Advertisement

ಪ್ರವೀಣ್‌ ನೆಟ್ಟಾರು ಪ್ರಕರಣ- ಆರೋಪಿಗಳಿಗೆ ಜೂ. 30ರ ಗಡುವು;ಶರಣಾಗದಿದ್ದರೆ ಆಸ್ತಿ ಜಪ್ತಿ

10:29 AM Jun 29, 2023 | Team Udayavani |

ಸುಳ್ಯ: ಕಳೆದ ವರ್ಷದ ಜುಲೈಯಲ್ಲಿ ದುಷ್ಕರ್ಮಿ ಗಳಿಂದ ಹತ್ಯೆಗೊಳಗಾಗಿರುವ ಬಿಜೆಪಿಯ ಯುವ ಮುಖಂಡ, ಬೆಳ್ಳಾರೆಯ
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ತಲೆಮರೆಸಿ ಕೊಂಡಿರುವ ಆರೋಪಿ ಗಳು ಜೂ. 30ರೊಳಗೆ ಶರಣಾಗದಿದ್ದಲ್ಲಿ ಅವರ ಮನೆ
ಹಾಗೂ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಳ್ಳುವಂತೆ ಎನ್‌ಐಎ ನ್ಯಾಯಾಲಯ ಆದೇಶಿಸಿದೆ. ಈ ಕುರಿತು ಸುಳ್ಯ ನಗರದಲ್ಲಿ ಎನ್‌ ಐಎ ಅಧಿಕಾರಿಗಳು ಬುಧವಾರ ಧ್ವನಿ ವರ್ಧಕದ ಮೂಲಕ ಉದ್ಘೋಷಣೆ ಮಾಡಿದರು.

Advertisement

ಜತೆಗೆ ಆರೋಪಿಗಳ ಬಗ್ಗೆ ಸುಳಿವು ಕೊಟ್ಟವ ರಿಗೆ ನಗದು ಬಹುಮಾನವನ್ನೂ ನೀಡಲಾಗುವುದು ಎಂದು ಘೋಷಿಸಲಾಗಿದೆ.
ತಲೆ ಮರೆಸಿಕೊಂಡಿರುವ ಉಮರ್‌ ಫಾರೂಕ್‌ ಮತ್ತು ಮುಸ್ತಫಾ ಅವರಿಗೆ ಶರಣಾಗುವಂತೆ ಸುಳ್ಯ, ಬೆಳ್ಳಾರೆಗಳಲ್ಲಿ ಉದ್ಘೋಷಣೆ
ಮಾಡಿರುವುದಲ್ಲದೆ ಎನ್‌ಐಎ ಅಧಿಕಾರಿಗಳು ಆರೋಪಿಗಳ ಮನೆಗೆ ತೆರಳಿ ನ್ಯಾಯಾಲಯದ ಆದೇಶದ ಪ್ರತಿಯನ್ನು ಗೋಡೆಗೆ
ಅಂಟಿಸಿದ್ದಾರೆ.

ಆರೋಪಿಗಳಿಗಾಗಿ ಶೋಧ
ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತ ರಿಂದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌
ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿ ಕೊಂಡಿರುವ ಮೂವರು ಶಂಕಿತರ ಮನೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐಎ) ಮಂಗಳವಾರ ವ್ಯಾಪಕ ಶೋಧ ನಡೆಸಿದೆ.

ಅವರಿಗೆ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಳ್ಳಲು ನೆರವು ನೀಡಿದ ಆರೋಪದ ಮೇಲೆ ಕೊಡಗಿನ ಅಬ್ದುಲ್‌ ನಾಸಿರ್‌, ಅಬ್ದುಲ್‌ ರೆಹಮಾನ್‌ ಮತ್ತು ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಕಾರು ಚಾಲಕ ನೌಷಾದ್‌ ಮನೆಗಳಲ್ಲಿ ನಡೆಸಿದ ಶೋಧದ ವೇಳೆ ಎನ್‌ಐಎ ಹಲವು ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದೆ.

21 ಮಂದಿ ವಿರುದ್ಧ ಆರೋಪಪಟ್ಟಿ
2022ರ ಆಗಸ್ಟ್‌ನಲ್ಲಿ ಎನ್‌ಐಎ ಕೈಗೆತ್ತಿಕೊಂಡಿದ್ದ ಈ ಪ್ರಕರಣದಲ್ಲಿ ಮೂವರ ಹೊರತಾಗಿ ಇನ್ನೂ ಐವರು ಆರೋಪಿಗಳು ತಲೆ
ಮರೆಸಿಕೊಂಡಿದ್ದಾರೆ. ಪರಾರಿಯಾಗಿರುವವರು ಸಹಿತ ಒಟ್ಟು 21 ಮಂದಿಯ ವಿರುದ್ಧ ಯುಎ(ಪಿ) ಕಾಯ್ದೆ, ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇರುವುದಾಗಿ ಆರೋಪಪಟ್ಟಿ ಸಲ್ಲಿಸಿದೆ ಎಂದು ಎನ್‌ ಐಎ ಬಧವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Advertisement

2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಪಿಎಫ್ಐ “ಕಿಲ್ಲರ್‌ ಸ್ಕ್ವಾಡ್ಸ್‌’ ಅಥವಾ “ಸೇವಾ ತಂಡಗಳು’ ಪ್ರವೀಣ್‌ ನೆಟ್ಟಾರು ಅವರನ್ನು ಕಡಿದು ಹತ್ಯೆಗೈದಿದ್ದವು. 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್‌ ಆಡಳಿತವನ್ನು ಸ್ಥಾಪಿಸುವ ತನ್ನ ಅಂತಿಮ ಉದ್ದೇಶ ದೊಂದಿಗೆ ಕೋಮುವಾದದ ಮತ್ತು ಕೋಮು ದ್ವೇಷವನ್ನು ಹರಡುವ ಗುರಿಯೊಂದಿಗೆ ಪಿಎಫ್ಐ ಇಂತಹ ಉದ್ದೇಶಿತ “ದ್ವೇಷದ ಹತ್ಯೆಗಳಲ್ಲಿ’ ತೊಡಗಿಸಿಕೊಂಡಿದೆ. ತಲೆಮರೆಸಿ ಕೊಂಡಿರುವ ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಎನ್‌ ಐಎ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next