Advertisement

ವ್ಹೀಲಿಂಗ್‌ಗಾಗಿ ಬೈಕ್‌ ಕದಿಯುತ್ತಿದ್ದ ಆರು ಮಂದಿ ಪೊಲೀಸರ ವಶಕ್ಕೆ

02:24 PM May 06, 2023 | Team Udayavani |

ಬೆಂಗಳೂರು: ವ್ಹೀಲಿಂಗ್‌ ಮಾಡಲು ಅಪ್ರಾಪ್ತರ ಜತೆ ಸೇರಿ ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳ ಕಳವು ಮಾಡುತ್ತಿದ್ದ ಆರೋಪಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ವಿದ್ಯಾರಣ್ಯಪುರ ನಿವಾಸಿ ಶರತ್‌ ಕಾಂತರಾಜ್‌ ಕುಮಾರ್‌ (22) ಬಂಧಿತ. ಐವರು ಕಾನೂನು ಸಂಘರ್ಷಕ್ಕೊಳಗಾದವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯಿಂದ 8.5 ಲಕ್ಷ ರೂ. ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ವ್ಹೀಲಿಂಗ್‌ಚಟ ಅಂಟಿಸಿಕೊಂಡಿರುವ ಶರತ್‌, ಐವರು ಅಪ್ರಾಪ್ತರ ತಂಡ ಕಟ್ಟಿಕೊಂಡಿದ್ದ. ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ. ಕೊಡಿಗೇಹಳ್ಳಿ, ಮಾಗಡಿ ರಸ್ತೆ, ಬಸವೇಶ್ವರನಗರ, ಚಾಮರಾಜಪೇಟೆ, ವಿದ್ಯಾರಣ್ಯಪುರ ಸೇರಿ ಹಲವು ಕಡೆ ದ್ವಿಚಕ್ರ ವಾಹನಗಳ ಕಳವು ಮಾಡಿದ್ದ. ಏ.30ರ ತಡರಾತ್ರಿ ನಾಕಬಂದಿ ಹಾಕಿ ಪೊಲೀಸರು ತಪಾಸಣೆ ನಡೆಸುವ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಶರತ್‌ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದ್ದ. ಈ ಬಗ್ಗೆ ಅನುಮಾನಗೊಂಡು ಪೊಲೀಸರು ಆತನನ್ನು ಹಿಂಬಾಲಿಸಿ ಹಿಡಿದು ಪರಿಶೀಲನೆ ನಡೆಸಿದಾಗ ವಾಹನ ಕಳವು ಬೆಳಕಿಗೆ ಬಂದಿದೆ.

ಈತನ ಬಂಧನದಿಂದ 12 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next