Advertisement

ಪ್ರಥಮ್‌ ಈಗ ತಿಮಿಂಗಿಲ

11:08 AM Jun 18, 2018 | |

ಪ್ರಥಮ್‌ ಅಭಿನಯದ “ಎಂಎಲ್‌ಎ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇನ್ನು “ನಟ ಭಯಂಕರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಮಧ್ಯೆ ಪ್ರಥಮ್‌ ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅದೇ “ತಿಮಿಂಗಿಲ’. ಈ ಚಿತ್ರವು ಜುಲೈ ತಿಂಗಳಲ್ಲಿ ಸೆಟ್ಟೇರಲಿದೆ. ಇದೊಬ್ಬ ಪರಮ ಭ್ರಷ್ಟ ಪೊಲೀಸ್‌ ಅಧಿಕಾರಿಯ ಕಥೆ ಎನ್ನುತ್ತಾರೆ ಪ್ರಥಮ್‌.

Advertisement

ಆತ ಅದೆಷ್ಟು ಭ್ರಷ್ಟ ಎಂದರೆ, ಆತ ದುಡ್ಡು ತಿನ್ನುವುದನ್ನು ತಿಮಿಂಗಿಲಕ್ಕೆ ಹೋಲಿಸುತ್ತಾರಂತೆ ಜನ. ಅದೇ ಕಾರಣಕ್ಕೆ ಚಿತ್ರಕ್ಕೆ “ತಿಮಿಂಗಿಲ’ ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರದಲ್ಲಿ ಪ್ರಥಮ್‌ ಜೊತೆಗೆ ಸಾಧು ಕೋಕಿಲ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರಥಮ್‌ ಹಾಗೂ ಸಾಧು ಕೋಕಿಲ ಒಂದೇ ದಿನ ಹುಟ್ಟಿ, ಒಟ್ಟಿಗೇ ಬಾಲ್ಯವನ್ನು ಕಳೆದಿರುತ್ತಾರಂತೆ.

ಆದರೆ, ಸಾಧುಗಿಂಥ ಒಂದು ಅಂಕ ಹೆಚ್ಚು ಪಡೆಯುವ ಪ್ರಥಮ್‌ ಆ ಕಡೆ ಇನ್‌ಸ್ಪೆಕ್ಟರ್‌ ಆದರೆ, ಒಂದು ಅಂಕ ಕಡಿಮೆ ಪಡೆಯುವ ಸಾಧು ಪೊಲೀಸ್‌ ಪೇದೆಯಾಗುತ್ತಾರಂತೆ. ಅವರಿಬ್ಬರ ನಡೆಯುವ ತಮಾಷೆಯ ಕಥೆಯೇ ಚಿತ್ರದ ಹೂರಣ ಎನ್ನುತ್ತಾರೆ ಪ್ರಥಮ್‌. ಈ ಚಿತ್ರವನ್ನು ಅವಿನಾಶ್‌ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಮುಂದಿನ ತಿಂಗಳು ಚಿತ್ರ ಶುರುವಾಗಲಿದೆ.

ಇನ್ನು ಪ್ರಥಮ್‌ ಅಭಿನಯದ “ಎಂ.ಎಲ್‌.ಎ’ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಕಳೆದ ತಿಂಗಳು ದರ್ಶನ್‌ ಅವರು ಬಂದು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಈ ಚಿತ್ರದ ವೀಡಿಯೋ ಸಾಂಗ್‌ವೊಂದು ಇಂದು ಬಿಡುಗಡೆಯಾಗಲಿದ್ದು, ನಟ ಧ್ರುವ ಸರ್ಜಾ ಬಿಡುಗಡೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next