Advertisement

ವಿಭಿನ್ನತೆಗೆ ಸಾಕ್ಷಿಯಾದ ರಂಗರೂಪಗಳು

03:48 PM Nov 24, 2017 | |

ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರಮಂಟಪದಲ್ಲಿ ಇತ್ತೀಚೆಗೆ ನಡೆದ “ರಥಬೀದಿ ಗೆಳೆಯರು’ ಸಂಘಟನೆಯ ಸಾಂಸ್ಕೃತಿಕ ಸಂಭ್ರಮದಲ್ಲಿ ಒಂದೇ ದಿನ ಮೂರು ವಿಭಿನ್ನ ಅಭಿರುಚಿಯ ಕಾರ್ಯಕ್ರಮ ನಡೆಯಿತು.

Advertisement

ನೃತ್ಯ ನಿಕೇತನ ಕೊಡವೂರು (ರಿ.) ಸಂಸ್ಥೆಯ ಎಳೆಯರು ಅಭಿನಯಿಸಿದ ಮಳೆ ಬಂತು ಮಳೆ ನೃತ್ಯರೂಪಕ ಹಾಗೂ ರಥಬೀದಿ ಗೆಳೆಯರು ಸಂಸ್ಥೆಯು ನಡೆಸಿದ “ಕುಣಿಯೋಣು ಬಾರಾ’ ನಾಟಕ ಶಿಬಿರದಲ್ಲಿ ಸಿದ್ಧಗೊಂಡ ಜೀಮೂತವಾಹನ ನಾಟಕ, ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಅಭಿನಯಿಸಿದ ರಾಧಾ ಏಕವ್ಯಕ್ತಿ ಪ್ರದರ್ಶನ ಸಹೃದಯರನ್ನು ರಂಜಿಸಿದವು. ಈ ಕಾರ್ಯಕ್ರಮ ಮಕ್ಕಳ ಮನೋಲೋಕವನ್ನು ನಿಜವಾದ ಅರ್ಥದಲ್ಲಿ ಹೃದ್ಯಗೊಳಿಸಿತು.

ರೂಪಕವಾದ ಮಳೆ ಬಂತು ಮಳೆ
ಮಳೆ ಇಲ್ಲವೆಂಬ ದುಃಖದಲ್ಲಿ ಪ್ರಾಣಿಗಳೆಲ್ಲ ಒದ್ದಾಡುತ್ತಿರುತ್ತವೆ. ಪುಟ್ಟ ಮತ್ತು ಪುಟ್ಟಿ ಈ ಪ್ರಾಣಿಗಳ ಸಂಕಟ ತಿಳಿದುಕೊಳ್ಳುತ್ತಾರೆ. ತಮ್ಮ ಅಜ್ಜಿಯನ್ನು ಕತೆ ಹೇಳಲು ಆಗ್ರಹಿಸುತ್ತಾರೆ. ಅಜ್ಜಿ ತನ್ನ ಕತೆಯ ಮೂಲಕ ಮಕ್ಕಳಿಗೆ ಪ್ರಕೃತಿಯ ಬಗ್ಗೆ ತಾದಾತ್ಮ$Â ಬೆಳೆಯುವಂತೆ ಮಾಡುತ್ತಾಳೆ. ಅಜ್ಜಿ ಕತೆಯಲ್ಲಿ ಮಳೆ ಸುರಿಯುತ್ತಿರುವಾಗಲೇ ನಿಜವಾಗಿಯೂ ಮಳೆ ಬರುತ್ತದೆ. ಜತೆಗೆ ಮಕ್ಕಳ ಮನೋಲೋಕದಲ್ಲೇ ಸುರಿಯುವ ವಿಶಿಷ್ಟ ಅನುಭವದ ಮಳೆ ಮನಸ್ಸನ್ನು ಒದ್ದೆಯಾಗಿಸುತ್ತದೆ. ಕರುಣೆಯ ವರ್ಷಧಾರೆಯಾಗಿಯೂ ಅದು ಹರಿಯುತ್ತದೆ. ಫ್ಯಾಂಟಸಿ ಜತೆಗೆ ಎಚ್ಚರ, ವಾಸ್ತವ ಬೆಸೆಯುತ್ತಾ ಸಾಗುವ ಕತೆಯ ನಡೆ ಮಕ್ಕಳನ್ನು ಆಕರ್ಷಿಸುತ್ತದೆ. ನಾಟ್ಯದ ಕುಣಿತದೊಂದಿಗೆ ಆವರಣ ಕಟ್ಟಿಕೊಳ್ಳುವ ಈ ರೂಪಕ ಭಾವಾಭಿನಯ, ಸಂಗೀತದಿಂದಲೇ ಜೀವಪಡೆಯುತ್ತಾ ಮಕ್ಕಳ ಮನಸ್ಸನ್ನು ತಟ್ಟುತ್ತದೆ. ಸುಧೀರ್‌ ರಾವ್‌ ಕೊಡವೂರು ನಿರ್ದೇಶನದ ರೂಪಕ ಮೆಚ್ಚುಗೆ ಗಳಿಸಿತು.

ಗಾಂಧಿ ನೆನಪಿಸಿದ ಜೀಮೂತವಾಹನ 
“ಜೀಮೂತವಾಹನ’ ಮೂಲದಲ್ಲಿ ಸಂಸ್ಕೃತ ಸಾಹಿತ್ಯದ ಶ್ರೇಷ್ಠಕವಿ ಶ್ರೀಹರ್ಷ ರಚಿಸಿದ “ನಾಗಾನಂದ’ ನಾಟಕ. ಕನ್ನಡದಲ್ಲಿ ಎಚ್‌. ಎಸ್‌. ವೆಂಕಟೇಶಮೂರ್ತಿ ಹೊಸ ರೂಪದಲ್ಲಿ ಸಮಕಾಲೀನವಾಗಿಸಲು ಪ್ರಯತ್ನಿಸಿದ್ದಾರೆ. ನಾಟಕದ ಒಂದು ಮುಖ್ಯ ಘಟ್ಟವನ್ನು ಇಟ್ಟುಕೊಂಡು ಎಚ್‌ಎಸ್‌ವಿ ಹೊಸ ಆಶಯದ ನಾಟಕ ರಚಿಸಿದ್ದಾರೆ. ಜೀಮೂತವಾಹನನನ್ನು ಕೇಂದ್ರವಾಗಿಸಿ ಗಾಂಧಿಯಾಗಿಸಿದ ಕೀರ್ತಿ ಅವರದು. ಯುವರಂಗಕರ್ಮಿ ಸಂತೋಷ ನಾಯಕ್‌ ಪಟ್ಲ ಈ ನಾಟಕಕ್ಕೆ ಉತ್ತಮ ವಿನ್ಯಾಸ ಮತ್ತು ನಿರ್ದೇಶನದ ಮೂಲಕ ಜೀವತುಂಬಿದ್ದಾರೆ.

“ನಾಗಾನಂದ’ ನಾಟಕದಲ್ಲಿ ಸರ್ಪಸಂತತಿಯನ್ನು ಗರುಡನ ದುರಾಸೆಯಿಂದ ಕಾಪಾಡಿದವನು ಜೀಮೂತವಾಹನ. ಕ್ರೌರ್ಯವನ್ನು, ಹಿಂಸೆಯನ್ನು ಎದುರು ಗೊಳ್ಳುವುದು ಹೇಗೆ ಮತ್ತು ವಿಧಾಯಕವಾಗಿ ಅದನ್ನು ತಡೆಯುವ ಬಗೆ ಈ ನಾಟಕದ ಆಳದಲ್ಲಿ ಸೇರಿಸಿಕೊಂಡ ಬಹಳ ಮುಖ್ಯ ಪ್ರಶ್ನೆ ಎನಿಸುತ್ತದೆ. ಅಹಿಂಸೆಯನ್ನು ಹೊಸ ಪರಿಭಾಷೆಯಲ್ಲಿ ನೋಡಿ ಅದನ್ನು ಆತ್ಮೀಯವಾಗಿಸುವ ಪ್ರಯತ್ನ ಇಲ್ಲಿದೆ. ಇಲ್ಲಿ ಜೀಮೂತವಾಹನನ ಪಾತ್ರದ ಮೂಲಕ ಗಾಂಧಿಯ ಅಹಿಂಸೆಯನ್ನು ಅರ್ಥೈಸಿಕೊಂಡಂತೆ ಕಾಣುತ್ತದೆ. ಜೀವಿಯೊಂದರ ಬದುಕಿನ ಹಕ್ಕನ್ನು ಗೌರವಿಸುವುದು, ಪ್ರೀತಿಸುವುದನ್ನು ಈ ನಾಟಕ ಮುನ್ನೆಲೆಗೆ ತರುತ್ತದೆ. ಪರೋಪಕಾರ ಎನ್ನುವ ಮೌಲ್ಯವನ್ನು ಜಡವಾಗಿ ನೋಡದೆ ಜೀವಂತ ಪ್ರಕ್ರಿಯೆಯಾಗಿಸುತ್ತದೆ. ಇಂದಿನ ಹಿಂಸಾರತಿಯ ಅತಿರೇಕವನ್ನು ಜೀಮೂತವಾಹನನ ಗಾಂಧಿ ಅಹಿಂಸೆಯ ಮೂಲಕ ಮುಖಾಮುಖೀಯಾಗಿಸಿದ ರೀತಿ ಅರ್ಥಪೂರ್ಣವಾಗಿದೆ. ದೇಹವು ಇರುವುದು ಪರೋಪಕಾರದ ಧ್ಯಾನಕ್ಕೆ ಎಂಬ ಮತ್ತೆ ಮತ್ತೆ ಕೇಳಿಸುವ ಸ್ಥಾಯಿ ಧ್ವನಿ ಮಕ್ಕಳನ್ನು ಪ್ರೇರಿಸುತ್ತದೆ. ಇದೊಂದು ಶಕ್ತಿಪೂರ್ಣ ಘೋಷಣೆ. ಹಿಂಸಾತ್ಮಕ ಸಂಗತಿಗಳ ಕ್ರೌರ್ಯವನ್ನು ಕರಗಿಸುವ ಮಾನವೀಯ ಮೌಲ್ಯದ ಮುಖಾಬಿಲೆ ಇಲ್ಲಿ ಜೀವತುಂಬಿದೆ. ಮಕ್ಕಳ ಅಭಿನಯ ಉತ್ತಮವಾಗಿತ್ತು. ಸಮೂಹ ಕ್ರಿಯೆ, ನಡೆಗಳನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿತ್ತು. ಆಶಯವನ್ನು ಚೆನ್ನಾಗಿ ಪ್ರತಿಬಿಂಬಿಸುವಂತೆ ಆಹಾರ್ಯ, ಸಂಗೀತ ಕೂಡ ಉತ್ತಮವಾಗಿ ಮೂಡಿಬಂತು. ವಸ್ತು, ಆಶಯವಿಸ್ತರಣೆ, ರಂಗಕ್ರಿಯೆಗಳ ನಡುವೆ ಒಳ್ಳೆಯ ಸಾಂಗತ್ಯ ತಂದು ಉತ್ತಮ ಶಿಲ್ಪವಾಗಿಸಿದ ಸಂತೋಷ ನಾಯಕ್‌ಪಟ್ಲ ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ.

Advertisement

ಸ್ವಗತದಲ್ಲೇ ಏಕಾಂಗಿಯಾದ ರಾಧೆ
ಮಂಜುಳಾ ಸುಬ್ರಹ್ಮಣ್ಯ ಅವರ ಏಕವ್ಯಕ್ತಿ ಪ್ರದರ್ಶನ ರಾಧೆ ಕೂಡ ಕುತೂಹಲ ಮೂಡಿಸಿತು. ಹೆಚ್ಚು ಸ್ವಗತವಾಗಿಯೇ ಸಾಗುವ ಅವಳ ಆತ್ಮಕಥನ ಸಂಗೀತದಿಂದ, ಕೆಲವೊಂದು ಭಾವಾಭಿನಯದಿಂದ ಕಳೆಗಟ್ಟುತ್ತದೆ. ಡಾ| ಶ್ರೀಪಾದ ಭಟ್‌ ನಿರ್ದೇಶನದ ಈ ಪ್ರಯೋಗದಲ್ಲಿ ವಾಚಿಕ ಅತಿವಿಲಂಬಿಸಿದಂತಿದೆ ಅನಿಸುತ್ತದೆ. ನೃತ್ಯ- ಭಾವಾಭಿವ್ಯಕ್ತಿ ಯಲ್ಲಿ ಮಂಜುಳಾರ ಪ್ರತಿಭೆ ಎದ್ದುಕಾಣುತ್ತದೆ. 

ಜಿ. ಪಿ. ಪ್ರಭಾಕರ ತುಮರಿ

Advertisement

Udayavani is now on Telegram. Click here to join our channel and stay updated with the latest news.

Next