Advertisement

ಜನಸಂಖ್ಯೆ ನಿಯಂತ್ರಣ ಎಲ್ಲರ ಜವಾಬ್ದಾರಿ

12:32 PM Jul 16, 2019 | Team Udayavani |

ಯಾದಗಿರಿ: ನಮ್ಮ ದೇಶದ ಜನಸಂಖ್ಯೆಯು ಶರವೇಗದಲ್ಲಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದರೂ ಅಚ್ಚರಿಪಡಬೇಕಿಲ್ಲ. ಆದ್ದರಿಂದ ಸರ್ಕಾರದ ಕುಟುಂಬ ಕಲ್ಯಾಣ ಯೋಜನೆಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ಎಸ್‌. ಪಾಟೀಲ ಹೇಳಿದರು.

Advertisement

ನಗರದ ಡಾನ್‌ ಬೋಸ್ಕೊ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಂಖ್ಯೆ ನಿಯಂತ್ರಣದ ಕುಟುಂಬ ಕಲ್ಯಾಣ ಯೋಜನೆಗಳಲ್ಲಿ ಶಾಶ್ವತ ವಿಧಾನಗಳು ಹಾಗೂ ತಾತ್ಕಾಲಿಕ ವಿಧಾನಗಳು ಎಂದು ವಿಂಗಡಿಸಿದ್ದು, ಅವುಗಳಲ್ಲಿ ಟಿಬೋಕ್ಟಮಿ, ಲ್ಯಾಪ್ರೋಸ್ಕೋಪಿ ಮತ್ತು ವ್ಯಾಸೆಕ್ಟಮಿ ಶಾಶ್ವತ ವಿಧಾನಗಳಾಗಿವೆ. ನುಂಗುವ ಮಾತ್ರೆ, ನಿರೋಧ ಬಳಕೆ ಮತ್ತು ವಂಕಿ ಅಳವಡಿಕೆಯಂತಹ ತಾತ್ಕಾಲಿಕ ವಿಧಾನಗಳ ಮೂಲಕವೂ ದಂಪತಿಗಳಲ್ಲಿ ಅಂತರದ ಹೆರಿಗೆ ಕುರಿತು ತಿಳಿವಳಿಕೆ ನೀಡಿದಲ್ಲಿ ಜನಸಂಖ್ಯೆ ನಿಯಂತ್ರಿಸಬಹುದು ಎಂದು ತಿಳಿಸಿದರು.

ಜನಸಂಖ್ಯೆ ಹೆಚ್ಚಳದಿಂದ ಎಲ್ಲರಿಗೂ ಶಿಕ್ಷಣ ಕೊರತೆ, ನೀರಿನ ಕೊರತೆ, ಆಹಾರದ ಕೊರತೆ, ಆರೋಗ್ಯದ ನಿರ್ವಹಣೆಯ ಕೊರತೆಯಿಂದಾಗಿ ಸಮಾಜವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಮುದಾಯದ ಎಲ್ಲರೂ ಕುಟುಂಬ ಕಲ್ಯಾಣ ಕಾರ್ಯಕ್ರಮವನ್ನು ಅಳವಡಿಸಿಕೊಂಡು ಜನಸಂಖ್ಯಾ ನಿಯಂತ್ರಣ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಜನಸಂಖ್ಯಾ ಸ್ಫೋಟದಿಂದ ಸಮಾಜದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ, ಹಲವಾರು ಕುಟುಂಬಗಳಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ಸಿಗದೇ ವಂಚಿತರಾಗುತ್ತಾರೆ. ಕಾರಣ ಚಿಕ್ಕ ಕುಟುಂಬ, ಸುಖೀಃ ಕುಟುಂಬ, ನಾವಿಬ್ಬರು ನಮಗೊಬ್ಬರು ಎನ್ನುವ ಘೋಷಣೆಗಳಂತೆ ನಡೆದುಕೊಂಡಲ್ಲಿ ದೇಶವು ಒಳ್ಳೆಯ ದಿಕ್ಕಿನೆಡೆಗೆ ಸಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಆರ್‌.ಸಿ.ಎಚ್ ಅಧಿಕಾರಿ ಡಾ| ಲಕ್ಷ್ಮೀಕಾಂತ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಗುರುರಾಜ ಹಿರೇಗೌಡರ, ತಾಲೂಕು ಆರೋಗ್ಯ ಅಧಿಕಾರಿ ಡಾ| ಹಣಮಂತರೆಡ್ಡಿ, ಡಾ| ಉಮೇಶ, ಪಾಧರ್‌ ಅಂಟೋನಿ ಫ್ರಾನ್ಸ್‌ಸ್‌, ಪಾಧರ್‌ ಜಿ., ಕೆ.ಸಿ. ಮ್ಯಾಥು, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ, ಆರೋಗ್ಯ ಮೇಲ್ವಿಚಾರಕ ಸತ್ಯನಾರಾಯಣ, ಹಿರಿಯ ಆರೋಗ್ಯ ಸಹಾಯಕ ಗಂಗಾಧರ, ಕಿರಿಯ ಆರೋಗ್ಯ ಸಹಾಯಕರಾದ ನಾಗಣ್ಣ, ಭಾಗಪ್ಪ ಭಾಗವಹಿಸಿದ್ದರು.

Advertisement

ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಸ್‌.ಬಿ. ಪಾಟೀಲ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ನಿರೂಪಣೆ ಮಾಡಿದರು. ಹಿರಿಯ ಆರೋಗ್ಯ ಸಹಾಯಕ ಮಹಿಪಾಲರೆಡ್ಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next