Advertisement

ಪಾಲಿಕ್ಲಿನಿಕ್‌ಗೆ ಬೇಕಿದೆ ಎಕ್ಸರೇ ಟ್ರೀಟ್‌ಮೆಂಟ್‌!

04:41 PM Aug 08, 2022 | Team Udayavani |

ಧಾರವಾಡ: ಸುಸಜ್ಜಿತ ಕಟ್ಟಡ ಉಂಟು, ಆದರೆ ನಿರ್ವಹಣೆಗಿಲ್ಲ ಸಿಬ್ಬಂದಿ. ವೈದ್ಯರುಂಟು ಆದರೆ ವೈದ್ಯರಿಗೆ ಸಹಾಯಕರಾದಡಿ ದರ್ಜೆಯ ಸಿಬ್ಬಂದಿ ಕೊರತೆ…ಇನ್ನು ಜಾನುವಾರುಗಳ ಮೂಳೆ ಮುರಿತದಂತಹ ಪ್ರಕರಣದಲ್ಲಿ ಎಕ್ಸರೇಗಾಗಿ ಬೇರೆಡೆ ಕಳುಹಿಸಲೇಬೇಕು. ರಕ್ತ ತಪಾಸಣಾ ಘಟಕವೂ ಇಲ್ಲ. ಇದಲ್ಲದೇ ಈ ಆಸ್ಪತ್ರೆಗೆ ಹೋಗಬೇಕೆಂದರೆ ಮಳೆಗಾಲದಲ್ಲಿ ಆಸ್ಪತ್ರೆಯ ಆವರಣದಲ್ಲಿ ಉಂಟಾಗುವ ಕೆಸರುಗದ್ದೆಯಂತಹ ರಸ್ತೆ ದಾಟಲೇಬೇಕು.

Advertisement

ಇದು ಯಾವುದೋ ಗ್ರಾಮೀಣ ಭಾಗದ ಆಸ್ಪತ್ರೆಯ ಕಥೆಯಲ್ಲ. ನಗರದ ಹೃದಯ ಭಾಗದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯ ಎದುರೇ ಇರುವ ಪಾಲಿಕ್ಲಿನಿಕ್‌ನ ವ್ಯಥೆ. ಜಿಲ್ಲೆಯಲ್ಲಿ 2014ರಿಂದ ಜಿಲ್ಲಾಸ್ಪತ್ರೆ ಪರಿಕಲ್ಪನೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಡಿ ಪಾಲಿಕ್ಲಿನಿಕ್‌ ಆರಂಭಗೊಂಡು ಎಂಟು ವರ್ಷಗಳೇ ಸಂದಿದೆ. ಇದೀಗ ಸುಸಜ್ಜಿತ ಹೊಸ ಕಟ್ಟಡದಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕಾರ್ಯಾರಂಭ ಮಾಡಿರುವ ಈ ಕ್ಲಿನಿಕ್‌ ಗೆ ಕೆಲವೊಂದಿಷ್ಟು ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಸುಸಜ್ಜಿತ ಕಟ್ಟಡವಿದ್ದು, ಆದರೆ ಆಸ್ಪತ್ರೆಗೆ ಹೋಗಲು ಬೇಕಾದ ಸುಸಜ್ಜಿತ ರಸ್ತೆಯೇ ಇಲ್ಲ. ಮಳೆಗಾಲದಲ್ಲಿ ಆಸ್ಪತ್ರೆಯ ಆವರಣ ಕೆಸರು ಗದ್ದೆಯಂತಾಗುವುದು ಸಾಮಾನ್ಯವಾಗಿ ಬಿಟ್ಟಿದೆ.

ಪಾಲಿಕ್ಲಿನಿಕ್‌ ಏಳು-ಬೀಳು: ಪಾಲಿಕ್ಲಿನಿಕ್‌ಗೆ ಸುಸಜ್ಜಿತ ಕಟ್ಟಡ, ತಜ್ಞ ವೈದ್ಯರು ಹಾಗೂ ಎಕ್ಸರೆಯಂತಹ ಯಂತ್ರಗಳ ಕೊರತೆ ಇತ್ತು. 2017ರಲ್ಲಿ ಪಾಲಿ ಕ್ಲಿನಿಕ್‌ಗೆ ಹೊಸ ಸುಸಜ್ಜಿತ ಕಟ್ಟಡ ಮಂಜೂರು ಮಾಡಿ, 100 ಅಡಿ ಉದ್ದ ಹಾಗೂ 135 ಅಗಲದ ಜಾಗದಲ್ಲಿ ನಿರ್ಮಿಸಲು 2.15 ಕೋಟಿ ಅನುದಾನ ಒದಗಿಸಿತ್ತು. ಅದರನ್ವಯ ನಬಾರ್ಡ್‌ ಆರ್‌ಐಡಿಎಫ್‌ ಟ್ಯಾಂಚ್‌ 22ರ ಯೋಜನೆಯಡಿ 2.15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಾಲಿ ಕ್ಲಿನಿಕ್‌ನ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದರೂ ಟಿಸಿ ಅಳವಡಿಸಲು ಆಗಿರುವ ವಿಳಂಬದಿಂದ ಕಾರ್ಯಾರಂಭಕ್ಕೆ ಹೊಡೆತ ನೀಡಿತ್ತು. ಈ ಟಿಸಿ ಸಮಸ್ಯೆ ನಿವಾರಣೆಯಾಗಿ ಬರೋಬ್ಬರಿ 8 ತಿಂಗಳ ಮೇಲಾದರೂ ಇನ್ನೂ ಹೊಸ ಕಟ್ಟಡದಲ್ಲಿ ಪಾಲಿಕ್ಲಿನಿಕ್‌ ಕಾರ್ಯಾರಂಭವೇ ಮಾಡಿರಲಿಲ್ಲ. ಇದೀಗ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಹೊಸ ಕಟ್ಟಡದಲ್ಲಿ ಕ್ಲಿನಿಕ್‌ ಕಾರ್ಯಾರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದಾರೆ.

ಕೊರತೆ ನೀಗಲಿ: ಕ್ಲಿನಿಕ್‌ನಲ್ಲಿ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಯಂತ್ರವಿದ್ದು, ವೈದ್ಯಾಧಿಕಾರಿಗಳೇ ಕಾರ್ಯ ನಿರ್ವಹಣೆ ಮಾಡುತ್ತಿರುವ ಕಾರಣ ತೊಂದರೆಯಿಲ್ಲ. ಆದರೆ ಜಾನುವಾರುಗಳ ಮೂಳೆ ಮುರಿತದಂತಹ ಪ್ರಕರಣಗಳಲ್ಲಿ ಎಕ್ಸರೇ ಮಾಡಲು ಎಕ್ಸರೇ ಯಂತ್ರ ಇಲ್ಲ. ಹೀಗಾಗಿ ಬೇರೆಡೆ ಎಕ್ಸರೇ ಮಾಡಿಕೊಂಡು ಬರಲು ವೈದ್ಯರು ಸೂಚಿಸುತ್ತಿದ್ದು, ಜಾನುವಾರು ಮಾಲೀಕರು ಅಲೆದಾಡಬೇಕಿದೆ. ಇದಲ್ಲದೇ ರಕ್ತ ತಪಾಸಣಾ ಘಟಕವೂ ಇಲ್ಲ. ಅದಕ್ಕೆ ಬೇಕಾದ ಯಂತ್ರಗಳೂ ಇಲ್ಲ. ಇದರಿಂದ ಜಾನುವಾರುಗಳಲ್ಲಿನ ರೋಗಗಳ ನಿಖರತೆಗೆ ವೈದ್ಯಾಧಿಕಾರಿಗಳಿಗೂ ಸಂಕಷ್ಟ ಉಂಟಾಗಿದೆ.

ಸಿಬ್ಬಂದಿ ಕೊರತೆ

Advertisement

ಪಶುಗಳಿಗೆ ಔಷಧ ಶಾಸ್ತ್ರ, ಶಸ್ತ್ರಚಿಕಿತ್ಸೆ, ಬಂಜೆತನ ನಿವಾರಣೆ ಮತ್ತು ಪ್ರಸೂತಿ ಶಾಸ್ತ್ರ ಈ ಮೂರು ವಿಭಾಗದಲ್ಲಿ ತಜ್ಞ ವೈದ್ಯರನ್ನು ಕೊಡಬೇಕೆಂಬುದೇ ಈ ಪಾಲಿಕ್ಲಿನಿಕ್‌ ಉದ್ದೇಶ. ಸದ್ಯ ಈ ಮೂರು ವಿಭಾಗದಲ್ಲಿ ತಜ್ಞರ ಕಾರ್ಯನಿರ್ವಹಣೆಯಿಂದ ಜಾನುವಾರುಗಳಿಗೆ ಅನುಕೂಲ ಆಗಿದೆ. ಆದರೆ ಈ ತಜ್ಞರಿಗೆ ಸಹಾಯ ಮಾಡಲು ಸಿಬ್ಬಂದಿ ಕೊರತೆಯೇ ಬಹಳಷ್ಟಿದೆ. ಕ್ಲಿನಿಕ್‌ ಗೆ ನಾಲ್ಕು ಡಿ ದರ್ಜೆ ಸಿಬ್ಬಂದಿ ಹುದ್ದೆಯಿದ್ದು, ಒಂದೇ ಹುದ್ದೆ ಭರ್ತಿಯಿದೆ. ಎಕ್ಸರೇ ಹಾಗೂ ಪ್ರಯೋಗಾಲಯದ ಸಿಬ್ಬಂದಿಯೂ ಬೇಕಿದ್ದು, ವಾಹನ ಚಾಲಕ ಹುದ್ದೆಯೂ ಖಾಲಿ ಇದೆ.

ಚಾಲಕನಿಲ್ಲದ “ಪಶು ಸಂಜೀವಿನಿ’ ವಾಹನ

ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಶು ಸಂಜೀವಿನಿ ಎಂಬ ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನವನ್ನು ಈ ಪಾಲಿಕ್ಲಿನಿಕ್‌ಗೆ ಕೊಟ್ಟು 2-3 ವರ್ಷಗಳೇ ಆಗಿದೆ. ಆದರೆ ಈ ವಾಹನ ಮಾತ್ರ ಆಸ್ಪತ್ರೆ ಆವರಣ ಬಿಟ್ಟು ಹೊರಗಡೆ ಹೋಗಿಲ್ಲ. ಈ ವಾಹನ ಚಾಲಕ ಹುದ್ದೆ ಖಾಲಿ ಇದ್ದು, ವಾಹನ ಆಸ್ಪತ್ರೆ ಎದುರೇ ನಿಲ್ಲುವಂತಾಗಿದೆ. ಮಳೆ-ಗಾಳಿಯಿಂದ ವಾಹನ ನಿಂತಲ್ಲಿಯೇ ನಿಂತು ಹಾಳಾಗಿದ್ದರೂ ಚಾಲಕ ಹುದ್ದೆ ಭರ್ತಿ ಮಾಡಿ, ವಾಹನ ಕಾರ್ಯಾರಂಭಕ್ಕೆ ಮಾತ್ರ ಯಾರೂ ಮನಸ್ಸೇ ಮಾಡುತ್ತಿಲ್ಲ.

ಪಾಲಿಕ್ಲಿನಿಕ್‌ಗೆ ಬೇಕಾಗಿರುವ ಸಿಬ್ಬಂದಿ, ಎಕ್ಸರೇ ಯಂತ್ರಗಳ ಕೊರತೆ ನೀಗಿಸಲು ಇಲಾಖೆ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಈಡೇರಿದರೆ ಜಾನುವಾರುಗಳ ಚಿಕಿತ್ಸೆಗೆ ಮತ್ತಷ್ಟು ಅನುಕೂಲ ಆಗಲಿದೆ. –ಡಾ| ಜಂಬುನಾಥ ಆರ್‌. ಗದ್ದಿ, ಉಪನಿರ್ದೇಶಕರು, ಪಾಲಿಕ್ಲಿನಿಕ್‌, ಧಾರವಾಡ

-ಶಶಿಧರ್‌ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next