Advertisement

ಜನಸಂಖ್ಯೆ ಸ್ಫೋಟ: ಮೋದಿ ಕಳವಳ ಸಕಾಲಿಕ

02:33 AM Aug 17, 2019 | mahesh |

ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಮಾಡಿದ 73ನೇ ಸ್ವಾತಂತ್ರ್ಯೋತ್ಸವ ಭಾಷಣ ನವಭಾರತ ನಿರ್ಮಾಣ ಕುರಿತು ಅವರು ಹೊಂದಿರುವ ಚಿಂತನೆಗಳ ಹೊಳಹನ್ನು ನೀಡಿದೆ. ಮೂರೂ ಸೇನೆಗಳಿಗೆ ಏಕ ದಂಡನಾಯಕನ ನೇಮಕ, ಜಲ ಸಂರಕ್ಷಣೆ, ಪ್ಲಾಸ್ಟಿಕ್‌ ನಿರ್ಮೂಲನೆ ಸೇರಿದಂತೆ ಹಲವಾರು ಜ್ವಲಂತ ವಿಚಾರಗಳನ್ನು ಪ್ರಧಾನಿ ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ. ಈ ಪೈಕಿ ಜನಸಂಖ್ಯೆ ಕುರಿತು ಅವರು ಹೇಳಿರುವ ಮಾತುಗಳು ಬಹಳ ಮುಖ್ಯವಾಗಿವೆ. ಜನಸಂಖ್ಯೆಯ ಹೆಚ್ಚಳವನ್ನು ಸ್ಫೋಟಕ್ಕೆ ಹೋಲಿಸಿರುವ ಅವರು ಜನಸಂಖ್ಯೆ ನಿಯಂತ್ರಣ ದೇಶಭಕ್ತಿಯ ಕೆಲಸ ಎನ್ನುವ ಮೂಲಕ ಅದಕ್ಕೊಂದು ರಾಷ್ಟ್ರೀಯತೆಯ ಸ್ಪರ್ಶವನ್ನು ನೀಡಿದ್ದಾರೆ. ಜನಸಂಖ್ಯೆ ಅನಿಯಂತ್ರಿತವಾಗಿ ಬೆಳೆಯುತ್ತಿದೆ. ಮುಂದಿನ ಪೀಳಿಗೆಗೆ ಇದರಿಂದ ಹಲವಾರು ಸಮಸ್ಯೆ ಮತ್ತು ಸವಾಲುಗಳು ಎದುರಾಗಲಿವೆ ಎಂಬ ಅವರ ಮಾತು ನಿಜ.

Advertisement

131 ಕೋಟಿ ಜನರನ್ನು ಹೊಂದಿರುವ ದೇಶ ಜನಸಂಖ್ಯೆಯಲ್ಲಿ ಚೀನಾದ ಅನಂತರದ ಸ್ಥಾನದಲ್ಲಿದೆ. 1951ರಲ್ಲಿ 36 ಕೋಟಿಯಿದ್ದ ಜನಸಂಖ್ಯೆ 2011 ರ ವೇಳೆಗೆ 120 ಕೋಟಿಯಾಯಿತು. ವಿಶ್ವಸಂಸ್ಥೆಯ ಜನಗಣತಿ ವಿಭಾಗ ಅಂದಾಜಿಸಿರುವಂತೆ 2024ರ ವೇಳೆಗೆ ನಾವು ಚೀನಾವನ್ನು ಹಿಂದಿಕ್ಕಲಿದ್ದೇವೆ ಹಾಗೂ 2050ರ ವೇಳೆಗೆ ನಮ್ಮ ಸಂಖ್ಯೆ 160 ಕೋಟಿಯಾಗಲಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆಯ ಹೆಚ್ಚಳವನ್ನು ಸ್ಫೋಟ ಎಂದು ಮೋದಿ ವ್ಯಾಖ್ಯಾನಿಸಿರುವುದು ಸರಿಯಾಗಿಯೇ ಇದೆ. ಈ ಸ್ಫೋಟವನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗದಿದ್ದರೆ ನಮ್ಮ ಭವಿಷ್ಯ ಕರಾಳವಾದೀತು ಎನ್ನುವುದು ಅಲ್ಲಗಳೆಯಲಾಗದ ಸತ್ಯ.

ದೇಶದ ಜನಸಂಖ್ಯೆ 1960ರಿಂದ 1990ರ ನಡುವೆ ತೀವ್ರ ಗತಿಯಲ್ಲಿ ಏರಿಕೆಯಾಗಿರುವುದನ್ನು ಅಂಕಿಅಂಶಗಳು ತಿಳಿಸುತ್ತವೆ. ಇದಕ್ಕೆ ಶಿಶು ಮರಣ ಪ್ರಮಾಣದಲ್ಲಾಗಿರುವ ಇಳಿಕೆ ಮತ್ತು ಸರಾಸರಿ ಆಯುಷ್ಯ ಹೆಚ್ಚಳದಂಥ ಹಲವು ಕಾರಣಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಅನೇಕ ಆವಿಷ್ಕಾರಗಳಿಂದ ಮನುಷ್ಯನ ಸರಾಸರಿ ಆಯುಷ್ಯ ಹೆಚ್ಚಳವಾಗಿದೆ.

ಜನಸಂಖ್ಯೆ ಮತ್ತು ಸಂಪನ್ಮೂಲಗಳ ನಡುವಿನ ಅನುಪಾತದಲ್ಲಿ ಭಾರೀ ಅಂತರವಿದ್ದು, ಇದರಿಂದಾಗಿ ಸಾಮಾಜಿಕ ಸಾಮರಸ್ಯ ಕದಡುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ, ವಸತಿ ಮತ್ತಿತರ ಮೂಲಸೌಲಭ್ಯಗಳ ಮೇಲೂ ವಿಪರೀತ ಒತ್ತಡ ಬೀಳುತ್ತಿದೆ.ಸಂಪನ್ಮೂಲದ ಬಹುಭಾಗವನ್ನು ಹೆಚ್ಚುತ್ತಿರುವ ಜನಸಂಖ್ಯೆಗೆ ಮೂಲಸೌಕರ್ಯ ಒದಗಿಸಲು ಬಳಸಬೇಕಾಗಿರುವುದರಿಂದ ಅಭಿವೃದ್ಧಿ ಯೋಜನೆಗಳು ಕುಂಟುತ್ತಿವೆ. ಜನಸಂಖ್ಯೆ ಹೆಚ್ಚಳವನ್ನು ಗಂಭೀರ ಸಮಸ್ಯೆಯೆಂದು ಪರಿಗಣಿಸಿರುವುದರಿಂದ ಮುಂದಿನ ದಿನಗಳಲ್ಲಿ ಇದಕ್ಕೆ ರಾಷ್ಟ್ರೀಯ ನೀತಿ ರಚಿಸುವ ಸುಳಿವೊಂದು ಮೋದಿಯ ಭಾಷಣದಲ್ಲಿ ಇದೆ.

ಈ ಹಿಂದೆಯೂ ಜನಸಂಖ್ಯೆ ಹೆಚ್ಚಳವನ್ನು ತಡೆಯುವ ಪ್ರಯತ್ನಗಳು ಆಗಿದ್ದವು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಗಿನ ಸರ್ಕಾರ ಜನಸಂಖ್ಯೆ ನಿಯಂತ್ರಿಸಲು ಕೈಗೊಂಡಿದ್ದ ಕಠಿಣ ಕ್ರಮಗಳು ಜನಮಾನಸದಲ್ಲಿ ಭೀತಿ ಮೂಡಲು ಕಾರಣವಾಗಿತ್ತು. ಆ ಬಳಿಕ ಕುಟುಂಬ ಯೋಜನೆಯಂಥ ಸೌಮ್ಯ ಕ್ರಮಗಳನ್ನು ಜಾರಿಗೆ ತಂದರೂ ಇದರಿಂದ ನಿರೀಕ್ಷಿತ ಫ‌ಲ ದೊರಕಿಲ್ಲ. 1992ರಲ್ಲಿ ಆಗಿನ ಕೇರಳದ ಮುಖ್ಯಮಂತ್ರಿ ಕೆ. ಕರುಣಾಕರನ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಎರಡು ಮಕ್ಕಳ ನಿಯಮವನ್ನು ಜಾರಿಗೆ ತರಲು ಸಂಸತ್‌ನಲ್ಲಿ ಶಾಸನ ರಚಿಸುವ ಸಲಹೆ ಮಾಡಿತ್ತು. ಆದರೆ ಇದು ಕಾರ್ಯಗತಗೊಳ್ಳಲಿಲ್ಲ. ಅನಂತರ 2016ರಲ್ಲಿ ಮಧ್ಯ ಪ್ರದೇಶದ ಸಂಸದ ಪ್ರಹ್ಲಾದ್‌ ಸಿಂಗ್‌ ಜನಸಂಖ್ಯೆಯನ್ನು ನಿಯಂತ್ರಿಸುವ ಮಸೂದೆಯನ್ನು ಮಂಡಿಸಿದ್ದರು. ಈ ಮಸೂದೆ ಚರ್ಚೆಗೇ ಬರಲಿಲ್ಲ. ಗುಜರಾತ್‌ ಸೇರಿ ಕೆಲವು ರಾಜ್ಯಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರನ್ನು ಚುನಾವಣೆಗೆ ಸ್ಪರ್ಧಿಸುವ ಕಾನೂನುಗಳಿದ್ದರೂ ಇದು ಪ್ರಾದೇಶಿಕವಾಗಿ ಮಾತ್ರ ಜಾರಿಯಲ್ಲಿದೆ. ಇಡೀ ದೇಶಕ್ಕೆ ಸಂಬಂಧಿಸಿದಂತೆ ಜನಸಂಖ್ಯೆಯನ್ನು ನಿಯಂತ್ರಿಸುವ ಕಾನೂನು ರಚನೆ ಇನ್ನೂ ಆಗಿಲ್ಲ.

Advertisement

ಕುಟುಂಬಕ್ಕೊಂದೇ ಮಗು ಎಂಬ ನೀತಿಯನ್ನು ಜಾರಿಗೆ ತರತಂದರೆ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಎಂಬ ವಾದವಿದೆ. ಆದರೆ ದೀರ್ಘಾವಧಿಯಲ್ಲಿ ಇದು ಚೀನಾ ಎದುರಿಸಿದಂಥ ಸಮಸ್ಯೆಗೆ ಎಡೆಮಾಡಿಕೊಡುವ ಸಾಧ್ಯತೆಯೂ ಇದೆ. ಚೀನಾದಲ್ಲಿ ಒಂದೇ ಮಗು ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಪರಿಣಾಮವಾಗಿ ಯುವಕರ ಸಂಖ್ಯೆ ಕಡಿಮೆಯಾಗಿ, ವೃದ್ಧರ ಸಂಖ್ಯೆ ಹೆಚ್ಚಾಗಿತ್ತು. ದುಡಿಯುವ ಪ್ರಾಯದ ಜನರಿಲ್ಲದೆ ಚೀನಾ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಜನಸಂಖ್ಯೆ ನಿಯಂತ್ರಣ ಹಲವು ಆಯಾಮಗಳನ್ನೊಗೊಂಡಿರುವ ಸೂಕ್ಷ್ಮ ವಿಚಾರ. ಯಾವುದೇ ಧಾರ್ಮಿಕ ಮತ್ತು ಸಾಮಾಜಿಕ ಸಂಘರ್ಷಕ್ಕೆ ಅವಕಾಶ ಕೊಡದಂಥ ತಟಸ್ಥ ನೀತಿಯನ್ನು ಜಾರಿಗೆ ತರುವುದು ಸದ್ಯದ ಅಗತ್ಯ. ಮೋದಿ ವ್ಯಕ್ತಪಡಿಸಿದ ಕಳವಳವನ್ನು ಈ ದೃಷ್ಟಿಯಿಂದ ಗ್ರಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next