Advertisement

ಸುಳ್ಳಾಯ್ತು ಪಾಂಟಿಂಗ್‌ ಭವಿಷ್ಯ!

12:40 AM Jan 26, 2019 | |

ಆಸ್ಟ್ರೇಲಿಯ ಕ್ರಿಕೆಟ್‌ ತಂಡವನ್ನು ಅದರದೇ ನೆಲದಲ್ಲಿ ಬಗ್ಗುಬಡಿದ ಭಾರತ ಕ್ರಿಕೆಟ್‌ ತಂಡದ ಸಾಧನೆ ಅಮೋಘ. ಈ ಗೆಲುವು ನಮಗೆ ಸುಲಭವಾಗೇನೂ ದಕ್ಕಿಲ್ಲ. ಆದರೂ ಈಗಿನ ಆಸ್ಟ್ರೇಲಿಯ ತಂಡಕ್ಕೆ ಹೋಲಿಸಿದರೆ ಭಾರತ ತಂಡವೇ ಬಲಿಷ್ಠವಾಗಿ ಹೊರಹೊಮ್ಮಿತು. 

Advertisement

ಟೆಸ್ಟ್‌ ಸರಣಿ ಆರಂಭವಾಗುವ ಮೊದಲು ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಭವಿಷ್ಯ ನುಡಿದಿದ್ದರು. ಈ ಸರಣಿಯನ್ನು ಆಸ್ಟ್ರೇಲಿಯ 2-1 ರಿಂದ ಜಯಿಸಲಿದೆ ಮತ್ತು ಉಸ್ಮಾನ್‌ ಖವಾಜಾ ಈ ಸರಣಿಯಲ್ಲಿ ಅಧಿಕ ರನ್‌ ಗಳಿಸುತ್ತಾರೆ ಎಂದಿದ್ದರು. ಆದರೆ ಆಗಿದ್ದೇ ಬೇರೆ. ಅವರು ಹೇಳಿದ ಅಂತರದಲ್ಲಿ ಗೆದ್ದಿದ್ದು ಭಾರತ. (ಹವಾಮಾನ ಸಹಕರಿಸಿದ್ದರೆ 3-1 ರಿಂದ ಭಾರತ ಜಯಿಸುವ ಸಾಧ್ಯತೆ ಇತ್ತು¤). ಇದರರ್ಥ ಪಾಂಟಿಂಗ್‌ ಕೂಡ ತಮ್ಮ ತಂಡದ ದೌರ್ಬಲ್ಯ, ಭಾರತ ತಂಡದ ಶಕ್ತಿ ಗುರುತಿಸುವಲ್ಲಿ ವಿಫ‌ಲರಾದರು. ಮೊದಲೇ ಆಸಿಸ್‌ ಕ್ರಿಕೆಟ್‌ ತಂಡ ಡೆವಿಡ್‌ ವಾರ್ನರ್‌ ಮತ್ತು ಸ್ಟೀವ್‌ ಸ್ಮಿತ್‌ ಸೇವೆಯಿಂದ ವಂಚಿತವಾಗಿ ಬಹಳ ದುರ್ಬಲವಾಗಿ ಗೋಚರಿಸಿತು.

ಆಸ್ಟ್ರೇಲಿಯ ಇರಲಿ, ಭಾರತವಿರಲಿ ಅಥವಾ ಇನ್ನಾವುದೇ ತಂಡವಿರಲಿ. ತಮ್ಮ ನೆಲದಲ್ಲಿ ಬಲಿಷ್ಠವಾಗಿಯೇ ಇರುತ್ತವೆ. ಆದರೆ ಇಂದು ಆಸ್ಟ್ರೇಲಿಯ ತಂಡ ಸೋಲಿಸಲಾಗದ ತಂಡವಾಗೇನೂ ಉಳಿದಿಲ್ಲ. ಮೊದಲು ವಿಶ್ವ ಕ್ರಿಕೆಟ್‌ ಅನ್ನು ವಿಂಡೀಸ್‌ ಆಳಿದರೆ, ನಂತರ ಆಸ್ಟ್ರೇಲಿಯ ಪ್ರಭುತ್ವ ಸ್ಥಾಪಿಸಿತ್ತು. ಇದಕ್ಕೆ ಕಾರಣ ಆ ತಂಡಕ್ಕೆ ಅಪ್ರತಿಮ ಪ್ರತಿಭಾವಂತರು ಆಯ್ಕೆಯಾಗುತ್ತಿದ್ದರು. ಆದರೆ ಇಂದು ಗುಣಮಟ್ಟದ ಹಾಗೂ ವಿಶ್ವದರ್ಜೆಯ ಆಟಗಾರರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಆಸ್ಟ್ರೇಲಿಯ ತಂಡ ಸೋಲಿನತ್ತ ಮುಖ ಮಾಡಿ ನಿಂತಿದೆ.

ಆಸ್ಟ್ರೇಲಿಯ ವಿರುದ್ಧ 71 ವರ್ಷದಿಂದ ಸಾಧಿಸಲಾಗದ ಸರಣಿ ಜಯವನ್ನು ಕೊಹ್ಲಿ ಪಡೆ ಪಡೆಯುವಲ್ಲಿ ಯಶಸ್ವಿಯಾಗಿರುವುದರ ಹಿಂದೆ ಅನೇಕ ಕಾರಣಗಳಿರಬಹುದು. ಅದರಲ್ಲಿ ಪ್ರಮುಖ ಕಾರಣ ತಂಡದ ಎಲ್ಲ ಸದಸ್ಯರಲ್ಲಿದ್ದ ಈ ಬಾರಿ ಗೆಲ್ಲಲೇಬೇಕೆಂಬ ತುಡಿತ. ಈ ಸರಣಿ ಭಾರತಕ್ಕೆ ಒಲಿಯುವಲ್ಲಿ ಪೂಜಾರ ರನ್‌ ಹೊಳೆ ಮತ್ತು ಬೂಮ್ರಾ ವಿಕೆಟ್‌ ಬೇಟೆ, ಇತರ ಬೌಲರ್‌ಗಳಿಂದ ನಿರೀಕ್ಷಿತ ಬೌಲಿಂಗ್‌ ಪ್ರದರ್ಶನ ಪ್ರಮುಖ ಕಾರಣ ಎನ್ನಬಹುದು.

ಪೂಜಾರ ಸಾಧನೆ
“ಟೆಸ್ಟ್‌ ಸ್ಪೆಷಲಿಸ್ಟ್‌’ ಎಂದೇ ಗುರುತಿಸಲ್ಪಟ್ಟಿರುವ ಚೇತೇಶ್ವರ ಪೂಜಾರ, ಆಸ್ಟ್ರೇಲಿಯ ನೆಲದಲ್ಲಿ ಆಡಲಾದ 4 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆಡಿದ 7 ಇನ್ನಿಂಗ್ಸ್‌ಗಳಲ್ಲಿ 521 ರನ್‌ ಗಳಿಸಿರುವ ಇವರು ಒಂದರ ಹಿಂದೆ ಒಂದರಂತೆ 3 ಶತಕ ಗಳಿಸಿದ್ದು ಅವರ ಸಾಧನೆಗೆ ಹಿಡಿದ ಕನ್ನಡಿ.

Advertisement

ಟೆಸ್ಟ್‌ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದ ಆಟಗಾರನ ಸ್ಥಾನ ಬಹಳ ಮಹತ್ವದ್ದಾಗಿರುತ್ತದೆ. ಆರಂಭಿಕ ಆಟಗಾರರು ವಿಫ‌ಲರಾದರೆ 3ನೇ ಕ್ರಮಾಂಕದ ಆಟಗಾರನ ಮೇಲೆ ಬಹಳ ಒತ್ತಡ ಬೀಳುತ್ತದೆ. ಈ ಸರಣಿಯಲ್ಲಿ ಆಗಿದ್ದೂ ಇದೇ.ಎಲ್ಲ 4 ಟೆಸ್ಟ್‌ಗಳಲ್ಲೂ ಭಾರತದ ಆರಂಭಿಕ ಆಟಗಾರರು ಉತ್ತಮ ಆರಂಭ ನೀಡುವಲ್ಲಿ ಸಂಪೂರ್ಣ ವಿಫಲವಾದರು. ಅದರಲ್ಲೂ ಮೊದಲ 2 ಟೆಸ್ಟ್‌ಗಳಲ್ಲಿ ಕೆ.ಎಲ್‌. ರಾಹುಲ್‌ ಮತ್ತು ಮುರಳಿ ವಿಜಯ್‌ ನಿನ್ನೆ ಮೊನ್ನೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವಂತೆ ಗೋಚರಿಸಿದರು. ಕೊನೆಗೆ ನಮ್ಮವರೇ ಆದ‌ ಮಯಾಂಕ್‌ ಅಗರ್ವಾಲ್‌ ತಂಡವನ್ನು ಸೇರಿದ ನಂತರ ಉತ್ತಮ ಆರಂಭ ಒದಗಿಸಿ ಪೂಜಾರ ಮೇಲಿನ ಒತ್ತಡ ಸ್ವಲ್ಪ ತಗ್ಗಿಸಿದರು. ಸರಣಿಯಲ್ಲಿ ಪೂಜಾರರ ಸ್ಟ್ರೆ çಕ್‌ ರೇಟ್‌ ಕೂಡ ಉತ್ತಮವಾಗಿಯೇ ಇತ್ತು. ಭಾರತ ತಂಡ ಆಸ್ಟ್ರೇಲಿಯದಲ್ಲಿ ಜಯ ಗಳಿಸುವಲ್ಲಿ ಪೂಜಾರ ಕೊಡುಗೆ ಅತಿ ಮುಖ್ಯವಾಗಿ ಕಂಡು ಬಂತು. ಪೂಜಾರ ರನ್‌ ಗಳಿಸಿದಾಗೆಲ್ಲ ಭಾರತ ತಂಡ ಜಯ ಗಳಿಸಿತು. ಅವರು 2ನೇ ಟೆಸ್ಟ್‌ನಲ್ಲಿ ವಿಫ‌ಲರಾದಾಗ ತಂಡ ಸೋಲುವಂತಾಯಿತು.

ಬೌಲರ್‌ಗಳ ಮಿಂಚು
ಆಸೀಸ್‌ ನೆಲದಲ್ಲಿ ಭಾರತ ತಂಡದ ವೇಗ ಮತ್ತು ಸ್ಪಿನ್‌ ಬೌಲರ್‌ಗಳು ತಂಡಕ್ಕೆ ಅಗತ್ಯವಿದ್ದ ಸಂದರ್ಭಗಳಲ್ಲಿ ವಿಕೆಟ್‌ ಬೇಟೆಯಾಡಿ ಗೆಲುವಿನಲ್ಲಿ ಮಹತ್ತರ ಕಾಣಿಕೆ ನೀಡಿದರು. ಜಸ್‌ಪ್ರಿತ್‌ ಬೂಮ್ರಾ ಸರಣಿಯಲ್ಲಿ 21 ಹುದ್ದರಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಬೂಮ್ರಾಗೆ ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜಾ, ಕುಲದೀಪ ಯಾದವ್‌, ಅಶ್ವಿ‌ನ್‌ ಬೆನ್ನೆಲುಬಾಗಿ ನಿಂತು ಬೌಲಿಂಗ್‌ ವಿಭಾಗಕ್ಕೆ ಶಕ್ತಿ ತುಂಬಿದರು. ಬೂಮ್ರಾ ಅವರನ್ನು ಎದುರಿಸುವಾಗ ಆಸೀಸ್‌ ದಾಂಡಿಗರು ತಿಣುಕಾಡಿದರು. ಅಲ್ಲದೆ ಉಳಿದ ಬೌಲರ್‌ಗಳು ಇನ್ನೊಂದು ತುದಿಯಿಂದ ನಿರಂತರವಾಗಿ ಆಸೀಸ್‌ ದಾಂಡಿಗರ ಮೇಲೆ ಒತ್ತಡ ಹೇರಿದ್ದು ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಆರಂಭಿಕರದ್ದೇ ತಲೆನೋವು 
ಸರಣಿ ಗೆದ್ದರೂ ಭಾರತ ತಂಡ ಪರಿಪೂರ್ಣ ಆಟವನ್ನೇನೂ ಆಡಿಲ್ಲ. ಇಲ್ಲಿಯೂ ಅನೇಕ ನ್ಯೂನತೆಗಳು ಕಂಡು ಬಂದವು. ಆರಂಭಿಕ ಜೋಡಿಯ ವೈಫಲ್ಯ ತಂಡವನ್ನು ಸರಣಿಯುದ್ದಕ್ಕೂ ಕಾಡಿತು. ಅದರಲ್ಲೂ ಮೊದಲೆರಡು ಟೆಸ್ಟ್‌ಗಳಲ್ಲಿ ಆರಂಭಿಕರಾಗಿ ಆಡಿದ ರಾಹುಲ್‌ ಮತ್ತು ಮುರಳಿ ವಿಜಯ್‌ ಸಂಪೂರ್ಣ ವಿಫ‌ಲರಾದರು. ರನ್‌ ಗಳಿಸುವುದಿರಲಿ, ಕೊನೆ ಪಕ್ಷ 15   -20 ಓವರ್‌ಗಳ ಕಾಲವಾದರೂ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು. ಯಾವುದೇ ತಂಡ ಯಶಸ್ವಿಯಾಗಬೇಕಾದರೆ ಅದರ ಆರಂಭ ಉತ್ತಮವಾಗಿರಲೇಬೇಕು. ಆದರೆ ಈ ಸರಣಿಯಲ್ಲಿ ಭಾರತ ತಂಡದ ಆರಂಭ ಮಾತ್ರ ಭದ್ರ ಅಡಿಪಾಯ ಹಾಕಿಕೊಡುವಲ್ಲಿ ಸಂಪೂರ್ಣ ವಿಫ‌ಲವಾಯಿತು. ಮಯಾಂಕ ಅಗರ್ವಾಲ್‌ ಬಂದ ನಂತರ ತಂಡದ ಆರಂಭ ಸ್ಪಲ್ಪ ಸುಧಾರಣೆ ಕಂಡಿತು. ಪೂಜಾರ ಹಾಗೂ ಬೌಲರ್‌ಗಳು ಸಾಧನೆ ಆರಂಭಿಕರ ವೈಫಲ್ಯವನ್ನು ಮರೆ ಮಾಚಿದಂತೆ ಕಂಡರೂ ರಾಹುಲ್‌ ಹಾಗೂ ಮುರಳಿ ವಿಜಯ್‌ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲೇ ಇಲ್ಲ.

ಅಲ್ಲದೆ ಮಧ್ಯಮ ಕ್ರಮಾಂಕದಿಂದಲೂ ಹೇಳಿಕೊಳ್ಳುವಂತ ಸಾಧನೆ ಬರಲಿಲ್ಲ. ನಾಯಕ ವಿರಾಟ್‌ ಕೊಹ್ಲಿ ಮತ್ತು ರಹಾನೆ ಅವರಿಂದ ನಿರೀಕ್ಷಿತ ಆಟ ಕಂಡುಬರಲಿಲ್ಲ. 6ನೇ ಕ್ರಮಾಂಕದಲ್ಲಿ ಹನುಮ ವಿಹಾರಿಯನ್ನು ಆಡಿಸಲಾಯಿತು. ಅವರಿಂದ ಉತ್ತಮ ಇನ್ನಿಂಗ್ಸ್‌ ಬಂದರೂ ಆ ಸ್ಥಾನಕ್ಕೆ ಇನ್ನೂ ಪಕ್ವತೆ ಮತ್ತು ಗಟ್ಟಿತನದ ಅಗತ್ಯವಿದೆ. ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಬ್ಯಾಟ್‌ನಿಂದ ರನ್‌ ಹರಿದುಬಂದರೂ ವಿಕೆಟ್‌ ಕೀಪಿಂಗ್‌ ಸುಧಾರಿಸಬೇಕಾಗಿದೆ. ಇಲ್ಲದಿದ್ದರೆ ಆಟದ ಮುಖ್ಯ ಘಟ್ಟದಲ್ಲಿ ಅವರ ಕೀಪಿಂಗ್‌ ಎಡವಟ್ಟುಗಳಿಂದ ತಂಡ ಮುಜುಗರಕ್ಕೀಡಾಗುವ ಸಾಧ್ಯತೆಯೂ ಇಲ್ಲದಿಲ್ಲ.
ಇನ್ನು ಕೆಳ ಕ್ರಮಾಂಕದಲ್ಲಿ ರನ್‌ ಬರ ಕಂಡು ಬಂತು. 5-6 ವಿಕೆಟ್‌ ಬಿದ್ದ ನಂತರ ಉಳಿದವರಿಂದ 10  -20 ರನ್‌ ಮಾತ್ರ ಹರಿದು ಬಂದವು. ಇದು ತಂಡಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಕನಿಷ್ಠ ಪಕ್ಷ ಕೊನೆಯ ಮೂರು ನಾಲ್ಕು ವಿಕೆಟ್‌ಗಳಿಂದ 50 -60 ರನ್‌ಗಳಾದರೂ ತಂಡಕ್ಕೆ ಬರಬೇಕು. ಆಗ ಅದು ತಂಡಕ್ಕೆ ಬಹು ದೊಡ್ಡ ಶಕ್ತಿಯಾಗುವುದರಲ್ಲಿ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ತಂಡ ಈ ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಂಡು ವಿದೇಶಗಳಲ್ಲಿ ಗೆಲುವಿನ ಬೇಟೆ ಮುಂದುವರೆಸಲಿ ಎಂಬುದು ಕ್ರಿಕೆಟ್‌ ಪ್ರೇಮಿಗಳ ಆಶಯ.

ಗಿರೀಶ ಕುಲಕರ್ಣಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next