Advertisement

ಹತ್ತು ವರ್ಷಗಳಿಂದ ಕರ್ತವ್ಯದಲ್ಲಿದ್ದ ಪೊಲೀಸ್‌ ಶ್ವಾನ “ಸುಧಾ’ಗೆ ಭಾವಪೂರ್ಣ ಅಂತಿಮ ವಿದಾಯ

06:45 PM Jul 24, 2021 | Team Udayavani |

ಮಂಗಳೂರು : ಕಳೆದ ಸುಮಾರು ಹತ್ತು ವರ್ಷಗಳಲ್ಲಿ ಹತ್ತು ಹಲವು ಅಪರಾಧ ಪ್ರಕರಣಗಳನ್ನು ಭೇದಿಸಲು ಮಂಗಳೂರು ಪೊಲೀಸರಿಗೆ ನೆರವಾಗಿದ್ದ ಶ್ವಾನ “ಸುಧಾ’ ಶನಿವಾರ ಮೃತಪಟ್ಟಿದ್ದು ಸಕಲ ಸರಕಾರಿ ಗೌರವಗಳೊಂದಿಗೆ ಪೊಲೀಸ್‌ ಮೈದಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Advertisement

ಡಾಬರ್‌ವೆುನ್‌ ಪಿಂಚನ್‌ ಜಾತಿಗೆ ಸೇರಿದ “ಸುಧಾ’ 2011ರ ಮಾ.15ರಂದು ಜನಿಸಿತ್ತು. ಮೂರು ತಿಂಗಳ ಮರಿ ಇರುವಾಗಲೇ ಮಂಗಳೂರಿಗೆ ಕರೆತರಲಾಗಿತ್ತು. 2012ರ ಎ.2ರಂದು ಪೊಲೀಸ್‌ ಇಲಾಖೆಯ ಕರ್ತವ್ಯಕ್ಕೆ ಸೇರ್ಪಡೆಗೊಂಡಿತ್ತು. ಕಳೆದ 5 ತಿಂಗಳುಗಳ ಹಿಂದೆ ಕ್ಯಾನ್ಸರ್‌ ಪತ್ತೆಯಾಗಿತ್ತು. ಅದಕ್ಕೆ ಚಿಕಿತ್ಸೆ ಕೂಡ ನೀಡಲಾಗಿತ್ತು. ಲವಲವಿಕೆಯಲ್ಲೇ ಇದ್ದ ಸುಧಾ ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯಕ್ಕೀಡಾಗಿತ್ತು. ಶನಿವಾರ ಬೆಳಗ್ಗೆ ಕೊನೆಯುಸಿರೆಳೆಯಿತು.

ಭಾವುಕವಾದ ಖಾಕಿ ಪಡೆ
ಶ್ವಾನದ ಅಂತ್ಯಸಂಸ್ಕಾರವನ್ನು ಪೊಲೀಸ್‌ ಮೈದಾನದಲ್ಲಿ ಮಂಗಳೂರು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಮೃತದೇಹವನ್ನು ಶ್ವೇತವಸ್ತ್ರದಲ್ಲಿ ಸುತ್ತಿ ಪುಷ್ಪಗಳಿಂದ ಅಲಂಕರಿಸಿ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪೊಲೀಸ್‌ ಅಧಿಕಾರಿಗಳು, ಸಿಬಂದಿ ಅಂತಿಮ ನಮನ ಸಲ್ಲಿಸಿದರು. ಪೊಲೀಸ್‌ ವಾದ್ಯ ನುಡಿಸಿ ಕುಶಾಲು ತೋಪು ಹಾರಿಸಿ ಗೌರವ ವಿದಾಯ ನೀಡಲಾಯಿತು. ಅಂತ್ಯಸಂಸ್ಕಾರ ಸ್ಥಳದಲ್ಲಿ ತುಳಸಿ ಗಿಡ ನೆಡಲಾಯಿತು. ಸುಧಾಳನ್ನು ನೋಡಿಕೊಳ್ಳುತ್ತಿದ್ದ(ಹ್ಯಾಂಡ್ಲರ್‌) ಸಂದೀಪ್‌ ದುಃಖೀತರಾಗಿದ್ದರು. ಇತರ ಪೊಲೀಸ್‌ ಅಧಿಕಾರಿ, ಸಿಬಂದಿ ಕೂಡ ಭಾವುಕರಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್‌, ಸಿಎಆರ್‌ ಎಸಿಪಿ ಎಂ.ಎ ಉಪಾಸೆ ಮತ್ತಿತರು ಅಧಿಕಾರಿಗಳು ಪಾಲ್ಗೊಂಡಿದ್ದರು.

ಬೈಕ್‌ಗೆ ಸುಧಾ ಹೆಸರಿಟ್ಟ ಸಂದೀಪ್‌
ಸಂದೀಪ್‌ ಅವರದ್ದು ಸುಧಾಳೊಂದಿಗೆ 10 ವರ್ಷಗಳ ಒಡನಾಟ. ಮೂರು ತಿಂಗಳ ಮರಿ ಇರುವಾಗಲೇ ಅದನ್ನು ನೋಡಿಕೊಳ್ಳಲು ಆರಂಭಿಸಿದ್ದರು. ತನ್ನ ಬೈಕ್‌ಗೂ ಸುಧಾ ಎಂದೇ ಹೆಸರಿಟ್ಟಿದ್ದರು. ಒಮ್ಮೆ ಸಂದೀಪ್‌ ಅವರು ಹಣವನ್ನು ಎಲ್ಲೋ ಕಳೆದುಕೊಂಡಿದ್ದರು. ಎಲ್ಲಿದೆ ಎಂಬುದೇ ಗೊತ್ತಾಗಿರಲಿಲ್ಲ. ಸುಧಾಳ ಮೂಲಕ ಹುಡುಕುವ ಪ್ರಯತ್ನವಾಗಿ “ವಾಸನೆ’ಯನ್ನು ಹಿಡಿಸಿದರು. ಕೆಲವೇ ಹೊತ್ತಿನಲ್ಲಿ ಸುಧಾ ನೂರು ರೂಪಾಯಿಯ ನೋಟನ್ನು ಸಂದೀಪ್‌ ಅವರ ಕೈಗಿಟ್ಟಿದ್ದಳು!.

ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಕರ್ತವ್ಯ
ಮಂಗಳೂರು ಪೊಲೀಸ್‌ ಕಮಿಷನರೆಟ್‌ನಲ್ಲಿ ಅತೀ ಹೆಚ್ಚು ಸೇವೆ ಸಲ್ಲಿಸಿದ ಶ್ವಾನ ಎಂಬ ಹೆಗ್ಗಳಿಕೆಗೆ “ಸುಧಾ’ ಪಾತ್ರವಾಗಿದೆ. ಕಳೆದ 10 ವರ್ಷಗಳಲ್ಲಿ ಪೊಲೀಸ್‌ ಕಮಿಷನರೆಟ್‌ನ ಬಹುತೇಕ ಎಲ್ಲ ಅಪರಾಧ ಪ್ರಕರಣಗಳ ಪತ್ತೆ ಸಂದರ್ಭದಲ್ಲಿಯೂ ಇದರ ಸೇವೆ ಪಡೆದುಕೊಳ್ಳಲಾಗಿದೆ. ಕೊನೆಯ ಆರು ತಿಂಗಳುಗಳ ಕಾಲ ಕುಶಾಲಪ್ಪ ಅವರು ನೋಡಿಕೊಳ್ಳುತ್ತಿದ್ದರು. ಉಳಿದಂತೆ ಸುದೀರ್ಘ‌ ಕಾಲ ಸಂದೀಪ್‌ ಅವರೇ ಸುಧಾಳನ್ನು ನೋಡಿಕೊಳ್ಳುತ್ತಿದ್ದರು.

Advertisement

ಇದನ್ನೂ ಓದಿ : ಪಶು ಕಲ್ಯಾಣ ಸಹಾಯವಾಣಿಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ : ಸಚಿವ ಪ್ರಭು ಚವ್ಹಾಣ್

ಆರೋಪಿಗಳ ಜಾಡು ಹಿಡಿದು…
ಸುಧಾಳ ಹಲವಾರು ಸಾಧನೆಗಳಲ್ಲಿ ಗಂಜಿಮಠದ ಕೊಲೆ ಪ್ರಕರಣವನ್ನು ಭೇದಿಸಿರುವುದೂ ಒಂದು. ಈ ಪ್ರಕರಣದಲ್ಲಿ ತಂದೆಯೇ ಮಗನನ್ನು ಕೊಂದಿದ್ದ. ತನಿಖೆ ನಡೆಸುವಾಗ ಸುಮಾರು 200 ಮೀಟರ್‌ ದೂರದಲ್ಲೇ ಆರೋಪಿ ಇದ್ದ. ಇದನ್ನು ಪತ್ತೆ ಹಚ್ಚಿದ್ದು ಸುಧಾ. ಇದೇ ರೀತಿ ಉಳ್ಳಾಲದ ಮೀನುಮಾರುಕಟ್ಟೆಯ ಕಾವಲುಗಾರನ ಕೊಲೆ ಪ್ರಕರಣವನ್ನು ಕೂಡ ಭೇದಿಸಿದ್ದು ಸುಧಾ. ಹಲವಾರು ಕಳ್ಳತನ ಪ್ರಕರಣಗಳನ್ನು ಕೂಡ ಭೇದಿಸಲು ಪೊಲೀಸರಿಗೆ ಈ ಶ್ವಾನ ನೆರವಾಗಿದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿ, ಸಿಬಂದಿಯವರು. ಪೊಲೀಸ್‌ ಇಲಾಖೆಯಲ್ಲಿ ಸ್ನಿಫ‌ರ್‌(ಬಾಂಬ್‌ ಪತ್ತೆ), ಕ್ರೈಂ ಮತ್ತು ಗಾಂಜಾ ಪತ್ತೆಗೆ ಶ್ವಾನಗಳನ್ನು ಬಳಕೆ ಮಾಡಲಾಗುತ್ತಿದೆ. ಸುಧಾ ಕ್ರೈಂ ಡಿಟೆಕ್ಟಿವ್‌ ಆಗಿದ್ದಳು.

ಹೆಚ್ಚು ಚುರುಕಿನ ಶ್ವಾನ
ಪೊಲೀಸ್‌ ಇಲಾಖೆಯಲ್ಲಿ ಶ್ವಾನದಳಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಸುಧಾ ಮಂಗಳೂರು ಪೊಲೀಸರಿಗೆ ಹಲವಾರು ಕ್ಲಿಷ್ಟಕರ ಪ್ರಕರಣ ಭೇದಿಸಲು ನೆರವಾಗಿದೆ. ಇದು ಎಲ್ಲ ಶ್ವಾನಗಳಿಗಿಂತಲೂ ಹೆಚ್ಚು ಚುರುಕಿನ ಶ್ವಾನವಾಗಿತ್ತು. ಎರಡು ಕೊಲೆ ಪ್ರಕರಣ ಸೇರಿದಂತೆ ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಕೆಲಸ ಮಾಡಿದೆ. ನಗರ ಪೊಲೀಸ್‌ನ ಶ್ವಾನದಳದಲ್ಲಿ 5 ಶ್ವಾನಗಳಿತ್ತು. ಅದರಲ್ಲಿ ಒಂದು (ಸುಧಾ)ಈಗ ಮೃತಪಟ್ಟಿದೆ. 2 ತರಬೇತಿಯಲ್ಲಿದ್ದು ಶೀಘ್ರದಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಲಿವೆ. ಸುಧಾಳ ಜಾಗಕ್ಕೆ ಇನ್ನೊಂದು ಶ್ವಾನವನ್ನು ಇಲಾಖೆಯ ಅನುಮತಿ ಪಡೆದು ತರಿಸಿಕೊಳ್ಳಲಾಗುತ್ತದೆ.
-ಎನ್‌.ಶಶಿಕುಮಾರ್‌, ಮಂಗಳೂರು ಪೊಲೀಸ್‌ ಆಯುಕ್ತರು

ಸೂಕ್ಷ್ಮಮತಿ
ಮೂರು ತಿಂಗಳ ಮರಿಯಿಂದ ನಾನು ಆಕೆಯನ್ನು ಸಾಕಿದ್ದೇನೆ. ಅತ್ಯಂತ ಚುರುಕಿನ ಶ್ವಾನ. ಎಷ್ಟೋ ಪ್ರಕರಣಗಳನ್ನು ಭೇದಿಸಲು ನೆರವಾಗಿದೆ. ನಾನು ಅರ್ಧ ತಾಸು ಎಲ್ಲಿಯಾದರೂ ಹೊರ ಹೋಗುವುದಾದರೂ ನಾನು ಎಲ್ಲಿ ಕುಳ್ಳಿರಿಸಿ ಹೋಗುತ್ತೇನೋ ಅಲ್ಲಿಯೇ ನನಗಾಗಿ ಕಾಯುತ್ತಿದ್ದಳು. ಅತ್ಯಂತ ಸೂಕ್ಷ್ಮಮತಿಯವಳು.
-ಸಂದೀಪ್‌

Advertisement

Udayavani is now on Telegram. Click here to join our channel and stay updated with the latest news.

Next