Advertisement

ಈ ವೈದ್ಯಕೀಯ ಕಾಲೇಜು ಮಿನಿ ಭಾರತದಂತಿದೆ

04:05 PM Oct 08, 2021 | Team Udayavani |

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ 750 ವೈದ್ಯಕೀಯ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಬಂದಿದ್ದಾರೆ. ಜಮ್ಮು ಕಾಶ್ಮೀರ, ಅಸ್ಸಾಂನಿಂದಲೂ ಬಂದಿದ್ದಾರೆ. ವಿವಿಧತೆಯಲ್ಲಿ ಏಕತೆಗೆ ಇದು ಸಾಕ್ಷಿ.

Advertisement

ಈ ವೈದ್ಯಕೀಯ ಕಾಲೇಜು ಮಿನಿ ಭಾರತದಂತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ ನಿರ್ಮಿಸಲಾಗಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) 450 ಹಾಸಿಗೆಗಳ ನೂತನ ಬೋಧನಾ ಆಸ್ಪತ್ರೆಯನ್ನು ಗುರು ವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಈ ಕಾಲೇಜಿನಲ್ಲಿ ಒಟ್ಟು 300 ವಿದ್ಯಾರ್ಥಿ ನಿಯರಿದ್ದಾರೆ. ಶೇ. 50 ರಷ್ಟು ಮಹಿಳೆಯರೇ ಇರುವುದು ವಿಶೇಷ. ಶೇ. 60ರಷ್ಟು ನರ್ಸಿಂಗ್‌ ವಿದ್ಯಾರ್ಥಿಗಳು ಮಹಿಳೆಯರು. ಇದು ಮಹಿಳಾ ಸಬಲೀಕರಣಕ್ಕೆ ಉದಾಹರಣೆ. ಆಧುನಿಕ ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಪ್ರಶಂಸಿದರು.

ಅಧಿಕಾರ ಬಂದಾಗ ಅಹಂಕಾರ ಬೇಡ

ಆತ್ಮನಿರ್ಭರ ಭಾರತ: ನಮ್ಮ ತಂತ್ರಜ್ಞಾನ, ಮಾನವ ಸಂಪನ್ಮೂಲ ಎರಡೂ ಜೊತೆಯಾಗಿಕಾರ್ಯೋನ್ಮುಖವಾದಾಗ ಮಾತ್ರ ನಾವು  ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಭರವಸೆ ಹೊಂದಬಹುದು. ಇಡೀ ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಪ್ರತಿ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ.

Advertisement

ಹೊಸ ಸ್ನಾತಕೋತ್ತರ ಕಾಲೇಜುಗಳು ಸ್ಥಾಪನೆಯಾಗುತ್ತಿವೆ ಅದರ ಜೊತೆಗೆ ಈಗಿರುವ ಸ್ನಾತಕೋತ್ತರ ಕೇಂದ್ರಗಳೂ ಉತ್ತಮಗೊಳ್ಳು ತ್ತಿವೆ. ಮಾನವ ಸಂಪನ್ಮೂಲವಿಲ್ಲದೆ ಅದರ ಉದ್ದೇಶವನ್ನು ಪೂರಸಲು ಸಾಧ್ಯವಿಲ್ಲ. ನಾವು ನಮ್ಮ ಆರೋಗ್ಯ ಸೇವೆಗಳನ್ನು ನಮ್ಮ ದೇಶದ ದೂರದ ಮೂಲೆಗಳಿಗೆ ಕೊಂಡೊಯ್ಯಬೇಕು ಎಂದರು.

ಆರೋಗ್ಯ ಸೇವೆ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಿದ್ದಾರೆ. ಸಿಮ್ಸ್ನಲ್ಲಿ ರಾಜ್ಯ ಸರ್ಕಾರವು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಿ. ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಗುರಿ ತಲುಪಲು ವೈದ್ಯಕೀಯ ಸೇವೆಗಳ ವಿಸ್ತರಣೆಯಾಗುತ್ತಿರುವುದು ಉತ್ತಮ ಅಂಶವಾಗಿದೆ.  ಭಾರತ ಸರ್ಕಾರವು ಈಗಾಗಲೇ ಏಮ್ಸ್ ಸಂಖ್ಯೆಯನ್ನು 6 ರಿಂದ 22ಕ್ಕೆ ಹೆಚ್ಚಿಸಿದೆ ಎಂದರು.

ಅತ್ಯಾಧುನಿಕ ಸೌಲಭ್ಯ: ದೇಶದ ಅಭಿವೃದ್ಧಿಗೆ ಆರೋಗ್ಯ ಮತ್ತು ಶಿಕ್ಷಣ ಮುಖ್ಯ ಎಂದು ಹೇಳಿದ ರಾಷ್ಟ್ರಪತಿಗಳು, 450 ಹಾಸಿಗೆಗಳ ಆಸ್ಪತ್ರೆಯ ಉದ್ಘಾಟನೆಯೊಂದಿಗೆ, ಪ್ರಾಯೋಗಿಕ ಅನುಭವ ಮತ್ತು ಬೆಳೆಯುತ್ತಿರುವ ಪ್ರತಿಭೆಗಳಿಗೆ ತರಬೇತಿ ನೀಡಲು ಇದು ಹೆಚ್ಚಿನ ಅವಕಾಶ ಒದಗಿಸುತ್ತದೆ. ಅತ್ಯಾಧುನಿಕಸೌಲಭ್ಯ ಇರುವ ಈ ಆಸ್ಪತ್ರೆ ಸಾಕಷ್ಟು  ಮೂಲಸೌಕರ್ಯ ಮತ್ತು ಕಾರ್ಡಿಯಾಲಜಿ, ನರವಿಜ್ಞಾನ ಮುಂತಾದ ಸೂಪರ್‌ ಸ್ಪೆಷಾಲಿಟಿ ವಿಭಾಗ ಹೊಂದಿದೆ.
ಈ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತವೆ ಎಂದು ತಿಳಿಸಿದರು.ಭಾರತವು ದೇಶಿಯವಾಗಿ ಕೋವಿಡ್‌ ಲಸಿಕೆಗಳನ್ನು ತಯಾರಿಸಿದ್ದು ಮಾತ್ರವಲ್ಲದೆ ಲಸಿಕೆಗಳನ್ನು ನಿರ್ವಹಿಸುವಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲಿ, ನಾವು ಸುಮಾರು 25 ಮಿಲಿಯನ್‌ ಜನರಿಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ.

ಶೀಘ್ರದಲ್ಲೇ ಒಟ್ಟು ಲಸಿಕಾ ಪ್ರಮಾಣ ಒಂದು ಬಿಲಿಯನ್‌ ಗಡಿ ದಾಟುತ್ತದೆ ಎಂದರು. ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋತ್‌ ಮಾತನಾಡಿ, ಮೊದಲನೇ ಅಲೆಯಲ್ಲಿ ಬಹುದಿನಗಳವರೆಗೆ ಶೂನ್ಯ ಪ್ರಕರಣಗಳು ವರದಿಯಾಗಿದ್ದ ಜಿಲ್ಲೆ. ಈ ಜಿಲ್ಲೆಯಲ್ಲಿ ಬಡವರು, ಬುಡಕಟ್ಟು ಜನರು ಹೆಚ್ಚಿದ್ದಾರೆ. ಈ ಆಸ್ಪತ್ರೆ ಆ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಿ ಎಂದು ಆಶಿಸಿದರು.

ರಾಷ್ಟ್ರದ ಪ್ರಥಮ ಮಹಿಳೆ ಸವಿತಾ ರಾಮನಾಥ ಕೋವಿಂದ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಟಿ. ಸೋಮ ಶೇಖರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಮ್ಸ್‌ ಡೀನ್‌ ಹಾಗೂ ನಿರ್ದೇಶಕ ಡಾ. ಜಿ.ಎಂ. ಸಂಜೀವ್‌ ಸ್ವಾಗತಿಸಿದರು.

ಕರ್ನಾಟಕಕ್ಕೆ  ಬರಲು ನನಗೆ ತುಂಬಾ ಇಷ್ಟ ಚಾಮರಾಜನಗರ: ತಮ್ಮ ಭಾಷಣಾರಾಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಕೆಲವು ಮಾತುಗಳನ್ನು ಕನ್ನಡದಲ್ಲಿಹೇಳಲು ಪ್ರಯತ್ನಿಸುತ್ತೇನೆ ಎಂದು ಇಂಗ್ಲಿಷ್‌ನಲ್ಲಿ ತಿಳಿಸಿ, ನನಗೆ ಕರ್ನಾಟಕಕ್ಕೆ ಬರಲು ತುಂಬಾ ಇಷ್ಟ. ನಿಮ್ಮ ಜೊತೆಯಲ್ಲಿ ಇರುವುದಕ್ಕೂ ನನಗೆ ತುಂಬಾ ಸಂತೋಷ ಎಂದು ಕನ್ನಡದಲ್ಲೇ ಹೇಳಿ ಸಭಿಕರ ಮನಗೆದ್ದರು.

ನವರಾತ್ರಿಯ ಮೊದಲ ದಿನವೇ ಆಸ್ಪತ್ರೆ ಉದ್ಘಾಟನೆಯಾಗುತ್ತಿರುವುದು ವಿಶೇಷ. ಇಲ್ಲಿನ ಚಾಮರಾಜೇಶ್ವರ ದೇವಾಲಯ ಚಾಮರಾಜರ ಹೆಸರನ್ನು ಹೊತ್ತಿದೆ. ಚಾಮರಾಜ ಒಡೆಯರ್‌ ಅವರು ಕನ್ನಡ ಮಾಧ್ಯಮದಲ್ಲಿ 1881ರಲ್ಲೇ ಬಾಲಕಿಯರಿಗಾಗಿ ಶಾಲೆ ಸ್ಥಾಪಿಸಿದರು. ಜಯ ಚಾಮರಾಜೆಂದ್ರ ಒಡೆಯರ್‌ ಪ್ರಥಮ ರಾಜ್ಯಪಾಲರಾಗಿದ್ದರು ಎಂದು ರಾಷ್ಟ್ರಪತಿಗಳು ಸ್ಮರಿಸಿದರು

 ಆಯುಷ್ಮಾನ್‌ ಅನುಷ್ಠಾನದಲ್ಲಿ ಸಿಮ್ಸ್‌ ನಂ.3

2020-21ರಲ್ಲಿ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯ ಯಶಸ್ವಿ ಅನುಷ್ಠಾನಗೊಳಿಸಿ, ಸಿಮ್ಸ್ ಮೂರನೇ ಸ್ಥಾನದಲ್ಲಿದೆ ಎಂದು ರಾಷ್ಟ್ರಪತಿಗಳು ಹರ್ಷ ವ್ಯಕ್ತಪಡಿ ಸಿದರು. ಆರೋಗ್ಯ ಸೇವೆಯ ಪ್ರವೇಶವನ್ನು ಉತ್ತೇಜಿಸುವಲ್ಲಿ, ಈ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಆಡಳಿತ ವರ್ಗ ನಿರ್ಣಾಯಕ ಪಾತ್ರ ವಹಿಸಬೇಕು.

ಇಲ್ಲಿ ತರಬೇತಿ ಪಡೆಯುತ್ತಿರುವ ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಹೆಚ್ಚಿನ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾರೆ ಮತ್ತು ವೃತ್ತಿಗೆ ಕೀರ್ತಿ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮ ಜನರು ವೈದ್ಯರನ್ನು ದೇವರೆಂದು ನಂಬಿದ್ದಾರೆ. ಈ ನಂಬಿಕೆಯನ್ನು ಉಳಿಸಲು ನೀವೆಲ್ಲ ಉತ್ತಮ ಸೇವೆ ನೀಡುತ್ತೀರೆಂದು ಆಶಿಸುತ್ತೇನೆ ಎಂದು ರಾಷ್ಟ್ರಪತಿಗಳು ತಿಳಿಸಿದರು.

ಪ್ರಾಕೃತಿಕ ಸಂಪನ್ಮೂಲದಲ್ಲಿ ಜಿಲ್ಲೆ ಮುಂದೆ, ಅಭಿವೃದ್ಧಿಯಲ್ಲಿ ಹಿಂದೆ ಚಾಮರಾಜನಗರ: ನಮ್ಮ ಸರ್ಕಾರ ಪ್ರಾದೇಶಿಕ ಅಸಮಾನತೆ ತೊಡೆದು ಹಾಕಲು ಯತ್ನಿಸುತ್ತದೆ. ಎಲ್ಲ ಜಿಲ್ಲೆಗಳು ಸಹ ಮುಂದೆ ಬರಬೇಕು. ಚಾಮರಾಜನಗರ ಜಿಲ್ಲೆ ಪ್ರಾಕೃತಿಕ ಸಾಂಸ್ಕೃತಿಕ ಸಮೃದ್ಧತೆಯಿಂದಕೂಡಿರುವ ಜಿಲ್ಲೆಯಾದರೂ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದೆ ಇದೆ. ಈ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ರಾಷ್ಟ್ರಪತಿಗಳು ಚಾಮರಾಜನಗರ ವೈದ್ಯಕೀಯ ಆಸ್ಪತ್ರೆ ಉದ್ಘಾಟನೆಗೆ ಬಂದಿರುವುದು ನಮ್ಮ ಪುಣ್ಯಭಾಗ್ಯ. ಅವರ ಅಮೃತಹಸ್ತದಿಂದ ಉದ್ಘಾಟನೆ ಮಾಡಿರುವ ಈ 450 ಹಾಸಿಗೆಗಳ ಆಸ್ಪತ್ರೆ ಬಡವರ ಸೇವೆ ಮಾಡುವ ಕೇಂದ್ರವಾಗಲಿ ಎಂದರು.ರಾಜ್ಯದ ಇನ್ನೂ 8 ಜಿಲ್ಲೆಗಳಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಬೇಕಿದೆ. ಇನ್ನು ಒಂದೂವರೆ ವರ್ಷಗಳಲ್ಲಿ ಆ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್‌ ಕಾಲೇಜು ಆರಂಭಿಸಲಾಗುವುದು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರಕಬೇಕು. ವೈದ್ಯ ಮತ್ತು ರೋಗಿ ಅನುಪಾತ, ರೋಗಿ ಮತ್ತು ಹಾಸಿಗೆ ಅನುಪಾತ ಬಹಳ ಕಡಿಮೆ ಇದೆ.

ಇದನ್ನು ಸರಿದೂಗಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕೆಂಬುದು ಸರ್ಕಾರದ ಬದ್ಧತೆಯಾಗಿದೆ. ಇದಕ್ಕನುಗುಣವಾಗಿ ಇನ್ನುಳಿದ 8 ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next