Advertisement

ಮಾದರಿ ವಿದ್ಯುತ್‌ ಗ್ರಾಮದಲ್ಲಿ ವಿದ್ಯುತ್‌ ಪೂರೈಕೆ ಸಮಸ್ಯೆ!

03:42 PM Aug 17, 2018 | Team Udayavani |

ವೇಣೂರು : ಹೊಸಂಗಡಿ, ಪೆರಿಂಜೆ ಹಾಗೂ ಬಡಕೋಡಿ ಗ್ರಾಮದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ ಬಗ್ಗೆ ಆರೋಪಿಸಿದ ಗ್ರಾಮಸ್ಥರು ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿದರು. ಹೊಸಂಗಡಿ ಗ್ರಾ.ಪಂ.ನ 2018-19ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಹೊಸಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ಜರಗಿತು. ಗ್ರಾ.ಪಂ. ಅಧ್ಯಕ್ಷೆ ಹೇಮಾ ವಸಂತ್‌ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕನಿಷ್ಕ ಎಸ್‌. ಚಂದ್ರ ಸಭೆಯನ್ನು ನಡೆಸಿಕೊಟ್ಟರು.

Advertisement

ದಿನದ 24 ಗಂಟೆಗಳಲ್ಲೂ ನಿರಂತರ ವಿದ್ಯುತ್‌ ಪೂರೈಕೆ ಮಾಡುವ ಮಾದರಿ ವಿದ್ಯುತ್‌ ಗ್ರಾಮ ಯೋಜನೆಗೆ ಹೊಸಂಗಡಿ ಗ್ರಾ.ಪಂ.ನ್ನು ಆಯ್ಕೆ ಮಾಡಲಾಗಿತ್ತು. ಆದರೆ ಯೋಜನೆ ಜಾರಿಗೆ ಬಂದಿಲ್ಲ. ವಿದ್ಯುತ್‌ ವ್ಯತ್ಯಯ ಆಗುತ್ತಿದ್ದು, ಸಮಸ್ಯೆಯನ್ನು ನಿವಾರಿಸಬೇಕೆಂದು ಮೆಸ್ಕಾಂ ಇಲಾಖೆಯ ಅಧಿಕಾರಿಯನ್ನು ಆಗ್ರಹಿಸಿದರು. ಸಮಸ್ಯೆ ಬಗ್ಗೆ ಗಮನ ಹರಿಸುವುದಾಗಿ ಅಧಿಕಾರಿ ಭರವಸೆ ನೀಡಿದರು. 

ಮೂಡಬಿದಿರೆ ತಾಲೂಕಿಗೆ ಸೇರಿಸಿ
ಇನ್ನಷ್ಟೇ ಘೋಷಣೆ ಆಗಲಿರುವ ಮೂಡಬಿದಿರೆ ತಾಲೂಕಿಗೆ ಹೊಸಂಗಡಿ ಹಾಗೂ ಬಡಕೋಡಿ ಗ್ರಾಮವನ್ನು ಸೇರಿಸಿಕೊಳ್ಳುವಂತೆ ಆಗ್ರಹಿಸಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲ ಆಗ್ರಹ ವ್ಯಕ್ತವಾಯಿತು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. 

ಕಾಡುಪ್ರಾಣಿ ಹಾವಳಿ
ಬಡಕೋಡಿ ಗ್ರಾಮದಲ್ಲಿ ವಿದ್ಯುತ್‌ ದಾರಿದೀಪ ಇಲ್ಲ. ಕಾಡುಪ್ರಾಣಿಗಳ ಹಾವಳಿ ಜಾಸ್ತಿ ಆಗಿದೆ. ಚಿರತೆಯೊಂದು ಮನೆಯ ಸಾಕುನಾಯಿಯನ್ನು ಕೊಂದಿರುವ ಬಗ್ಗೆ ಮಹಿಳೆಯೊಬ್ಬರು ಸಭೆಯನ್ನು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿ, ಚಿರತೆ ಬೀಳದಿದ್ದ ಕಾರಣ ಬಡಕೋಡಿಯಲ್ಲಿ ಬೋನನ್ನು ತೆಗೆಯಲಾಗಿದೆ. ಮುಂದೆ ಇಂತಹ ಘಟನೆ ನಡೆದರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗೋ ಆಸ್ಪತ್ರೆ ಬೇಕು
ಹೊಸಂಗಡಿಗೆ 11 ಕಿ.ಮೀ. ದೂರದ ವೇಣೂರು ಪಶು ಆಸ್ಪತ್ರೆಗೆ ತೆರಳಲು ಕಷ್ಟವಾಗುತ್ತದೆ. ಹೊಸಂಗಡಿಗೆ ಪಶು ಆಸ್ಪತ್ರೆಯ ಅಗತ್ಯತೆ ಇದೆ ಎಂದು ಗ್ರಾಮಸ್ಥರು ಬೇಡಿಕೆ ಮುಂದಿಟ್ಟರು. ವೇಣೂರಿನ ಪಶು ಆಸ್ಪತ್ರೆಯಲ್ಲಿ ಎಲ್ಲ ಬಗೆಯ ಔಷಧಗಳಿಲ್ಲ. 155 ರೂ. ಇಂಜೆಕ್ಷನ್‌ಗೆ 200ಕ್ಕಿಂತಲೂ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆಂದು ಗ್ರಾಮಸ್ಥ ಆನಂದ ಕುಲಾಲ್‌ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಪ್ರಯಾಣದ ವೆಚ್ಚವನ್ನು ಪಡೆದುಕೊಳ್ಳುತ್ತೇವೆ, ಆದರೆ ಹೆಚ್ಚಿನ ಹಣ ಪಡೆಯುತ್ತಿಲ್ಲ ಎಂದರು. ಮಳೆ ಹಾನಿಯಾದರೆ ತತ್‌ಕ್ಷಣ ಮಾಹಿತಿ ನೀಡಿ, ಪರಿಹಾರ ಒದಗಿಸಿಕೊಡಲು ಅನುಕೂಲವಾಗುತ್ತದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಹೇಳಿದರು. ಜನನ- ಮರಣ ನೋಂದಣಿಗೆ ವಿಳಂಬ ಮಾಡಬಾರದು. ಮದುವೆ ನೋಂದಣಿಯನ್ನೂ ಮಾಡಿಕೊಳ್ಳಬೇಕು ಎಂದವರು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರಕಾರದಡಿ ಲಭಿಸುವ ಉಚಿತ ಗ್ಯಾಸ್‌ ಸಂಪರ್ಕ ಯೋಜನೆಯ ಮಾಹಿತಿಯನ್ನು ವೇಣೂರು ಪಾರ್ಶ್ವನಾಥ ಗ್ಯಾಸ್‌ ಏಜೆನ್ಸಿಯ ಪ್ರಬಂಧಕ ಮಹಮ್ಮದ್‌ ಎಚ್‌. ಮಾಹಿತಿ ನೀಡಿದರು.

Advertisement

ಪಂ.ನ ಪ.ಜಾ. ಮತ್ತು ಪಂಗಡದಲ್ಲಿ ಮೀಸಲಿರಿಸಿದ ಅನುದಾನದಲ್ಲಿ ವಿದ್ಯಾರ್ಥಿವೇತನ ನೀಡಲಾಯಿತು. ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಆರಂಬೋಡಿ ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಹೊಸಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಲಲಿತಾ ಟಿ. ಹೆಗ್ಡೆ, ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ. ಸಿಬಂದಿ ಸಹಕರಿಸಿದರು. ಪಂ.ಕಾರ್ಯದರ್ಶಿ ವರದಿ ಮಂಡಿಸಿದರು. ಅಭಿವೃದ್ಧಿ ಅಧಿಕಾರಿ ಗಣೇಶ್‌ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು. ಪಂಚಾಯತ್‌ ಸಿಬಂದಿ ಸತೀಶ್‌ ಕುಮಾರ್‌ ಪಿ.ವಿ. ವಂದಿಸಿದರು.

ಅಭಿವೃದ್ಧಿ
ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಆದರೆ ಅದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಬೇಕಾಗಿದೆ. ಪಿನ್‌ಕೋಡ್‌ ಸಮಸ್ಯೆ ನಿವಾರಣೆ ಆಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಎಲ್ಲ ಸೌಲಭ್ಯ ದೊರೆಯಲಿದೆ.
-ಹೇಮಾ ವಸಂತ್‌
ಅಧ್ಯಕ್ಷೆ, ಹೊಸಂಗಡಿ ಗ್ರಾ.ಪಂ. 

Advertisement

Udayavani is now on Telegram. Click here to join our channel and stay updated with the latest news.

Next