ಹೆಚ್ಚಳ
– ಎಕ್ಸ್‌-ರೇ, ಅಲ್ಟ್ರಾ ಸೌಂಡ್‌ ವ್ಯವಸ್ಥೆ
– ನವಜಾತ ಶಿಶುವಿನ ಕಾಳಜಿ ಘಟಕ- ಹಾಲುಣಿಸುವ ಕೊಠಡಿ
– ಯೋಗ- ವೆಲ್‌ನೆಸ್‌ ಕೇಂದ್ರ
– ವೈದ್ಯರಿಗೆ 2ಬಿಎಚ್‌ಕೆ, ಸಿಬಂದಿಗೆ 1 ಬಿಎಚ್‌ಕೆ ವಸತಿ
– ಜಾಗಿಂಗ್‌ ಪಥ, ಔಷಧೀಯ ಸಸ್ಯಗಳ ಉದ್ಯಾನ
– ಪ್ರತಿಯೊಂದು ಕೇಂದ್ರಕ್ಕೆ ಆ್ಯಂಬುಲೆನ್ಸ್‌
– 2 ಎಕರೆ ಪ್ರದೇಶದಲ್ಲಿ 6- 8 ಕೋ. ರೂ. ವೆಚ್ಚದಲ್ಲಿ ನಿರ್ಮಾಣ
– ಶೇ. 30ರಷ್ಟು ಪ್ರದೇಶದಲ್ಲಿ ತಾಯಿ ಮತ್ತು ಮಕ್ಕಳ ವಿಭಾಗ

ಇ- ಆಸ್ಪತ್ರೆ ವ್ಯವಸ್ಥೆ
ತಳಹಂತದ ಉಪ ಆರೋಗ್ಯ ಕೇಂದ್ರದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಇಂಟರ್‌ನೆಟ್‌ ಸೇವೆ ಮೂಲಕ ಸಂಪರ್ಕಿಸಲಾಗುವುದು. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೆಗೆದ ಎಕ್ಸ್‌-ರೇ ವಿವರವನ್ನು ತಜ್ಞರು ಪರಿಶೀಲಿಸಿ ಸಲಹೆ ನೀಡುವ ವ್ಯವಸ್ಥೆ ರೂಪುಗೊಳ್ಳಲಿದೆ. ಇದೇ ಕೇಂದ್ರದಲ್ಲಿ ಬಡವರು ರಕ್ತ ಪರೀಕ್ಷೆಯನ್ನು ಉಚಿತವಾಗಿ ಪಡೆಯಬಹುದುಎಂದು ಡಾ| ಸುಧಾಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next