Advertisement

Mysore Dasara ವೇದಿಕೆಯಲ್ಲಿ ರಾಜಕೀಯ..; ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ

06:01 PM Oct 03, 2024 | Team Udayavani |

ಮೈಸೂರು: ದಸರಾ (Mysore Dasara) ವೈಭವಕ್ಕೆ ಗುರುವಾರ (ಅ3) ಖ್ಯಾತ ಸಾಹಿತಿ ಹಂ.ಪ. ನಾಗರಾಜಯ್ಯ ಅವರು ವಿದ್ಯುಕ್ತಚಾಲನೆ ನೀಡಿದರು. ಈ ವೇಳೆ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗಳ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರ ಹಾಕಿ ಕಟು ಪದಗಳಲ್ಲಿ ಟೀಕಾ ಪ್ರಹಾರ ನಡೆಸಿದೆ.

Advertisement

ಬಿಜೆಪಿ ಆಕ್ರೋಶ
”ನಾಡಹಬ್ಬ ದಸರಾ ರಾಜಕೀಯ ಕಪಿಮುಷ್ಟಿಯಿಂದ ಹೊರತಾಗಿರುವ ಒಂದು ಸಾಂಪ್ರದಾಯಕ ಆಚರಣೆ. ಆದರೆ ಇಂತಹ ಪವಿತ್ರವಾದ ನಾಡಹಬ್ಬ ದಸರಾದ ಉದ್ಘಾಟನೆಯ ವೇದಿಕೆಯನ್ನು ರಾಜಕೀಯಗೊಳಿಸುವ ವಿಚ್ಛಿದ್ರಕಾರಿ ಮನಸ್ಥಿತಿ ಭ್ರಷ್ಟ ಹಾಗೂ ಭಂಡ ಸಿದ್ದರಾಮಯ್ಯ ಮತ್ತವರ ಪಟಾಲಂದು. ದಸರಾ ಹಬ್ಬದ ಪಾವಿತ್ರ್ಯತೆಯೂ ಗೊತ್ತಿಲ್ಲದೆ ಎಲ್ಲದರಲ್ಲಿಯೂ ರಾಜಕಾರಣ ಮಾಡುವ ಕಾಂಗ್ರೆಸ್ಸಿಗರು ಈ ನಾಡಿಗಂಟಿದ ಕಳಂಕ. ಸಿದ್ದರಾಮಯ್ಯ ಅವರೆ, ದಸರಾ ಉದ್ಘಾಟನಾ ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡಬಾರದೆಂಬುದು ನಿಮ್ಮ ಆತ್ಮಸಾಕ್ಷಿಗೆ ತಿಳಿದಿಲ್ಲವೇ..??” ಎಂದು ಬಿಜೆಪಿ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದೆ.

ಜಿಟಿಡಿ ಹೇಳಿಕೆ; ಹೊಸ ರಾಜಕೀಯ ಪರಂಪರೆಗೆ ನಾಂದಿ ಎಂದ ಸಿದ್ದರಾಮಯ್ಯ
ಮೈಸೂರು ದಸರಾದ ಉದ್ಘಾಟನಾ ಸಮಾರಂಭದಲ್ಲಿ ಜೆಡಿಎಸ್‌ ಶಾಸಕರಾದ ಜಿ.ಟಿ. ದೇವೇಗೌಡ ಅವರು ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರ ಅನುಕಂಪದ ಮಾತನಾಡಿ ”ಎಫ್ಐಆರ್‌ ದಾಖಲಾದ ಮಾತ್ರಕ್ಕೆ ರಾಜೀನಾಮೆ ನೀಡುವುದಾರೆ ಬಿಜೆಪಿ – ಜೆಡಿಎಸ್‌ ನಾಯಕರು ವಿಧಾನಸೌಧದ ಮುಂದೆ ಸಾಲಾಗಿ ನಿಲ್ಲಬೇಕಾಗುತ್ತದೆ” ಎಂದರು.

ರಾಜಕೀಯ ವೈರಿಯಾಗಿದ್ದ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಣಿಸಿದ್ದ ಜೆಡಿಎಸ್ ನಾಯಕ ಜಿಟಿಡಿ ಅವರ ಹೇಳಿಕೆಯನ್ನು ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

ಸಿದ್ದರಾಮಯ್ಯ ಅವರ ಭಾಷಣದ ಪ್ರಮುಖಾಂಶಗಳು

”ಕೇವಲ ರಂಗು ರಂಗಿನ ಮಾತಿನ ಮೂಲಕ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಜನಪರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಚುನಾವಣ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಾನು ಮತ್ತು ಡಿ.ಕೆ.ಶಿವಕುಮಾರ್‌ ಅವರು ಚುನಾವಣೆಯಲ್ಲಿ ಜಯ ಗಳಿಸಿದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದೆವು. ಅದರಂತೆ ಚುನಾವಣೆಯಲ್ಲಿ ಜಯ ಗಳಿಸಿದ ಎಂಟೇ ತಿಂಗಳಲ್ಲಿ ಎಲ್ಲಾ 5 ಯೋಜನೆಗಳನ್ನು ಜಾರಿಗೊಳಿಸಿದ್ದೇವೆ” ಎಂದರು.

”ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ಆಶಯದಂತೆ ದುರ್ಬಲ ವರ್ಗದವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ 40 ರಿಂದ 50 ಸಾವಿರ ರೂಪಾಯಿ ಆರ್ಥಿಕ ನೆರವು ದೊರೆಯುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು ರೂ.2 ಸಾವಿರ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 1.40 ಕುಟುಂಬಗಳು ಉಚಿತ ವಿದ್ಯುತ್‌ ಸೌಲಭ್ಯ ಪಡೆಯುತ್ತಿವೆ. ಯುವ ನಿಧಿ ಯೋಜನೆಯಡಿ 1.82 ಲಕ್ಷ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾದಾರರು ಆರ್ಥಿಕ ಪ್ರಯೋಜನ ಪಡೆಯುತ್ತಿದ್ದಾರೆ” ಎಂದರು.

“ಈ ವರ್ಷ ಉತ್ತಮ ಮಳೆಯಾಗಿದ್ದು, ಇಡೀ ರಾಜ್ಯದ ರೈತರು ಸಂತೋಷದಿಂದ ಇದ್ದಾರೆ. ಮುಂಗಾರು ಬಿತ್ತನೆ ರಾಜ್ಯದಲ್ಲಿ 99 ಶೇ ಆಗಿದೆ. ಇನ್ನೂ ಹೆಚ್ಚು ಮಳೆಯಾಗಲಿ, ಹೆಚ್ಚು ಬೆಳೆಯಾಗಲಿ ನಮ್ಮ ನಿರೀಕ್ಷೆಗಿಂತ ಮೀರಿ ಬೆಳೆ ಬೆಳೆಯಲಿ ಎಂದು ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುತ್ತೇನೆ. ಮಳೆ – ಬೆಳೆ ಆದರೆ ಮಾತ್ರ ಜನರು ಸುಖ ಶಾಂತಿಯಿಂದ ಬದುಕಲು ಸಾಧ್ಯ.ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಅದ್ದೂರಿಯಾಗಿ ಮಾಡಲು ಸೂಚನೆ ನೀಡಿದ್ದೇನೆ. ದಸರಾ ನಾಡಹಬ್ಬವಾಗಬೇಕು, ಅಧಿಕಾರಿಗಳ ಹಬ್ಬವಾಗಬಾರದು. ಎಲ್ಲಾ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದರು.

”ಈ ಬಾರಿ ದಸರಾ ಮಹೋತ್ಸವಕ್ಕೆ ಹಂ.ಪ. ನಾಗರಾಜಯ್ಯ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಅವರಿಗೆ ಈ ಮೊದಲೇ ಈ ಅವಕಾಶ ದೊರೆಯಬೇಕಿತ್ತು. ಹಂ.ಪ. ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಅಪಾರ ಕೊಡುಗೆಯನ್ನು ಕನ್ನಡ ನಾಡಿನ ಜನ ಮರೆಯಲು ಸಾಧ್ಯವಿಲ್ಲ. ಅವರ ಆಯ್ಕೆ ಔಚಿತ್ಯಪೂರ್ಣ. ಕರ್ನಾಟಕ ಕಂಡ ಅಪರೂಪದ ಸಾಹಿತಿ ಅವರು. ಹಂ.ಪ. ನಾಗರಾಜಯ್ಯ ಅವರು ಮೌಲ್ಯಯುತ ಭಾಷಣ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರಕಾರಗಳನ್ನು ವಾಮಮಾರ್ಗಗಳಲ್ಲಿ ಕಿತ್ತು ಹಾಕುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಾಗಿದ್ದು, ಪ್ರಜಾಪ್ರಭುತ್ವ ಇನ್ನಷ್ಟು ಬಲಪಡಿಸಬೇಕು ಎಂದಿರುವುದು ಔಚಿತ್ಯಪೂರ್ಣವಾಗಿದೆ” ಎಂದರು.

”ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ.‌ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ನಿಮ್ಮೆಲ್ಲರ ಆಶೀರ್ವಾದ, ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವ ತನಕ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ. ಚಾಮುಂಡೇಶ್ವರಿ ತಾಯಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ” ಎಂದು ಸಿಎಂ ಹೇಳಿಕೆ ನೀಡಿದರು.

”ನನಗೆ ನ್ಯಾಯಾಲಯಗಳಲ್ಲಿ ನಂಬಿಕೆಯಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಗಾಂಧೀಜಿ ಅವರು ಹೇಳಿದಂತೆ ಆತ್ಮಸಾಕ್ಷಿಯ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದುದು. ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ ಇದೆ.ಪರಸ್ಪರರನ್ನು ಪ್ರೀತಿಸಬೇಕೆ ಹೊರತು ಯಾರನ್ನೂ ದ್ವೇಷಿಸಬಾರದು. ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸಿ ಮಾನವರಾಗಿ ಬಾಳುವ ಸಂದೇಶವನ್ನು ನೀಡಿವೆ” ಎಂದರು.

ಬಿಜೆಪಿ ಯಿಂದ ”ಆತ್ಮಸಾಕ್ಷಿ” ಪುಸ್ತಕ ಬಿಡುಗಡೆ

ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿರುವ ಬಿಜೆಪಿ ʼಆತ್ಮಸಾಕ್ಷಿ” ಪುಸ್ತಕ ಬಿಡುಗಡೆ ಎಂಬ ಪೋಸ್ಟರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ”ನೈತಿಕತೆ, ಆತ್ಮಸಾಕ್ಷಿ, ಪ್ರಾಮಾಣಿಕತೆ, ಪಾರದರ್ಶಕತೆ.. ಇಲ್ಲದೆ 40 ವರ್ಷಗಳ ಕಾಲ ಭಂಡತನ, ಮೊಂಡತನದಿಂದ ರಾಜಕಾರಣ ಮಾಡಿದ ಭ್ರಷ್ಟ ನಾಯಕನ ಆತ್ಮಕತೆಯ ʼಆತ್ಮಸಾಕ್ಷಿ” ಪುಸ್ತಕ ಬಿಡುಗಡೆಯಾಗಿದೆ. ಇದು 2024ರ ಅತ್ಯುತ್ತಮ ಕೃತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ!” ಎಂದು ಬರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next