Advertisement

ಬಡವರ ಕೆಲಸ ಶೀಘ್ರದಲ್ಲಿ ಮುಗಿಸಿ

03:44 PM Nov 29, 2018 | |

ರಾಮನಗರ: ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಅನಿತಾ ಕುಮಾರಸ್ವಾಮಿ ತಾಲೂಕು ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸುವುದರ ಮೂಲಕ ಅಧಿಕಾರಿಗಳೊಂದಿಗೆ ಚೊಚ್ಚಲ ಸಭೆಯನ್ನು ನಡೆಸಿದರು.

Advertisement

 ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಡವರ ಕೆಲಸವನ್ನು ಶೀಘ್ರದಲ್ಲಿಯೇ ಮಾಡಿಕೊಡಬೇಕು. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಡವರಿಂದ ಏನನ್ನು ನಿರೀಕ್ಷಿಸಬೇಡಿ ಎಂದು ಹೇಳಿದ್ದೇನೆ ಎಂದರು. 

ಅಭಿವೃದ್ಧಿಯ ಮಾಹಿತಿ ಸಂಗ್ರಹ: ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಭಿವೃದ್ಧಿ ವಿಚಾರದಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ವಿಶೇಷವಾಗಿ ಕುಡಿಯುವ ನೀರು ಸರಬರಾಜು, ರಸ್ತೆ ದುರಸ್ತಿ, ನಿರ್ಮಾಣ, ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ನಗರ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. 

ವಿವಿಧ ಬೇಡಿಕೆ ಈಡೇರಿಕೆಗೆ ಮನವಿ: ಈ ವೇಳೆ ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜ್‌ ಅವರು ವಿವಿಧ ಬೇಡಿಕೆ ಈಡೇರಿಸುವಂತೆ ಶಾಸಕಿ ಅನಿತಾ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು. ರಾಮನಗರವನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ದೇವೇಗೌಡ ವಾಣಿಜ್ಯ ಸಂಕಿರ್ಣದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ವಿಶ್ರಾಂತಿ ಗೃಹಕ್ಕೆ ಕಟ್ಟಡ ನಿರ್ಮಿಸಬೇಕು.

ಕೃಷಿ, ರೇಷ್ಮೆ ತೋಟಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಮಿನಿ ವಿಧಾನಸೌಧ ಹಾಗೂ ಕೆಂಗಲ್‌ ಹನುಮಂತಯ್ಯ ಅಭಿವೃದ್ಧಿ ಭವನಕ್ಕೆ ಲಿಫ್ಟ್ ವ್ಯವಸ್ಥೆ ಕಲ್ಪಿಸಬೇಕು. ಕೆಂಪೇಗೌಡದೊಡ್ಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೈಲಾಂಚದ ಮೊರಾರ್ಜಿ ದೇಸಾಯಿ ಶಾಲೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಕೆಲವು ವಿದ್ಯಾರ್ಥಿ ನಿಲಯಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು.  ಅಲ್ಲದೆ, ಮೂಲ ಸೌಲಭ್ಯ ಕಲ್ಪಿಸಬೇಕು. ಈ ಎಲ್ಲಾ ಕಾಮಗಾರಿಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ಕೊಡಿಸಬೇಕು ಎಂದು ಮನವಿ ಮಾಡಿದರು.

Advertisement

ಶಾಸಕಿ ಭೇಟಿಗೆ ಅವಕಾಶ ನೀಡಿಲ್ಲ: ನಗರದ 26ನೇ ವಾರ್ಡ್‌ ಕೆಲವು ಮಹಿಳೆಯರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಲು ಮಿನಿ ವಿಧಾನಸೌಧದ ಬಳಿ ಜಮಾಯಿಸಿದ್ದರು. ಇದನ್ನು ಕಂಡ ಕೆಲ ಜೆಡಿಎಸ್‌ ಮುಖಂಡರು ನೂತನ ಶಾಸಕರಿಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಅವರನ್ನು ಮುಖ್ಯ ಮಂತ್ರಿಗಳ ವಿಶೇಷ ಕಾರ್ಯಲಕ್ಕೆ ಬರುವಂತೆ ಪುಸಲಾಯಿಸಿ ಅಲ್ಲಿಗೆ ಕಳುಹಿಸಿದರು. ನೊಂದ ಮಹಿಳೆಯರು ಶಾಸಕರೊಡನೆ ತಮ್ಮ ನೋವು ತೋಡಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ ಎಂದು ಆ ಮಹಿಳೆಯರು ದೂರಿದ್ದಾರೆ.

ಸಭೆಯಲ್ಲಿ ಮಾಗಡಿ ಶಾಸಕ ಎ.ಮಂಜು, ತಾಪಂ ಸದಸ್ಯರಾದ ಲಕ್ಷ್ಮೀಕಾಂತ, ವರಲಕ್ಷ್ಮೀ, ಎಸ್‌ .ಪಿ.ಜಗದೀಶ್‌, ಭದ್ರಯ್ಯ, ರೇಣುಕಾ ಪ್ರಸಾದ್‌, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಸಿಇಒ ಬಾಬು, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ ಮುಂತಾದವರು ಹಾಜರಿದ್ದರು. ಸಭೆಯ ನಂತರ ಶಾಸಕರು ಕೆಂಗಲ್‌ ಹನುಮಂತಯ್ಯ ಅಭಿವೃದ್ಧಿ ಭವನದಲ್ಲಿರುವ ಮುಖ್ಯಮಂತ್ರಿಗಳ ವಿಶೇಷ ಕಚೇರಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ತಾಜ್‌ ಹೋಟೆಲ್‌ನಿಂದ ಸಿಎಂ ಆಡಳಿತ ನಡೆಸಿಲ್ಲ ರಾಮನಗರ: ಮೈತ್ರಿ ಸರ್ಕಾರ ವಿಧಾನಸೌಧದಿಂದಲೇ ನಡೆಯುತ್ತಿದೆ. ತಾಜ್‌ ಹೋಟೆಲ್‌ನಿಂದಲ್ಲ. ಮುಖ್ಯಮಂತ್ರಿಗಳು ವಿಶ್ರಾಂತಿಗಾಗಿ ಮಾತ್ರ ಅಲ್ಲಿಗೆ ಹೋಗುತ್ತಾರೆ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ನಡೆದ ತಾಲೂಕು ಕೆಡಿಪಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಅವರು ಬಹುತೇಕ ತಾಜ್‌ ಹೋಟೆಲ್‌ನಲ್ಲಿಯೇ ಇರುತ್ತಾರೆ. ಸರ್ಕಾರ ಅಲ್ಲಿಂದಲೇ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸೌಧಕ್ಕೂ ಜೆ.ಪಿ.ನಗರದ ಮನೆಗೂ ದೂರವಿದೆ. ಸಿಎಂ ಕುಮಾರಸ್ವಾಮಿ ಅವರಿಗೆ ಕೆಲವೊಮ್ಮೆ ಮಧ್ಯಾಹ್ನದ ವೇಳೆ ವಿಶ್ರಾಂತಿ ಬೇಕು. ಅದ್ದರಿಂದ ಊಟ ಮಾಡಿ ವಿಶ್ರಾಂತಿಗೆ ತಾಜ್‌ ಹೋಟೆಲ್‌ನಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಮತ್ತೆ ವಿಧಾನಸೌಧಕ್ಕೆ ಮರಳುತ್ತಾರೆ. ಅಲ್ಲದೆ, ಅವರಿಗೆ ಸಮಯ ಇರುವುದಿಲ್ಲ. ಯಾವಾಗಲೂ ಬೆಂಗಳೂರಿನಲ್ಲಿಯೇ ಇರುತ್ತಾರೆ. ಅದಕ್ಕೆ ಬರೀ ಅಪಪ್ರಚಾರ ಮಾಡುತ್ತಿದ್ದಾರೆ. ಮನೆಗೆ ಬಂದು ಹೋಗುವುದು ದೂರ ಅಲ್ಲವೇ ಎಂದರು. 

ತಾವು ಹಾಗೂ ತಮ್ಮ ಮಗ ತಾಜ್‌ ಹೋಟೆಲ್‌ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ದಿನಕ್ಕೆ ಒಂದು ಲಕ್ಷ ಬಾಡಿಗೆ ಕಟ್ಟುತ್ತಾರೆ ಎಂಬ ಪ್ರಶ್ನೆಗೆ ಅಯ್ಯೋ ದೇವರೇ ಎಲ್ಲಾ ಸುಳ್ಳು. ನಾವು ಅಲ್ಲಿಗೆ ಹೋಗುವುದೇ ಇಲ್ಲ. ಜೆ.ಪಿ.ನಗರ ಮನೆಯಲ್ಲೇ ನಾವು ಇರುತ್ತೇವೆ ಅಷ್ಟೇ ಎಂದು ಸ್ಪಷ್ಟ ಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next