Advertisement

ಮೂರೇ ತಿಂಗಳಲ್ಲಿ ಬದುಕು ತುಟ್ಟಿ

11:45 PM Mar 04, 2021 | Team Udayavani |

ಬೆಂಗಳೂರು: ಕಳೆದ ವರ್ಷವಿಡೀ ಕಾಡಿದ ಕೋವಿಡ್ ಸಂದರ್ಭದಲ್ಲಿ ಇಳಿಕೆ, ಕಡಿತ, ಹಿನ್ನಡೆ ವಿಚಾರಗಳೇ ಎಲ್ಲೆಡೆಯಿಂದ ಕಿವಿಗೆ ಬೀಳುತ್ತಿದ್ದರೆ ಕೋವಿಡ್‌ ತೀವ್ರತೆ ತಗ್ಗಿದ ತರುವಾಯ ಏರಿಕೆ, ಹೆಚ್ಚಳ, ದುಬಾರಿಗಳೇ ಕಣ್ಣಿಗೆ ರಾಚುತ್ತಿವೆ. ಜನಸಾಮಾನ್ಯರು ನಿತ್ಯ ಬಳಸುವ ಬಹುತೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಧ್ಯಮ, ಕೆಳ ಮಧ್ಯಮ ವರ್ಗ ಮತ್ತು ಬಡವರ ಬದುಕು ನಿರ್ವಹಣೆಯ ವೆಚ್ಚ ಹೆಚ್ಚಿದ್ದು, ಜೀವನ ದುಬಾರಿಯಾಗಿದೆ!

Advertisement

ನಿತ್ಯ ಬಳಸುವ ಅಡುಗೆ ಎಣ್ಣೆ, ತೊಗರಿ ಬೇಳೆ ಸಹಿತ ಆಯ್ದ ಆಹಾರ ಧಾನ್ಯಗಳ ಬೆಲೆ ಮೂರು ತಿಂಗಳಲ್ಲಿ ಏರಿಕೆಯಾಗಿದೆ. ಪೆಟ್ರೋಲ್‌- ಡೀಸೆಲ್‌ ದರ 9ರಿಂದ 11 ರೂ.ವರೆಗೆ ಹೆಚ್ಚಿದೆ. ಅಡುಗೆ ಅನಿಲ ಸಿಲಿಂಡರ್‌ ಬೆಲೆ ಮೂರು ತಿಂಗಳಲ್ಲಿ  ಸುಮಾರು 200 ರೂ. ಹೆಚ್ಚಳವಾಗಿದ್ದರೆ ಹಣ್ಣು, ತರಕಾರಿ ಬೆಲೆಯೂ ಗಗನಮುಖೀಯಾಗಿದೆ.

ಹಾಗೆಂದು ಏರಿಕೆ ಪರ್ವ ಮುಗಿದು ಎಲ್ಲವೂ ಸ್ಥಿರತೆ ಕಾಯ್ದುಕೊಳ್ಳುತ್ತಿದೆ ಎಂದರ್ಥವಲ್ಲ. ಸದ್ಯ ಆಗಿರುವ ಎಲ್‌ಪಿಜಿ, ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಪರಿಣಾಮ ತಿಂಗಳ ಅಂತರದಲ್ಲಿ ಕ್ರಮೇಣ ಗೊತ್ತಾಗಲಿದೆ. ಹಾಗಾಗಿ ಬೆಲೆ ಏರಿಕೆಯ ಬಿಸಿ ಮುಂದೆಯೂ ತೀವ್ರವಾಗಿಯೇ ಇರಲಿದ್ದು, ಮುಂದಿನ ದಿನಗಳಲ್ಲಿ ಜೀವನ ಇನ್ನಷ್ಟು ದುಬಾರಿಯಾಗುವ ಆತಂಕ ಮೂಡಿದೆ.

ಎಲ್‌ಪಿಜಿ ದುಬಾರಿ :

ಅಡುಗೆ ಅನಿಲ ಸಿಲಿಂಡರ್‌ ದರ ಏರಿಕೆಯಿಂದ ಸಾಕಷ್ಟು ಹೊಡೆತ ಬಿದ್ದಿದೆ. ನವೆಂಬರ್‌ನಿಂದೀಚೆಗೆ ಎಲ್‌ಪಿಜಿ ದರ 200 ರೂ. ಹೆಚ್ಚಿದ್ದು, ಸಾಮಾನ್ಯ ಕುಟುಂಬದವರಿಗೆ ತೀವ್ರ ಹೊರೆಯಾಗಿದೆ.

Advertisement

ವಿದ್ಯುತ್‌ ದರವೂ ಏರಿಕೆ :

ನ. 4ರಂದು ವಿದ್ಯುತ್‌ ದರವನ್ನೂ ಹೆಚ್ಚಿಸಲಾಗಿದೆ. ಪ್ರತೀ ಯೂನಿಟ್‌ಗೆ 40 ಪೈಸೆ ಹೆಚ್ಚಿಸಲಾಗಿದ್ದು, ಇದು ಕೂಡ ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಒಂದು ಮನೆಯಲ್ಲಿ ತಿಂಗಳಿಗೆ 100 ಯೂನಿಟ್‌ ವಿದ್ಯುತ್‌ ಬಳಕೆ ಮಾಡುತ್ತಿದ್ದರೆ, ಹಿಂದೆ ಅವರಿಗೆ 700ರಿಂದ 800 ರೂ. ವಿದ್ಯುತ್‌ ಬಿಲ್‌ ಬರುತ್ತಿತ್ತು. ಈಗ ಇದು 900ರಿಂದ 1,100 ರೂ. ಬರಬಹುದು. ಇದಷ್ಟೇ ಅಲ್ಲ, ಈಗಲೂ ಎಸ್ಕಾಂಗಳು ಮತ್ತೆ ವಿದ್ಯುತ್‌ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಮಂಗಳೂರಿನ ಉದಾಹರಣೆ :

ಖಾಸಗಿ ಉದ್ಯೋಗಿ ಸುಧೀರ್‌ ಅವರದು ನಾಲ್ವರು ಸದಸ್ಯರ ಕುಟುಂಬ. ಅವರ ತಿಂಗಳ ಸಂಪಾದನೆ 17,000 ರೂ. ಪತ್ನಿಯೂ ಉದ್ಯೋಗಿ. ಕುಟುಂಬದ ಒಟ್ಟು  ಆದಾಯ ಸುಮಾರು 25,000 ರೂ. 3 ತಿಂಗಳ ಹಿಂದಿಗಿಂತ ಈಗ ಅಂದಾಜು ಖರ್ಚು ಹೆಚ್ಚಳ (ರೂ.ಗಳಲ್ಲಿ) ಪೆಟ್ರೋಲ್‌ 600 ರೂ. ದಿನಸಿ, ಆಹಾರಧಾನ್ಯ, ತರಕಾರಿ-ಮೀನು, ಎಲ್‌ಪಿಜಿ 2- 3 ಸಾವಿರ ರೂ.

ತೈಲ ದರ ಏರಿಕೆ ವಿವರ (ರೂ.ಗಳಲ್ಲಿ ) :

 

ತೈಲ ದರ ಏರಿಕೆ ವಿವರ (ರೂ.ಗಳಲ್ಲಿ )

ತೈಲ                ನವೆಂಬರ್‌            ಮಾರ್ಚ್‌

ಪೆಟ್ರೋಲ್‌         84.43                    93.98

ಡೀಸೆಲ್‌             75.92                   86.21

 

ಅಡುಗೆ ಎಣ್ಣೆ  (ಹೋಲ್‌ಸೇಲ್‌ ಬೆಲೆ- ರೂ.ಗಳಲ್ಲಿ )

 

ಎಣ್ಣೆ                      ನವೆಂಬರ್‌           ಮಾರ್ಚ್‌

ಸನ್‌ಫ್ಲವರ್‌             120123          143150

ಪಾಮ್‌ ಆಯಿಲ್‌     9598                 116120

ತೈಲ ಬೆಲೆ ಏರುಮುಖ ;

ಪೆಟ್ರೋಲ್‌, ಡೀಸೆಲ್‌ ದರ ಮೂರು ತಿಂಗಳಲ್ಲಿ ಕ್ರಮವಾಗಿ ಸರಿಸುಮಾರು 10 ರೂ., 11 ರೂ. ಹೆಚ್ಚಳವಾಗಿದೆ. ಕ್ರಮೇಣ ಏರಿಕೆಯಾಗಿರುವುದರಿಂದ ಇತರ ಅಗತ್ಯ ವಸ್ತುಗಳ ಬೆಲೆಯೂ ಹಂತಹಂತವಾಗಿ ಹೆಚ್ಚುತ್ತಿದೆ. ವೈಯಕ್ತಿಕ ವಾಹನವನ್ನೇ ಅವಲಂಬಿಸಿ ರುವವರ ಕಿಸೆಗೆ ತೂತು ಬಿದ್ದಿದೆ. ಡೆಲಿವರಿ ಸೇವಾನಿರತರು, ಮಾರ್ಕೆಟಿಂಗ್‌ ಕ್ಷೇತ್ರದವರು, ಮಾರಾಟ ಪ್ರತಿನಿಧಿಗಳು, ಆ್ಯಪ್‌ ಆಧಾರಿತ ದ್ವಿಚಕ್ರ- ನಾಲ್ಕು ಚಕ್ರದ ವಾಹನ ಬಾಡಿಗೆಗೆ ನೀಡುವ ಸಂಸ್ಥೆಗಳು ಬೆಲೆ ಏರಿಕೆ ಹೊಡೆತದಿಂದ ನಲುಗುವಂತಾಗಿದೆ. ಸರಕು- ಸೇವೆ, ಕೊರಿಯರ್‌, ಕಾರ್ಗೋ ಸೇವೆಯ ನಿರ್ವಹಣ ವೆಚ್ಚ ಹೆಚ್ಚುವ ಸಾಧ್ಯತೆ ಇದೆ.

ಬೇಳೆ- ಅಡುಗೆ ಎಣ್ಣೆ ಏರಿಕೆ :

ತೊಗರಿ ಬೇಳೆ ಹೋಲ್‌ಸೇಲ್‌ ಬೆಲೆ ಕೆ.ಜಿ.ಗೆ 90 ರೂ.ನಿಂದ 105 ರೂ.ವರೆಗೆ ಇದೆ. ಚಿಲ್ಲರೆ ಮಾರಾಟ ಬೆಲೆ 3ರಿಂದ 5 ರೂ. ಹೆಚ್ಚಿಗೆ ಇರುತ್ತದೆ. 3 ತಿಂಗಳ ಹಿಂದೆ ಪ್ರತೀ ಕೆ.ಜಿ. ತೊಗರಿಬೇಳೆ ಹೋಲ್‌ಸೇಲ್‌ ಬೆಲೆ 80ರಿಂದ 95 ರೂ. ಇತ್ತು. ಅಡುಗೆ ಎಣ್ಣೆ ಬೆಲೆ 20ರಿಂದ 25 ರೂ.ಗಳಷ್ಟು ಹೆಚ್ಚಿದೆ. ಹಾಗಾಗಿ ಮನೆ ನಿರ್ವಹಣೆಯ ಮಾಸಿಕ ಖರ್ಚಿನ ಲೆಕ್ಕಾಚಾರವೂ ಏರುಪೇರಾಗಿದೆ. ಪ್ರತೀ ಕೆ.ಜಿ. ಅಕ್ಕಿ ಬೆಲೆ 3 ರೂ.ನಿಂದ 5 ರೂ.ವರೆಗೆ ಏರಿಕೆಯಾಗಿದೆ. ಕನಿಷ್ಠ 30 ರೂ.ನಿಂದ 45 ರೂ. ಬೆಲೆಯಲ್ಲಿ ನಾನಾ ಬಗೆಯ ಅಕ್ಕಿ ಲಭ್ಯವಿದೆ. ಗೋಧಿ ಬೆಲೆಯಲ್ಲಿ ಏರುಪೇರುಗಳಿದ್ದರೂ ಗಣನೀಯ ಏರಿಕೆಯಾಗಿಲ್ಲ. ಗೋಧಿ ಮತ್ತು ಅದರ ಉತ್ಪನ್ನಗಳ ಬಳಕೆ ಪ್ರಮಾಣ ಹೆಚ್ಚುತ್ತಿದ್ದರೂ ಬೆಲೆಯಲ್ಲಿ ಹೆಚ್ಚಿನ ಏರಿಳಿತವಿಲ್ಲ ಎಂದು ಯಶವಂತಪುರದ ಎಪಿಎಂಸಿ ಮಾರುಕಟ್ಟೆ ವರ್ತಕರು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ  ಪೂರೈಕೆ ಸರಪಳಿಯಲ್ಲಿ  ವ್ಯತ್ಯಯವಾಗುವ ಜತೆಗೆ ಅಕಾಲಿಕ ಮಳೆ, ಬೃಹತ್‌ ಕಂಪೆನಿಗಳು ದೊಡ್ಡ  ಪ್ರಮಾಣದಲ್ಲಿ ಖರೀದಿಸಿ ದಾಸ್ತಾನು ಮಾಡುತ್ತಿರುವ ಹಿನ್ನೆಲೆಯಲ್ಲಿ  ಆಯ್ದ ಆಹಾರಧಾನ್ಯಗಳ ಬೆಲೆಗಳಲ್ಲಿ  ಏರಿಳಿತವಾಗುತ್ತಿದೆ. ಜತೆಗೆ ಖರೀದಿ ಸ್ವರೂಪದ ಒಟ್ಟಾರೆ ಬದಲಾವಣೆಯೂ ಕಾರಣವಾಗಿದೆ. ದರ ಏರಿಕೆಗೆ ತೈಲ ಬೆಲೆ ಏರಿಕೆಯೊಂದೇ ಕಾರಣವಲ್ಲ. ಜನರಲ್ಲಿ  ಖರೀದಿ ಸಾಮರ್ಥ್ಯ ಹೆಚ್ಚಾಗುವವರೆಗೆ ಪರಿಸ್ಥಿತಿ ಇದೇ ರೀತಿ ಇರುತ್ತದೆ. ಎಪ್ರಿಲ್‌ ಬಳಿಕ ಪರಿಸ್ಥಿತಿ ಸುಧಾರಿಸಬಹುದು. ಆರ್‌. ಜಿ. ಮುರಳೀಧರ್‌, ಆರ್ಥಿಕ ತಜ್ಞರು

3 ತಿಂಗಳ ಹಿಂದೆ ಇದೇ ಆದಾಯದಲ್ಲಿ ಅಲ್ಲಿಂದಲ್ಲಿಗೆ ಜೀವನ ನಿರ್ವಹಣೆ ಮಾಡುತ್ತಿದ್ದೆವು. ಆದರೆ ಎಲ್ಲ  ದಿನಬಳಕೆ ವಸ್ತುಗಳ ಬೆಲೆ ಏರುತ್ತಲೇ ಇದೆ. ಸಂಪಾದನೆಯಲ್ಲಿ ಹೆಚ್ಚಳವಾಗಿಲ್ಲ. ಕುಟುಂಬದ ನಿರ್ವಹಣೆಯೇ ನಮಗೆ ದೊಡ್ಡ ಸವಾಲು ಆಗುತ್ತಿದೆ. ಸುಧೀರ್‌

ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ಪರಿಣಾಮ ನೇರ ಖರೀದಿ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ವಹಿವಾಟು ಕುಸಿದಿದೆ. ಇನ್ನೊಂದೆಡೆ ಆಯ್ದ ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಯಶವಂತಪುರ ಎಪಿಎಂಸಿಯಲ್ಲಿ ಶೇ. 30ರಿಂದ ಶೇ. 40ರಷ್ಟು ವಹಿವಾಟು ಇಳಿಕೆಯಾಗಿದೆ. ಬಹಳಷ್ಟು ಮಂದಿ ಬೆಂಗಳೂರಿನಿಂದ ವಲಸೆ ಹೋಗಿರುವುದು ಕೂಡ ಇದಕ್ಕೆ ಸ್ವಲ್ಪಮಟ್ಟಿಗೆ ಕಾರಣವಿರಬಹುದು. ಪರಿಸ್ಥಿತಿ ಹೀಗೆ ಮುಂದುವರಿದರೆ ಎಪಿಎಂಸಿ ಮಾರುಕಟ್ಟೆ ಕ್ರಮೇಣ ಅಸ್ತಿತ್ವ ಕಳೆದುಕೊಳ್ಳುತ್ತದೆ. ಬಿ.ಎ. ಪ್ರಸನ್ನ ಕುಮಾರ್‌,  ಬೆಂಗಳೂರು ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next