Advertisement

ಕೃಷ್ಣಪಥದಲ್ಲಿ ರಾಜಕೀಯ ಜೀವನ ಮೆಲುಕು

10:01 AM Jan 06, 2020 | Team Udayavani |

ಬೆಂಗಳೂರು: ಅರವತ್ತರ ದಶಕದಲ್ಲಿ ಕಾಂಗ್ರೆಸ್‌ ವಿರುದ್ಧ ಹೋರಾಡಿ, ಚುನಾವಣೆಯಲ್ಲಿ ಜಯಿಸುವ ಶಕ್ತಿಯನ್ನು ಮಂಡ್ಯ-ಮದ್ದೂರು ಜನ ನೀಡಿದ್ದರು. 1967ರ ವಿಧಾನಸಭಾ ಚುನಾವಣೆಯಲ್ಲಿ ಸೋತೆ, ನಂತರ ನಡೆದ ಲೋಕಸಭೆ ಉಪಚುನಾಣೆಯಲ್ಲಿ ಅದೇ ಜನರು ನನ್ನನ್ನು ಸಂಸತ್‌ಗೆ ಆಯ್ಕೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ರಾಜಕೀಯ ಜೀವನ ಮೆಲುಕು ಹಾಕಿದರು.

Advertisement

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಕೃಷ್ಣ ಪಥ ಸಮಿತಿ ಹೊರತಂದಿರುವ ಕಾಂಗ್ರೆಸ್‌ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರ ಕುರಿತ ಕೃಷ್ಣಪಥ, ಚಿತ್ರದೀಪ ಸಾಲು, ಭವಿಷ್ಯ ದರ್ಶನ, ಸ್ಮತಿವಾಹಿನಿ, ಡೌನ್‌ ಮೆಮೊರಿ ಲೇನ್‌ ಹಾಗೂ ಸ್ಟೇಟ್‌ಮೆನ್‌ ಎಸ್‌.ಎಂ.ಕೃಷ್ಣ ಎಂಬ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಸ್‌.ಎಂ.ಕೃಷ್ಣ ಅವರು ಜೀವನ ಸವಾಲುಗಳನ್ನು ಬಿಚ್ಚಿಟ್ಟರು.

60ರ ದಶಕದಲ್ಲಿ ಅಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಕಾಂಗ್ರೆಸ್‌ ನಾಯಕ ವೀರಣ್ಣ ಗೌಡರ ವಿರುದ್ಧ 1962ರ ಚುನಾವಣೆಯಲ್ಲಿ ಸೆಣಸಾಡಿ ಜಯ ಸಾಧಿಸಿದೆ. ಆ ಚುನಾವಣೆಯಲ್ಲಿ ವೀರಣ್ಣಗೌಡರು ಗೆದ್ದಿದ್ದರೆ 1962ರಲ್ಲಿ ಮುಖ್ಯಮಂತ್ರಿಯೇ ಆಗುತ್ತಿದ್ದರು. ಏಕೆಂದರೆ, ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ ಸೋತಿದ್ದರು. ಈ ಗೆಲುವಿನಿಂದ ನಾನು ಕೇವಲ ವಿಧಾನಸೌಧ ಪ್ರವೇಶ ಮಾಡಿದೆ ಅಷ್ಟೆ ಎಂದರು.

ಮದ್ದೂರು ರಾಜಕಾರಣದಲ್ಲಿ ಆಶ್ರಯ ನೀಡಿದೆ, ಅಧಿಕಾರ, ಉತ್ತೇಜನ, ಪುಷ್ಟಿ ಕೊಟ್ಟಿದೆ. ಆಗ ಜನರಿಂದ ಪ್ರೀತಿ ವಿಶ್ವಾಸ ಕೇಳುತ್ತಿದ್ದೆವು. ಜನರು ಕೂಡ ನಮ್ಮಿಂದ ಬೇರೇನೂ ನಿರೀಕ್ಷೆ ಮಾಡುತ್ತಿರಲಿಲ್ಲ. 1967ರಲ್ಲಿ ಮದ್ದೂರಿನಲ್ಲಿ ಸೋತೆ, 1968ರಲ್ಲಿ ಅದೇ ಕಾಂಗ್ರೆಸ್‌ ಪಕ್ಷದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಮದ್ದೂರಿನಿಂದಲೇ ಸ್ಪರ್ಧೆ ಮಾಡಿದೆ.

ಲಕ್ಷಾಂತರ ಜನರು ಒಕ್ಕೊರಲಿನಿಂದ ಮದ್ದೂರು ಕೃಷ್ಣನಿಗೆ ಉಪಚುನಾವಣೆಯಲ್ಲಿ ನ್ಯಾಯ ಒದಗಿಸಿ ಲೋಕಸಭೆಗೆ ಕಳುಹಿಸಿದರು. ಈ ಎರಡು ಘಟನೆ ನನ್ನ ರಾಜಕಾರಣದಲ್ಲಿ ಬಹುದೊಡ್ಡ ಹಂತಗಳು ಎಂದರು. ಕೈಗಾರಿಕಾ ಮಂತ್ರಿಯಾದೆ, ಹೀಗೆ ಅನೇಕ ಹುದ್ದೆ ಅಲಂಕರಿಸಿದೆ. ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಒಬ್ಬ ಮನುಷ್ಯನ ನಾಯಕತ್ವ ಸಾಬೀತಾಗುತ್ತದೆ ಎಂದರು.

Advertisement

ತಳಮಳ ಸೃಷ್ಟಿಸಿತ್ತು: ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ವರನಟ ಡಾ. ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಅಪರಹರಿಸಿದ ಸಂದರ್ಭದಲ್ಲಿ ಪಾರ್ವತಮ್ಮ ಹೇಳಿದ ಘಟನೆ ಕಣ್ಣಿಗೆ ಕಟ್ಟಿದಂತಿದೆ. ಪಾರ್ವತಮ್ಮ ಅವರು ಹೇಳಿದ ಆ ನಾಲ್ಕು ಮಾತುಗಳು ಇಡೀ ಕರ್ನಾಟಕವನ್ನೇ ಅಲುಗಾಡಿಸಿದ್ದವು. ನನ್ನಲ್ಲೂ ತಳಮಳ ಇತ್ತು. ಅದಕ್ಕೆ ಪರಿಹಾರ ಹುಡುಕಲು ಆರಂಭಿಸಿದೆ.

ಸವಾಲುಗಳೇ ಮನುಷ್ಯನನ್ನು ನಾಯಕನನ್ನಾಗಿ ಮಾಡುತ್ತದೆ ಎಂಬುದು ರಾಜ್‌ಕುಮಾರ್‌ ಅವರ ಬಿಡುಗಡೆ ನಂತರ ಅರಿವಾಯಿತು. ಬೆಂಗಳೂರಿನಲ್ಲಿ ತಮಿಳು-ಕನ್ನಡಿಗರ ಬಾಂಧವ್ಯಕ್ಕೆ, ಅನ್ಯೋನ್ಯತೆಗೆ ಹಾನಿಯಾಗುತ್ತದೋ ಅಥವಾ ರಾಜ್ಯದಲ್ಲಿ ಯಾವ ರೀತಿ ಹೋರಾಟ ಪ್ರಾರಂಭವಾಗುತ್ತದೋ ಎಂಬ ಭಯವಿತ್ತು ಎಂದರು.ಈ ದೇಶದಲ್ಲಿ ಪ್ರಜಾಪ್ರಭುತ್ವ ಇಂದು ಹಣಬಲದ ಮೇಲೆ ನಿಂತಿದೆ.

ಇದೇ ರೀತಿ ಪ್ರಜಾಪ್ರಭುತ್ವದ ಬೇರುಗಳನ್ನು ಹರಡಲು ಬಿಟ್ಟರೆ ಭವಿಷ್ಯ ಕಷ್ಟವಿದೆ ಎಂದರು. ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ, ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌, ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್‌ ಒಮ್ಮೆಗೆ ಕಾರ್ಯಕ್ರಮದಲ್ಲಿ ಎಸ್‌.ಎಂ.ಕೃಷ್ಣ ಅವರಿಗೆ ಅಭಿನಂದಿಸಿದರು. ಈ ವೇಳೆ ಎಲ್ಲ ನಾಯಕರು ಕಾಲಿಗೆ ಎರಗಿ ನಮಸ್ಕರಿಸಿದರು.

ನನಗೆ ಎಲ್ಲದಕ್ಕೂ ಅಪ್ಪನೇ ಪ್ರೇರಣೆ : ತಂದೆಯವರು 20, 30 ಹಾಗೂ 40ರ ದಶಕದಲ್ಲಿ ಮಾಡಿದ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿದೆ. 1930ರ ಕಾಲಘಟ್ಟದಲ್ಲಿ ಒಕ್ಕಲಿಗ ವಿದ್ಯಾರ್ಥಿನಿಯಲದಲ್ಲಿ ಇಬ್ಬರು ಹರಿಜನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ, ಆದರ್ಶ ಮೆರೆದಿದ್ದರು. ಅವರ ಆದರ್ಶಗಳೇ ನನಗೆ ಪ್ರೇರಣೆ. ನನ್ನ ಎಲ್ಲ ಗುಣಗಳು ತಂದೆಯ ಪಾಲಿಗೆ, ಅವಗುಣಗಳು ಕೃಷ್ಣನ ಪಾಲಿಗೆ ಸೇರಿದ್ದಾಗಿದೆ ಎಂದು ಎಸ್‌.ಎಂ. ಕೃಷ್ಣ ತಂದೆಯನ್ನು ಸ್ಮರಿಸಿದರು.

ರಾಜ್ಯ ಬಡತನದಲ್ಲಿದ್ದಾಗ ಕೃಷ್ಣ ಅವರು ರಾಜಕೀಯಕ್ಕೆ ಬಂದರು. ರಾಜ್ಯದ ಮುಖ್ಯಮಂತ್ರಿಯಾದ ನಂತರ ತಾಂತ್ರಿಕ ಕ್ಷೇತ್ರದಲ್ಲಿ ಅವರು ಮಾಡಿದ ಪರಿವರ್ತನೆ ವಿಶ್ವಕ್ಕೆ ಮಾದರಿ. ಬೆಂಗಳೂರು ಕಟ್ಟುವಲ್ಲಿ ಅವರ ಸಾಧನೆ ಅಪಾರವಾಗಿದೆ. ಪರಿಶ್ರಮ, ಕಲೆ ಹಾಗೂ ಮೌನ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ.
-ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ

ಯಾರ ಬಗ್ಗೆಯೂ ದ್ವೇಷ ಸಾಧಿಸುವ ಪ್ರಯತ್ನ ಮಾಡಿಲ್ಲ. ತಂದೆಯವರು ನನ್ನಲ್ಲಿ ರೂಪಿಸಿದ ಮೌಲ್ಯದಿಂದ ಇದು ಸಾಧ್ಯವಾಗಿದೆ. ಹತ್ತಾರು ವರ್ಷಗಳ ಒಡನಾಟದಲ್ಲಿ ನನ್ನಿಂದ ಏನಾದರೂ ತಪ್ಪಾಗಿದ್ದರೆ ಮರೆತು ಬಿಡಿ. ಪರಸ್ಪರ ಗೌರವ, ಮರ್ಯಾದೆಯೊಂದಿಗೆ ಮುನ್ನೆಡೆಯೋಣ, ಹೊಸ ಅಧ್ಯಾಯ ಆರಂಭಿಸೋಣ.
-ಎಸ್‌.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

2007ರಲ್ಲಿ ಎಸ್‌.ಎಂ.ಕೃಷ್ಣ ಅವರು ದೇಶದ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿತ್ತು. ಮಹಾರಾಜ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಕೃಷ್ಣ ಅವರು ಸೋತಿರಬಹುದು. ಆದರೆ, 100 ವಿದ್ಯಾರ್ಥಿನಿಯರಲ್ಲಿ 97 ವಿದ್ಯಾರ್ಥಿನಿಯರು ಇವರಿಗೆ ಮತ ಹಾಕಿದ್ದರು. ಅವರೆಂದು ಲಕ್ಷ್ಮಣ ರೇಖೆ ದಾಟಿಲ್ಲ. ಕೃಷ್ಣ ಅವರು ಮತ್ತೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು.
-ಡಾ. ಎಂ.ಎನ್‌.ವೆಂಕಟಾಚಲಯ್ಯ, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ

ಆ ಕಾಲದಲ್ಲೂ ಕಾಂಗ್ರೆಸ್‌ನಲ್ಲಿದ್ದ ಕೃಷ್ಣ ಅವರು ಆಕರ್ಷಿಸುತ್ತಿದ್ದರು. ವಾಕ್‌, ವದನ ಮತ್ತು ವಿನಯ ಸಂಹಿತೆ ಅವರಲ್ಲಿದೆ. ಕೃಷ್ಣ ಅವರ ಭಾಷಣದಲ್ಲಿ ಒಂದೇ ಒಂದು ಅಸಭ್ಯವಾದ ಶಬ್ದ ಬಂದಿಲ್ಲ. ಲಲಿತ ಮಧುರ ಸುಂದರ ವೇಷ ಅವರದ್ದು. ಮೋದಿಗೂ ಇವರ ಉಡುಪು ಸ್ಫೂರ್ತಿಯಿರಬಹುದು.
-ಪಾವಗಡ ಪ್ರಕಾಶ್‌ರಾವ್‌, ವಿದ್ವಾಂಸರು

ಪುಟ್ಟಮಗುವಾಗಿದ್ದಾಗಲೇ ಗಾಂಧೀಜಿಯವರಿಗೆ ಮಾಣಿಕ್ಯ ನೀಡಿ, ರಾಜಕಾರಣದ ಮಾಣಿಕ್ಯವಾಗಿ ಬೆಳೆದಿದ್ದಾರೆ. ಕೃಷ್ಣ ಅವರು ತೀಕ್ಷ್ಣಮತಿಯ ಚಾಣಕ್ಯ. ವೈದ್ಯಕೀಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಮೀಸಲಾತಿ ನೀಡಿ ಕನ್ನಡಿಗರ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
-ಡಾ.ಸಿದ್ದಲಿಂಗಯ್ಯ, ಕವಿ

Advertisement

Udayavani is now on Telegram. Click here to join our channel and stay updated with the latest news.

Next