Advertisement

ಸುಗಮ ಕುಡಿಯುವ ನೀರು ಪೂರೈಕೆಗೆ ಸಿದ್ಧತೆ ಅಗತ್ಯ

12:37 PM Dec 02, 2018 | |

ಬೇಸಗೆ ಬಂದ ಅನಂತರ ನೀರು ಇಲ್ಲ ಎಂದು ಕೊರಗುವ ಮುನ್ನ ಈಗಿನಿಂದಲೇ ಎಚ್ಚೆತ್ತುಕೊಳ್ಳುವುದು ಅಗತ್ಯ. ಮಹಾನಗರ ಪಾಲಿಕೆ ಕೂಡ ಈ ಹಿಂದಿನ ಸಮಸ್ಯೆಗಳನ್ನು ಅವಲೋಕಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇರುವ ವ್ಯವಸ್ಥೆಯನ್ನು ಪೂರಕವಾಗಿ ಬಳಕೆ ಮಾಡುವ ಕೌಶಲವನ್ನು ಜಾರಿಗೊಳಿಸುವುದು ಅತೀ ಅವಶ್ಯ. ಈ ಮೂಲಕ ನೀರಿನ ಬವಣೆಯನ್ನು ಸ್ವಲ್ಪಮಟ್ಟಿಗಾದರೂ ನಿಯಂತ್ರಿಸಬಹುದಾಗಿದೆ.

Advertisement

ಬೇಸಗೆ ಸಮೀಪಿಸುತ್ತಿದೆ. ಪ್ರತಿ ವರ್ಷ ಈ ಅವಧಿಯಲ್ಲಿ ಮಂಗಳೂರು ಮಹಾನಗರಕ್ಕೆ ಸುಗಮ ಕುಡಿಯುವ ನೀರು ಪೂರೈಕೆ ಸವಾಲು ಮಹಾನಗರ ಪಾಲಿಕೆಗೆ ಎದುರಾಗುತ್ತದೆ. ಕಳೆದ ಸಾಲಿನಲ್ಲಿ ಪಾಲಿಕೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆ ತಲೆದೋರಿರಲಿಲ್ಲ. ಆದರೆ ಈ ಬಾರಿ ನೇತ್ರಾವತಿ ನದಿಯಲ್ಲಿ ಪ್ರಸ್ತುತ ಇರುವ ನೀರಿನ ಒಳಹರಿವಿನ ಸ್ಥಿತಿ ಎಚ್ಚರಿಕೆಯ ಘ‌ಂಟೆಯನ್ನು ಬಾರಿಸಿದೆ. ನವೆಂಬರ್‌ ಮಧ್ಯಭಾಗದಲ್ಲೇ ತುಂಬೆ ವೆಂಟೆಡ್‌ಡ್ಯಾಂನ ಎಲ್ಲ ಗೇಟ್‌ ಗಳನ್ನು ಮುಚ್ಚಿ 6 ಮೀಟರ್‌ ನೀರು ನಿಲ್ಲಿಸಲಾಗಿದೆ. ಮಂಗಳೂರು ನಗರಕ್ಕೆ ಕುಡಿಯುವ ನೀರು ಉದ್ದೇಶದಿಂದ ನಿರ್ಮಿಸಿರುವ ಏಕೈಕ ಸರಕಾರಿ ಕಿಂಡಿ ಅಣೆಕಟ್ಟು ಎಂದರೆ ತುಂಬೆ ಕಿಂಡಿ ಅಣೆಕಟ್ಟು ಉಳಿದಂತೆ ಒಂದೆರಡು ಖಾಸಗಿ ಕಿರುಅಣೆಕಟ್ಟುಗಳು ಹಾಗೂ ಎಎಂಆರ್‌, ದಿಶಾ ಸೇರಿದಂತೆ ಕೆಲವು ವಿದ್ಯುತ್‌ ಉತ್ಪಾದನಾ ಉದ್ದೇಶದಿಂದ ನಿರ್ಮಿಸಿರುವ ಸಣ್ಣ ಅಣೆಕಟ್ಟುಗಳಿವೆ. ಮಂಗಳೂರು ಮಹಾನಗರಕ್ಕೆ ತುಂಬೆ ಕಿಂಡಿ ಅಣೆಕಟ್ಟು ಏಕೈಕ ಕುಡಿಯುವ ನೀರಿನ ಮೂಲವಾಗಿದೆ. ಆದುದರಿಂದ ಮುಂದಿನ ಬೇಸಗೆಯಲ್ಲಿ ಮಂಗಳೂರು ಮಹಾನಗರಕ್ಕೆ ಸುಗಮ ಕುಡಿಯುವ ನೀರಿನ ಪೂರೈಕೆ ನಿಟ್ಟಿನಲ್ಲಿ ಈಗಿಂದಲೇ ಪೂರಕ ಸಿದ್ಧತೆಗಳನ್ನು ಮಾಡಿಕೊಂಡರೆ ಮುಂದಕ್ಕೆ ಸಮಸ್ಯೆಗಳು ತಲೆದೋರದಂತೆ ನೋಡಿಕೊಳ್ಳಬಹುದಾಗಿದೆ.

ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗ ಪಾಲಿಕೆ ಅಂಕಿ-ಅಂಶದಂತೆ ತುಂಬೆಯಿಂದ ಪ್ರಸ್ತುತ ಇರುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಮಂಗಳೂರು ನಗರಕ್ಕೆ 170 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದೆ. 135 ಎಂಎಲ್‌ಡಿ ನೀರು ಬೇಡಿಕೆ ಇದೆ. ಲೆಕ್ಕಾಚಾರದ ಪ್ರಕಾರ 35 ಎಂಎಲ್‌ಡಿ ನೀರು ಮಿಗತೆ ಇದೆ. ಮಿಗತೆ ಇದ್ದರೂ ದಿನವೂ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಪ್ರದೇಶಗಳಿಗೆ ಮಳೆಗಾಲದಲ್ಲೂ 2 ದಿನಗಳಿಗೊಮ್ಮೆ 6 ತಾಸುಗಳ ನೀರು ನೀಡಲಾಗುತ್ತಿದೆ. ಕೆಲವು ಕಡೆ ಇನ್ನೂ ನೀರು ಸರಿಯಾಗಿ ತಲುಪುತ್ತಿಲ್ಲ. ಇದರ ಅರ್ಥ ನೀರು ವಿತರಣೆ ವ್ಯವಸ್ಥೆಯಲ್ಲಿ ಲೋಪವಿದೆ. ಸೋರಿಕೆ ಇದೆ. ವಿತರಣೆಯಾಗುತ್ತಿರುವ ನೀರಿನ ನಿಖರ ಅಂಕಿ-ಅಂಶವಿಲ್ಲ. ಇನ್ನೂ ಮೀಟರ್‌ ಅಳವಡಿಸದಿರುವ ಸಂರ್ಪಕಗಳು ಬಹಳಷ್ಟಿವೆ. ಅಕ್ರಮ ಸಂಪರ್ಕಗಳಿವೆ. ಪ್ರಸ್ತುತ ತುಂಬೆಯಿಂದ ಇರುವ ಸರಬರಾಜು ವ್ಯವಸ್ಥೆಯಲ್ಲಿ 2031ರ ವರೆಗೆ ಮಂಗಳೂರು ನಗರಕ್ಕೆ ಅವಶ್ಯವಿರುವಷ್ಟು ನೀರು ಸರಬರಾಜು ಮಾಡಬಹುದಾಗಿದೆ. ಆದರೂ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದುದರಿಂದ ಮೊದಲು ವಿತರಣೆ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಬೇಕು. ಇದು ಸರಿಯಾಗದಿದ್ದರೆ ನೀರು ಸರಬರಾಜು ವ್ಯವಸ್ಥೆ ಎಷ್ಟು ಉನ್ನತೀಕರಣಗೊಂಡರೂ ಅದು ನಿರೀಕ್ಷಿತ ಫಲ ನೀಡದು.

ಬೋರ್‌ವೆಲ್‌ಗ‌ಳ ಸುಸ್ಥಿತಿ
ಮಂಗಳೂರು ನಗರದಲ್ಲಿ ಪ್ರಸ್ತುತದ ಅಂಕಿ-ಅಂಶದಂತೆ 137 ಹಾಗೂ ಸುರತ್ಕಲ್‌ನಲ್ಲಿ 59 ಸೇರಿ ಒಟ್ಟು 196 ಬೋರ್‌ ವೆಲ್‌ಗ‌ಳು ಇವೆ. ತುಂಬೆಯಿಂದ ಸರಬರಾಜಾಗುವ ಜತೆಗೆ ಈ ಬೋರ್‌ವೆಲ್‌ಗ‌ಳಿಂದಲೂ ನೀರು ಸರಬರಾಜಾಗುತ್ತಿವೆ. ನೀರಿನ ಸಮಸ್ಯೆ ತಲೆದೋರಿದ್ದ ಸಂದರ್ಭದಲ್ಲಿ ಬಹಳಷ್ಟು ಪ್ರದೇಶದಲ್ಲಿ ಈ ಬೋರ್‌ವೆಲ್‌ಗ‌ಳು ಜನರ ನೆರವಿಗೆ ಬಂದಿವೆ. ವಾಡಿಕೆಯಂತೆ ಮೇ ಅಂತ್ಯಕ್ಕೆ ಅಥವಾ ಜೂನ್‌ ಆರಂಭಕ್ಕೆ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ನೀರು ಸರಬರಾಜು ಪರಿಸ್ಥಿತಿ ಸುಧಾರಿಸುತ್ತದೆ. ಬೋರ್‌ವೆಲ್‌ಗ‌ಳಿಂದ ನೀರು ಎತ್ತುವುದು ನಿಲ್ಲುತ್ತದೆ. ಮತ್ತೆ ಅವುಗಳ ನೆನಪಾಗುವುದು ನೀರಿನ ಸಮಸ್ಯೆ ಮರುಕಳಿಸಿದಾಗ ಮಾತ್ರ. ಇದೇ ಕಾರಣದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದ ಬಹಳಷ್ಟು ಬೋರ್‌ ವೆಲ್‌ಗ‌ಳು ಅನುಪಯುಕ್ತವಾಗಿ ಮರೆಯಾಗಿವೆ. ಆದುದರಿಂದ ಬೋರ್‌ವೆಲ್‌ಗ‌ಳನ್ನು ಸುಸ್ಥಿತಿಯಲ್ಲಿರಿಸುವುದು ಅವಶ್ಯ. ಕನಿಷ್ಠ ಎರಡು ದಿನಗಳಿಗೊಮ್ಮೆಯಾದರೂ ಅರ್ಧತಾಸು ಪಂಪ್‌ ಚಾಲನೆ ನೀಡಿ ನೀರೆತ್ತುವ ಕಾರ್ಯ ನಡೆದಾಗ ಬೋರ್‌ವೆಲ್‌ ಗಳು ಸುಸ್ಥಿತಿಯಲ್ಲಿರಲು ಸಾಧ್ಯವಾಗುತ್ತದೆ.

ನೀರು ನಿರ್ವಹಣೆ ಕೌಶಲ
ಪ್ರಸ್ತುತ ಕಾಲ ಮ್ಯಾನೇಜ್‌ಮೆಂಟ್‌ ಯುಗ. ವ್ಯವಹಾರ, ಆಡಳಿತ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ವ್ಯವಸ್ಥಿತ ನಿರ್ವಹಣೆಯಲ್ಲಿ ಮ್ಯಾನೇಜ್‌ಮೆಂಟ್‌ ಕೌಶಲಗಳು ಅನ್ವಯಿಸಲಾಗುತ್ತದೆ. ಅದೇ ಮಾದರಿಯಲ್ಲಿ ಜಲ ಸಂರಕ್ಷಣೆ ಮತ್ತು ಬಳಕೆಯಲ್ಲೂ ಜಾಗೃತಿ ಮತ್ತು ಕೌಶಲಗಳ ಅಳವಡಿಕೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ. ನೀರಿನ ಉಳಿತಾಯ ಮತ್ತು ಬಳಕೆಯಲ್ಲೂ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕಾಗಿದೆ.

Advertisement

ಸ್ಪಷ್ಟ ಜಲನೀತಿ ಅಗತ್ಯ 
ಅಂದಾಜು ನೀರಿನ ಬೇಡಿಕೆ ಮತ್ತು ಲಭ್ಯ ನೀರಿನ ಪ್ರಮಾಣದ ಮಾಹಿತಿ ಕ್ರೋಡೀಕರಣ,ಇರುವ ಜಲ ಮೂಲಗಳು, ಅವುಗಳಲ್ಲಿ ದೊರೆಯುವ ನೀರಿನ ಪ್ರಮಾಣದ ನಿಖರ ಬಗ್ಗೆ ಮಾಹಿತಿ ಹೊಂದುವುದು, ಕುಡಿಯುವ ನೀರು ಸಂಪರ್ಕ ಜಾಲದ (ಪೈಪ್‌ ಲೈನ್‌ ನೆಟ್‌ವರ್ಕ್‌) ನಿಖರ ನಕ್ಷೆ ತಯಾರಿ ಮತ್ತು ಸಮಗ್ರ ವಿವರ, ಜನವರಿಯಿಂದ ಜೂನ್‌ವರೆಗೆ ನೇತ್ರಾವತಿ ನದಿ ಸೇರಿದಂತೆ ಜಿಲ್ಲೆಯ ನದಿಗಳ ಒಳಹರಿವು ಬಗ್ಗೆ ನಿರಂತರ ನಿಗಾ; ಅದನ್ನು ಆಧರಿಸಿ ನೀರು ಪೂರೈಕೆ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುವುದು, ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳ ಸ್ಥಾಪನೆ, ಅದರಿಂದ ಹೊಂದಬಹುದಾದ ನೀರಿನ ಪ್ರಮಾಣದ ಬಗ್ಗೆ ಅಂದಾಜು ಮತ್ತು ಅದನ್ನು ಕೈಗಾರಿಕೆಗಳ ಬಳಕೆಗೆ ನೀಡುವುದು, ಸಮುದ್ರದ ಉಪ್ಪುನೀರು ಸಂಸ್ಕರಣೆ ಸೇರಿದಂತೆ ಪರ್ಯಾಯ ಮಾರ್ಗಗಳತ್ತ ಗಮನ, ಜಲಕಾವಲು ಸಮಿತಿ ರಚನೆ, ಕೆರೆಗಳ ಪುನಶ್ಚೇತನಕ್ಕೆ ಉತ್ತೇಜನ; ಮಳೆನೀರು ಕೊಯ್ಲು ಕಡ್ಡಾಯ, ಬಾವಿ, ಕೊಳವೆ ಬಾವಿಗಳಿಗೆ ಜಲಮರುಪೂರಣಕ್ಕೆ ಕ್ರಮ ಮುಂತಾದ ಅಂಶಗಳನ್ನು ಜಲನಿರ್ವಹಣ ನೀತಿಯಲ್ಲಿ ಸೇರಿಸಬಹುದಾಗಿದೆ.

ಬಾವಿಗಳ ಸ್ವಚ್ಛತೆ 
ಬೋರ್‌ವೆಲ್‌ಗ‌ಳಲ್ಲದೆ ನಗರದಲ್ಲಿ ಸರಕಾರಿ ಹಾಗೂ ಖಾಸಗಿ ಸೇರಿದಂತೆ ಕುಡಿಯುವ ನೀರಿಗೆ ಬಳಸಲು ಯೋಗ್ಯವಾದ ಒಟ್ಟು 90 ತೆರೆದ ಬಾವಿಗಳನ್ನು ಗುರುತಿಸಲಾಗಿತ್ತು. ಮನೆಗಳ ಆವರಣಗಳಲ್ಲಿ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮನೆಯ ಆವರಣಗಳಲ್ಲಿರುವ ಬಾವಿಗಳನ್ನು ಸ್ವತ್ಛವಾಗಿಟ್ಟು ಬಳಕೆಗೆ ಯೋಗ್ಯವಾಗಿರಿಸುವುದು ಅತಿ ಅಗತ್ಯ. ನಗರದಲ್ಲಿ ಗಣನೀಯ ಸಂಖ್ಯೆಯಲ್ಲಿ ಖಾಸಗಿ ಬಾವಿಗಳು ಮಲೀನ ನೀರು ಸೇರಿ ಬಳಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿವೆ. ಒಂದೊಮ್ಮೆ ಬಾವಿ ನೀರು ಕುಡಿಯಲು ಯೋಗ್ಯವಾಗಿರದಿದ್ದರೆ ಇತರ ಉದ್ದೇಶಗಳಿಗೆ ಬಳಸಬಹುದಾಗಿದೆ. ಆದುದರಿಂದ ಬಾವಿಗಳನ್ನು ಸುಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಗಮನಹರಿಸುವುದು ಅವಶ್ಯ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next