Advertisement

ಕ್ಯಾಪ್ಟನ್ಸಿಗೆ ಪಾದಯಾತ್ರೆ, ಕಂಟ್ರೋಲ್ ಮಾಡಾಕ್ ಕರ್ಫ್ಯೂ !

11:21 AM Jan 09, 2022 | Team Udayavani |

ಯಜಮಾನ್ತಿ ತವರು ಮನಿಗಿ ಹೋಗಿ ಭಾಳದಿನಾ ಆಗಿತ್ತು. ಆದ್ರೂ, ಇಲ್ಲಿ ನಡಿಯೋ ಡೆವೆಲಪ್‌ಮೆಂಟ್ ಬಗ್ಗೆ ಫುಲ್ ಡಿಟೇಲ್ ಕಲೆಕ್ಟ್ ಮಾಡ್ತಿದ್ದಲು. ಯಾಕಂದ್ರ ಅಕಿ ಇಂಟ್ಲಿಜನ್ಸ್ ಅಷ್ಟೊಂದು ಸ್ಟ್ರಾಂಗ್ ಐತಿ. ನಮ್ ಎಸ್ಪಿಜಿಯವರು, ಪಂಜಾಬ್ ಪೊಲೀಸರಂಗ ಅಲ್ಲ. ಪ್ರಧಾನಿ ಹೋಗೋದರ‍್ಯಾಗ ರೈತರು ಪ್ರತಿಭಟನೆ ಮಾಡಾತಾರೊ ಇಲ್ಲೊ ಅನ್ನೋದು ಗೊತ್ತಿಲ್ಲದಷ್ಟು ವೀಕಿಲ್ಲಾ. ನಾ ಎಷ್ಟೊತ್ತಿಗೆ ಮನಿ ಬಿಡ್ತೇನಿ, ಎಷ್ಟೊತ್ತಿಗೆ ಮನಿಗಿ ಬರತೇನಿ ಅಂತ ಇಂಚಿಂಚೂ ಫುಲ್ ಡಿಟೇಲ್ ಇರತೈತಿ.

Advertisement

ದೇಶದ ಪ್ರಧಾನಿ ಯಾವದರ ರಾಜ್ಯಕ್ಕ  ಬರತಾರು ಅಂದ್ರ ಆ ರಾಜ್ಯದ ಜನರು ನಮ್ಮ ರಾಜ್ಯಕ್ಕ ಏನಾರೂ ಕೊಡುಗೆ ಕೊಡ್ತಾರು ಅಂತ ಆಸೆಯಿಂದ ಅವರ ಬರೂದ್ನ ಕಾಯ್ಕೋಂತ ಕುಂದ್ರತಾರು. ಅದ್ರಾಗೂ ಮೋದಿ ಬರ್ತಾರು ಅಂದ್ರ ಎಷ್ಟೋ ಮಂದಿ ಊಟಾ ಬಿಟ್ಟು ಅವರ ಭಾಷಣಾ ಕೇಳಾಕ ಹೋಗು ಕಾಲ ಇತ್ತು. ಆದ್ರ, ಪಂಜಾಬ್‌ನ್ಯಾಗ ಪ್ರಧಾನಿನ ಬರೂದು ಬ್ಯಾಡ ಅಂತ ವಿರೋಧ ಮಾಡ್ತಾರು ಅಂದ್ರ ಅರ‍್ನ ದೇಶ ವಿರೋಧಿಗಳು ಅನ್ಬೇಕಾ, ಅಥವಾ ಪ್ರಧಾನಿ ಅವರಿಗೆ ಬ್ಯಾಡಾಗುವಷ್ಟು ಕೆಟ್ಟದು ಮಾಡ್ಯಾರಾ ?

ಇವ್ಯಾಡೂ ವಿಷಯಾನ ರಾಜಕೀಯ ಪಕ್ಷದಾರನ ಬಿಟ್ಟು ದೇಶದ ಸಾಮಾನ್ಯ ಜನರು ಯೋಚನೆ ಮಾಡಬೇಕಾಗೇತಿ ಅನಸ್ತೆತಿ. ಬಿಜೆಪ್ಯಾರ ಪ್ರಕಾರ ಪಂಜಾಬ್ ಸರ್ಕಾರ ಪ್ರಧಾನಿ ಹೋಗೋ ದರ‍್ಯಾಗ ರೈತರಿಗೆ ಪ್ರತಿಭಟನೆ ಮಾಡಾಕ್ ಅವಕಾಶ ಕೊಟ್ಟು, ಪ್ರಧಾನಿ ಜೀವಕ್ಕನ ಸಂಚಕಾರ ತರು ಮಟ್ಟಿಗೆ ನಡಕೊಂಡಾರು. ಅದೂ ಬದ್ದ ವೈರಿ ಪಾಕಿಸ್ತಾನ ಬಾಡರ‍್ನಾಗ ಈ ಥರಾ ಮಾಡಿದ್ರ ಇದ್ನ ದೇಶದ್ರೋಹ ಅನ್ನದ ಇನ್ನೇನ ಅನಬೇಕು ಅಂತ ಪಂಜಾಬ್ ಸರ್ಕಾರ ವಜಾ ಮಾಡ್ಸೇ ಬಿಡಾಕ ಪಂಚಾಯತಿಯ್ತಿದ ಪಾರ್ಲಿಮೆಂಟ್ಟಾ ಪ್ರತಿಭಟನೆ ಮಾಡಾಕತ್ತಾರು.

ಆದ್ರ ಕಾಂಗ್ರೆಸ್‌ನ್ಯಾರ ವಾದಾನ ಬ್ಯಾರೇ, ಪ್ರಧಾನಿ ಬರೋ ಕಾರ್ಯಕ್ರಮಕ್ಕ ಅವರ ಭಾಷಣಾ ಕೇಳಾಕ ಮಂದಿನ ಬಂದಿರಲಿಲ್ಲ. ಅದ್ಕ ಅಲ್ಲಿ ಹೋಗಿ ಖಾಲಿ ಕುರ್ಚೆ ಮುಂದ ಭಾಯಿ ಔರ್ ಬೆಹನೋ ಅಂದ್ರ  ಮರ್ಯಾದೆಗೇಡು ಅಕ್ಕೇತಿ ಅಂತ ಈ ರೀತಿ ನಾಟಕಾ ಮಾಡ್ಯಾರು ಅಂತ ಹೇಳಾಕತ್ತಾರು. ಇಲ್ಲಿ ಇಬ್ರೂದು ಕಣ್ಣು ಇರೋದು ಪಂಜಾಬ್ ಇಲೆಕ್ಷನ್ ಮ್ಯಾಲ್ ಬಿಟ್ರ ಬ್ಯಾರೇನು ಇಲ್ಲ ಅಂತ ಅನಸ್ತೆತಿ ಹಿಂಗಾಗಿ ಇದ್ರ ಬಗ್ಗೆ ಬ್ಯಾರೇ ರಾಜ್ಯದಾರು ತಲಿಕೆಡಿಸಿಕೊಳ್ಳೋ ಅಗತ್ಯ ಇಲ್ಲ ಅನಸ್ತೆತಿ. ಈ ಕೇಸಿನ್ಯಾಗ ಯಾರ್ ನಾಟಕಾ ಮಾಡ್ಯಾರು ಅಂತ ಇನ್ಯಾಡ ತಿಂಗಳದಾಗ ಅಲ್ಲಿನ ಜನರ ತೀರ್ಪು ಕೊಡ್ತಾರು ಅಂತ ಅನಸ್ತೈತಿ.

ಆದ್ರ, ದೇಶದ ಈಗಿನ ಪರಿಸ್ಥಿತಿ ನೋಡಿದ್ರ ಮೋದಿಯವರ ಇಪ್ಪತ್ತು ವರ್ಷದ ಅಧಿಕಾರದಾಗ ಫಸ್ಟ್ ಟೈಮ್ ಜನರು ತಿರುಗಿ ಬೀಳೋ ಅನುಭವ ಆದಂಗ ಕಾಣತೈತಿ. ಪ್ರಜಾಪ್ರಭುತ್ವ ವ್ಯವಸ್ಥೆದಾಗ ಅಧಿಕಾರ ನಡಸೋರು ಎಷ್ಟ ದೊಡ್ಡಾರಾಗಿದ್ರೂ, ಅವರು ಬ್ಯಾಡ್ ಅನಿಸಿದ್ರಂದ್ರ ಜನರು ಒಂದಿಲ್ಲೊಂದಿನಾ ತಿರುಗಿ ಬಿದ್ದ ಬೀಳ್ತಾರು. ಜನರು ತಿರುಗಿ ಬೀಳದಂಗ ನಡ್ಕೊಳ್ಳೋದು ಅಧಿಕಾರ ನಡಸೋರ್ ಕೈಯಾಗ ಇರತೈತಿ. ಜನರು ನಂಬ್ಯಾರ ನಾ ಏನ್ ಮಾಡಿದ್ರೂ ನಡಿತೈತಿ ಅಂದ್ರ, ಒಂದಿನ ನಡು ದರ‍್ಯಾಗ ನಿಲ್ಲು ಪರಿಸ್ಥಿತಿ ಯಾರಿಗಾದ್ರೂ ಬರತೈತಿ.

Advertisement

ಹೆಂಗೂ ಅಧಿಕಾರ ಐತಿ ಅಂತೇಳಿ ಬೇಕಾ ಬಿಟ್ಟಿ ವೀಕ್ ಎಂಡ್ ಕರ್ಪ್ಯೂ, ಲಾಕ್‌ಡೌನ್ ಅಂತ ಮಾಡಾಕತ್ತರ ಜನರಿಗೆ ಒಮ್ಮಿ ಸಿಟ್ಟು ಬಂತು ಅಂದ್ರ, ಲಾಕ್‌ಡೌನ್ ಅನುಭವ ಹೆಂಗ್ ಇರತೈತಿ ಅಂತ ತೋರಸಾಕ ಆಳಾರ್ನ ಒಮ್ಮೆ ಐದು ವರ್ಷ ಹೋಮ್ ಕ್ವಾರಂಟೈನ್ ಮಾಡಿಸಿಬಿಡ್ತಾರು.

ರಾಜ್ಯ ಸರ್ಕಾರ ಏಕಾಏಕಿ ವೀಕ್‌ಎಂಡ್ ಕರ್ಪ್ಯೂ ಯಾಕ್ ಮಾಡ್ತು ಅನ್ನೋದ ಅಜೀಬ್ ಆಗೇತಿ. ಕಾಂಗ್ರೆಸ್‌ನ್ಯಾರು ಪಾದಯಾತ್ರೆ ಮಾಡೂದ್ರಿಂದ ಒಮ್ಮೇಲೆ ಕಾವೇರಿ ಮನಿಗಿ ಹರದು ಬರೂದಿಲ್ಲ. ಯಾಕಂದ್ರ ಮೇಕೆದಾಟು ಯೋಜನೆ ಮಾಡಬೇಕು ಅಂತ ತೀರ್ಮಾನ ಆದ ಮ್ಯಾಲ ಮೂರು ಪಾರ್ಟ್ಯಾರು ಅಧಿಕಾರ ನಡಿಸಿ ಆಗೇತಿ. ಒಂದೊಂದು ಯೋಜನೆಗೋಳು ಒಬ್ಬೊಬ್ಬ ರಾಜಕಾರಣಿ ಅಧಿಕಾರಕ್ಕ ಏರಾಕ ಒಂದು ಅಸ್ತ್ರ ಅಷ್ಟ. ಈಗ ಮೇಕೆದಾಟು ಅಸ್ತ್ರಾನ ಡಿಕೆ ಶಿವಕುಮಾರ್ ಬಳಸ್ಕೊಳ್ಳಾಕತ್ತಾರು. ಸಿದ್ರಾಮಯ್ಯ 2013 ರಾಗ ಬಳ್ಳಾರಿಗೆ ಪಾದಯಾತ್ರೆ ಮಾಡೇ ಸಿಎಂ ಆದ್ರು, ನೀವು ಹಂಗ ಪಾದಯಾತ್ರೆ ಮಾಡಿದ್ರ ಏನರ ವರ್ಕೌಟ್ ಅಕ್ಕೇತಿ ಅಂತ ಯಾರೋ ಇವೆಂಟ್ ಮ್ಯಾನೇಜ್‌ಮೆಂಟ್‌ನ್ಯಾರು ಹೇಳ್ಯಾರಂತ. ಅದ್ಕ ಡಿಕೆಶಿ ಪಂಜಿ ಸುತ್ಕೊಂಡು ನಾನೂ ರೈತನ ಮಗಾನ ಅಂತ ಅಷ್ಟೊಂದು ಮೈಮ್ಯಾಲ ತೊಗೊಂಡು ಪಾದಯಾತ್ರೆ ಮಾಡಾಕತ್ತಾರಂತ. ಇದ್ರಿಂದ ಸಿದ್ರಾಮಯ್ಯಗ ಏನ್ ಲಾಭಾ ಇಲ್ಲ. ಪಕ್ಷದ ಅಧ್ಯಕ್ಷರು ಹೊಂಟ್ ಮ್ಯಾಲ ಬರೂದಿಲ್ಲ ಅಂದ್ರ ಇನ್ನೊಮ್ಮೆ ಸಿಎಂ ಆಗೋ ಅವಕಾಶ ತಪ್ಪಬೌದು ಅಂತೇಳಿ, ಹೋದ್ರ ಹೋಗ್ಲಿ ಅಂತ ನಾಕ್ ಜೋಡಿ ಹೊಸಾ ಬೂಟ್ ತೊಗೊಂಡು ನಡ್ಯಾಕ ರೆಡಿಯಾಗ್ಯಾರಂತ.

ಇದನ್ನೂ ಓದಿ:ಒಂದೇ ದಿನ 1.59 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ; 3623ಕ್ಕೇರಿದ ಒಮಿಕ್ರಾನ್ ಸಂಖ್ಯೆ

ಸರ್ಕಾರದಾರು ಇದ್ನ ಇಷ್ಟೊಂದು ಮೈಮ್ಯಾಲ ಹಾಕೊಳ್ಳೊ ಅಗತ್ಯ ಇರಲಿಲ್ಲ ಅಂತ ಅನಸ್ತೈತಿ. ಯಾಕಂದ್ರ ಈ ಪಾದಯಾತ್ರೆ ಕಾಂಗ್ರೆಸ್ ನಾಯಕರೊಳಗ ಮುಂದಿನ ಸಿಎಂ ಪಟ್ಟಕ್ಕ ನಡ್ಯಾಕತ್ತಿರೋ ಪೈಪೋಟಿ. ಅದ್ನ ಬಿಟ್ರ ಕುಮಾರಸ್ವಾಮಿಗೆ ಸ್ವಲ್ಪ ಎಫೆಕ್ಟ್ ಆಗಬೌದು. ಬಿಜೆಪ್ಯಾರಿಗೆ ಇದ್ರಿಂದ ಕಳಕೊಳ್ಳೂದು ಏನೂ ಇಲ್ಲ. ಬೊಮ್ಮಾಯಿ ಸಾಹೇಬ್ರಿಗೆ ಯಾರ್ ಅಡ್ವೈಸ್ ಮಾಡಿದ್ರೋ, ಅವರ್ನ ಕಟ್ಟಿ ಹಾಕಾಕ್ ರಾಜ್ಯದ ಜನರ ಮ್ಯಾಲ್ ಎಲ್ಲಾ ಕರ್ಪ್ಯೂ ಹೇರಿ ಶಾಪಾ ಹಾಕಿಸಿಕೊಳ್ಳುವಂಗ ಆಗೇತಿ. ಯಡಿಯೂರಪ್ಪನೋರು ಕಾಂಗ್ರೆಸ್‌ನ್ಯಾರು ಪಾದಯಾತ್ರೆ ಮಾಡ್ಕೊಂಡ್ರ ಮಾಡ್ಕೊಳ್ಳಲಿ ಬಿಟ್ಟು ಬಿಡ್ರಿ ತಲಿ ಕೆಡಿಸಿಕೊಳ್ಳಬ್ಯಾಡ್ರಿ ಅಂದಿದ್ರಂತ. ವೈರಿನ ನೆಗ್ಲೆಕ್ಟ್ ಮಾಡೂದ್ಕಿಂತ ದೊಡ್ ಶಿಕ್ಷೆ ಇನ್ನೊಂದಿಲ್ಲ. ಅರ‍್ನ ಕೆಣಕಿದಷ್ಟು ಸ್ಟ್ರಾಂಗ್ ಆಕ್ಕೊಂಡು ಹೊಕ್ಕಾರು. ಈಗ ಪಾದಯಾತ್ರೆ ವಿಷಯದಾಗ ಬಿಜೆಪಿನೂ ಹಂಗ ಮಾಡ್ಕೊಂಡಂಗ ಕಾಣತೈತಿ. ಈ ಪಾದಯಾತ್ರೆ ಹೆಂಗ್ ನಾಡಿನ ಜನರ ಸಲುವಾಗಿ ಅಲ್ಲೊ ಹಂಗ ಈ ವೀಕೆಂಡ್ ಕರ್ಫ್ಯೂನು ಜನರ ಸಲುವಾಗಿ ಅಲ್ಲಂತ ಆಳಾರಿಗೂ ಗೊತ್ತೆತಿ ಅಂತ ಅನಸ್ತೆತಿ.

ಮೊದ್ಲ ಇತ್ತಿಚಿಗಿ ನಡದಿರೋ ಎಲೆಕ್ಷ್ಯನ್ಯಾಗ ಕಾಂಗ್ರೆಸ್‌ನ್ಯಾರು ಪ್ರತಿಪಕ್ಷದಾಗ ಇದ್ರೂ, ಬಿಜೆಪಿಗೆ ಫುಲ್ ಫೈಟ್ ಕೊಡಾಕತ್ತಾರು.  ಇದೊಂದ್ ರೀತಿ ಪ್ರೊ ಕಬಡ್ಡಿ ನಡದಂಗ ನಡದೈತಿ. ಯಾ ಟೈಮಿನ್ಯಾಗ ಮ್ಯಾಚ್ ಹೆಂಗ್ ತಿರಗತೈತಿ ಅನ್ನೋದ ಗೊತ್ತಾಗುದಿಲ್ಲ. ಕಾಂಗ್ರೆಸ್ನ್ಯಾಗ ಜಂಟಿ ಕ್ಯಾಪ್ಟನ್ಸಿಯೊಳಗ ಟೀಮ್ ನಡ್ಯಾಕತ್ತೇತಿ. ಡಿಕೆಶಿ ರೈರ‍್ರು, ಸಿದ್ರಾಮಯ್ಯ ಕ್ಯಾಚರು. ಡಿಕೆಶಿ ಅವರು ನಾನ ಮುಂದಿನ ಸಿಎಂ ಅಂತ ಎಲ್ಲಾ ಕಡೆ ರೈಡ್ ಮಾಡ್ಕೊಂಡು ಬರಾಕತ್ತಾರು. ಸಿದ್ರಾಮಯ್ಯ ಮಾತ್ರ ನನ್ ಬಿಟ್ಟು ಯಾರ್ ಅಕ್ಕಾರು ನೋಡೂನು ಅಂತ ಮನ್ಯಾಗ ಕುಂತ ಗೆಣಕಿ ಹಾಕಾಕತ್ತಾರಂತ.

ಬಿಜೆಪ್ಯಾಗ ಬೊಮ್ಮಾಯಿ ಅವರ ಕ್ಯಾಪ್ಟನ್ ಅಂತ ಹೈಕಮಾಂಡ್ ಹೇಳಿದ್ರೂ, ಅವರ ಪ್ಲೇಯರ್ಸ್ ಯಾರೂ ಒಪ್ಕೊಳ್ಳಾಕ ರೆಡಿ ಇಲ್ಲ. ನಮಗ ನಾವ ಕ್ಯಾಪ್ಟನ್ ಅಂತ ಎಲ್ಲಾರೂ ಕ್ಯಾಪ್ಟನ್ಸಿ ಸಲುವಾಗಿ ಓಡ್ಯಾಡಾಕತ್ತಾರು. ಯಡಿಯೂಪ್ಪ ಅರ‍್ನ ಕ್ಯಾಪ್ಟನ್ಸಿ ಬಿಡಿಸಿ ಮೆಂಟರ್ ಮಾಡಿ ಕೂಡ್ಸಿರೋದ್ರಿಂದ ಅವರು ಮಗಗ ಕ್ಯಾಪ್ಟನ್ಸಿ ಕೊಡಸಾಕ್ ಆಗದಿದ್ರೂ, ಟೀಮ್‌ನ್ಯಾಗಾದ್ರೂ ಸೇರಿಸ್ಬೇಕು ಅಂತ ಕಸರತ್ತು ನಡಸ್ಯಾರಂತ. ಅದ್ಕೂ ಸರ್ಕಾರ ಅವಸರಲೇ ಜಾರಿ ಮಾಡಿರೋ ವೀಕ್‌ಎಂಡ್ ಕರ್ಪ್ಯೂ ಕಲ್ಲು ಹಾಕೇತಿ.

ನಂದಿಬೆಟ್ಟದಾಗ ಬಿಜೆಪಿ ಬೈಠಕ್ ನಡದಿದ್ರ ಭಾಳ ಮಂದಿ ಮಂತ್ರಿಗೋಳಿಗೆ ಕೊಕ್ ಕೊಡ್ತಾರು ಅನ್ನೊ ಕಾರಣಕ್ಕ ಅವಸರಲೇ ಕೊರೊನಾ ಹೆಚ್ಚಿಗಿ ಮಾಡ್ಸಿ ವೀಕ್‌ಎಂಡ್ ಕರ್ಪ್ಯೂ ಮಾಡ್ಯಾರು ಅಂತ ಮಂತ್ರಿ ಆಗಾರಿಗೆ ಸಿಕ್ಕಿರೋ ಇಂಟ್ಲಿಜೆನ್ಸ್ ರಿಪೋರ್ಟ್ ಅಂತ.

ಯಾರಿಗೆ ಯಾವಾಗ್ ಏನ್ ಬೇಕೋ ಎಲ್ಲಾ ಇಂಟ್ಲಿಜನ್ಸ್ ಮಾಹಿತಿ ಸಿಗ್ತಿರಬೇಕಾದ್ರ, ದೇಶದ ಪ್ರಧಾನ ಮಂತ್ರಿಗೆ ಮಾಹಿತಿ ಸಿಗದಿರೋದು ದೇಶದ ದೌರ್ಭಾಗ್ಯ ಅನಸ್ತೆತಿ. ಯಾರ್ ಏನ ಮಾಡಿದ್ರೂ ಅಧಿಕಾರದಾಗ ಇರಾರು ಯಾವಾಗ್ಲೂ ಅಲರ್ಟ್ ಆಗೇ ಇರಬೇಕು. ಅದ್ಕ ನಾವು ಯಾವಾಗ್ಲೂ ಫುಲ್ ಅಲರ್ಟ್ ಆಗೇ ಇರತೇವಿ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next