Advertisement

ಶ್ರೀಕಂಠೇಶ್ವರಸ್ವಾಮಿ ಜಾತ್ರೆಗೆ ಸಿದ್ಧತೆಗಳಾಗಲಿ: ಡೀಸಿ

09:33 PM Feb 04, 2020 | Lakshmi GovindaRaj |

ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ನಂಜನಗೂಡು ಶ್ರೀ ಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ಏ.4ರಂದು ನಡೆಯಲಿದ್ದು, ಈ ಸಂಬಂಧ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಅಧಿಕಾರಿಗಳಿಗೆ ತಿಳಿಸಿದರು.

Advertisement

ನಂಜನಗೂಡು ಶಾಸಕ ಬಿ.ಹರ್ಷವರ್ಧನ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ಆಚರಣೆ ಕುರಿತ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ, ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ಆಚರಿಸುತ್ತಿದ್ದು, ಜಾತ್ರೆಯ ಮುಂಚೆ ರಥವನ್ನು ಎಳೆದು ಪರೀಕ್ಷಿಸುವಂತೆ ಹಾಗೂ ರಥವನ್ನು ಎಳೆಯುವ ಹಗ್ಗವನ್ನು ಖರೀದಿಸಿ ಅದನ್ನು ಉಪ್ಪಿನ ನೀರಿನಲ್ಲಿ ನೆನೆಸಿ ನಂತರ ಉಪಯೋಗಿಸುವುದು ಹಾಗೂ ಹಗ್ಗದ ಜೊತೆಯಲ್ಲಿ ಚೈನನ್ನು ಜೋಡಣೆ ಮಾಡಬೇಕು ಎಂದು ತಿಳಿಸಿದರು.

ಜಾತ್ರೆ ಸಂದರ್ಭದಲ್ಲಿ ಮೊದಲು ಸ್ವತ್ಛತೆಗೆ ಆದ್ಯತೆ ನೀಡಿರುವುದರಿಂದ ಕಸದ ಬುಟ್ಟಿಯನ್ನು ನಿಗದಿತ ಸ್ಥಳಗಳಲ್ಲಿ ಇರಿಸಿ ಹೆಚ್ಚಿನ ಕೆಲಸದವರು ಕಾರ್ಯನಿರ್ವಹಿಸುವಂತೆ, ರಥ ಹೊರಡುವ ರಸ್ತೆಯ ಕಾಮಗಾರಿ ಪ್ರಾರಂಭವಾಗಿರುವುದರಿಂದ ಸೂಕ್ತವಾದ ಮರಳಿನ ವ್ಯವಸ್ಥೆ ಮಾಡುವಂತೆ ಹಾಗೂ ಅಲ್ಲಿ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ವ್ಯವಸ್ಥೆ ಸೂಕ್ತ ಸ್ಥಳಗಳಲ್ಲಿ ಅಳವಡಿಸಿ, ಬಟ್ಟೆ ಬದಲಾಯಿಸಿಕೊಳ್ಳಲು ಶೆಡ್‌ ನಿರ್ಮಾಣ ಮಾಡಿ, ದೇಗುಲದ‌ ಸುತ್ತಲು ಆಕರ್ಷಕ ವಿದ್ಯುತ್‌ ದೀಪಗಳನ್ನು ಬಳಸುವಂತೆ ಅವರು ತಿಳಿಸಿದರು. ರಥೋತ್ಸವದ ದಿನ ಸೂಕ್ತ ಬಂದೋಬಸ್ತ್ ಮಾಡಿ ವಾಹನ ನಿಲುಗಡೆಗೆ ಮಾರ್ಗಸೂಚಿಯನ್ನು ಅಳವಡಿಸುವಂತೆ ಹಾಗೂ ರಥೋತ್ಸವದ ಸಂದರ್ಭದಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಮಾಡುವಂತೆ ಪೊಲೀಸ್‌ ಇಲಾಖೆಯವರಿಗೆ ತಿಳಿಸಿದರು.

ಜಾತ್ರಾ ದಿನಗಳಲ್ಲಿ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು ಹಾಗೂ ತಾತ್ಕಾಲಿಕ ಶೌಚಾಲಯವನ್ನು ನಿರ್ಮಿಸುವಂತೆ ಜಿಲ್ಲಾ ಪಂಚಾಯತಿ ಆಧಿಕಾರಿಗಳಿಗೆ ತಿಳಿಸಿ, ಜಾತ್ರೆಯಲ್ಲಿ ಭಕ್ತಾದಿಗಳಿಗೆ ನೀಡುವ ಪ್ರಸಾದದ ಗುಣಮಟ್ಟವನ್ನು ಪರಿಶೀಲಿಸಿ ನಂತರ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸುವಂತೆ ಹೇಳಿದರು. ರಥೋತ್ಸವ ಮತ್ತು ತೆಪ್ಪೋತ್ಸವ ದಿನದಂದು ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮವನ್ನು ತಗೆದುಕೊಂಡು ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆದು,

Advertisement

ಆ್ಯಂಬುಲೆನ್ಸ್‌ ವಾಹನದೊಂದಿಗೆ ವೈದ್ಯಕೀಯ ಸಿಬ್ಬಂದಿಗಳು ಇರುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಿದರು. ರಥೋತ್ಸವಕ್ಕೆ ನಾನಾ ಭಾಗದಿಂದ ಭಕ್ತಾದಿಗಳು ಆಗಮಿಸುವುದರಿಂದ ಬಸ್ಸಿನ ವ್ಯವಸ್ಥೆಯನ್ನು ಹಾಗೂ ರಥೋತ್ಸವ ಮುಗಿಯುವವರೆಗೂ ರಥಗಳ ಜೊತೆಯಲ್ಲಿ ಕ್ರೇನ್‌ ವಾಹನವು ಇರಬೇಕೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹೇಳಿದರು.

ಶಾಸಕ ಹರ್ಷವರ್ಧನ್‌ ಮಾತನಾಡಿ, ಪಂಚ ಮಹಾರಥೋತ್ಸವಕ್ಕೆ ಸಂಬಂಧಿಸಿದಂತೆ 7 ಗ್ರಾಮದ ಗ್ರಾಮಸ್ಥರು ರಥ ಚಕ್ರದ ಮುಂಭಾಗದಲ್ಲಿ ಎದ್ದಿನ ಮರ ಕೊಡುತ್ತಾರೆ ಆದ್ದರಿಂದ ಈ 7 ಗ್ರಾಮದ ದೇವಾಲಯಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವಂತೆ ತಿಳಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಪಿ.ವಿ.ಸ್ನೇಹಾ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದರು.

Advertisement

Udayavani is now on Telegram. Click here to join our channel and stay updated with the latest news.

Next