Advertisement

ಅಕಾಲಿಕ ಮಳೆಗೆ 17 ನೂರು ಎಕರೆ ಬೆಳೆ ನಾಶ

02:57 PM Apr 26, 2022 | Team Udayavani |

ಸುರಪುರ: ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಗಾಳಿ ಮಳೆಗೆ ತಾಲೂಕಿನ ಸುರಪುರ, ಕಕ್ಕೇರಾ, ಕೆಂಭಾವಿ ಹೋಬಳಿಯ ವಿವಿಧೆಡೆ ಸುಮಾರು 17 ನೂರು ಎಕರೆ ಮೇಲ್ಪಟ್ಟು ಭೂ ಪ್ರದೇಶದಲ್ಲಿ ಭತ್ತದ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಯಾದಗಿರಿ ಉಪವಿಭಾಗದ ಸಹಾಯಕ ಆಯುಕ್ತ ಶಾಲಮ್‌ ಹುಸೇನ್‌ ತಿಳಿಸಿದರು.

Advertisement

ದೇವಾಪುರ, ನಾಗರಾಳ, ಕೋನಾಳ ಸೇರಿದಂತೆ ವಿವಿಧ ಗ್ರಾಮಗಳ ಬೆಳೆ ನಾಶ ಪೀಡಿತ ಜಮೀನುಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಅಕಾಲಿಕ ಮಳೆಗೆ ಭತ್ತ ಮೆಣಸಿನಕಾಯಿ ಬೆಳೆಗಳು ನಾಶವಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಭೇಟಿ ನೀಡಿ ವೀಕ್ಷಿಸಿದ್ದೇನೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಆಯಾ ಗ್ರಾಮಗಳಿಗೆ ತೆರಳಿ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣ ಮುಗಿದ ನಂತರ ಅಂತಿಮ ಮಾಹಿತಿ ದೊರಕಲಿದೆ ಎಂದರು.

ಗ್ರಾಮ ಲೆಕ್ಕಿಗರು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಆಯಾ ಗ್ರಾಮಗಳಿಗೆ ತೆರಳಿ ಬೆಳೆ ನಾಶ ಜಮೀನುಗಳಿಗೆ ಖುದ್ದಾಗಿ ಹೋಗಿ ರೈತರ ಸಮ್ಮುಖದಲ್ಲಿ ಸಮೀಕ್ಷೆ ಮಾಡಬೇಕು. ಎಲ್ಲೋ ಕುಳಿತು ವರದಿ ತಯಾರಿಸುವಂತಿಲ್ಲ. ಆರೋಪಗಳಿಗೆ ಆಸ್ಪದ ನೀಡದಂತೆ ಸಮೀಕ್ಷೆ ಪಾರದರ್ಶಕವಾಗಿರಲಿ. ನಿರ್ಲಕ್ಷ್ಯ ವಹಿಸುವವರ ವಿರುದ್ಧ ನಿರ್ಧಾಕ್ಷೀಣ ಕ್ರಮ ಜರುಗಿಸುವಂತೆ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಅವರಿಗೆ ಸೂಚಿಸಿದರು.

ಈ ವೇಳೆ ದೇವಾಪುರ ಮತ್ತು ನಾಗರಾಳ ರೈತರೊಂದಿಗೆ ಹಾನಿ ಕುರಿತು ಚರ್ಚಿಸಿದರು. ಪ್ರತಿ ಎಕರೆಗೆ ಆಗಿರುವ ಖರ್ಚು ವೆಚ್ಚಗಳ ಮತ್ತು ಬೆಳೆ ನಾಶದ ಬಗ್ಗೆ ಮಾಹಿತಿ ಪಡೆದರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ, ಕೊಯ್ಲು ಹಂತದಲ್ಲಿದ್ದ ಭತ್ತ ನೆಲಕ್ಕೆ ಉರುಳಿ ಬಿದ್ದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಮಾಡಿದ ಸಾಲ ಅದ್ಹೇಗೆ ತೀರಿಸುವುದು ಎಂದು ರೈತ ರಾಮಣ್ಣ ಅಳಲು ತೋಡಿಕೊಂಡರು.

ಕಾಟಾಚಾರಕ್ಕೆ ಸಮೀಕ್ಷೆ ಮಾಡಿದರೆ ಸಾಲದು, ಏನಾದರು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ನಾವು ಬದುಕುವುದು ಕಷ್ಟ ವಾಗುತ್ತದೆ ಎಂದು ಮನವಿ ಮಾಡಿದರು. ಪಾರದರ್ಶಕ ಸಮೀಕ್ಷೆ ಮಾಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರಕಾರ ಅನುದಾನ ನೀಡಿದಲ್ಲಿ ಪರಿಹಾರ ಒದಗಿಸಿಕೊಡುವುದಾಗಿ ಆಯುಕ್ತರು ಭರವಸೆ ನೀಡಿದರು.

Advertisement

ರೈತರು ಬೆಳೆ ನಾಶ ಜಮೀನಿನ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಮತ್ತು ಭಾವಚಿತ್ರ ಅರ್ಜಿ ಜೊತೆಗೆ ಲಗತಿಸಿ ಸಂಬಂಧಿದ ಗ್ರಾಮ ಲೆಕ್ಕಿಗರ ಬಳಿ ಸಲ್ಲಿಸಬೇಕು ಎಂದು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ವಿಠ್ಠಲ ಬಂದಾಳ ಗ್ರಾಲೆ, ರೈತರು ಮುಂತಾದವರು ಇದ್ದರು.

ನಷ್ಟದ ಸಂಪೂರ್ಣ ಮಾಹಿತಿ ಕಲೆ ಹಾಕಿ ಪರಿಹಾರಕ್ಕೆ ವರದಿ

ಕೆಲ ದಿನಗಳ ಹಿಂದೆ ತಾಲೂಕಿನಾದ್ಯಂತ ಅಕಾಲಿಕ ಮಳೆಗಾಳಿಗೆ ಹಾನಿಗೀಡಾದ ರೈತರ ಭತ್ತದ ಗದ್ದೆಗಳಿಗೆ ಜಿಲ್ಲಾ ಸಹಾಯಕ ಆಯುಕ್ತ ಶಾ ಆಲಂ ಹುಸೇನ್‌ ಹಾಗೂ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಎಸ್‌.ಎಸ್‌.ಹಬೀದ್‌ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ಸಹಾಯಕ ಆಯುಕ್ತ ಶಾ ಆಲಂ ಹುಸೇನ್‌ ಮಾತನಾಡಿ, ಅಕಾಲಿಕ ಮಳೆ ಗಾಳಿಗೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ತಾಲೂಕಿನಲ್ಲಿ ಎಷ್ಟು ನಷ್ಟ ಆಗಿದೆ ಎಂಬ ಕುರಿತು ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸುತ್ತಿದ್ದಾರೆ. ನಂತರ ಅಂದಾಜು ಮಾಹಿತಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ರೈತರ ಸಂಪೂರ್ಣ ನಷ್ಟದ ಮಾಹಿತಿ ಕಲೆ ಹಾಕಿ ಅಗತ್ಯ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಪರಿಹಾರಕ್ಕಾಗಿ ವರದಿ ಸಲ್ಲಿಸಿದ ನಂತರ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮಾ ಆಗಲಿದೆ. ಈಗಾಗಲೇ ಸಮೀಕ್ಷೆ ಕೈಗೊಂಡಿದೆ ಎಂದು ಹಬೀಬ್‌ ತಿಳಿಸಿದರು. ತಹಶೀಲ್ದಾರ್‌ ಅಶೋಕ ಸುರಪುರಕರ್‌, ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಭೂಸನೂರ, ಆರ್‌ಎಸ್‌ಕೆ ಅಧಿಕಾರಿ ಪರಶುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next