Advertisement

ನಾವೀಗ ಯುದ್ಧ ಪರಿಸ್ಥಿತಿಯಲ್ಲಿದ್ದೇವೆ;ಬಡವರಿಗೆ ನೆರವಾಗಿ, ಮಾನವೀಯತೆ ತೋರಿಸಿ:ಪ್ರಧಾನಿ ಅಭಿಮತ

03:13 AM Apr 07, 2020 | Hari Prasad |

ಹೊಸದಿಲ್ಲಿ: ಹಿಂದೆ ಯುದ್ಧದ ಸಂದರ್ಭದಲ್ಲಿ ನಮ್ಮ ಮಹಿಳೆಯರು ಸಾಮ್ರಾಜ್ಯಕ್ಕಾಗಿ ತಮ್ಮ ಒಡವೆಗಳನ್ನು ನೀಡುತ್ತಿದ್ದರು. ಕೋವಿಡ್ 19 ವೈರಸ್ ಕಾರಣದಿಂದಾಗಿ ನಾವೀಗ ಒಂದರ್ಥದಲ್ಲಿ ಯುದ್ಧದ ಪರಿಸ್ಥಿತಿಯಲ್ಲೇ ಇದ್ದೇವೆ. ಇಂತಹ ಸನ್ನಿವೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆಯಬೇಕು. ಭಾರತೀಯ ಜನತಾ ಪಕ್ಷದ (ಬಿಜೆಪಿ) 40ನೇ ವರ್ಷದ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಈ ರೀತಿ ಮನವಿ ಮಾಡಿದ್ದಾರೆ.

Advertisement

ಪ್ರತಿಯೊಬ್ಬ ಕಾರ್ಯಕರ್ತರೂ ಪಿಎಂ-ಕೇರ್ ನಿಧಿಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಬೇಕು. ಜತೆಗೆ ತಮ್ಮಂತೆಯೇ ಧನ ಸಹಾಯ ಮಾಡಲು ಇನ್ನೂ 40 ಮಂದಿಯನ್ನು ಕೇಳಿಕೊಳ್ಳಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಇದೇ ವೇಳೆ, ಕೋವಿಡ್ 19 ಸೋಂಕು ತಡೆಗಾಗಿ ಕೇಂದ್ರ ಸರಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‌ ಅನ್ನು ಪಕ್ಷದ ಎಲ್ಲ ಕಾರ್ಯಕರ್ತರೂ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಬಳಿಕ ಒಬ್ಬೊಬ್ಬರು ಕನಿಷ್ಠ 40 ಮಂದಿಯ ಮೊಬೈಲ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿಸಲು ಶ್ರಮಿಸಬೇಕು ಎಂದು ಕೋರಿದ್ದಾರೆ.

ದಶಕಗಳಿಂದ ಪಕ್ಷವನ್ನು ತಳ ಹಂತದಿಂದ ಕಟ್ಟಿ ಬೆಳೆಸುತ್ತಿರುವ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ ಪ್ರಧಾನಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಲಹೆಯಂತೆ, ಸಂಕಷ್ಟದಲ್ಲಿರುವ ಸೋಂಕಿತರಿಗೆ ನೆರವಾಗುವ ಜತೆಗೆ, ಸಾಮಾಜಿಕ ಅಂತರದ ಕಾಯ್ದುಕೊಳ್ಳುವುದರ ಮಹತ್ವವನ್ನು ಸಾರ್ವಜನಿಕರಿಗೆ ಅರ್ಥ ಮಾಡಿಸಬೇಕು. ಆ ಮೂಲಕ ದೇಶವನ್ನು ಕೋವಿಡ್ ಸೋಂಕಿನಿಂದ ಮುಕ್ತಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಒಪ್ಪೊತ್ತಿನ ಊಟ ತ್ಯಾಗ ಮಾಡಿ: ಬಿಜೆಪಿ ಸಂಸ್ಥಾಪನಾ ದಿನದ ಆಚರಣೆಯನ್ನು ಅರ್ಥಪೂರ್ಣವಾಗಿಸಲು ಒಂದು ಹೊತ್ತಿನ ಊಟವನ್ನು ಬಿಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

Advertisement

ದೇಶವೇ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಬಡವರು ಹಸಿವಿನಿಂದ ಬಳಲುತ್ತಿದ್ದು, ಕಾರ್ಯಕರ್ತರು ತಾವು ತ್ಯಾಗ ಮಾಡಿದ ಒಂದು ಹೊತ್ತಿನ ಊಟವನ್ನು ಹಸಿದವರಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಹಲವು ಮಾರ್ಗದರ್ಶನಗಳನ್ನು ನಡ್ಡಾ ನೀಡಿದ್ದಾರೆ. ಅವುಗಳನ್ನು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಕೋವಿಡ್ ವೈರಸ್ ನಿಯಂತ್ರಣದಲ್ಲಿ ಭಾರತ ಮಾದರಿ: ಮಾರಕ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತದ ಶ್ರಮವನ್ನು ಹಾಗೂ ಕೈಗೊಂಡಿರುವ ಕ್ರಮಗಳು ಇತರ ದೇಶಗಳಿಗೆ ಮಾದರಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಸಂಸ್ಥಾಪನಾ ದಿನದ ಹಿನ್ನೆಲೆ ಯಲ್ಲಿ ಮಾತನಾಡಿದ ಅವರು, ಸೋಂಕು ಹರಡದಂತೆ ತಡೆಯಲು ನಾವು ಕೈಗೊಂಡ ಕ್ರಮಗಳನ್ನು ಇತರ ದೇಶಗಳೂ ಅನುಸರಿಸಲು ಮುಂದಾಗಿವೆ.

ಈ ನಿಟ್ಟಿನಲ್ಲಿ ದೇಶದ ನಾಗರಿಕರು ತೋರಿದ ಪ್ರಬುದ್ಧತೆ ಶ್ಲಾಘನೀಯ ಎಂದಿರುವ ಮೋದಿ, ತಮ್ಮ ಕರೆಗೆ ಓಗೊಟ್ಟು, ರವಿವಾರ ರಾತ್ರಿ ದೀಪಗಳನ್ನು ಬೆಳಗುವ ಮೂಲಕ ಸಾಮೂಹಿಕ ಶಕ್ತಿ ಪ್ರದರ್ಶಸಿದ್ದಕ್ಕಾಗಿ 130 ಕೋಟಿ ಭಾರತೀಯರಿಗೂ ಧನ್ಯವಾದ ತಿಳಿಸಿದ್ದಾರೆ.

ಲಾಕ್‌ ಡೌನ್‌  ನಂತರದ ಕ್ರಮದ ಬಗ್ಗೆ ನಿರ್ಧರಿಸಿ
ಲಾಕ್‌ ಡೌನ್‌ ಅವಧಿ ಮುಗಿದ ಅನಂತರ ತಮ್ಮ ಇಲಾಖೆ ಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ 10 ನಿರ್ಧಾರಗಳು ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳಬೇಕಾದ 10 ಆದ್ಯತೆಯ ಕ್ಷೇತ್ರಗಳ ಪಟ್ಟಿಗಳನ್ನು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ತಮ್ಮ ಸಂಪುಟ ಸಚಿವರಿಗೆ ಸೂಚಿಸಿದ್ದಾರೆ.

ಮಂಗಳವಾರ ಬೆಳಗ್ಗೆ ತಮ್ಮ ನಿವಾಸದಿಂದ ಸಂಪುಟದ ಇತರ ಸಚಿವರ ಜತೆಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಅವರು, ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲದ ಪ್ರದೇಶಗಳಲ್ಲಿ ತಮ್ಮ ಇಲಾಖೆಯ ಚಟುವಟಿಕೆಗಳನ್ನು ಮರುಚಾಲನೆಗೊಳಿಸಬೇಕು. ಹಾಟ್‌ಸ್ಪಾಟ್‌ಗಳಲ್ಲದ ಪ್ರದೇಶಗಳಲ್ಲೂ ಆದ್ಯತೆಯ ಮೇರೆಗೆ ಇಲಾಖೆಯ ಚಟುವಟಿಕೆ ಆರಂಭಿಸಬೇಕು ಎಂದು ಸಲಹೆ ನೀಡಿದರು.

ಇದಲ್ಲದೆ ಕೋವಿಡ್ ವೈರಸ್ ನಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದ್ದು ಇದನ್ನು ಮೇಲೆತ್ತಲು ಇಲಾಖೆಗಳ ಆಡಳಿತವನ್ನು ಹೇಗೆ ಚುರುಕುಗೊಳಿಸಬೇಕು ಎಂಬುದರ ಬಗ್ಗೆ ಸರಿಯಾದ ಯೋಜನೆ ರೂಪಿಸಬೇಕು ಎಂದು ಪ್ರಧಾನಿ ಇದೇ ವೇಳೆ ಸೂಚಿಸಿದ್ದಾರೆ.

‘ವೀಡಿಯೋ ಸಭೆ’ ಇದೇ ಮೊದಲು: ನಮ್ಮಲ್ಲಿ, ಪ್ರಧಾನಿಯೊಬ್ಬರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂಪುಟ ಸಭೆ ನಡೆಸಿದ್ದು ಇದೇ ಮೊದಲು. ಮಾ. 25ರಂದು ನಡೆದಿದ್ದ ಈ ಹಿಂದಿನ ಸಂಪುಟ ಸಭೆಯಲ್ಲಿ ಸಂಪುಟ ಸದಸ್ಯರ ನಡುವೆ ಪರಸ್ಪರ ಅಂತರವಿರುವಂತೆ ಕೂರಿಸಲಾಗಿತ್ತು. ಸಾಮಾನ್ಯವಾಗಿ ಅಂಡಾಕಾರದ ಮೇಜಿನ ಸುತ್ತಲೂ ಸಚಿವರು ಕುಳಿತು ಸಂಪುಟ ಸಭೆ ನಡೆಸುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಯಿತು.

ಹಾಟ್‌ಸ್ಪಾಟ್‌ಗಳಲ್ಲಿ ವಿಸ್ತರಣೆ?: ದೇಶದಲ್ಲಿ ಎ. 14ಕ್ಕೆ ಲಾಕ್‌ ಡೌನ್‌ ಮುಕ್ತಾಯವಾಗಲಿದೆ ಎಂಬ ನಿರೀಕ್ಷೆ ಇದೆ. ಅನಂತರದ ದಿನಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಿರುವ 20 ಹಾಟ್‌ಸ್ಪಾಟ್‌ ಹಾಗೂ 22 ಸಂಭಾವ್ಯ ಹಾಟ್‌ಸ್ಪಾಟ್‌ಗಳಲ್ಲಿ ಮಾತ್ರ ಲಾಕ್‌ಡೌನ್‌ ವಿಸ್ತರಣೆಯಾಗಲಿದೆ. ಉಳಿದ ಕಡೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಮೋದಿ ಪಂಚಸೂತ್ರ
– ಪ್ರತಿಯೊಬ್ಬರೂ ಮುಖಕ್ಕೆ ತಪ್ಪದೇ ಮಾಸ್ಕ್ ಧರಿಸಿ,  ನಿಮ್ಮ ಬಳಿ ಎರಡು ಮಾಸ್ಕ್ ಇರಲಿ, ಒಂದನ್ನು ಇಲ್ಲದವರಿಗೆ ಕೊಡಿ.

– ಹೊರಗೆ ಹೋಗುವಾಗ ಮಾತ್ರವಲ್ಲ, ಮನೆಯಲ್ಲಿದ್ದಾಗಲೂ ಮಾಸ್ಕ್ ಧರಿಸಿ.

– ಲಾಕ್‌ಡೌನ್‌ ಪರಿಣಾಮ ಹಸಿದ ಬಡವರಿಗೆ ಆಹಾರದ ಪೊಟ್ಟಣ ವಿತರಿಸಿ

– ಆರೋಗ್ಯ ಸೇತು ಆ್ಯಪ್‌ ಇನ್‌ಸ್ಟಾಲ್‌ ಮಾಡಬೇಕು; ಪ್ರತಿಯೊಬ್ಬರೂ ಕನಿಷ್ಠ 40 ಮಂದಿಗೆ ಅದನ್ನು ಡೌನ್‌ಲೋಡ್‌ ಮಾಡುವಂತೆ ಸೂಚಿಸಬೇಕು

– ಪಿಎಂ ಕೇರ್ಸ್‌ಗೆ ದೇಣಿಗೆ ನೀಡಬೇಕು; ಪ್ರತಿ ಕಾರ್ಯಕರ್ತನೂ ಕನಿಷ್ಠ 40 ಮಂದಿಗೆ ದೇಣಿಗೆ ಕೊಡಲು ಮನವಿ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next