Advertisement

ಡಿಸೆಂಬರ್‌ 17ಕ್ಕೆ ಪ್ರೇಮ ಬರಹ ಹಾಡುಗಳು

11:41 AM Dec 14, 2017 | |

ಅದೊಂದು ಹಾಡು ಬಿಟ್ಟು, ಮಿಕ್ಕಂತೆ “ಪ್ರೇಮ ಬರಹ’ ಚಿತ್ರದ ಕೆಲಸಗಳೆಲ್ಲಾ ಮುಗಿದಿತ್ತು. ಈಗ ಚಿತ್ರದ ಆ ಸ್ಪೆಷಲ್‌ ಹಾಡಿನ ಚಿತ್ರೀಕರಣ ಸಹ ಮುಗಿದಿದೆ. ಕಳೆದ ವಾರ ಚಿತ್ರಕ್ಕಾಗಿ ಆಂಜನೇಯನ ಭಕ್ತಿಯ ಕುರಿತಾದ ಒಂದು ಸ್ಪೆಷಲ್‌ ಹಾಡನ್ನು ಚಿತ್ರೀಕರಿಸಲಾಗಿದ್ದು, ಈ ಹಾಡಿಗೆ ಅರ್ಜುನ್‌ ಸರ್ಜಾ, ದರ್ಶನ್‌, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಮುಂತಾದವರು ಹೆಜ್ಜೆ ಹಾಕಿದ್ದಾರೆ. ಅಲ್ಲಿಗೆ “ಪ್ರೇಮ ಬರಹ’ ಚಿತ್ರದ ಚಿತ್ರೀಕರಣ ಮುಗಿದಂತಾಗಿದೆ.

Advertisement

ಈಗ್ಯಾಕೆ ಈ ವಿಷಯ ಎಂದರೆ, “ಪ್ರೇಮ ಬರಹ’ ಚಿತ್ರದ ಹಾಡುಗಳು ಇದೇ ಡಿಸೆಂಬರ್‌ 17ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಚಿತ್ರರಂಗದ ಸಾಕಷ್ಟು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ದೀಪಾವಳಿಗೆ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ನಿರ್ದೇಶಕ ಅರ್ಜುನ್‌ ಸರ್ಜಾ ಯೋಚಿಸಿದ್ದರು.

ಆದರೆ, ಕಾರಣಾಂತರಗಳಿಂದ ಚಿತ್ರ ತಡವಾಗಿದ್ದು, ಈಗ ಹಾಡುಗಳ ಬಿಡುಗಡೆ ಸಮಾರಂಭ ನಡೆದರೆ, ಜವರಿಯಲ್ಲಿ ಚಿತ್ರವು ಬಿಡುಗಡೆಯಾಗಲಿದೆ. “ಪ್ರೇಮ ಬರಹ’ ಚಿತ್ರದ ಒಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಅರ್ಜುನ್‌ ಸರ್ಜಾ ಅವರ ಪುತ್ರಿ ಐಶ್ವರ್ಯ ನಾಯಕಿಯಾಗಿ ನಟಿಸಿರುವುದು. ಇದಕ್ಕೂ ಮುನ್ನ ವಿಶಾಲ್‌ ಅಭಿನಯದ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದ ಐಶ್ವರ್ಯಗೆ ಇದು ಕನ್ನಡದಲ್ಲಿ ಮೊದಲ ಚಿತ್ರ.

ಅವರಿಗೆ ನಾಯಕನಾಗಿ ಚಂದನ್‌ ನಟಿಸಿದ್ದಾರೆ. ಚಂದನ್‌ ಮತ್ತು ಐಶ್ವರ್ಯ ಜೊತೆಗೆ ಸಾಧು ಕೋಕಿಲ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಜೆಸ್ಟಿ ಗಿಫ್ಟ್ ಅವರ ಸಂಗೀತ ಮತ್ತು ವೇಣು ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next