Advertisement

ಹಸಿ ಕಸದ ಗೊಬ್ಬರ ಖರೀದಿಗೆ ಸಿದ್ಧತೆ

12:57 AM Jun 30, 2019 | Lakshmi GovindaRaj |

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಸರ್ಕಾರಿ ಕಚೇರಿ ಹಾಗೂ ನೌಕರ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿಕಸವನ್ನು ಕಾಂಪೋಸ್ಟ್‌ ಆಗಿ ಪರಿವರ್ತಿಸಬೇಕು ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿರುವ ಬೆನ್ನಲ್ಲೇ ಉತ್ಪತ್ತಿಯಾಗುವ ಗೊಬ್ಬರವನ್ನು ಪಾಲಿಕೆ ಖರೀದಿಸಲು ಸಿದ್ಧತೆ ನಡೆಸುತ್ತಿದೆ.

Advertisement

ಹಸಿ ಕಸದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಏನು ಮಾಡಬೇಕು. ಭವಿಷ್ಯದಲ್ಲಿ ಅದರ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿತ್ತು. ಈ ಕುರಿತು ಪಾಲಿಕೆ ಅಧಿಕಾರಿಗಳು ಸಭೆ ನಡೆಸಿದ್ದು, ಈ ಸಭೆಯಲ್ಲಿ ಸದ್ಯದ ಮಟ್ಟಿಗೆ ನಗರದಲ್ಲಿ ಹಸಿ ಕಸದಿಂದ ತಯಾರಾಗುವ ಗೊಬ್ಬರವನ್ನು ನಗರದಲ್ಲಿರುವ ಉದ್ಯಾನಗಳಿಗೆ ಬಳಸಿಕೊಳ್ಳಲು ಆದ್ಯತೆ ನೀಡಬೇಕು.

ಆ ಬಳಿಕ ನಗರದಲ್ಲಿ ಕಾಂಪೋಸ್ಟ್‌ ಪ್ರಮಾಣ ಹೆಚ್ಚಾದಂತೆ ಈಗಾಗಲೇ ನಗರದಲ್ಲಿ ಇರುವ 165 ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳು(ಡಿಡಬ್ಲೂéಸಿಸಿ), ಉದ್ಯಾನಗಳು, ಬಯೋ ಮೆಥೆನೈಸೇಷನ್‌ ಸೆಂಟರ್‌ಗಳಲ್ಲಿ ಪಾಲಿಕೆ ಸಿಬ್ಬಂದಿಗಳಿಂದ ಗೊಬ್ಬರ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಇದರ ಜತಗೆ ಸಾರ್ವಜನಿಕರುನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಒಂದು ಕೆ.ಜಿ.ಗೊಬ್ಬರಕ್ಕೆ 2 ರೂ. ಪ್ರೋತ್ಸಾಹ ಧನ ನೀಡಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಸದ್ಯ ಹೀಗಾಗಲೇ ನಗರದಲ್ಲಿ “ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳು’ ಜನರಿಗೆ ಪರಿಚಯವಿದ್ದು, ಇಲ್ಲಿಯೇ ಕಾಂಪೋಸ್ಟ್‌ ಗೊಬ್ಬರ ಸಂಗ್ರಹಿಸಿದರೆ ಸೂಕ್ತ ಎಂದು ತೀರ್ಮಾನಿಸಲಾಗಿದೆ. ಜನರಿಗೆ ಗೊಬ್ಬರ ತಂದುಕೊಡಲು ಸಹಾಯಕವಾಗುತ್ತದೆ. ಒಮ್ಮೆ ಮನೆಯಿಂದ ಬಂದರೆ ಹಸಿ ಕಸದ ಗೊಬ್ಬರ ಹಾಗೂ ಒಣ ತ್ಯಾಜ್ಯವನ್ನು ಕೇಂದ್ರಗಳಿಗೆ ನೀಡಿ ಹಣ ಪಡೆದು ಹೋಗಬಹುದು ಎನ್ನುತ್ತಾರೆ ಬಿಬಿಎಂಪಿ ತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು.

ನಗರದ ವಸತಿಗಳಲ್ಲಿ ಕಾಂಪೋಸ್ಟ್‌ ಪ್ರಮಾಣ ಶೇ.50ಕ್ಕೂ ಹೆಚ್ಚಾದರೆ ಆಗ ನಗರದಲ್ಲಿ ಟಿಪ್ಪರ್‌ ಗಾಡಿಗಳ ಮೂಲಕ ಕಸ ಸಂಗ್ರಹಣೆ ಕಡಿಮೆಯಾಗುತ್ತದೆ. ಆ ಟಿಪ್ಪರ್‌ ಗಾಡಿಗಳನ್ನು ಬಳಸಿ ಗೊಬ್ಬರ ಸಂಗ್ರಹಿಸಲಾಗುತ್ತದೆ. ಇವುಗಳ ಜತೆಗೆ ನಗರ ಜನರು ಸಂಪೂರ್ಣವಾಗಿ ಕಾಂಪೋಸ್ಟ್‌ ಅಳವಡಿಸಿಕೊಂಡಾಗ ನಗರದಲ್ಲಿ ಪ್ರತಿ ವಾರ್ಡ್‌ಗೂ ಒಂದೊಂದು ಉದ್ಯಾನಗಳಲ್ಲಿ ಸಂಗ್ರಹಣಾ ಕೇಂದ್ರ ಹಾಗೂ ಒಂದೊಂದು ಗೊಬ್ಬರ ಖರೀದಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.

Advertisement

ಬಿಬಿಎಂಪಿ ಉದ್ಯಾನಕ್ಕಿದೆ ಗೊಬ್ಬರ ಅವಶ್ಯಕತೆ: ಸದ್ಯ ನಗರದಲ್ಲಿ 1,200ಕ್ಕೂ ಹೆಚ್ಚು ಉದ್ಯಾನಗಳಿದ್ದು, ಅವುಗಳನ್ನು ಬಿಬಿಎಂಪಿ ತೋಟಗಾರಿಕೆ ಇಲಾಖೆಯೆ ನಿರ್ವಹಣೆ ಮಾಡುತ್ತಿದೆ. ಉದ್ಯಾನದ ಗಿಡಗಳಿಗೆ ವರ್ಷಕ್ಕೆ ಎರಡರಿಂದ ಮೂರು ಬಾರಿ ಗೊಬ್ಬರ ಹಾಕಲಾಗುತ್ತದೆ. ಗೊಬ್ಬರಕ್ಕಾಗಿಯೇ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಸದ್ಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಮನೆಗಳಲ್ಲಿ ಹಸಿ ಕಸದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಬಿಬಿಎಂಪಿ ತೋಟಗಾರಿಕೆ ಇಲಾಖೆಯೇ ಬಳಸಿಕೊಳ್ಳಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಬಿಬಿಎಂಪಿ ಉದ್ಯಾನಗಳಿಗೆ ಗೊಬ್ಬರದ ಖರ್ಚು ಉಳಿತಾಯವಾಗಲಿದೆ.

“ನಗರದ ಉದ್ಯಾನಗಳಿಗೆ ಗೊಬ್ಬರ ಅವಶ್ಯಕತೆ ಇದ್ದು, ಜನರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಗೊಬ್ಬರವನ್ನು ತಂದು ನಗರದ ಯಾವುದಾದರು ಉದ್ಯಾನಕ್ಕೆ ನೀಡಬಹುದು. ಚಿಕ್ಕ ಪ್ರಮಾಣದಲ್ಲಿ ತರುವುದಕ್ಕಿಂತ ಒಂದು ಅಪಾರ್ಟ್‌ಮೆಂಟ್‌ ಅಥವಾ 30-40 ಮನೆಯವರು ಒಟ್ಟಾಗಿ ಸೇರಿ ಗೊಬ್ಬರ ತಂದು ಕೊಟ್ಟರೆ ನಮ್ಮ ಸಿಬ್ಬಂದಿ ಸಂಗ್ರಹಿಸಿಕೊಳ್ಳುತ್ತಾರೆ’ ಎಂದು ಬಿಬಿಎಂಪಿ ತೋಟಗಾರಿಗೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ಎಲ್ಲಾ ವಿಭಾಗಗಳಲ್ಲೂ ಸ್ವಚ್ಛಾಗ್ರಹ ಕಲಿಕಾ ಕೇಂದ್ರ: ತ್ಯಾಜ್ಯ ನಿರ್ವಹಣೆ ಹಾಗೂ ವಿಂಗಡಣೆ ಕುರಿತು ಬೊಮ್ಮನಹಳ್ಳಿ ನ ವಿಭಾಗದಲ್ಲಿರುವ ಸ್ವಚ್ಛಾಗ್ರಹ ಕಲಿಕಾ ಕೇಂದ್ರವು ಜನರಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದು, ಇದನ್ನು ಬಿಬಿಎಂಪಿ ಎಲ್ಲಾ ಎಂಟು ವಲಯಗಳ ವಿಭಾಗಗಳಲ್ಲಿ ಆರಂಭಿಸಲು ಘನ ತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತರು ಸೂಚಿಸಿದ್ದಾರೆ. ಹೀಗಾಗಿ, ನಗರದಲ್ಲಿ ಇನ್ನು 26 ಕಡೆ ಉದ್ಯಾನಗಳಲ್ಲಿ ಎಸ್‌ಡಬ್ಲೂಎಂ ಸ್ಥಾಪನೆಯಾಗಲಿವೆ. ಈ ಮೂಲಕ ಶಾಲೆ ಮಕ್ಕಳಿಗೆ, ಅಪಾರ್ಟ್‌ಮೆಂಟ್‌ ಸಮುತ್ಛಯ ನಿವಾಸಿಗರಿಗೆ, ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆ ಮಾಹಿತಿ ತಿಳಿಸಲಾಗುತ್ತದೆ.

ಉದ್ಯಾನದ ಒಣಗಿದ ಎಲೆ ಬಳಸಬಹುದು: ಕಾಂಪೋಸ್ಟ್‌ ಪ್ರಕ್ರಿಯೆಯಲ್ಲಿ ಕೊಕೊ ಪೌಡರ್‌ ಬದಲಾಗಿ ಒಣ ಎಲೆಗಳನ್ನು ಬಳಸಬಹುದಾಗಿದ್ದು, ಅವುಗಳನ್ನು ಉದ್ಯಾನಗಳಲ್ಲಿ ಕೇಳಿ ಪಡೆಯಬಹುದು. ಅಲ್ಲಿನ ಸಿಬ್ಬಂದಿಗೆ ಕೇಳಿದರೆ ಉದ್ಯಾನದಲ್ಲಿ ಮರಗಳಿಂದ ಉದುರಿ ಬಿದ್ದಿರುವ ಒಣಗಿದ ಎಲೆಯನ್ನು ನೀಡುತ್ತಾರೆ. ಇದನ್ನು ಪುಡಿ ಮಾಡಿ ಒಂದಿಷ್ಟು ಮಜ್ಜಿಗೆ ಹಾಕಿ ಕಾಂಪೋಸ್ಟ್‌ನಲ್ಲಿ ಬಳಸಬಹುದು. ಇನ್ನು ಕೊಕೊ ಪೌಡರ್‌ ಬಳಸುತ್ತೇವೆ ಎನ್ನುವವರಿಗೆ ನಗರದ ಕೃಷಿ ಕಾಲೇಜು, ಲಾಲ್‌ಬಾಗ್‌, ಸ್ವತಂತ್ರ ಉದ್ಯಾನಗಲ್ಲಿ ಕೊಕೊ ಪೌಡರ್‌ ಲಭ್ಯವಿದೆ ಜತೆಗೆ ನಗರದ ಯಾವುದೇ ಬಿಗ್‌ ಬಾಸ್ಕೇಟ್‌ ಮಳಿಗೆಗೆ ತೆರಳಿದರೂ ಅಲ್ಲಿ ಸಿಗಲಿದೆ. ಕೆ.ಜಿ.ಗೆ 10 ರೂ.ನಿಂದ 100 ರೂ ವರೆಗೂ ವಿವಿಧ ದರದಲ್ಲಿ ಲಭ್ಯವಿದೆ.

ತ್ಯಾಜ್ಯ ಕರ ವಿನಾಯ್ತಿಗೆ ಕೌನ್ಸಿಲ್‌ ಒಪ್ಪಿಗೆ ಬಾಕಿ: ರಾಜ್ಯಧಾನಿಯ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಯಾರು ಕಾಂಪೋಸ್ಟ್‌ ಮಾಡುತ್ತಾರೆಯೋ ಅಂತಹ ಕಟ್ಟಡಗಳಿಗೆ ಪಾಲಿಕೆಯ “ತ್ಯಾಜ್ಯ ಕರ'(ಗಾಬೇìಜ್‌ ಸೆಸ್‌)ದಲ್ಲಿ ವಿನಾಯ್ತಿ ನೀಡಲಿದೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳು ಆರೇಳು ತಿಂಗಳ ಹಿಂದೆ ಸಭೆ ನಡೆಸಿದ್ದು, ಇದಕ್ಕೆ ಕೌನ್ಸಿಲ್‌ ಅನುಮತಿಯೊಂದೇ ಬಾಕಿ ಇದೆ. ಜನ ಸಾಮಾನ್ಯರನ್ನು ಕಾಂಪೋಸ್ಟ್‌ನತ್ತ ಸೆಳೆಯಲು ಪಾಲಿಕೆ ಮುಂದಾಗಿದ್ದು, ಸದ್ಯ ನಗರದ ಮನೆಗಳಿಗೆ ಕಟ್ಟುತ್ತಿರುವ ತೆರಿಗೆ ಹಣದಲ್ಲಿ 300 ರೂ. ತ್ಯಾಜ್ಯ ಕರವಿದ್ದು, ಅದರಲ್ಲಿ ಅರ್ಧಷ್ಟು ವಿನಾಯ್ತಿ ನೀಡಲು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ನಗರದಲ್ಲಿರುವ ಒಣತ್ಯಾಜ್ಯ ಸಂಗ್ರಹಣಾ ಘಟಕಗಳಲ್ಲಿಯೇ ಗೊಬ್ಬರ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಒಂದೇ ಕಡೆ ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯದ ಗೊಬ್ಬರ ನೀಡಲು ಸಾರ್ವಜನಿಕರು ಅನುಕೂಲವಾಗಲಿದೆ.
-ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತರು, ಘನ ತ್ಯಾಜ್ಯ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next