Advertisement

ತಂತ್ರಜ್ಞಾನದ ಮೂಲಕ ಜಾಗೃತಿ: ಟ್ವಿಟರ್ ಬಳಸಿ ಅರಿವು ಮೂಡಿಸುತ್ತಿರುವ ಪೊಲೀಸರು

04:13 PM May 08, 2020 | keerthan |

ಕೋವಿಡ್‍ 19 ಎದುರಿಸಲು ಇಡೀ ದೇಶ ತನ್ನನ್ನು ತೊಡಗಿಸಿಕೊಂಡ ರೀತಿ ಅನನ್ಯವಾದುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೆಡೆ ಜನರಿಗೆ ಸೋಂಕನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ, ಇನ್ನೊಂದೆಡೆ ಕಷ್ಟದಲ್ಲಿರುವ ನಾಗರಿಕರ ನೆರವಿಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ.

Advertisement

ಇದೇ ರೀತಿಯಾಗಿ ಸರ್ಕಾರದ ಇಲಾಖೆಗಳು ಸಹ ಕೋವಿಡ್‍ 19 ವಿರುದ್ಧ ಜಾಗೃತಿಗಾಗಿ ಶ್ರಮಿಸುತ್ತಿವೆ. ಇದಕ್ಕಾಗಿ ಅನೇಕ ಮಾಧ್ಯಮಗಳ ಮೊರೆ ಹೋಗುತ್ತಿವೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ದೇಶದ ಪ್ರಧಾನಮಂತ್ರಿಯವರು ಸೇರಿದಂತೆ ಸರ್ಕಾರದ ಸಚಿವರು, ಸೆಲೆಬ್ರಿಟಿಗಳು ತಮ್ಮ ಸಂವಹನಕ್ಕಾಗಿ ಟ್ವಿಟರ್‍ ಖಾತೆಗಳನ್ನು ಬಳಸುತ್ತಾರೆ.

ಕೋವಿಡ್‍ 19ನ ಸಂಕಷ್ಟ ಸಮಯದಲ್ಲಿ ಜನರಲ್ಲಿ ಅರಿವು ಮೂಡಿಸಲು, ಸಂದೇಶಗಳನ್ನು ರವಾನಿಸಲು ಉತ್ತಮ ಮಾಧ್ಯಮವಾಗಿ ಟ್ಟಿಟರ್ ಕೆಲಸ ಮಾಡುತ್ತಿದೆ. ದೇಶಾದ್ಯಂತ ಇರುವ ಪೊಲೀಸ್‍ ಹಾಗೂ ಕಾನೂನು ಪ್ರಾಧಿಕಾರಗಳು ಜನರೊಡನೆ ಸಂವಹನ ನಡೆಸಿ, ಜಾಗೃತಿ ಮೂಡಿಸಲು, ಜನರು ಕೈಗೊಳ್ಳಬೇಕಾದ ಕ್ರಮಗಳು, ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಂಬ ವಿಷಯಗಳನ್ನು ಜನರಿಗೆ ತಿಳಿಸಲು, ಅನಗತ್ಯ ಆತಂಕಗಳಿಗೆ ಗುರಿಯಾಗದಂತೆ ಶಾಂತತೆ ಕಾಯ್ದುಕೊಳ್ಳಲು ಟ್ವಿಟರ್ ಮೊರೆ ಹೋಗುತ್ತಿವೆ.

ಹಾಸ್ಯ, ಸ್ಥಳೀಯ ಅರಿವನ್ನು ಒಳಗೊಂಡ ಟ್ವೀಟ್ ಚ್ಯಾಟ್‌ಗಳು, ಟ್ವೀಟ್ ಥ್ರೆಡ್‌ಗಳು, ರೀಟ್ವೀಟ್‌ಗಳು, ಹ್ಯಾಶ್‌ಟ್ಯಾಗ್‌ಗಳು, ಫೋಟೋ ಮತ್ತು ವೀಡಿಯೋಗಳಂಥ ವಿವಿಧ ಸಾಧನಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ಭಾರತೀಯ ಪೊಲೀಸ್‍ ಇಲಾಖೆ ಧನಾತ್ಮಕ ಹಾಗೂ ವಿನೂತನ ಟ್ವೀಟ್‌ಗಳೊಂದಿಗೆ ದೇಶಾದ್ಯಂತ ಜನರ ಮೆಚ್ಚಿಗೆ ಗಳಿಸಿದೆ.

ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ. ಲಾಕ್‌ ಡೌನ್‌ಗೆ ಸಂಬಂಧಿಸಿದಂತೆ ಸಾರ್ವಜನಿಕ ವಿಚಾರಣೆ ಮತ್ತು ಆತಂಕಗಳನ್ನು ನಿವಾರಿಸಲು ಟ್ವೀಟ್ ಚ್ಯಾಟ್‌ಅನ್ನು ನಡೆಸಿಕೊಡುವುದಕ್ಕೆ ದೆಹಲಿ ಪೊಲೀಸರು @DelhiPolice ಸೇವೆಯನ್ನು ಬಳಸಿದ್ದು.

Advertisement

ಕೋವಿಡ್‍ ನಂಥ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ, ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುವ ಈ ಸಂದರ್ಭದಲ್ಲಿ ತಾಂತ್ರಿಕ  ಅಡಚಣೆಗಳುಂಟಾಗುವುದು ಸಹಜ. ಟ್ವಿಟರ್ ಖಾತೆಯ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಮತ್ತು ಪ್ರಮುಖ ಯೋಜನಾ ಸಲಹೆಗಳನ್ನು ಪಡೆದುಕೊಳ್ಳುವುದಕ್ಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಬಂಧಿತ ಪ್ರಾಧಿಕಾರಗಳು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳೊಂದಿಗೆ ಮುಕ್ತ ಸಂವಹನ ವಾಹಿನಿಗಳನ್ನು ಟ್ವಿಟರ್‍ ಹೊಂದಿದೆ.

ಕೋವಿಡ್-19 ಕುರಿತಾದ ಇತ್ತೀಚಿನ ಹಾಗು ವಿಶ್ವಸನೀಯ ಮಾಹಿತಿಗಾಗಿ ಟ್ವಿಟ್ಟರ್‌ ನಲ್ಲಿರುವ ಪ್ರಮುಖ ಪೋಲಿಸ್ ಖಾತೆಗಳ ಟ್ವಿಟ್ಟರ್ ಪಟ್ಟಿಯನ್ನು ಈ ಸೇವೆಯು ಪ್ರಕಟಿಸಿದೆ. ಇದರನ್ವಯ ಟ್ವಿಟರ್‍ ಸಿಬ್ಬಂದಿ ತಾಂತ್ರಿಕ ಸಹಾಯಕ್ಕೆ ಪೊಲೀಸ್‍ ಇಲಾಖೆಯೊಡನೆ ಸಹಾಯಕ್ಕೆ ಲಭ್ಯವಿರುತ್ತಾರೆ.

@BlrCityPolice)

ಟ್ವಿಟರ್ ಸೇವೆಯನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಬೆಂಗಳೂರು ಸಿಟಿ ಪೊಲೀಸ್ @BlrCityPolice   ಯಶಸ್ವಿಯಾಗಿದೆ. ಬೆಂಗಳೂರು ಕೋವಿಡ್‍ 19 ವಿರುದ್ಧ ಮುಂಜಾಗ್ರತೆ ಕ್ರಮಗಳ ಪ್ರಚಾರಾಂದೋಲನವನ್ನು ನಡೆಸುತ್ತಿದೆ. ಈ ಪ್ರಚಾರಾಂದೋಲನದ ಭಾಗವಾಗಿ ಪೋಲಿಸ್ ಖಾತೆಯು ಇಂತಹ ಸಂಕಷ್ಟದ ಸಮಯದಲ್ಲಿ ಜನರಲ್ಲಿ ಅರಿವು ಮೂಡಿಸಲು, ಜನರಲ್ಲಿ ಭರವಸೆ ತುಂಬಲು ಅನೇಕ ವಿಚಾರಗಳನ್ನು ಟ್ವಿಟರ್ ಮೂಲಕ ಪ್ರಸರಿಸುತ್ತಿದೆ.

ಜನರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿರಬಹುದು ಅಥವಾ ಲಾಕ್‌ಡೌನ್ ಸಮಯದಲ್ಲಿ ಯಾವ ರೀತಿ ಸಮಯ ಬಳಕೆ ಮಾಡಿಕೊಂಡು ಆನಂದಿಸಬಹುದು ವಿಷಯವಿರಬಹುದು. ಜನರ ಬಗ್ಗೆ ತನಗಿರುವ ಕಾಳಜಿ ಮತ್ತು ಚಿಂತೆಯನ್ನು ವ್ಯಕ್ತಪಡಿಸಲು ಟ್ವಿಟರ್ ಮೊರೆ ಹೋಗಿದೆ.

ಕೋವಿಡ್‍ 19 ಜಾಗೃತಿಗಾಗಿ ಪ್ರಚುರ ಪಡಿಸುತ್ತಿರುವ ವಿಷಯಗಳು, ಇದು ಸರ್ಕಾರಿ ಇಲಾಖೆಯ ಟ್ವಿಟರ್‍ ಖಾತೆಯೇ? ಎಂದು ಅಚ್ಚರಿಪಡುವಷ್ಟು ಕ್ರಿಯೇಟಿವ್‍ ಆಗಿವೆ. ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡಲು ಕೆಂಪೇಗೌಡ ಪ್ರತಿಮೆಯ ಫೊಟೋ ಹಾಕಿ ಅದಕ್ಕೆ ಮಾಸ್ಕ್ ಹಾಕಿದಂತೆ ಫೋಟೋ ಶಾಪ್‍ ಮಾಡಿ ಪ್ರತಿಭೆ ತೋರಿದೆ!

ಅಲ್ಲದೇ ಕನ್ನಡದ ಖ್ಯಾತ ಚಿತ್ರನಟರಾದ ಶಿವರಾಜ್‍ಕುಮಾರ್, ಸುದೀಪ್‍, ರವಿಶಂಕರ್, ರಿಷಿ ಮುಂತಾದವರ ಸಂದೇಶದ ವಿಡಿಯೋಗಳನ್ನು ಹರಿಯಬಿಟ್ಟಿದೆ. ಇದಕ್ಕೆ ಹಾಕಿರುವ ಒಕ್ಕಣೆಗಳು ಕೂಡ ಕ್ರಿಯಾತ್ಮಕವಾಗಿವೆ. ಈ ವಿಡಿಯೋವನ್ನು ನೀವು ಮನೆಯಲ್ಲಿದ್ದು ನೋಡುತ್ತಿದ್ದೀರೆಂದು ನಾವು ನಂಬಿದ್ದೇವೆ! ಎಂಬ ಶೀರ್ಷಿಕೆ ಒಟ್ಟಿಗೇ ಅನೇಕ ಸಂದೇಶಗಳನ್ನು ನೀಡುತ್ತದೆ!

ಇದಲ್ಲದೇ ಯೋಗರಾಜ ಭಟ್‍ ಬರೆದು, ಅರ್ಜುನ್‍ ಜನ್ಯ ಸಂಗೀತ ನೀಡಿ ವಿಜಯ ಪ್ರಕಾಶ್ ಹಾಡಿರುವ, ಯಾರು ನೀನು ಮಾನವ, ಎಂಬ ಜಾಗೃತಿ ಹಾಡನ್ನು ಹಂಚಿಕೊಂಡಿದೆ.

ಇಷ್ಟೇ ಅಲ್ಲ, ಬ್ಯಾಂಕಿನವರು ನಿಮ್ಮ ಡೆಬಿಟ್‍, ಕ್ರೆಡಿಟ್‍ ಕಾರ್ಡ್‍ ವಿವರ, ಪಿನ್‍ ಕೇಳುವುದಿಲ್ಲ.  ಅಂಥ ಕರೆ ಸ್ವೀಕರಿಸಿದರೆ ತಕ್ಷಣ ಕರೆ ಅಂತ್ಯಗೊಳಿಸಿ, ಪೊಲೀಸರಿಗೆ ಮಾಹಿತಿ ನೀಡಿ ಎಂಬ ಜಾಗೃತಿ ಸಂದೇಶಗಳನ್ನು ನೀಡುತ್ತಿದೆ.

ವಿಶೇಷವೆಂದರೆ ಗ್ರಾಫಿಕ್‍ ಮಾಡಿ ಸುಂದರ ಚಿತ್ರಗಳು ಮತ್ತು ಆಕರ್ಷಕ ಶೀರ್ಷಿಕೆಗಳ ಮೂಲಕ ಟ್ವಿಟರ್‍ ನಲ್ಲಿ ಬೆಂಗಳೂರು ಪೊಲೀಸ್‍ ಹಂಚುತ್ತಿದೆ. ಪೊಲೀಸ್‍ ವ್ಯವಸ್ಥೆಯಲ್ಲಿ ಇಂಥವೆಲ್ಲ ಧನಾತ್ಮಕ ವಿಷಯಗಳೇ ಸರಿ.

ಬೆಂಗಳೂರು ನಗರ ಪೋಲಿಸ್ ಇಲಾಖೆಯ ಕಮಾಂಡ್ ಸೆಂಟರ್‌ನ ಡಿಸಿಪಿ ಇಶಾ ಪಂತ್ @isha_pant ‘‘ ಬೆಂಗಳೂರು ನಗರ ಪೊಲೀಸ್ ಟ್ವಿಟ್ಟರ್‌ನಲ್ಲಿ ಕೋವಿಡ್‍ 19 ವಿರುದ್ಧ ಪ್ರಚಾರಾಂದೋಲನ ಆರಂಭಿಸಿದ್ದು ಇದರ ಮೂಲಕ ನಾವು, ನಮ್ಮ ದಿನದ ಹೀರೋ ಸರಣಿಯಲ್ಲಿ ಧನಾತ್ಮಕ ಕಥೆಗಳನ್ನು ಪ್ರಕಟಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಲಾಕ್‌ಡೌನ್ ಹಾಗು ಇತರ ಕೋವಿಡ್-19 ಸಂಬಂಧಿತ ವಿಚಾರಣೆಗಳ ಕುರಿತಂತೆ ಜನರು ಕಳುಹಿಸುವ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೂ ನಾವು ಟ್ವಿಟ್ಟರ್ ಬಳಸುತ್ತಿದ್ದೇವೆ. ಈ ಲಾಕ್‌ಡೌನ್ ನಿಂದಾಗಿ ಇಡೀ ದೇಶವು ಸವಾಲು ಎದುರಿಸುತ್ತಿರುವಂತಹ ಸಮಯದಲ್ಲಿ ನಾಗರಿಕರೊಂದಿಗೆ ಪರಿಣಾಮಕಾರಿಯಾಗಿ ಮತ್ತು ಮುಕ್ತವಾಗಿ ತೊಡಗಿಕೊಳ್ಳಲು ಟ್ವಿಟರ್‍ ನಮಗೆ ಅಪಾರ ನೆರವಾಗುತ್ತಿದೆ. ನಮ್ಮ ಸಂದೇಶಗಳನ್ನು ಜನರಿಗೆ ನೇರವಾಗಿ ರವಾನಿಸಿ ಅವರಿಂದ ಹಿಮ್ಮಾಹಿತಿ ಪಡೆದುಕೊಳ್ಳುವುದಕ್ಕೆ ಕೂಡ ಈ ಸೇವೆ ನಮಗೆ ಸಹಕಾರಿಯಾಗಿದೆ ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ.

 

ಕೆ.ಎಸ್‍. ಬನಶಂಕರ  ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next