Advertisement

Primary Education: ಅಂಗನವಾಡಿ ಇನ್ನು “ಸರಕಾರಿ ಮೊಂಟೆಸರಿ”: ಸಚಿವೆ ಲಕ್ಷ್ಮೀ

12:50 AM Jul 14, 2024 | Team Udayavani |

ಮಂಗಳೂರು: ಅಂಗನವಾಡಿ ಎನ್ನುವುದು 50 ವರ್ಷ ಹಳೆಯ ಪರಿಕಲ್ಪನೆಯಾಗಿದ್ದು, ಬದಲಾದ ಸನ್ನಿವೇಶದಲ್ಲಿ ಅದರಲ್ಲೂ ಸುಧಾರಣೆ ಅಗತ್ಯವಿದೆ. ಹಾಗಾಗಿ ಅಂಗನವಾಡಿಗಳನ್ನು “ಸರಕಾರಿ ಮೊಂಟೆಸರಿ’ ಆಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಆರ್‌. ಹೆಬ್ಬಾಳ್ಕರ್‌ ಹೇಳಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗನವಾಡಿಯನ್ನು ಮೊಂಟಸರಿಗಳಾಗಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜ್ಯದಲ್ಲಿರುವ 70 ಸಾವಿರದಷ್ಟು ಅಂಗನವಾಡಿಗಳಲ್ಲಿ ಪ್ರಥಮ ಹಂತದಲ್ಲಿ 20 ಸಾವಿರ ಅಂಗನ ವಾಡಿಗಳನ್ನು ಮೊಂಟೆಸರಿ ಗಳಾಗಿ ಪರಿವರ್ತಿಸಲಾಗುವುದು ಎಂದರು.

ಮೊಂಟೆಸರಿ ಮಾಡಿದ ಮೇಲೆ ಶಿಕ್ಷಕರ ವಿದ್ಯಾರ್ಹತೆಯೂ ಚೆನ್ನಾಗಿರಬೇಕು. ಇಲಾಖೆಯಲ್ಲಿ 15 ಸಾವಿರ ಅಂಗನವಾಡಿ ಕಾರ್ಯಕರ್ತರು ಪದವಿ ಹಾಗೂ 2 ಸಾವಿರ ಮಂದಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಅಂಥವರನ್ನು ಗುರುತಿಸಿ
ಅವರಿಗೆ ತರಬೇತಿ ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಜಂಟಿಯಾಗಿ ಸ್ಮಾರ್ಟ್‌ ತರಗತಿಗಳನ್ನು ನಡೆಸಲಾಗುತ್ತಿದ್ದು, ಇದಕ್ಕೆ ಕೇಂದ್ರದ ಮಹಿಳಾ ಕಲ್ಯಾಣ ಅಭಿವೃದ್ಧಿ ಸಚಿವರು ಬೆಂಬಲ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳೂ ಒಪ್ಪಿಗೆ ಕೊಟ್ಟಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲೂ ಕಲಿಯುವ ಅವಕಾಶ ಇರಲಿದೆ ಎಂದು ವಿವರಿಸಿದರು.

ಬಾಲ್ಯವಿವಾಹದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ದುರದೃಷ್ಟಕರ
ರಾಜ್ಯವು ಬಾಲ್ಯ ವಿವಾಹ ಪ್ರಕರಣದಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹೊಂದಿರುವುದು ದುರದೃಷ್ಟಕರ ಸಂಗತಿ. ನಮ್ಮ ಇಲಾಖೆಯಿಂದ ಸಾಕಷ್ಟು ಕ್ರಮಗಳು ಆಗಿವೆ. ಬಾಲ್ಯವಿವಾಹಕ್ಕೆ ನಮ್ಮ ಒಂದು ಇಲಾಖೆಯ ಲೋಪ ಮಾತ್ರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯತ್‌, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ, ಕಾನೂನು, ಆರೋಗ್ಯ, ಪೊಲೀಸ್‌ ಇಲಾಖೆ ಸಹಕಾರ ನೀಬೇಕು. ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿದಾಗ ಬಾಲ್ಯ ವಿವಾಹವನ್ನು ತಡೆಗಟ್ಟಲು ಸಾಧ್ಯ ಎಂದು ಹೆಬ್ಟಾಳ್ಕರ್‌ ಹೇಳಿದರು.

ಬಾಲ್ಯವಿವಾಹದಲ್ಲಿ ಬಳ್ಳಾರಿ ಪ್ರಥಮ ಹಾಗೂ ಬೆಳಗಾವಿ ಎರಡನೇ ಜಿಲ್ಲೆ ಎನ್ನಲು ನಾಚಿಕೆ ಆಗುತ್ತೆ. ಈ ಪಿಡುಗಿಗೆ ಮೂಢನಂಬಿಕೆ ಕಾರಣವೋ ಅಥವಾ ಬೇರೆ ಏನು ಕಾರಣ ಎಂಬುದು ತಿಳಿಯುತ್ತಿಲ್ಲ. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಸಮಿತಿಯೂ ಇದೆ. ಅದರಲ್ಲಿ ವಕೀಲರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ. ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಆಗುತ್ತದೆ. ನಮಗೆ ವಿಷಯ ಗೊತ್ತಾದ ಕೂಡಲೇ ಎಫ್.ಐ.ಆರ್‌. ದಾಖಲಿಸುತ್ತೇವೆ. ಆದರೂ ಈ ಪಿಡುಗು ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಮುಂಬರುವ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಈ ಪಿಡುಗಿನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

ಬಿಜೆಪಿಯಿಂದ ಟಾರ್ಗೆಟ್‌ ರಾಜಕಾರಣ

ವಾಲ್ಮೀಕಿ ನಿಗಮ ಹಗರಣ ಹಾಗೂ ಮೈಸೂರಿನ ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರಕಾರವನ್ನು ಬಿಜೆಪಿ ಗುರಿಯಾಗಿಸಿ ರಾಜಕಾರಣ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಆರ್‌. ಹೆಬ್ಬಾಳ್ಕರ್‌  ಹೇಳಿದರು.

ಮಾಡಬಾರದ ಎಲ್ಲ ಹಗರಣ ಮಾಡಿದ ಕಾರಣದಿಂದಲೇ ಬಿಜೆಪಿ 60 ಸ್ಥಾನಕ್ಕೆ ಇಳಿದು ವಿಪಕ್ಷದಲ್ಲಿ ಕುಳಿತಿದೆ. ಬಿಜೆಪಿ ಮಾಡುತ್ತಿರುವ ಮುಡಾ ಹಗರಣ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾನೂನು ಪಂಡಿತರೇ ಹೇಳಿದ್ದಾರೆ. ವಾಲ್ಮೀಕಿ ನಿಗಮ ಹಗರಣ ವಿಷಯದಲ್ಲಿ ಈಗಾಗಲೇ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಿ ಇ.ಡಿ. ತನಿಖೆ ನಡೆಸುತ್ತಿದೆ. ರಾಜ್ಯ ಸರಕಾರ ಕೂಡ ಎಸ್‌ಐಟಿ ತನಿಖೆ ನಡೆಸುತ್ತಿದೆ. ಹಾಗಾಗಿ ಈಗ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ತುರ್ತು ಪರಿಸ್ಥಿತಿ ಹೇರಿದ ಜೂ.25ರಂದು ಸಂವಿಧಾನ ಹತ್ಯಾ ದಿನ ಎಂದು ಆಚರಿಸಲು ಕೇಂದ್ರ ಸರಕಾರ ನಿರ್ಧರಿಸುವ ಮೂಲಕ ಅದರಲ್ಲೂ ರಾಜಕಾರಣ ಮಾಡಲು ಹೊರಟಿದ್ದಾರೆ. ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಎನ್ನುವ ಬಿಜೆಪಿಗರು ಮುಸ್ಲಿಮರನ್ನು ಮಂತ್ರಿ ಮಾಡಿದ್ದಾರಾ ಅಥವಾ ಮುಸ್ಲಿಮರಿಗೆ ಟಿಕೆಟ್‌ ನೀಡಿದ್ದಾರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸೋಲಿಗೆ ಓಲೈಕೆ ಕಾರಣ ಅಲ್ಲ
ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಸಹಿತ ರಾಜ್ಯದಲ್ಲಿ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್‌ಗೆ ಸೋಲಾಗಲಿಲ್ಲ ಎಂದ ಅವರು, ಎಲ್ಲ ಕಡೆಗಳಲ್ಲೂ ಕಾರ್ಯಕರ್ತರು ಅಭ್ಯರ್ಥಿಗಳನ್ನು ಗೆಲ್ಲಿಸಲು ಯತ್ನಿಸಿದ್ದಾರೆ. ಅಭ್ಯರ್ಥಿಗಳ ಸೋಲಿನ ಕುರಿತು ಕಾಂಗ್ರೆಸ್‌ ವರಿಷ್ಠ ಮಧುಸೂದನ ಮಿಸ್ತ್ರಿಗೆ ವರದಿ ನೀಡಲಾಗಿದೆ. ಕಾಂಗ್ರೆಸ್‌ ಸೋಲಿಗೆ ಕೆಲವರು ಕಾರಣ ಎಂಬ ಆರೋಪದಲ್ಲಿ ಹುರುಳಿಲ್ಲ. ಯಾವ ಕಾರಣಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ಅಂಕಿಅಂಶ ಸಹಿತ ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next