Advertisement

ವಚನ ಸಾಹಿತ್ಯ ಓದಿನೊಂದಿಗೆ ಪಾಲಿಸಿ: ಡಾ|ಪಟ್ಟಣಶೆಟ್ಟಿ

11:59 AM Jun 27, 2017 | |

ಧಾರವಾಡ: ಸಾಮಾಜಿಕ ಮೌಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಚಿಂತನೆ ಕೊಡಬಲ್ಲ ವಚನ ಸಾಹಿತ್ಯವನ್ನು ಓದುವುದಷ್ಟೇ ಅಲ್ಲದೇ ಅಳವಡಿಕೆಗೂ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಮುರುಘಾಮಠದಲ್ಲಿ ಸೋಮವಾರ ನಡೆದ ಲಿಂ| ತ್ರಿವಿಧ ದಾಸೋಹ ಮೂರ್ತಿ ಶ್ರೀ ಮಹಾಂತಪ್ಪಗಳ 24ನೇ ಸ್ಮರಣೋತ್ಸವದಲ್ಲಿ ಐದು ಗ್ರಂಥಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

Advertisement

ನಮ್ಮೊಳಗೆ ನಾವು ಬೆಳಕು ಕಂಡಾಗ ಮಾತ್ರ ನಮ್ಮೆದುರಿಗೆ ಬೆಳಗು ಕಂಡು ಬರುತ್ತದೆ. ಅಂತಹ ಸಾತ್ವಿಕ ಚಿಂತನೆಗಳ ಸಾಹಿತ್ಯದ ಮೂಲಕ ಹೊರಗಣ ಬೆಳಕನ್ನು ಕಾಣುವಂತಾಗಬೇಕು. ವಚನಕಾರರು ತಮ್ಮ ಅನುಭವದ ಮೇಲೆ ಬರೆದ ವಚನಗಳನ್ನು ವಿಶೇಷವಾಗಿ ವಿವರಿಸಿ ಅವುಗಳ ಮೌಲ್ಯಗಳನ್ನು ಹೆಚ್ಚಿಸಿದ ಕಾರಣ ಅವು ಷಟಸ್ಥಲ ರೂಪಗಳನ್ನು ಪಡೆದುಕೊಂಡವು.

ಮೌಲ್ಯಯುತ ಅನುಭಾವದ ವಿಷಯಗಳು ವಚನ ಸಾಹಿತ್ಯದ ಮೂಲಕ ಜನಮನ ತಲುಪಿ ಪ್ರಸಾರವಾದವು. ನಾವು ಕೂಡ ವಚನಗಳನ್ನು ಓದಿ ಅವುಗಳನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ವಚನ ಸಾಹಿತ್ಯ ರಚನೆ ಮಾಡುವಂತಹ ಶಕ್ತಿ ಯುವ ಜನರಿಗೆ ಬರಬೇಕು ಎಂದರು. ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಮಹಾಂತಪ್ಪಗಳು ಈ ನಾಡು ಕಂಡ ಮಹಾನ್‌ ಚೇತನರು. 

ಶ್ರೀ ಮೃತ್ಯುಂಜಯಪ್ಪಗಳ ಕಾರುಣ್ಯದ ಶಿಶುವಾಗಿ ಪರಮ ಶಿಷ್ಯರಾಗಿ ಸಾತ್ವಿಕ ಬದುಕನ್ನು ಸಾಗಿಸಿ ಸ್ವಾಮಿತ್ವಕ್ಕೆ ಒಂದು ಅಪೂರ್ವ ಮಾದರಿಯಾಗಿದ್ದರು. ಅವರ ಆಶಯದಂತೆ ಇಂದು ಕೂಡ ಶ್ರೀ ಮಠವು ಅದೇ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದೆ. ಮುಂಬರುವ ಜನೇವರಿಯಲ್ಲಿ ಶ್ರೀಮಠವು ಶತಮಾನ ಆಚರಿಸಿಕೊಳ್ಳುತ್ತಿದ್ದು, ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿಯವರ ಮಾರ್ಗದರ್ಶನಲ್ಲಿ ಮಹತ್ವದ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಯಾವುದೇ ಸೌಲಭ್ಯ ಹೊಂದಿರದ ಈ ನಾಡಿನಲ್ಲಿ ಶ್ರೀ ಮೃತ್ಯುಂಜಯಪ್ಪಗಳು ಮುರುಘಾಮಠದಲ್ಲಿ ಜ್ಞಾನ ಹಾಗೂ ಅನ್ನ ದಾಸೋಹ ನೆರವೇರಿಸಿ  ಅನೇಕರಿಗೆ ಶಿಕ್ಷಣ ನೀಡುವುದಲ್ಲದೇ ಜ್ಞಾನದ ಹಸಿವನ್ನು ನೀಗಿಸಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ ಕಾಯಕ ದಾಸೋಹದ ಮಹತ್ವದ ಅರಿವನ್ನು ನಾಡಿಗೂ ಪರಿಚಯಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದರು. 

Advertisement

ಸಾನ್ನಿಧ್ಯ ವಹಿಸಿದ್ದ ಫಕೀರೇಶ್ವರ ಸಂಸ್ಥಾನ ಮಠದ ಫಕೀರಸಿದ್ದರಾಮ ಸ್ವಾಮೀಜಿ ಮಾತನಾಡಿ, ಮಹಾಂತಪ್ಪಗಳು ಮಾತೃ ಹೃದಯಿಯಾಗಿದ್ದರು. ಗುರುಭಕ್ತಿ, ಲಿಂಗನಿಷ್ಠೆ, ಜಂಗಮ ದಾಸೋಹಕ್ಕೆ ಹೆಸರುವಾಸಿಯಾಗಿದ್ದರು. ಮೃತ್ಯುಂಜಯಪ್ಪಗಳದ್ದು ಅಲ್ಲಮಪ್ರಭುವಿನ ಗಾಂಭಿರ್ಯದ ನಿಲುವು. ಆದರೆ ಮಹಾಂತಪ್ಪಗಳದ್ದು ಬಸವಣ್ಣನವರಂತೆ ಸದುವಿನಯ ತುಂಬಿದ ಭಕ್ತಿ ಪಾರಮ್ಯದ ನಿಲುವಾಗಿತ್ತು ಎಂದರು. 

ಮಲ್ಲಿಕಾರ್ಜುನ ಸ್ವಾಮೀಜಿ, ಗುದೆಶ್ವರ ಸ್ವಾಮೀಜಿ, ಡಾ| ಶಂಭುಲಿಂಗ ಹೆಗಡಾಳ  ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರು, ನಾಗರಾಜ ದ್ಯಾಮನಕೊಪ್ಪ, ಡಾ| ವೀರಣ್ಣ ರಾಜೂರ, ನಾಗರಾಜ ಪಟ್ಟಣಶೆಟ್ಟಿ ಇದ್ದರು. ಡಾ| ಮಲ್ಲು ಗಾಣಗೇರ ನಿರೂಪಿಸಿ, ಸ್ವಾಗತಿಸಿದರು. ಸಮಾರಂಭದಲ್ಲಿ ದಾಸೋಹಿಗಳನ್ನು ಹಾಗೂ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next