Advertisement

ಸಂಚಾರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯ ಉಪಕ್ರಮ

10:54 AM Feb 10, 2018 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿ ಮಂಗಳೂರು ನಗರಕ್ಕೆ ಕಾಡುತ್ತಿರುವ ಸಂಚಾರ ಸಮಸ್ಯೆಯನ್ನು ಸ್ಮಾರ್ಟ್‌
ಟೆಕ್ನಾಲಜಿ ಆಧಾರದಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ದಿಕ್ಸೂಚಿ ಯಾಗಬಲ್ಲ ‘ವೇರಿಯೆಬಲ್‌ ಮೆಸೇಜ್‌
ಸೈನೇಜ್‌’ (ವಿ.ಎಂ.ಎಸ್‌.) ಎಂಬ ಈ ವ್ಯವಸ್ಥೆಯನ್ನು ಅನುಷ್ಠಾನಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ.

Advertisement

ಈ ಯೋಜನೆಯಂತೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಹೈಟೆಕ್‌ ಮಾದರಿಯ ಡಿಜಿಟಲ್‌ ಸೂಚನ ಫಲಕಗಳನ್ನು ಅಳವಡಿಸಿ ಅದರಲ್ಲಿ ನಗರದ ಸಂಚಾರ ವ್ಯವಸ್ಥೆ ಬಗೆಗಿನ ಮಾಹಿತಿ ಪ್ರದರ್ಶಿಸಲಾಗುತ್ತದೆ. ಇದು ಸುಮಾರು 1 ಕೋಟಿ ರೂ. ಮೊತ್ತದ ಯೋಜನೆಯಾಗಿದ್ದು, ಇದರ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಉದ್ದೇಶಿತ ವಿ.ಎಂ.ಎಸ್‌. ವ್ಯವಸ್ಥೆಯನ್ನು ಅಳವಡಿಸಲು ಪೊಲೀಸ್‌ ಆಯುಕ್ತರು ವಿಶೇಷ ಆಸಕ್ತಿ ಹೊಂದಿದ್ದು, ಶುಕ್ರವಾರ ಕಮಿಷನರ್‌ ಕಚೇರಿಯಲ್ಲಿ ಇದರ ಮಾದರಿ ಪ್ರದರ್ಶನ ನಡೆಯಿತು.

ಕಾರ್ಯನಿರ್ವಹಣೆ ಹೇಗೆ ?
ಡಿಜಿಟಲ್‌ ಸೂಚನ ಫಲಕವು ಸ್ಯಾಟಲೈಟ್‌ ಆಧಾರಿತವಾಗಿ ನಡೆಯುವ ಆಟೋಮ್ಯಾಟಿಕ್‌ ಸಿಸ್ಟಂ. ಇಂಟರ್‌ನೆಟ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಲಿಂಕ್‌ ಹೊಂದಿರುತ್ತದೆ. ವಾಹನ ಚಾಲಕರಿಗೆ ಈ ಸೂಚನ ಫಲಕವು ಅವರು ಸಾಗುತ್ತಿರುವ ರಸ್ತೆ, ಪ್ರಮುಖ ಜಂಕ್ಷನ್‌ಗಳಿಗಿರುವ ದೂರವನ್ನು ತಿಳಿಸುತ್ತದೆ. ಯಾವ
ಜಂಕ್ಷನ್‌ ಅಥವಾ ರಸ್ತೆಯಲ್ಲಿ ಸಂಚಾರ ದಟ್ಟಣೆಯಿದೆ, ಅಪಘಾತಗಳು ಎಲ್ಲಾದರೂ ಸಂಭವಿಸಿವೆಯೇ, ಬಂದೋ ಬಸ್ತು
ವ್ಯವಸ್ಥೆ, ಯಾವ ರಸ್ತೆ ಯಲ್ಲಿ ವಿಐಪಿಗಳ ಆಗಮನಕ್ಕಾಗಿ ಬ್ಲಾಕ್‌ ಮಾಡಲಾಗಿದೆ, ಇದಕ್ಕೆ ಯಾವ ಪರ್ಯಾಯ ರಸ್ತೆಯನ್ನು ಬಳಕೆಗೆ ಸೂಚನ ಫಲಕ ಮಾಹಿತಿಯನ್ನೂ ನೀಡುತ್ತದೆ. ಇದರಿಂದ ಟ್ರಾಫಿಕ್‌ ದಟ್ಟಣೆ ಯಲ್ಲಿ ಸಿಲುಕದೆ ನಿಗದಿತ ಸಮಯಕ್ಕೆ ಸಂಬಂಧಪಟ್ಟ ಸ್ಥಳವನ್ನು ತಲುಪಲು ವಾಹನ ಸವಾರರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಈ ತಂತ್ರಜ್ಞಾನವನ್ನು ಆವಿಷ್ಕರಿಸಿರುವ ಬೆಲ್‌ ಕಂಪೆನಿಯ ಉಪಾಧ್ಯಕ್ಷ ಆ್ಯಂಟನಿ.

ಈಗಾಗಲೇ ಮೈಸೂರಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಇದಕ್ಕೊಂದು ಮೊಬೈಲ್‌ ಆ್ಯಪ್‌ನ್ನು ತಯಾರಿಸಿದ್ದು, ಅದು ಪೊಲೀಸರಿಗೆ
ಈ ವ್ಯವಸ್ಥೆ ಕಾರ್ಯಗತಗೊಳಿಸಲು ಸಹಕಾರಿಯಾಗಲಿದೆ ಎಂದು ಆ್ಯಂಟನಿ ಹೇಳುತ್ತಾರೆ.

Advertisement

ಜಾಗೃತಿ, ಮಾಹಿತಿ
ಟ್ರಾಫಿಕ್‌ ಮಾಹಿತಿಯ ಜತೆಗೆ ಈ ಸೂಚನ ಫಲಕವು ವಾಹನ ಸವಾರರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗೆಗೂ ತಿಳಿಸುತ್ತದೆ. ಹವಾಮಾನ ವೈಪರೀತ್ಯ ಇತ್ಯಾದಿ ಜಾಗೃತಿ ಸಂದೇಶಗಳನ್ನು ಒದಗಿಸಲಿದೆ. ಇದರ ನಿರ್ವಹಣೆಗೆ ವೆಚ್ಚಕ್ಕೆ ಸಬಂಧಪಟ್ಟಂತೆ ವಾಣಿಜ್ಯ ಜಾಹೀರಾತು ಬಳಕೆಗೂ ಅವಕಾಶವಿದೆ ಎನ್ನುತ್ತಾರೆ ತ್ರಿ ಎಂ ಇಂಡಿಯಾ ಸಂಸ್ಥೆಯ ಟೆಕ್ನೀಷಿಯನ್‌ ಚಿಂತನ್‌.

ಏನಿದು ವಿ.ಎಂ.ಎಸ್‌.?
ಸುಮಾರು 40ರಿಂದ 50 ಅಡಿ ಎತ್ತರದಲ್ಲಿ 4.7 ಮೀಟರ್‌ ಉದ್ದ ಮತ್ತು 2 ಮೀಟರ್‌ ಅಗಲದ ಡಿಜಿಟಲ್‌ ಸೂಚನ ಫಲಕವನ್ನು ಹಂಪನಕಟ್ಟೆ, ಪಂಪ್‌ವೆಲ್‌ ಜಂಕ್ಷನ್‌ ಮತ್ತು ಕೆಪಿಟಿ ಬಳಿ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಒಂದೊಂದು ಸೂಚನ ಫಲಕಕ್ಕೆ ಅಂದಾಜು 30- 35 ಲಕ್ಷ ರೂ. ವೆಚ್ಚ ತಗುಲಲಿದೆ ಎನ್ನುತ್ತಾರೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌.

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next