Advertisement

ಆಧಾರ್‌ ಕಾರ್ಡ್‌ ನೋಂದಣಿಗೆ ಸ್ಪಂದಿಸಿದ ಅಂಚೆ ಇಲಾಖೆ

10:13 AM Dec 12, 2019 | mahesh |

ವಿಟ್ಲ: ಆಧಾರ್‌ ಕಾರ್ಡ್‌ ನೋಂದಣಿಗೆ ವಿಟ್ಲ ಪರಿಸರದಲ್ಲಿ ನಾಗರಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ “ಉದಯವಾಣಿ’ ಸುದಿನದಲ್ಲಿ ಸತತವಾಗಿ ಪ್ರಕಟವಾದ ವರದಿಗೆ ಅಂಚೆ ಇಲಾಖೆಯ ಪುತ್ತೂರು ವಿಭಾಗ ಸ್ಪಂದಿಸಿದೆ. ವಿಟ್ಲದ ಅಂಚೆ ಕಚೇರಿಯಲ್ಲಿ ನೋಂದಣಿ ಕಾರ್ಯ ನಡೆಯುತ್ತಿದ್ದಂತೆ, ಇನ್ನೊಂದು ತಂಡವು ಶಾಲೆ, ಪಂಚಾಯತ್‌ ಕಚೇರಿಗೆ ತೆರಳಿ, ಸಂಘ ಸಂಸ್ಥೆಗಳ ಸಹಕಾರಗಳೊಂದಿಗೆ ನೋಂದಣಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

Advertisement

ಹಾಸಿಗೆ ಹಿಡಿದ ವ್ಯಕ್ತಿಯ ನೋಂದಣಿ
ವಿಟ್ಲ ಪೇಟೆಯಲ್ಲಿ ಓರ್ವ ವ್ಯಕ್ತಿ ಹಾಸಿಗೆ ಹಿಡಿದಿದ್ದು, ಆಧಾರ್‌ ತಿದ್ದುಪಡಿ ಆಗಬೇಕಿತ್ತು. ಅಂಚೆ ಇಲಾಖೆಯ ತಂಡ ಅವರ ಮನೆಗೆ ತೆರಳಿ ಈ ಕಾರ್ಯ ಪೂರೈಸಿದೆ. ಅಂಗವಿಕಲ ವ್ಯಕ್ತಿಯೋರ್ವರ ನೋಂದಣಿಯನ್ನೂ ಮಾಡಿಸಿದೆ. ಓರ್ವ ಮಹಿಳೆಗೆ 7 ಬಾರಿ ಓಡಾಡಿಯೂ ಆಧಾರ್‌ ಕಾರ್ಡ್‌ ಸಿಗಲಿಲ್ಲ ಎಂಬ ಬಗ್ಗೆ ಉದಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಆ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲಿ ಅವರ ಸಮಸ್ಯೆಯೂ ಪರಿಹಾರವಾಗಲಿದೆ.

ಬಂಟ್ವಾಳ ತಾಲೂಕು ಧ್ವನಿ ಮತ್ತು ಬೆಳಕು ಸಂಯೋಜಕರ ಒಕ್ಕೂಟ ಹಾಗೂ ಅಂಚೆ ಇಲಾಖೆಯ ಪುತ್ತೂರು ವಿಭಾಗ ವತಿಯಿಂದ ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಆಧಾರ್‌ ಶಿಬಿರ ನಡೆಯಿತು. ಇದರಲ್ಲಿ 400 ವಿದ್ಯಾರ್ಥಿಗಳು ನೋಂದಾಯಿಸಿಕೊಂಡರು. ವಿಟ್ಲ ನಗರ ಬಿಜೆಪಿ ಮತ್ತು ಅಂಚೆ ಇಲಾಖೆಯ ಸಹಯೋಗದೊಂದಿಗೆ 4 ದಿನಗಳ ಕಾಲ ವಿಟ್ಲ ಮಾದರಿ ಶಾಲೆಯ ಸಭಾ ಭವನದಲ್ಲಿ ಆಧಾರ್‌ ಕಾರ್ಡ್‌ ತಿದ್ದುಪಡಿ ಹಾಗೂ ಹೊಸ ಆಧಾರ್‌ ಕಾರ್ಡ್‌ ನೋಂದಣಿ ಪ್ರಕ್ರಿಯೆ ನಡೆಸಲಾಗಿದ್ದು, ಒಟ್ಟು 782 ಫಲಾನುಭಾವಿಗಳು ಮತ್ತು ಕೇಪು ಗ್ರಾ.ಪಂ.ನಲ್ಲಿ 200ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದರು. ತೋರಣಕಟ್ಟೆಯಲ್ಲಿ, ಪುಣಚದಲ್ಲಿ ಇದೇ ರೀತಿ ನೂರಾರು ಮಂದಿ ಪ್ರಯೋಜನ ಪಡೆದಿದ್ದಾರೆ.

ಅಲ್ಲಲ್ಲಿ ಶಿಬಿರ
ಡಿ. 11ರಂದು ವಿಟ್ಲ ಸಮೀಪದ ಕಂಬಳಬೆಟ್ಟು ಜಯದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶಿಬಿರ ಆಯೋಜಿಸಲಾಗಿದೆ. ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿ ಡಿ. 12 ಮತ್ತು 13ರಂದು ಟಾಪ್‌ ಆಂಡ್‌ ಟಾಪ್‌ ಚಾರಿಟೆಬಲ್‌ ಟ್ರಸ್ಟಿನ ಸಹಕಾರದೊಂದಿಗೆ, ಡಿ. 13, 14ರಂದು ಬೆಳ್ತಂಗಡಿ ಇಂಡಿಯನ್‌ ಸೀನಿಯರ್‌ ಚೇಂಬರ್‌, ಡಿ. 19-20ರಂದು ಇರಾ ಗ್ರಾ.ಪಂ., ಡಿ. 17- 18ರಂದು ಇರ್ವತ್ತೂರು ಶಾರ ದೋತ್ಸವ ಸಮಿತಿಯೊಂದಿಗೆ ಹಾಗೂ ಡಿ. 23-24ರಂದು ಕೆದಂಬಾಡಿ ಗ್ರಾ.ಪಂ., ಡಿ. 26-27ರಂದು ಕಾಣಿಯೂರು ಸಹಿತ ಹಲವೆಡೆ ಮತ್ತಷ್ಟು ಶಿಬಿರಗಳನ್ನು ಅಂಚೆ ಇಲಾಖೆ ಆಯೋಜಿಸಿದೆ. ಮತ್ತಷ್ಟು ಸಂಸ್ಥೆಗಳು ಶಿಬಿರ ಬಯಸಿದ್ದು, ಜನವರಿ ತಿಂಗಳಲ್ಲಿ ನಿಗದಿಪಡಿಸಬೇಕಾಗಿದೆ.

ವಿಟ್ಲ ನಾಡಕಚೇರಿಯಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ನಾಗರಿಕರು ಭಾರೀ ಶ್ರಮ ಪಡಬೇಕಾಗಿಲ್ಲ. ಆದರೂ ಸರದಿ ಸಾಲಲ್ಲಿ ನಿಲ್ಲಬೇಕು. ಪ್ರತಿದಿನಕ್ಕೆ 30ರಿಂದ 40ರಂತೆ ಜನವರಿ ತಿಂಗಳ ಕೊನೆಯ ತನಕ ಟೋಕನ್‌ ನೀಡಲಾಗಿದೆ.

Advertisement

ಗ್ರಾ.ಪಂ.ನಲ್ಲಿ ಬೇಕು
ಈ ಹಿಂದೆ ಎಲ್ಲ ಗ್ರಾ.ಪಂ.ಗಳಲ್ಲೂ ಆಧಾರ್‌ ಕಾರ್ಡ್‌ ನೋಂದಣಿ ಮಾಡುವ ವ್ಯವಸ್ಥೆಯಿತ್ತು. ಅದನ್ನು ಹಿಂತೆಗೆದುಕೊಳ್ಳಲಾಗಿದೆ. ಅದಕ್ಕೆ ಕಾರಣವೇನೆಂದು ಗೊತ್ತಿಲ್ಲ. ವಿಟ್ಲ ಪಟ್ಟಣ ಪಂಚಾಯತ್‌ ಮತ್ತು ಎಲ್ಲ ಗ್ರಾ.ಪಂ. ಅಧ್ಯಕ್ಷರು ಆಧಾರ್‌ ನೋಂದಣಿ ಕಾರ್ಡ್‌ ನೋಂದಣಿ ವ್ಯವಸ್ಥೆಯನ್ನು ಮುಂದುವರಿಸಬೇಕೆಂದು ಆಗ್ರಹಿಸುತ್ತಾರೆ.

ಎರಡು ತಂಡಗಳಿಂದ ನೋಂದಣಿ ಕಾರ್ಯ
ನಾವು ಆಧಾರ್‌ ಕಾರ್ಡ್‌ ನೋಂದಣಿ ಶಿಬಿರವನ್ನು ಪಾಣೆಮಂಗಳೂರು, ಬಂಟ್ವಾಳ ಮೊದಲಾದೆಡೆ ಆರಂಭಿಸಿದ್ದೆವು. ಆದರೆ ವಿಟ್ಲದಲ್ಲಿ ನಾಗರಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಉದಯವಾಣಿಯಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ, ಹೆಚ್ಚು ಶಿಬಿರಗಳನ್ನು ಆಯೋಜಿಸಲಾರಂಭಿಸಿದೆವು. ಅದಕ್ಕೆ ಆಯಾಯ ಊರಿನವರ ಸ್ಪಂದನವೂ ಸಿಕ್ಕಿದೆ. ಅಂಚೆ ಇಲಾಖೆಯಿಂದ ನಾಗರಿಕರಿಗೆ ಎಲ್ಲ ರೀತಿಯ ಸೇವೆಯನ್ನೂ ಒದಗಿಸುತ್ತೇವೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ. ಈ ತಿಂಗಳು ವಿಟ್ಲದ ಸುತ್ತಮುತ್ತ ಮತ್ತು ಪುತ್ತೂರು, ಬೆಳ್ತಂಗಡಿಗಳಲ್ಲಿ ಅನೇಕ ಶಿಬಿರಗಳು ನಿಗದಿಯಾಗಿವೆ. ಪುತ್ತೂರು ಅಂಚೆ ಇಲಾಖೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಾರ್ಕಳ ತಾಲೂಕುಗಳನ್ನು ಒಳಗೊಂಡಿದೆ. ಇಲ್ಲೆಲ್ಲ ಇಲಾಖೆಯ ಎರಡು ತಂಡಗಳು ಆಧಾರ್‌ ನೋಂದಣಿ ಕಾರ್ಯವನ್ನೇ ಮಾಡುತ್ತಿವೆ.
– ಜೋಸೆಫ್‌ ರಾಡ್ರಿಗಸ್‌, ಸಹಾಯಕ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ

 ದಿನಕ್ಕೆ 30ರಿಂದ 40 ಟೋಕನ್‌
ದಿನಕ್ಕೆ 30ರಿಂದ 40ರಂತೆ ಜನವರಿ ತಿಂಗಳ ಕೊನೆಯ ತನಕ ಟೋಕನ್‌ ನೀಡಿರುವುದರಿಂದ ಅವರಿಗೆ ಸಮರ್ಪಕವಾಗಿ ನೋಂದಾಯಿಸಲು ಸಾಧ್ಯವಾಗುತ್ತಿದೆ. ವಿದ್ಯುತ್‌ ಕಡಿತ, ಸರ್ವರ್‌ ಸಮಸ್ಯೆ ಇದ್ದಾಗ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ.
– ರವಿಶಂಕರ್‌, ಡೆಪ್ಯುಟಿ ತಹಶೀಲ್ದಾರ್‌, ವಿಟ್ಲ ನಾಡಕಚೇರಿ

Advertisement

Udayavani is now on Telegram. Click here to join our channel and stay updated with the latest news.

Next