Advertisement

ಕೋವಿಡ್ ನಿಯಮಾವಳಿ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಿ : ದೇಶದ ಜನತೆಗೆ ರಾಷ್ಟ್ರಪತಿಗಳ ಕರೆ

09:30 PM Aug 14, 2021 | Team Udayavani |

ನವದೆಹಲಿ: ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರೆ ನೀಡಿದ್ದಾರೆ.

Advertisement

75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು,ದೇಶದ ಜನತೆಗೆ 75 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷವಾದ ಮಹತ್ವವಿದೆ. 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ನಡೆದಿದೆ. ಗಣರಾಜ್ಯ ಭಾರತದ 75 ವರ್ಷಗಳ ಪಯಣವನ್ನು ಹಿಂತಿರುಗಿ ನೋಡಿದಾಗ, ನಮ್ಮ ಯಾನದ ಬಗ್ಗೆ ಹೆಮ್ಮೆ ಪಡಲು ಕಾರಣಗಳು ಸಿಗುತ್ತವೆ. ಸರಿಯಾದ ದಿಕ್ಕಿನಲ್ಲಿ ನಿಧಾನ ಮತ್ತು ಸ್ಥಿರವಾದ ಹೆಜ್ಜೆಗಳನ್ನು ಹಾಕುವುದು ತಪ್ಪು ದಾರಿಯಲ್ಲಿ ತ್ವರಿತ ಹೆಜ್ಜೆಗಳನ್ನು ಹಾಕುವುದಕ್ಕಿಂತಲೂ ಸೂಕ್ತವೆಂದು ಗಾಂಧೀಜಿ ನಮಗೆ ಕಲಿಸಿದ್ದಾರೆ ಎಂದರು.

ಪ್ರಪಂಚವು ಭಾರತದ ಪವಾಡವನ್ನು ನೋಡುತ್ತಿದೆ, ಇದು ಸಾಂಸ್ಕೃತಿಕ ಬಹುತ್ವದ ನೆಲೆಬೀಡು, ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ನಿಂತಿದೆ ಎಂದ ರಾಷ್ಟ್ರಪತಿಗಳು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ತಮ್ಮ ಅದ್ಭುತ ಪ್ರದರ್ಶನದಿಂದ ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದ್ದಾರೆ. ಭಾರತವು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ 121 ವರ್ಷಗಳಲ್ಲೇ ಅತಿ ಹೆಚ್ಚು ಪದಕಗಳನ್ನು ಗೆದ್ದಿದೆ. ನಮ್ಮ ಹೆಣ್ಣುಮಕ್ಕಳು ಪ್ರತಿಕೂಲ ಪರಿಸ್ಥಿತಿಗಳನ್ನೂ ಮೀರಿ ಆಟದ ಮೈದಾನದಲ್ಲಿ ವಿಶ್ವಮಟ್ಟದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಕ್ರೀಡಾ ಸಾಧನೆಯ ಜೊತೆಗೆ ಯುಗ ಬದಲಾವಣೆ ಎಂಬುದು ಮಹಿಳೆಯರ ಭಾಗವಹಿಸುವಿಕೆ ಮತ್ತು ಎಲ್ಲ ರಂಗದಲ್ಲಿನ ಮಹಿಳೆಯರ ಯಶಸ್ಸಿನಿಂದ ಸಾಧ್ಯವಾಗುತ್ತದೆ.–ಉನ್ನತ ಶಿಕ್ಷಣದಿಂದ ಹಿಡಿದು ಸಶಸ್ತ್ರ ಪಡೆಗಳವರೆಗೆ, ಪ್ರಯೋಗಾಲಯಗಳಿಂದ ಆಟದ ಮೈದಾನಗಳವರೆಗೆ ನಮ್ಮ ಹೆಣ್ಣು ಮಕ್ಕಳು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಈ ಯಶಸ್ಸಿನಲ್ಲಿ, ಭವಿಷ್ಯದ ಅಭಿವೃದ್ಧಿ ಹೊಂದಿದ ಭಾರತದ ನೋಟವನ್ನು ನಾನು ನೋಡುತ್ತಿದ್ದೇನೆ–ಸಾಧನೆಗೈದ ಹೆಣ್ಣುಮಕ್ಕಳ ಕುಟುಂಬವನ್ನು ಮಾದರಿಯಾಗಿಟ್ಟುಕೊಳ್ಳುವಂತೆ ನಾನು ಎಲ್ಲ ಪೋಷಕರಿಗೆ ಮನವಿ ಮಾಡುತ್ತೇನೆ. ಮತ್ತು, ಹೆಣ್ಣುಮಕ್ಕಳಿಗೆ ಅವಕಾಶಗಳನ್ನು ಕಲ್ಪಿಸಿ ಸಾಧನೆಗೆ ಹಾದಿ ಮಾಡಿಕೊಡಬೇಕೆಂದು ನಾನು ಆಶಿಸುತ್ತೇನೆ ಎಂದರು.

ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಿದೆ. ಆದರೆ ಕೋವಿಡ್ ವೈರಸ್‌ ಇನ್ನೂ ದೂರವಾಗಿಲ್ಲ. ಅದರ ವಿನಾಶಕಾರಿ ಪರಿಣಾಮಗಳಿಂದ ನಾವು ಇನ್ನೂ ಹೊರಬಂದಿಲ್ಲ. ಕೋವಿಡ್‌ ಯೋಧರು, ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರು, ನಿರ್ವಾಹಕರು ಮತ್ತು ಇತರರು, ಎರಡನೇ ಅಲೆಯನ್ನು ನಿಯಂತ್ರಿಸಲು ಸಕಲವನ್ನು ಪಣಕ್ಕಿಟ್ಟು ಹೋರಾಡಿದರು ಎಂದು ಸ್ಮರಿಸಿದ ರಾಷ್ಟ್ರಪತಿಗಳು, ಇನ್ನಷ್ಟೇ ಲಸಿಕೆ ಹಾಕಿಸಿಕೊಳ್ಳಬೇಕಾದ ನಾಗರಿಕರು ಕೂಡಲೇ ಲಸಿಕೆ ಪಡೆಯಬೇಕು. ಅದರ ಮೂಲಕ ಇತರರಿಗೆ ಸ್ಫೂರ್ತಿಯಾಗಬೇಕೆಂದು ನಾನು ಮನವಿ ಮಾಡಿದರು.

ವೈದ್ಯಕೀಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ ಒಂದು ವರ್ಷದಲ್ಲಿ ₹23,220 ಕೋಟಿ ರೂಪಾಯಿಗಳನ್ನು ದೇಶ ಖರ್ಚು ಮಾಡಿರುವುದು ಹೃದಯಸ್ಪರ್ಶಿ ವಿಚಾರ. ಗ್ರಾಮೀಣ ಭಾರತ, ವಿಶೇಷವಾಗಿ ಕೃಷಿ ವಲಯವು ಎಲ್ಲಾ ಸಮಸ್ಯೆಗಳನ್ನು ಮೀರಿ ಬೆಳೆಯುತ್ತಲೇ ಇರುವುದು ಸಂತೋಷ ತರಿಸಿದೆ. ಭಾರತವು ಹಳ್ಳಿಗಳ ದೇಶ. ಅದನ್ನು ಅಭಿವೃದ್ಧಿಯಲ್ಲಿ ಹಿಂದುಳಿಯಲು ಬಿಡಲಾಗುವುದಿಲ್ಲ. ಸುಲಭವಾಗಿ ವಾಣಿಜ್ಯ–ವ್ಯಾಪಾರ ಮಾಡುವಲ್ಲಿ ಸುಧಾರಣೆಯಾದರೆ, ಅದು ಎಲ್ಲರ ಬದುಕಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಕೃಷಿ ಮಾರುಕಟ್ಟೆ ಸುಧಾರಣೆಗಳ ಸರಣಿಯು ನಮ್ಮ ‘ಅನ್ನದಾತ’ ರೈತರನ್ನು ಸಬಲಗೊಳಿಸುತ್ತದೆ ಮತ್ತು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next