Advertisement

ಮತ ಸೆಳೆಯಲು ಜಾತಿ, ಮತ, ಧರ್ಮ ಸಮಾವೇಶ

02:00 PM Feb 11, 2023 | Team Udayavani |

ಕೋಲಾರ: ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳು ಮತದಾರರ ಸೆಳೆಯಲು ವಿವಿಧ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತಿವೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ ಬಳಿಕ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಮತದಾರರನ್ನು ಅದರಲ್ಲೂ ಎಲ್ಲಾ ಜಾತಿ ಜನಾಂಗದ ಮತದಾರರ ಮೇಲೆ ಕಣ್ಣಿಟ್ಟು ಸಭೆ, ಸಮಾರಂಭಗಳನ್ನು ಆಯೋಜಿಸುತ್ತಿದೆ.

Advertisement

ಜಾತ್ಯತೀತ ಜನತಾದಳ ಮುಖಂಡ ಎಚ್‌ .ಡಿ.ಕುಮಾರಸ್ವಾಮಿ ಹಿಂದೊಮ್ಮೆ ಜಾತ್ಯತೀತತೆಗೆ ಅರ್ಥವೇನೆಂದು ಪ್ರಶ್ನಿಸಿ ವಿವಾದ ಸೃಷ್ಟಿಸಿಕೊಂಡಿದ್ದರು. ಆದರೆ, ಜಾತೀವಾರು ಮತಯಾಚಿಸಲು ಜನರನ್ನು ಪ್ರತ್ಯೇಕಿಸುವ ವಿಭಜಿಸುವ ರಾಜಕೀಯ ಪಕ್ಷಗಳಿಗೆ ಜಾತ್ಯತೀತತೆ ಒಗ್ಗುವುದಿಲ್ಲವೆಂಬುದನ್ನು ಕುಮಾರಸ್ವಾಮಿ ತಮ್ಮದೇ ಮಾತುಗಳಲ್ಲಿ ಹೇಳಿದ್ದಾರೆ ಎಂಬುದು ಅಷ್ಟೇ ಸತ್ಯವಾದ ಮಾತು.

ಜೆಡಿಎಸ್‌: ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಾ ರೆಂಬುದು ಖಚಿತವಾಗದಿರುವ ಹೊತ್ತಿನಲ್ಲೇ ಕೋಲಾರದಲ್ಲಿ ಒಕ್ಕಲಿಗರ ಪಕ್ಷವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜೆಡಿಎಸ್‌ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಿತ್ತು. ಈ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಮುಂದಾಗಿತ್ತು. ಅಲ್ಪಸಂಖ್ಯಾತರ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಕೋಲಾರ ಜಿಲ್ಲಾ ಅಂಜುಮಾನ್‌ ಅಧ್ಯಕ್ಷ ಜಮೀರ್‌ರನ್ನು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರಿಸಿಕೊಂಡಿತ್ತು. ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ನಂತರ ಜೆಡಿಎಸ್‌ ಮತ್ತಷ್ಟು ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ. ಇದೀಗ ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಜಾತೀವಾರು ಬಡಾವಣೆಗಳಲ್ಲಿ ಸಭೆಯನ್ನು ಆಯೋಜಿಸುತ್ತಾ ಮತದಾರರ ಒಲವು ಗಳಿಸುವ ಪ್ರಯತ್ನ ಮಾಡುತ್ತಿದೆ.

ಕಾಂಗ್ರೆಸ್‌: ಸಿದ್ದರಾಮಯ್ಯ 2022 ನ.13 ಕೋಲಾರಕ್ಕೆ ಮೊದಲ ಭೇಟಿ ಕೊಟ್ಟಾಗಲೇ ಹಿಂದೂ ದೇಗುಲ, ಚರ್ಚ್‌, ಮಸೀದಿಗಳಿಗೆ ಭೇಟಿ ವಿವಿಧ ಜನರನ್ನು ಸೆಳೆವ ತಂತ್ರಗಾರಿಕೆ ನಡೆಸಿದ್ದರು. ತೀರಾ ಇತ್ತೀಚಿಗೆ ಕೋಲಾರ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾಲ್ಕೈದು ಮಂದಿ ಶಾಸಕರು ಒಂದಿಬ್ಬರು ಮಾಜಿ ಶಾಸಕರು ಕಾಂಗ್ರೆಸ್‌ ಒಕ್ಕಲಿಗರ ಸಭೆ ನಡೆಸಿದ್ದು ವಿಶೇಷವಾಗಿತ್ತು. 150 ಇನ್ನೂರು ಮಂದಿ ಒಕ್ಕಲಿಗರ ಭಾಗವಹಿಸಿದ್ದ ಈ ಸಭೆಯ ಮೂಲಕ ತಮ್ಮ ನಾಯಕ ಸಿದ್ದರಾಮಯ್ಯರಿಗೆ ಒಕ್ಕಲಿಗರನ್ನು ನಿಮ್ಮಪರ ಒಗ್ಗೂಡಿಸುತ್ತಿದ್ದೇವೆ ಎಂಬ ಸಂದೇಶ ರವಾನಿಸಲು ಪ್ರಯತ್ನ ಪಟ್ಟಿದ್ದರು.

ಜಾತೀವಾರು ಮುಖಂಡರನ್ನು ಬೆಂಗಳೂರಿಗೆ ಕರೆದೊಯ್ದು ಸಿದ್ದರಾಮಯ್ಯರ ದರ್ಶನ ಮಾಡಿಸಿ ನಿಮ್ಮಪರ ನಾವಿದ್ದೇವೆ ಎಂಬ ವಾಗ್ಧಾನ ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಇದರ ಭಾಗವಾಗಿ ಅಲ್ಪಸಂಖ್ಯಾತ, ದಲಿತ, ಹಿಂದುಳಿದ, ಕ್ರೈಸ್ತ ವರ್ಗಗಳ ಮುಖಂಡರು ಸಿದ್ದರಾಮಯ್ಯರ ಭೇಟಿ ಮಾಡಿ ಬಂದಿದ್ದಾರೆ. ಫೆ.13 ವೇಮಗಲ್‌ನಲ್ಲಿ ಕಾಂಗ್ರೆಸ್‌ಮಹಿಳಾ ಸಮಾ ವೇಶ ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಬರುತ್ತಿರುವ ಸಿದ್ದರಾಮಯ್ಯ ವಿವಿಧ ದೇಗುಲ ದರ್ಶಿ ಸುವ ಮೂಲಕ ಆಯಾ ಜಾತಿ ವರ್ಗದ ಮತದಾರರನ್ನು ಸಂತೃಪ್ತಿ ಪಡಿಸುವ ಕೆಲಸ ಮಾಡುತ್ತಿರುವುದು ಅವರ ಪ್ರವಾಸ ವೇಳಾಪಟ್ಟಿಯಿಂದ ದೃಢಪಟ್ಟಿದೆ.

Advertisement

ಬಿಜೆಪಿ: ಕೋಲಾರ ಕ್ಷೇತ್ರದಲ್ಲಿ ಬಿಜೆಪಿಗೆ ಗೆದ್ದು ಬಿಡುವಷ್ಟು ಮತದಾರರ ಒಲವಿಲ್ಲ. ಆದರೂ, ಲೋಕಸಭಾ ಚುನಾವಣೆ ನಂತರ ಎಲ್ಲಾ ಕ್ಷೇತ್ರ ಗೆಲ್ಲುವ ಉತ್ಸಾಹ ಬಂದು ಬಿಟ್ಟಿದೆ. ಅಲ್ಪಸಂಖ್ಯಾತರ ವಿರೋಧಿಗಳೆಂದು ಯಾವುದೇ ಮುಜುಗರವಿಲ್ಲದೆ ಗುರುತಿಸಿಕೊಳ್ಳುವ ಬಿಜೆಪಿಯ ಸಂಸದ ಮುನಿಸ್ವಾಮಿ ಇತ್ತೀಚೆಗೆ ಅಲ್ಪಸಂಖ್ಯಾತರಿಗೆ ಸೇವಾಕಾರ್ಯಕ್ರಮ ಗಳು ಮತ್ತು ಅಲ್ಪಸಂಖ್ಯಾತರ ಬಿಜೆಪಿಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಕೋಲಾರದ ಬಿಜೆಪಿ ಅಭ್ಯರ್ಥಿ ಎಂದೇ ಗುರುತಿ ಸಲ್ಪಟ್ಟಿರುವ ವರ್ತೂರು ಪ್ರಕಾಶ್‌, ಸಿದ್ದರಾಮಯ್ಯ ಕಣ್ಣಿಟ್ಟಿರುವ ಅಹಿಂದ ಮತದಾರರ ಮೇಲೆ ಪ್ರೀತಿ ಸುರಿಸುತ್ತಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ, ಫೆ.9 ರಂದು ಕೋಲಾರದಲ್ಲಿ ದೊಡ್ಡ ಮಟ್ಟದಲ್ಲಿಯೇ ಎಸ್‌ಸಿ ಮೋರ್ಚಾ ಸಮಾವೇಶವನ್ನು ಬಹಿರಂಗವಾಗಿ ಏರ್ಪಡಿಸುತ್ತಿದೆ. ಈ ಸಭೆಯ ಮೂಲಕ ದಲಿತ ಮತದಾರರನ್ನು ಓಲೈಸಲು ಬಿಜೆಪಿ ಸಜ್ಜಾಗುತ್ತಿದೆ. ಜೊತೆಗೆ ಸಂಸದ ಮುನಿಸ್ವಾಮಿ ಮೇಲೆ ಮುನಿಸಿಕೊಂಡಿರುವ ಬಲಗೈನ ಒಂದು ಪಂಗಡದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವೂ ನಡೆಸುತ್ತಿದೆ.

ಇರುವುದೆಲ್ಲವ ಬಿಟ್ಟು ಬೇರೆಡೆ ಗಮನ : ಪಕ್ಷಕ್ಕೆ ಮೂಲ ಬಂಡವಾಳ, ಠೇವಣಿಯಂತಿರುವ ಜಾತಿ ಧರ್ಮೀಯರ ಬಗ್ಗೆ ಅಷ್ಟಾಗಿ ಗಮನಹರಿಸದೆ ತಮಗೆ ವಿರೋಧಿಯಾಗಿರುವವರು ಅಥವಾ ತಮ್ಮ ಪಕ್ಷದ ಸಿದ್ದಾಂತದಿಂದ ದೂರ ಇರುವ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಪ್ರಯತ್ನ ಪಡುತ್ತಿರುವುದು ಜಾತಿ ಮತ ಧರ್ಮದ ಸಭೆ, ಸಮಾವೇಶಗಳಲ್ಲಿ ದೃಢಪಡುತ್ತಿದೆ. ಬಿಜೆಪಿ ಬೆಂಬಲಿಗರು ಎಂದು ಗುರುತಿಸಿರುವ ಬ್ರಾಹ್ಮಣ, ಲಿಂಗಾಯಿತರ ಸಭೆಯನ್ನು ಬಿಜೆಪಿ ಇದುವರೆವಿಗೂ ಮಾಡಿಲ್ಲ. ದೂರವಿರುವ ಅಲ್ಪಸಂಖ್ಯಾತರನ್ನು ಸೆಳೆಯುತ್ತಿದೆ. ಹಾಗೆಯೇ ಜೆಡಿಎಸ್‌ಗೆ ಒಕ್ಕಲಿಗರ ಸಭೆ ಮಾಡುವ ಅನಿವಾರ್ಯತೆಯೂ ಇಲ್ಲ. ಆದ್ದರಿಂದಲೇ ದಲಿತ, ಹಿಂದುಳಿದವರ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್‌ನ ಬೆಂಬಲಿಗರೆಂದು ಗುರುತಿಸಿಕೊಂಡಿರುವ ಅಹಿಂದ ಮತದಾರರನ್ನು ಬಿಟ್ಟು ಕಾಂಗ್ರೆಸ್‌ ಮುಖಂಡರು ಒಕ್ಕಲಿಗರ ಸಭೆ ಮಾಡಿ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಕೋಲಾರದಲ್ಲಿ ಕುರುಬ ಮುಖಂಡರ ಸಭೆಯೂ ನಡೆದಿದೆ. ಬಲಜಿಗರನ್ನು ವಿಧಾನಪರಿಷತ್‌ ಸದಸ್ಯಎಂ.ಆರ್‌.ಸೀತಾರಾಂ ಸಂಘಟಿಸುತ್ತಿದ್ದಾರೆ. ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಮ್ಮುಖದಲ್ಲಿ ಜೆಡಿಎಸ್‌ನತ್ತ ವಾಲುತ್ತಿದ್ದಾರೆಂಬ ಕಾರಣಕ್ಕೆ ಅಲ್ಪಸಂಖ್ಯಾರ ಸಭೆಯನ್ನು ನಡೆಸಿ ಅವರ ವಿಶ್ವಾಸವನ್ನು ಮತ್ತಷ್ಟು ಸುಭದ್ರಪಡಿಸಿಕೊಳ್ಳುವ ಪ್ರಯತ್ನ ಮಾಡಿದೆ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next