Advertisement

ಏಕಕಾಲದ ಚುನಾವಣೆಗೆ ಪ್ರಧಾನಿ ಒಲವು

12:44 PM Jun 18, 2018 | Harsha Rao |

ಹೊಸದಿಲ್ಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ನಾಲ್ಕನೇ ನೀತಿ ಆಯೋಗದ ಸಭೆಯಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಬಗ್ಗೆ ಪ್ರಸ್ತಾವಿಸಿದ್ದಾರೆ. ಇದರಿಂದ ಉಳಿತಾಯವಾಗುವ ಹಣ ಮತ್ತು ಸಮಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿರುವುದಲ್ಲದೇ, ವರ್ಷಪೂರ್ತಿ ಎಲೆಕ್ಷನ್‌ ಮೋಡ್‌ನಿಂದ ಆಡಳಿತ ಮೋಡ್‌ಗೆ ಬದಲಾಗಬೇಕಿರುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.

Advertisement

ಕಳೆದ ವರ್ಷವಷ್ಟೇ ನೀತಿ ಆಯೋಗ ಈ ಬಗ್ಗೆ ಪ್ರಸ್ತಾವಿಸಿದ್ದು, 2024ರ ವೇಳೆಗೆ ಇಡೀ ದೇಶ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ತಯಾರಾಗಬಹುದು ಎಂದಿತ್ತು. ಅಂದರೆ, ಅಷ್ಟರಲ್ಲಿ ಎರಡು ಹಂತಗಳಲ್ಲಿ ಇಡೀ ದೇಶದ ಚುನಾವಣೆ ನಡೆಸಬಹುದು ಎಂದೂ ಹೇಳಿತ್ತು.

ಈ ಮಧ್ಯೆ, ಹಣಕಾಸು ಆಯೋಗಕ್ಕೆ ಅಗತ್ಯ ಸಲಹೆ ನೀಡುವಂತೆ ರಾಜ್ಯಗಳಿಗೆ ಮನವಿ ಮಾಡಿದ ಪ್ರಧಾನಿ ಮೋದಿ ಅವರು, ರಾಜ್ಯಗಳು ಕೊಟ್ಟ ಅಂಶಗಳನ್ನು ಮುಂದಿಟ್ಟುಕೊಂಡು ಇನ್ನು ಮೂರು ತಿಂಗಳಲ್ಲಿ ಹೊಸ ಐಡಿಯಾಗಳೊಂದಿಗೆ ಬರುವಂತೆ ನೀತಿ ಆಯೋಗಕ್ಕೆ ಸೂಚನೆ ನೀಡಿದರು. ಈ ಮೂಲಕ ಸರಕಾರದ ಪ್ರತಿ ಯೋಜನೆಗಳೂ ಬಡವರಿಗೆ ತಲುಪುವಂತೆ ಮಾಡಿ ಎಂದು ರಾಜ್ಯಗಳಿಗೆ ಹೇಳಿದರು. 

ಪ್ರಧಾನಿ ಹೇಳಿದ್ದು: 23 ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಒಬ್ಬ ಲೆಫ್ಟಿನೆಂಟ್‌ ಗವರ್ನರ್‌ ಪಾಲ್ಗೊಂಡಿದ್ದ ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಮೊದಲಿಗೆ ಪ್ರಸ್ತಾವಿಸಿದ್ದು ದೇಶದ ಜಿಡಿಪಿ ಬೆಳವಣಿಗೆ ಬಗ್ಗೆ. ಶೀಘ್ರದಲ್ಲೇ ಭಾರತ ಡಬಲ್‌ ಡಿಜಿಟ್‌ ಪ್ರಗತಿದರ ದಾಖಲಿಸಬೇಕಿದೆ ಎಂದ ಅವರು, ದೇಶದ ಒಟ್ಟಾರೆ ಆರ್ಥಿಕತೆ ಮೌಲ್ಯ 5 ಲಕ್ಷ ಕೋಟಿ ಡಾಲರ್‌ನಷ್ಟು ಆಗಬೇಕು ಎಂದರು. ಇದಕ್ಕಾಗಿ ಎಲ್ಲ ರಾಜ್ಯಗಳು ಒಟ್ಟಾರೆ ಶ್ರಮಿಸಬೇಕು. ಈ ಮೂಲಕವಷ್ಟೇ ಭಾರತ ನಿಗದಿತ ಗುರಿ ತಲುಪಲು ಸಾಧ್ಯವೆಂದರು. ಹಿಂದಿನ ಸರಕಾರ, ತನ್ನ ಕಡೇ ಹಣಕಾಸು ವರ್ಷದಲ್ಲಿ 6 ಲಕ್ಷ ಕೋಟಿ ರೂ. ನೀಡಿದ್ದರೆ, ಎನ್‌ಡಿಎ ಸರಕಾರ 11 ಲಕ್ಷ ಕೋಟಿ ರೂ. ನೀಡಿದೆ ಎಂದರು. ಎಲ್ಲ ನೆರೆ, ಪ್ರವಾಹದಂಥ ಸನ್ನಿವೇಶದಲ್ಲಿ ರಾಜ್ಯಗಳಿಗೆ ಸಹಕಾರ ನೀಡಲು ಸಿದ್ಧವೆಂದೂ ಭರವಸೆ ನೀಡಿದರು. 

ವಿಪಕ್ಷಗಳ ವಾಗ್ಧಾಳಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧ ವೃದ್ಧಿಸುವ ಸಲುವಾಗಿ ಈ ಸಭೆ ನಡೆಯಿತಾದರೂ, ಇಲ್ಲಿ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡವು. ಇವರೆಲ್ಲರ ನೇತೃತ್ವ ವಹಿಸಿಕೊಂಡಿದ್ದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌. ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಗೈರು ಹಾಜರಾಗಿದ್ದರು.

Advertisement

ಇನ್ನೊಂದು ತಿಂಗಳಲ್ಲಿ ವಿಷನ್‌ 2022 ಪ್ಲಾನ್‌ ಸಿದ್ಧ
ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ರವಿವಾರದ ಸಭೆಯಲ್ಲೇ ನೀತಿ ಆಯೋಗ ಹೊಸ ಭಾರತ ವಿಷನ್‌ 2022 ಅನ್ನು ಮಂಡಿಸಬೇಕಿತ್ತು. ಆದರೆ, ಈ ಕುರಿತ ವರದಿ ಇನ್ನೂ ಅಂತಿಮ ಹಂತದಲ್ಲಿರುವುದರಿಂದ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಆಯೋಗದ ಸಿಇಒ ಅಮಿತಾಬ್‌ ಕಾಂಗ್‌ ಹೇಳಿದ್ದಾರೆ. 

ಹಣಕಾಸು ಆಯೋಗಕ್ಕೆ ಸಲಹೆ ಕೊಡಿ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಟೀಕೆಗೆ ಗುರಿಯಾಗಿರುವ 15ನೇ ಹಣಕಾಸು ಆಯೋಗಕ್ಕೆ ಹೊಸ ಐಡಿಯಾಗಳನ್ನು ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳಿಗೆ ಸಲಹೆ ಮಾಡಿದ್ದಾರೆ. ಸಾಧನೆ ಆಧರಿತವಾಗಿ ಸಂಪನ್ಮೂಲಗಳನ್ನು ನೀಡುವ ಬಗ್ಗೆ ಅದು ನೆರವಾಗಲಿದೆ ಎಂದಿದ್ದಾರೆ. ಇದರ ಜತೆಗೆ ವೆಚ್ಚ ನಿಯಂತ್ರಿಸಲು ಅನುವಾಗುವಂತೆಯೂ ಸಲಹೆಗಳನ್ನು ನೀಡಿ ಎಂದಿದ್ದಾರೆ. ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾತನಾಡಿ, ಈಗಾಗಲೇ ಜನಿಸಿದವರಿಗೆ ಸೌಲಭ್ಯ ನಿರಾಕರಿಸುವುದು ಸರಿಯಲ್ಲ. ಈ ಅಂಶಕ್ಕೆ ಪ್ರಧಾನಿ ಯವರೂ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. 1971ರ ಜನಗಣತಿಗೆ ಅನುಗುಣವಾಗಿ 2011ರ ಜನಗಣತಿಯನ್ನು ರಾಜ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂಬ ಆಯೋಗ ರಚನೆಯ ನಿಯಮಾವಳಿ (ಟರ್ಮ್Õ ಆಫ್ ರೆಫ‌ರೆನ್ಸ್‌)ಗಳಿಗೆ ವಿರೋಧ ವ್ಯಕ್ತವಾಗಿತ್ತು. ಜತೆಗೆ ಎರಡು ಬಾರಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಹಣಕಾಸು ಸಚಿವರ ಸಭೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next