Advertisement

ಕೆರೆಯಂಗಳದಲ್ಲೇ ಕೋಳಿ ತ್ಯಾಜ್ಯ ವಿಲೇವಾರಿ

01:29 PM Aug 25, 2019 | Suhan S |

ಚನ್ನಪಟ್ಟಣ: ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಹಾಗೂ ಪರಿಸರಕ್ಕೆ ಧಕ್ಕೆಯಾಗದಂತೆ ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಕೋಳಿ ತ್ಯಾಜ್ಯವನ್ನು ಕೋಳಿ ಅಂಗಡಿಗಳ ಮಾಲೀಕರು ಈ ಹಿಂದೆ ರಸ್ತೆಬದಿ, ನಿರ್ಜನ ಪ್ರದೇಶಗಳಲ್ಲಿ ಮನಸೋಇಚ್ಚೆ ಬಿಸಾಡಿ ಹೋಗುತ್ತಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನೀರು ತುಂಬಿರುವ ಕೆರೆಯಂಗಳಕ್ಕೆ ಈ ತ್ಯಾಜ್ಯವನ್ನು ನಿರಂತರವಾಗಿ ಬಿಸಾಡುತ್ತಿದ್ದು, ಇದರಿಂದ ನೀರು ಕಲುಷಿತವಾಗುವ ಜತೆಗೆ ಇಡೀ ವಾತಾವರಣವೇ ಗಬ್ಬೆದ್ದು ನಾರುತ್ತಿದೆ.

Advertisement

ನಿರ್ಜನ ಪ್ರದೇಶದಲ್ಲಿ ಗುಂಡಿ ತೆಗೆದು, ಕೋಳಿ ತ್ಯಾಜ್ಯವನ್ನು ಅದರಲ್ಲಿ ಮುಚ್ಚಿ ವಿಲೇವಾರಿ ಮಾಡಬೇಕಾಗಿರುವುದು ನಿಯಮ. ಆದರೆ, ಈ ಗೋಜಿಗೆ ಹೋಗದ ಕೋಳಿ ಅಂಗಡಿಯವರು ಪ್ಲಾಸ್ಟಿಕ್‌ ಚೀಲಗಳಲ್ಲಿ ತ್ಯಾಜ್ಯವನ್ನು ತುಂಬಿ ಕೆರೆಗಳಿಗೆ ಬಿಸಾಡುತ್ತಿದ್ದಾರೆ. ಕೆರೆಗಳ ಮೀನುಗಳ ಹಕ್ಕನ್ನು ಪಡೆದುಕೊಂಡಿರುವ ಕೆಲವು ಮಂದಿ ಕೆರೆಯನ್ನೇ ಖರೀದಿ ಮಾಡಿರುವಂತೆ ಕೋಳಿ ತ್ಯಾಜ್ಯವನ್ನು ಕೆರೆಗೆ ಹಾಕುವಂತೆ ಖುದ್ದು ನೋಡಿಕೊಳ್ಳುತ್ತಿದ್ದು, ಇದರಿಂದ ಪ್ರಶಾಂತವಾಗಿರಬೇಕಿದ್ದ ಕೆರೆಯ ಪರಿಸರ ಹಾಳಾಗುತ್ತಿದೆ.

ಸಾರ್ವಜನಿಕರಿಗೆ ಕಿರಿಕಿರಿ: ಕೆರೆಗೆ ಈ ತ್ಯಾಜ್ಯವನ್ನು ಬಿಸಾಡುವುದರಿಂದ ಕೆರೆಯಲ್ಲಿರುವ ಮೀನುಗಳು ಇದನ್ನು ತಿಂದು ಬಹುಬೇಗ ಬೆಳೆದು, ಲಾಭ ತಂದುಕೊಡುತ್ತವೆ ಎನ್ನುವ ದುರಾಲೋಚನೆಯೇ ಕೆರೆಯಂಗಳಕ್ಕೆ ಕೋಳಿ ತ್ಯಾಜ್ಯ ಬೀಳಲು ಪ್ರಮುಖ ಕಾರಣವಾಗಿದೆ. ಬಹುತೇಕ ಪಟ್ಟಣಕ್ಕೆ ಸಮೀಪವಿರುವ ಹೊಂಗನೂರು ಕೆರೆ, ರಾಮಮ್ಮನ ಕೆರೆ, ಕೂಡ್ಲೂರು ಕೆರೆಗಳು, ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಣ್ವಾ ನದಿಪಾತ್ರ ಪಟ್ಟಣದಲ್ಲಿ ಉತ್ಪಾದನೆಯಾಗುವ ಕೋಳಿ ಅಂಗಡಿಗಳ ತ್ಯಾಜ್ಯವನ್ನು ತನ್ನೊಡಲೊಳಗೆ ತುಂಬಿಸಿಕೊಂಡು ಕಲುಷಿತವಾಗುತ್ತಿವೆ. ನಿತ್ಯ ಇಲ್ಲಿ ಓಡಾಡುವ ಮಂದಿಗಂತೂ ಗಬ್ಬು ವಾಸನೆ ಸಹಿಸಲಸಾಧ್ಯವಾಗಿದೆ. ಇಡೀ ಪ್ರದೇಶದ ವಾತಾವರಣ ಕಲುಷಿತಗೊಂಡು ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುತ್ತಿದೆ.

ಕೆರೆಯ ಪರಿಸರಕ್ಕೆ ಧಕ್ಕೆ: ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದರೆ ಪ್ರತಿನಿತ್ಯ ಸ್ಥಳೀಯರು ಕೆರೆಯಂಗಳದಲ್ಲಿನ ನೀರನ್ನು ಹಲವು ಉಪಯೋಗಕ್ಕೆ ಬಳಕೆ ಮಾಡುತ್ತಾರೆ. ಹಳ್ಳಿಗಳಲ್ಲಿ ದನಕರುಗಳಿಗೆ ನೀರು ಕುಡಿಸಲು ಕೆರೆಯನ್ನೇ ಆಶ್ರಯಿಸುವುದು ಸಾಮಾನ್ಯ. ಹಾಗೆಯೇ ಮಕ್ಕಳು ಈಜಾಡುವುದು, ಮಹಿಳೆಯರು ಬಟ್ಟೆ, ಪಾತ್ರೆ ತೊಳೆಯಲು ಹೆಚ್ಚು ಕೆರೆಯನ್ನೇ ಅವಲಂಬಿಸುತ್ತಾರೆ. ಇನ್ನು ರೈತರು ಕೃಷಿಗಾಗಿ ನೀರನ್ನು ಬಳಕೆ ಮಾಡುತ್ತಾರೆ. ಇಷ್ಟೆಲ್ಲಾ ಉಪಯೋಗ ಕೆರೆಯಿಂದ ಆಗುತ್ತಿದೆ. ,ಇಂತಹ ಕೆರೆಗಳಿಗೆ ಕೆಲ ಕಲುಷಿತ ಮನಸ್ಸುಗಳು ತಮ್ಮ ಲಾಭಕ್ಕಾಗಿ ಕೊಳಕನ್ನು ನೀರಿನೊಳಗೆ ಸೇರಿಸುತ್ತಿರುವುದರಿಂದ ಇಡೀ ಕೆರೆಯ ಪರಿಸರ ಹಾಳಾಗುತ್ತಿದೆ.

ಮೀನು ಸೇವನೆಯಿಂದ ಅನಾರೋಗ್ಯ: ಕೊಳೆತ ಮಾಂಸವನ್ನು ತಿಂದು ಬೆಳೆಯುವ ಮೀನುಗಳನ್ನು ಆಹಾರವಾಗಿ ಬಳಸುವುದರಿಂದ ನಮ್ಮ ದೇಹದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕ್ಯಾಟ್ಫಿಷ್‌ಗಳನ್ನು ಬೆಳೆಸಲು ಇದೇ ರೀತಿ ರಾಸಾಯನಿಕ, ಕೊಳೆತ ಮಾಂಸ ಬಳಕೆ ಮಾಡುವುದರಿಂದ ಆ ಮೀನು ಸೇವನೆಗೆ ಈಗಾಗಲೇ ನಿಷೇಧ ಹೇರಲಾಗಿದೆ. ಅದೇ ರೀತಿ ಸಾಮಾನ್ಯ ಮೀನುಗಳಿಗೂ ಕೊಳೆತ ಮಾಂಸ ಹಾಕಿ ಬೆಳೆಸಿದರೆ ಅನಾರೋಗ್ಯ ಕೆಡುವುದು ನಿಶ್ಚಿತವಾಗಿದೆ. ಹಾಗಾಗಿ ಕೆರೆ ಪರಿಸರ ಹಾಳಾಗುವ ಜತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಸಹ ವ್ಯತಿರಿಕ್ತ ಪರಿಣಾಮವನ್ನು ಎದುರಿಸುವಂತಾಗಿದೆ.

Advertisement

ತಹಶೀಲ್ದಾರ್‌ ಎಚ್ಚರಿಕೆ: ಎಲ್ಲೆಂದರಲ್ಲಿ ಅದರಲ್ಲೂ ಕೆರೆಯಂಗಳಕ್ಕೆ ತ್ಯಾಜ್ಯ ಬಿಸಾಡಿ ಕೈತೊಳೆದುಕೊಳ್ಳುತ್ತಿರುವ ಕೋಳಿ ಅಂಗಡಿಗಳ ಮಾಲೀಕರುಗಳ ವಿರುದ್ಧ ಕಠಿಣ ಕ್ರಮಕ್ಕೆ ತಹಶೀಲ್ದಾರ್‌ ಬಿ.ಕೆ.ಸುದರ್ಶನ್‌ ಮುಂದಾಗಿದ್ದು, ಕೆರೆಯಂಗಳಕ್ಕೆ ಕೋಳಿ ತ್ಯಾಜ್ಯ ಸೇರಿದಂತೆ ಯಾವುದೇ ಕಸವನ್ನು ಸುರಿಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಸ ಹಾಕುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುವ ಹಾಗೂ ಪರಿಸರಕ್ಕೆ ಧಕ್ಕೆಯುಂಟುಮಾಡುವ ಇಂತಹ ಕೃತ್ಯವನ್ನು ಎಸಗುತ್ತಿರುವ ಕೋಳಿ ಅಂಗಡಿ ಮಾಲೀಕರು ಹಾಗೂ ತ್ಯಾಜ್ಯ ಕೆರೆಯಂಗಳಕ್ಕೇ ಬೀಳುವಂತೆ ನೋಡಿಕೊಳ್ಳುತ್ತಿರುವ ಮಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಂಡ ಹಾಕಿ ಸುಮ್ಮನಾಗದೆ ಕೋಳಿ ಅಂಗಡಿ ಪರವಾನಗಿಯನ್ನೇ ರದ್ದುಪಡಿಸಬೇಕು. ನಿರ್ಜನ ಪ್ರದೇಶಗಳಲ್ಲಿ ಸಮರ್ಪಕವಾಗಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಸೂಚನೆ ಹೊರಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

 

● ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next