Advertisement

ಕನ್ನಡ ನುಡಿ ಸಂಭ್ರಮಕ್ಕೆ ಸಿದ್ಧತೆ ಪೂರ್ಣ

03:40 PM Dec 10, 2019 | Team Udayavani |

ಅಕ್ಕಿಆಲೂರು: ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಮಾರಂಭ ಗಳನ್ನು ಆಯೋಜಿಸುತ್ತ ನಾಡಿನ ಮೂಲೆ ಮೂಲೆಯಲ್ಲೂ ಪ್ರಚಲಿತದಲ್ಲಿರುವ ಅಕ್ಕಿಆಲೂರಿನಲ್ಲೀಗ 29ನೇ ವರ್ಷದ ಕನ್ನಡ ನುಡಿಸಂಭ್ರಮದ ಸಡಗರಸಂಭ್ರಮ ಮನೆ ಮಾಡಿದೆ.

Advertisement

ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ ನುಡಿ ಸಂಭ್ರಮ-29ರ ವಿಶೇಷ ಸಾಂಸ್ಕೃತಿಕ ಸಮಾರಂಭ ಡಿ. 12ರಿಂದ ಡಿ. 14ರ ವರೆಗೆ ಮೂರು ದಿನ ವೈಶಿಷ್ಟéಪೂರ್ಣವಾಗಿ ನೆರವೇರಲಿದ್ದು, ಸಮಾರಂಭದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಕನ್ನಡ ನುಡಿ ಸಂಭ್ರಮಕ್ಕೆ ದಿನಗಣನೆ ಆರಂಭಗೊಂಡಿರುವಂತೆಯೇ ಪಟ್ಟಣ ಕನ್ನಡಮಯವಾಗುತ್ತಿದೆ. ಸಮಾರಂಭಕ್ಕೆ ಶುಭ ಹಾರೈಸುವ ಕಟೌಟ್‌ ಗಳು, ಫ್ಲೆಕ್ಸ್‌ಗಳು, ಕನ್ನಡದ ಧ್ವಜಗಳು, ಕನ್ನಡ ಬಾವುಟದ ಕಮಾನುಗಳು, ಬಂಟಿಂಗ್ಸ್‌ಗಳ ಕಲರವ ಪಟ್ಟಣದ ಎಲ್ಲೆಡೆ ಕಂಡುಬರುತ್ತಿದೆ. ಮನೆಮನಗಳ ಹಬ್ಬವಾಗುತ್ತಿರುವ ಕನ್ನಡ ನುಡಿ ಸಂಭ್ರಮ ಸಮಾರಂಭವನ್ನು ಒಂದೆಡೆ ಸಾಹಿತ್ಯಾಸಕ್ತ ಬಳಗ ಉತ್ಸಾಹದಿಂದ ಎದುರು ನೋಡುತ್ತಿದ್ದರೇ, ಇತ್ತ ಮನೆಯಂಗಳವನ್ನು ಕನ್ನಡಮಯಗೊಳಿಸುತ್ತಿರುವ ಕನ್ನಡಿಗರ ಕನ್ನಡ ಪ್ರೀತಿಗೆ ಪಾರವೇ ಇಲ್ಲದಂತಾಗಿದೆ.

ಇಲ್ಲಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಾಹಿತಿಗಳ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಕಾರ್ಯ, ಪ್ರಧಾನ ವೇದಿಕೆ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿದ್ದು, ಸಂಘದ ಕಾರ್ಯಕರ್ತರು ಹಗಲು ರಾತ್ರಿ ಕನ್ನಡ ನಾಡಾಭಿಮಾನ ಸೇವೆಯಲ್ಲಿ ನಿರತರಾಗಿದ್ದಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಅಕ್ಕಿಆಲೂರಿನಲ್ಲಿ ಕನ್ನಡ ನಾಡುನುಡಿಯ ಜಾಗೃತ ಸಂದೇಶ ಸಾರುವ ಸಮಾರಂಭ ಇದಾಗಿದ್ದು, ನಾಡಿನ ಮೂಲೆಮೂಲೆಗಳಿಂದ ಕನ್ನಡಾಭಿಮಾನಿಗಳ ದಂಡು ಇತ್ತಕಡೆ ಧಾವಿಸಲು ಕಾತರತೆಯಿಂದ ಎದುರು ನೋಡುತ್ತಿದೆ. ನಾಡಿನ ವಿವಿಧ ಮಠಾಧಿಧೀಶರು, ಕಲಾವಿದರು, ಸಾಹಿತಿಗಳು, ಖ್ಯಾತ ವಾಗ್ಮಿಗಳು, ಚಲನಚಿತ್ರ ನಟನಟಿಯರು, ಕಿರುತೆರೆ ನಟನಟಿಯರು ಸೇರಿದಂತೆ ಜನಪ್ರತಿನಿಧಿ  ಗಳನ್ನು ಆಹ್ವಾನಿಸಿ ನಾಡಿನ ಭಾಷೆ, ನೆಲ, ಜಲದ ರಕ್ಷಣೆ ಕಾರ್ಯ ಕೈಗೆತ್ತಿಕೊಂಡಿರುವ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ಸೇವೆ ಕಳೆದ 29 ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದ್ದು, ಕನ್ನಡ ನುಡಿ ಸಂಭ್ರಮ-29ರ ಸಮಾರಂಭವನ್ನೂ ಅತಿ ವಿಶಿಷ್ಠವಾಗಿ ಹೆಣೆಯಲಾಗಿದೆ.

ಡಿ. 12ರಂದು ಕನ್ನಡ ಧ್ವಜಾರೋಹಣ ಮೂಲಕ ವಿದ್ಯುಕ್ತ ಚಾಲನೆ ಪಡೆದುಕೊಳ್ಳಲಿರುವ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ-29ಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಉತ್ಸವ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ವಿಭಿನ್ನ ಕಾರ್ಯಕ್ರಮಗಳನ್ನೊಳಗೊಂಡಂತೆ ರೂಪುಗೊಂಡಿರುವ ಈ ಬಾರಿಯ ಕನ್ನಡ ನುಡಿ ಸಂಭ್ರಮ; ಸಾಹಿತ್ಯಾಸಕ್ತರ ಮನತಣಿಸುವಲ್ಲಿ ಎರಡು ಮಾತಿಲ್ಲ. ಇಲ್ಲಿನ ಮುತ್ತಿನಕಂತಿಮಠ ಗುರುಪೀಠದ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಪ್ರಧಾನ ವೇದಿಕೆ ನಿರ್ಮಾಣ ಬಹುತೇಕ

ಪೂರ್ಣಗೊಂಡಿದ್ದು, ಕಳೆದ ಬಾರಿ ದಾಖಲಾದ ಕನ್ನಡಾಭಿಮಾನಿಗಳ ಸಂಖ್ಯೆಗನುಸಾರವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಂಘದ ಸದಸ್ಯರ ಸಕ್ರೀಯ ಪಾಲ್ಗೊಳ್ಳುವಿಕೆ, ಸಾಹಿತ್ಯಾಸಕ್ತರ ಪ್ರೋತ್ಸಾಹದ ಮಧ್ಯೆ ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯಲು ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಶಿಷ್ಠ ಕಾರ್ಯಕ್ರಮಗಳೊಂದಿಗೆ ಸಮಾರಂಭವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ನಾಡಿನ ಖ್ಯಾತ ಸಾಹಿತಿಗಳ, ಕಲಾವಿದರ, ಈ ಭಾಗದಲ್ಲಿ ಪ್ರಾಮಾಣಿಕ ಸೇವೆಗೈದ ಮಹನೀಯರ ಹೆಸರಿನಡಿಯಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಮಹಿಳಾ ಸಮಾವೇಶ, ಯುವ ಸಂಭ್ರಮ, ಕೃಷಿ ಗೋಷ್ಠಿ, ರೈತ ಸಮಾವೇಶ, ಸಾಂಸ್ಕೃತಿಕ ಸಂಭ್ರಮ ಸೇರಿದಂತೆ ಹತ್ತು ಹಲವಾರು ವಿಶಿಷ್ಠ ಕಾರ್ಯಕ್ರಮಗಳ ಜೋಡಣೆಯ ಮುಖಾಂತರ ನಾಡಿನ ಕನ್ನಡದ ಮನಸ್ಸುಗಳ ಕದ ತಟ್ಟುವಲ್ಲಿ ಕನ್ನಡ ನುಡಿ ಸಂಭ್ರಮ-29 ಯಶಸ್ವಿಯಾಗುವ ಈ ಸಮಾರಂಭ ಅಕ್ಷರಶಃ ಅಕ್ಷರಜಾತ್ರೆಯ ವಿಶಿಷ್ಠ ಅನುಭವವನ್ನು ನೀಡುವಲ್ಲಿ ಎಳ್ಳಷ್ಟು ಸಂಶಯವಿಲ್ಲ.

Advertisement

 

-ಪ್ರವೀಣಕುಮಾರ ಶಿ.ಅಪ್ಪಾಜಿ

Advertisement

Udayavani is now on Telegram. Click here to join our channel and stay updated with the latest news.

Next