Advertisement

ನೆಗೆಟಿವ್‌ ಶೇಡ್‌ನ‌ಲ್ಲಿ ಪ್ರಜ್ವಲ್‌

06:00 AM Nov 30, 2018 | Team Udayavani |

ಕೆಲವು ತಿಂಗಳ ಹಿಂದೆ ನಿರ್ದೇಶಕ ಪಣೀಶ್‌ ಸಿನಿಮಾವೊಂದನ್ನು ಆರಂಭಿಸಿದ್ದರು. ವಸಿಷ್ಠ ಸಿಂಹ ನಾಯಕರಾಗಿದ್ದ ಆ ಸಿನಿಮಾದ ಧ್ವನಿಮುದ್ರಣ ಕಾರ್ಯ ಆರಂಭವಾಗಿತ್ತು. ಆ ನಂತರ ಆ ಸಿನಿಮಾ ಏನಾಯಿತ್ತೆಂಬ ಸುದ್ದಿ ಇರಲಿಲ್ಲ. ಈಗ ಮತ್ತೆ ಚಿತ್ರತಂಡ ಮಾಧ್ಯಮದ ಮುಂದೆ ಬಂದಿದೆ. ಅದು ಬದಲಾದ ನಾಯಕನೊಂದಿಗೆ. ಹೌದು, ವಸಿಷ್ಠ ಸಿಂಹ ಜಾಗಕ್ಕೆ ಈಗ ಪ್ರಜ್ವಲ್‌ ದೇವರಾಜ್‌ ಬಂದಿದ್ದಾರೆ. ವಸಿಷ್ಠ ಬೇರೆ  ಬೇರೆ ಪ್ರಾಜೆಕ್ಟ್ಗಳಲ್ಲಿ ಬಿಝಿಯಾಗಿದ್ದ ಕಾರಣದಿಂದ ಅವರ ಜಾಗಕ್ಕೆ ಪ್ರಜ್ವಲ್‌ ಬಂದಿದ್ದಾರೆಯೇ ಹೊರತು ಅದರಾಚೆ ಬೇರೇನು ಕಾರಣವಿಲ್ಲ ಎಂಬುದು ನಿರ್ದೇಶಕ ಪಣೀಶ್‌ ಮಾತು. ಆಗ ಚಿತ್ರಕ್ಕೆ ಟೈಟಲ್‌ ಆಗಿರಲಿಲ್ಲ. ಈಗ ಚಿತ್ರಕ್ಕೆ ಟೈಟಲ್‌ ಆಗಿದ್ದು, “ರುಧೀರ’ ಎಂದು ಇಡಲಾಗಿದೆ. 

Advertisement

ಅಂದಹಾಗೆ, ಇದೊಂದು ರೊಮ್ಯಾಂಟಿಕ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಚಿತ್ರದಲ್ಲಿ ಆ್ಯಕ್ಷನ್‌ಗೂ ಹೆಚ್ಚಿನ ಮಹತ್ವವಿದೆಯಂತೆ. ನಿರ್ದೇಶಕ ಪಣೀಶ್‌ ಹೇಳುವಂತೆ, ರುಧೀರ ಎಂದರೆ ರಕ್ತವರ್ಣ ಎಂದರ್ಥ. ಚಿತ್ರದಲ್ಲಿ ನಕ್ಸಲ್‌ ಹಿನ್ನೆಲೆಯೂ ಸೇರಿದೆಯಂತೆ. ಹಾಗಾಗಿ, ಚಿತ್ರಕ್ಕೆ ಈ ಶೀರ್ಷಿಕೆ ಹೊಂದಿಕೆಯಾಗುತ್ತದೆ ಎನ್ನುವುದು ನಿರ್ದೇಶಕರ ಮಾತು. ನಕ್ಸಲ್‌ ಹೋರಾಟ, ಅದರ ಹಿನ್ನೆಲೆ ಸೇರಿದಂತೆ ಹಲವು ಅಂಶಗಳನ್ನು ಅಧ್ಯಯನ ನಡೆಸಿಯೇ ನಿರ್ದೇಶಕರು ಈ ಕಥೆ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ  ಪ್ರಜ್ವಲ್‌ ಈ ಹಿಂದೆ ಕಾಣಿಸಿಕೊಳ್ಳದಂತಹ ವಿಶೇಷವಾದ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೊದಲ ನೋಟದಲ್ಲಿ ಇದು ಪ್ರಜ್ವಲಾ ಎಂದು ಆಶ್ಚರ್ಯವಾಗುವ ಮಟ್ಟಕ್ಕೆ ಆ ಗೆಟಪ್‌ ಇರಲಿದೆಯಂತೆ. 

ಚಿತ್ರದ ಬಗ್ಗೆ ಮಾತನಾಡುವ ಪ್ರಜ್ವಲ್‌, “ಕಥೆ ಇಷ್ಟವಾಯಿತು. ನಿರ್ದೇಶಕರು ತುಂಬಾ ಡಿಟೇಲ್‌ ಆಗಿ ಕಥೆ ಮಾಡಿಕೊಂಡಿದ್ದಾರೆ ಮತ್ತು ತುಂಬಾ ವಿಶ್ವಾಸದಿಂದಿದ್ದಾರೆ. ನೆಗೆಟಿವ್‌ ಶೇಡ್‌ ಇರುವ ಪಾತ್ರ’ ಎಂದು ಖುಷಿಯಿಂದ ಹೇಳಿಕೊಂಡರು. ಈ ಚಿತ್ರದ ನಿರ್ದೇಶನದ ಜೊತೆಗೆ ಪಣೀಶ್‌ ನಿರ್ಮಾಣಕ್ಕೂ ಕೈ ಹಾಕಿದ್ದು, ಇವರಿಗೆ ಶೋಭಾ ಕೃಷ್ಣಪ್ಪ ಸಾಥ್‌ ನೀಡುತ್ತಿದ್ದಾರೆ. ಚಿತ್ರಕ್ಕೆ ವಿಜಯ್‌ ಪ್ರಕಾಶ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next