Advertisement

ಪ್ರಧಾನಿ ಮೋದಿ ಕಾಣಲು ಉಜಿರೆಗೆ ಜನಸಾಗರ 

09:56 AM Oct 30, 2017 | |

ಬೆಳ್ತಂಗಡಿ: ಪ್ರಧಾನಿ ಮೋದಿ ಅವರ ಭಾಷಣ ಆಲಿಸಲು ರವಿವಾರ ಮುಂಜಾನೆಯಿಂದಲೇ ಜನಸಾಗರ ಹರಿದು ಬರುತ್ತಿತ್ತು. ಉಜಿರೆ ಪೇಟೆಯಷ್ಟೇ ಅಲ್ಲ ಗುರುವಾಯನಕೆರೆಯಿಂದಲೇ ರಸ್ತೆಯಲ್ಲಿ ಸಂಚಾರ ದುಸ್ತರವಾಗಿತ್ತು. ಉಜಿರೆ ಪೇಟೆ ಅಕ್ಷರಶಃ ಜನಸಾಗರದಿಂದ ತುಂಬಿ ತುಳುಕಿ 7 ವರ್ಷಗಳ ಹಿಂದೆ ನಡೆದ ವಿಶ್ವ ತುಳು ಸಮ್ಮೇಳನದ ನೆನಪು ಮೆಲುಕು ಹಾಕುತ್ತಿತ್ತು. ಸ್ವಾತಂತ್ರ್ಯದ ಅನಂತರ ಪ್ರಥಮ ಬಾರಿಗೆ ಅಧಿಕಾರದಲ್ಲಿದ್ದಾಗಲೇ ಧರ್ಮಸ್ಥಳಕ್ಕೆ ಬಂದಿಳಿದು, ಊರಿಗೆ ಆಗಮಿಸಿದ ಪ್ರಧಾನಿಯನ್ನು ನೋಡಲು ಜನ ಕಾತರ, ಕುತೂಹಲದಿಂದ ದೂರದೂರುಗಳಿಂದ ಬಂದಿದ್ದರು. ಮೋದಿ ಧರ್ಮಸ್ಥಳ ತಲುಪಿದರು ಎಂದು ಡಾ| ಬಿ. ಯಶೋವರ್ಮರು ಘೋಷಿಸಿದಾಗ ಕೇಳಿದ ಹರ್ಷೋದ್ಗಾರ, ಮೋದಿ
ಆಗಮಿಸಿ ವೇದಿಕೆಯಿಂದ ನಮಿಸಿ, ಕೈ ಬೀಸಿದಾಗ ಇವರ ಉತ್ಸಾಹ ಘೋಷಣೆಯಿಂದ ತಿಳಿಯುತ್ತಿತ್ತು.

Advertisement

ಮುಂಜಾನೆಯಿಂದ
ಮೋದಿ ಕಾರ್ಯಕ್ರಮಕ್ಕೆ ಮೊತ್ತಮೊದಲ ವಾಹನ ಆಗಮಿಸಿದ್ದು ಮುಂಜಾನೆ 6 ಗಂಟೆಗೆ. ಭದ್ರಾವತಿ ಯಿಂದ. ಅನಂತರ 11 ಗಂಟೆವರೆಗೂ ವಾಹನಗಳು ಬರುತ್ತಲೇ ಇದ್ದವು. ಹಾಗೆ ಆಗಮಿಸಿದ ವಾಹನಗಳಿಗೆಲ್ಲ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಯಿತ್ತು. ಅಲ್ಲಲ್ಲಿ ವಾಹನಗಳ ಅಶಿಸ್ತಿನ ಓಡಾಟದಿಂದಾಗಿ ಬ್ಲಾಕ್‌ ಆಗಿತ್ತು. ಎಲ್ಲೆಡೆಯಿಂದ ಬಂದವರು ವಾಹನಗಳನ್ನು ನಿಗದಿತ ತಾಣದಲ್ಲಿ ನಿಲ್ಲಿಸಿ ಒಂದೆರಡು ಕಿ.ಮೀ. ದೂರ ನಡೆದು ಹೋಗಬೇಕಿತ್ತು. ಸಭಾಂಗಣ 8.30ರ ಹೊತ್ತಿಗೆ ಸಾಮಾನ್ಯ ಭರ್ತಿಯಾಗಿತ್ತು. ಗಂಟೆ 10.30ರ ಅನಂತರವೂ ಜನ ಆಗಮಿಸುತ್ತಲೇ ಇದ್ದರು. 

ಜನಸ್ನೇಹಿ ಪೊಲೀಸರು
ಪೊಲೀಸರಂತೂ ಜನಸ್ನೇಹಿಯಾಗಿದ್ದರು. ಎಲ್ಲಿಯೂ ದರ್ಪದ ಪ್ರದರ್ಶನ ಇರಲಿಲ್ಲ. ಸೌಜನ್ಯದಿಂದ ವರ್ತಿಸುತ್ತಿದ್ದುದು ಶ್ಲಾಘನೆಗೆ ಕಾರಣವಾಗಿತ್ತು.

ಕೇಸರಿಮಯ
ರಾಜಕೀಯ ಸಮಾವೇಶ ಅಲ್ಲದಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಿದ ಮಂದಿ ಹಾಗೂ ಮಹಿಳೆಯರು ಕೇಸರಿ ಉಡುಪಿಗೆ ಆದ್ಯತೆ ನೀಡಿದ್ದು ಕಂಡು ಬರುತ್ತಿತ್ತು. ಉಜಿರೆ ಪೇಟೆ ಕೇಸರಿಮಯವಾಗಿ ಎಲ್ಲೆಡೆ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಮಕ್ಕಳು, ಹಿರಿಯರು ಎಂಬ ಭೇದವಿಲ್ಲದೆ ಜನ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿಐಪಿ ಪಾಸ್‌ ಸಿಗದೆ ಅನೇಕರು
ಸಾರ್ವಜನಿಕ ಪ್ರವೇಶಕ್ಕೆ ಹೋಗಲು ಮನಸ್ಸು ಒಪ್ಪದೆ ರಸ್ತೆ ಬದಿ ನಿಂತು ಕಾರ್ಯಕ್ರಮ ವೀಕ್ಷಿಸಿದರು.

ಪ್ರಧಾನಿ ಕಚೇರಿ
ಮೋದಿ ಆಸೀನರಾಗುವ ವೇದಿಕೆ ಪಕ್ಕದಲ್ಲಿಯೇ ಪ್ರಧಾನಿ ಕಚೇರಿಯೇ ತಾತ್ಕಾಲಿಕವಾಗಿ ತೆರೆದುಕೊಂಡಿತ್ತು. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸಮಾರಂಭ ನಡೆದಿದ್ದು, ವೇದಿಕೆಯ ಹಿಂಭಾಗದಲ್ಲಿ ಪ್ರಧಾನಿ ಕಚೇರಿ ಇತ್ತು. ಸಾಮಾನ್ಯವಾಗಿ ಪ್ರಧಾನಿ ಕಚೇರಿಯಿಂದ ಯಾವೆಲ್ಲ ಸಂವಹನಗಳನ್ನು ಮಾಡಲಾಗುತ್ತದೆಯೋ ಅವೆಲ್ಲ ಸಂವಹನ ಇಲ್ಲಿಯೂ ಸಾಧ್ಯವಾಗುವಂತೆ ಏರ್ಪಾಟು ಮಾಡಲಾಗಿತ್ತು. ಪ್ರಧಾನಿಯವರ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಇಲ್ಲಿಂದಲೇ ಫೂಟೊ ಅಪ್‌ಲೋಡ್‌ ಮಾಡಲಾಗುತ್ತಿತ್ತು. ಪ್ರಧಾನಿ ಕಚೇರಿಯ ಸಿಬಂದಿಯೇ ಇದನ್ನು ನಿರ್ವಹಿಸಿದ್ದರು. ದೇವಸ್ಥಾನದ ಪ್ರಸಾದ ಸ್ವೀಕಾರ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ ಲೋಡ್‌ ಮಾಡಲಾಗಿದ್ದು ಕ್ಷಣಾರ್ಧದಲ್ಲಿ ಸಾವಿರಾರು ಮಂದಿ ಶೇರ್‌ ಮಾಡಿದ್ದರು.

Advertisement

ಬಿಸಿಲ ಧಗೆಗೆ ನೀರು ಹಾಗೂ ಮಜ್ಜಿಗೆ ಏರ್ಪಾಡಾಗಿತ್ತು. ಹಾಗಿದ್ದರೂ ಮುಂಜಾನೆಯಿಂದಲೇ ಸಭಾಂಗಣದಲ್ಲಿ ಕುಳಿತವರಿಗೆ ಸೆಖೆ ಕಾಡಿದ್ದು ಸುಳ್ಳಲ್ಲ.

ಪರದೆ ವ್ಯವಸ್ಥೆ
ಗ್ರಾಮಾಭಿವೃದ್ಧಿ ಯೋಜನೆಯ ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸ್ವ ಸಹಾಯ ಸಂಘಗಳ 60,000 ಸದಸ್ಯರು, ಬಿಜೆಪಿಯ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಆದ್ದರಿಂದ ಕಾರ್ಯಕ್ರಮ ವೀಕ್ಷಣೆಗೆ ಸಭಾಂಗಣದಲ್ಲಿ 18 ಪರದೆಗಳ ವ್ಯವಸ್ಥೆ ಮಾಡಲಾಗಿತ್ತು.

ಆಧಾರ್‌ ಕಡ್ಡಾಯ
ಮೋದಿ ಸರಕಾರದಲ್ಲಿ ಎಲ್ಲದಕ್ಕೂ ಆಧಾರ್‌ ಕಡ್ಡಾಯ. ಅಂತೆಯೇ ಅವರ ಸಭೆಗೆ ಬರಲೂ ಆಧಾರ್‌ ಕಡ್ಡಾಯ ಮಾಡಲಾಗಿತ್ತು. ವಿಐಪಿ ಪಾಸ್‌ ಇದ್ದವರಿಗೆ ಆಧಾರ್‌ ಅಥವಾ ಭಾವಚಿತ್ರ ಇರುವ ಗುರುತು ಚೀಟಿ ಕಡ್ಡಾಯ ಇತ್ತು. ಇದನ್ನು ನೋಡಿಯೇ ಒಳ ಬಿಡಲಾಗುತ್ತಿತ್ತು. ಸಾರ್ವಜನಿಕರಿಗೆ ಉಜಿರೆ ಬೆಳಾಲು ರಸ್ತೆ ಸಮೀಪ ಐದು ಪ್ರವೇಶ ದ್ವಾರಗಳಿದ್ದವು. ಒಟ್ಟು 40 ಕಡೆ ಭದ್ರತಾ ತಪಾಸಣ ತಂಡಗಳಿದ್ದವು. ಆದ್ದರಿಂದ ಗೊಂದಲಕ್ಕೆ ಅವಕಾಶ ಇರಲಿಲ್ಲ.

ಕಪ್ಪು ಬಟ್ಟೆಗೆ ನಿಷೇಧ
ನಿರ್ದಿಷ್ಟ ಪಂಗಡದವರನ್ನು ಹೊರತಾಗಿ ಕಪ್ಪು ಅಂಗಿ ಧರಿಸಿದವರನ್ನು ಒಳ ಪ್ರವೇಶಿಸಲು ಬಿಡುತ್ತಿರಲಿಲ್ಲ. ಹಾಗೆಂದು ಅಂತಹ ಕಠಿನ ಶಿಸ್ತು ಮಾಡದಿದ್ದರೂ ಪ್ರತಿಭಟನ ಸೂಚಕವಾಗಿರಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು.

ರಸ್ತೆ ಬಂದ್‌
ರವಿವಾರ 8.45ರಿಂದಲೇ ಉಜಿರೆಯಿಂದ ಧರ್ಮಸ್ಥಳದವರೆಗೆ ರಸ್ತೆ ಸಂಚಾರ ಬಂದ್‌ ಮಾಡಲಾಯಿತು. ಉಜಿರೆಯಲ್ಲಿ ಕೂಡ ಅನೇಕ ಅಂಗಡಿ ಬಂದ್‌ ಮಾಡಲಾಗಿತ್ತು. ಉಜಿರೆ-ಧರ್ಮಸ್ಥಳ ರಸ್ತೆಯ ಅಂಗಡಿಗಳನ್ನು ಮುಚ್ಚಲಾಗಿತ್ತು. ಮುಂಜಾನೆಯಿಂದ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಅಪರಾಹ್ನದ ಅನಂತರ ಬಿಡಲಾಯಿತು.

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next