Advertisement

“ಪೊಗರು”ಬ್ರಾಹ್ಮಣ ನಿಂದನೆ ಎಷ್ಟು ಸರಿ? ಇನ್ನಾದರೂ ಎಚ್ಚೆತ್ತುಕೊಳ್ಳಿ..!

06:13 PM Feb 24, 2021 | Team Udayavani |

ರಾಮಾನುಜಾಚಾರ್ಯರು ಈ ನಾಡಿದ ಶ್ರೇಷ್ಠ ಸಂತರು ಹಾಗೂ ವೈಷ್ಣವ ಪರಂಪರೆಯ ಮುಖ್ಯ ಬಿಂದು. ಸಮಾಜದ ಕೆಳವರ್ಗದವರಿಗೂ ದೇವರ ದರ್ಶನ ಮಾಡಲು ಮೇಲುಕೋಟೆಯಲ್ಲಿ ಅವಕಾಶ ಮಾಡಿಕೊಟ್ಟ ಮೊಟ್ಟ ಮೊದಲ‌ ಸಮಾಜ ಸುಧಾರಕರು. ತಮಗೆ ಗುರುಗಳು ನೀಡಿದ ಮಂತ್ರದಿಂದ ಮೋಕ್ಷ ಸಿಗುತ್ತದೆ ಎಂದು ತಿಳಿದಾಗ ನನಗೊಬ್ಬನಿಗೆ ಮೋಕ್ಷ ಸಿಕ್ಕರೆ ಸಾಲದೆಂದು ಊರಿನ ಎಲ್ಲರನ್ನೂ ಕರೆದು ಯಾವ ಬೇಧವೂ ಇಲ್ಲದೆ ಮಂತ್ರೋಪದೇಶ ಮಾಡಿದವರು. ಇಂದಿಗೂ ಮೇಲುಕೋಟೆಯಲ್ಲಿ ಬೀಬಿ ನಾಸಿಯಾರ್ ಎಂಬ ಹೆಣ್ಣುಮಗಳೊಬ್ಬಳ ಆರಾಧನೆಯಾಗುತ್ತದೆ. ಕಾರಣ ಆಕೆ ಚೆಲುವನಾರಾಯಣನಿಗಾಗಿ ದೆಹಲಿಯ ಸುಲ್ತಾನಿಯತ್ತನ್ನೂ ಬಿಟ್ಟು ಬಂದವಳೆಂದು. ಇಷ್ಟೆಲ್ಲಾ ಯಾಕೆ ಹೇಳ್ತಿದ್ದೀರಿ? ಎಂದು ನಿಮಗೆ ಅನ್ನಿಸಿರಬಹುದು. ಅದಕ್ಕೂ ಕಾರಣವಿದೆ, ಇಷ್ಟೆಲ್ಲಾ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಶ್ರೇಷ್ಠ ರಾಮಾನುಜರ ಪಂಥಕ್ಕೆ ಇಂದು ಅವಮಾನವಾಗಿದೆ. ಯಾವ ವೈಷ್ಣವ ಅಯ್ಯಂಗಾರ್ ಕುಟುಂಬ ಒಂದರ ಚಿತ್ರವನ್ನು ತುಚ್ಛವಾಗಿ ತೋರಿಸಿದ್ದು ಇಂದು ವಿವಾದಕ್ಕೆ ಕಾರಣವಾಗಿದೆ.

Advertisement

ಈ ರಾಷ್ಟ್ರದಲ್ಲಿ ಕಳೆದ ಕೆಲವು ದಶಕಗಳಿಂದ ಬ್ರಾಹ್ಮಣ ವಿರೋಧಿ ಅಲೆ ಬಹಳ ಜೋರಾಗಿಯೇ ಬೀಸುತ್ತಿದೆ. ದಲಿತರು ಬ್ರಾಹ್ಮಣರ ಕಟು ವಿರೋಧಿಗಳಾಗಬೇಕು ಎನ್ನುವುದನ್ನು ಸಾಕಷ್ಟು ಜನ ತಲೆಯಲ್ಲಿ ತುಂಬುತ್ತಾ ಬಂದಿದ್ದಾರೆ. ಬ್ರಾಹ್ಮಣರು ಈ ರಾಷ್ಟ್ರದ ಕೆಳವರ್ಗದವರನ್ನು ಶೋಷಿಸಿದವರು, ಕೆಟ್ಟದಾಗಿ ನಡೆಸಿಕೊಂಡವರು, ತುಚ್ಛವಾಗಿ ಕಂಡವರು ಎಂದೆಲ್ಲಾ ಹೇಳಿಕೊಂಡು ಬಂದಿದ್ದಾರೆ. ಒಂದೆಡೆ ಅದು ಸತ್ಯವಾದರೂ ಇಂದಿನ ಕಾಲಮಾನಕ್ಕೆ ಸತ್ಯಕ್ಕೆ ದೂರವಾದ ವಿಚಾರ.

ಸಿನೆಮಾಗಳೂ ಈ ನಿಂದೆಯ ವಿಚಾರಕ್ಕೆ ಹೊರತಾಗಿಲ್ಲ.  ಹಿಂದೆ ಈ ರೀತಿಯ ಅನೇಕ ಚಿತ್ರಗಳು ತೆರೆಯ ಮೇಲೆ ಬ್ರಾಹ್ಮಣ ವೃತ್ತಿಯ ಮತ್ತು ಜಾತಿಯ ಭಾವನೆಗಳ ಹಾಗೂ ಆಚರಣೆಗಳ ವಿರುದ್ಧವಾಗಿ ಹಾಯ್ದು ಹೋಗಿವೆ. ಆಗಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೇ ಬಹುತೇಕರು ಸುಮ್ಮನಿದ್ದರು. ಈಗ ಅದರ ಮುಂದುವರೆದ ಭಾಗವೇ ಪೊಗರು ಸಿನೆಮಾದ ಸದ್ಯದ ವಿವಾದ.

ಏನಿದೆ ಆ ಸಿನೆಮಾದಲ್ಲಿ ಅಂತಹ ವಿಚಾರ ಎಂದು ನೋಡುವುದಾದರೆ ಪ್ರವೇಶ ಭಾಗದಲ್ಲಿ ಖಳನಾಯಕರು ಲೋಕ ಕಲ್ಯಾಣಾರ್ಥವಾಗಿ ಹೋಮ ಮಾಡುತ್ತಿದ್ದ ಬ್ರಾಹ್ಮಣರನ್ನು ದುಡ್ಡು ಕೊಡುವಂತೆ ಪೀಡಿಸುತ್ತಾರೆ. ಅವರು ನಮ್ಮ ಹತ್ತಿರ ಹಣವಿಲ್ಲ ಎಂದಾಗ ತುಚ್ಛವಾಗಿ ನಿಂದಿಸಿ ಋತ್ವಿಜನ ಭುಜದ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆಯುತ್ತಾ ನಿನ್ನ ದೇವರೆಲ್ಲಿದ್ದಾನೆ? ಈಗ ನಿನ್ನನ್ನು ಕಾಪಾಡಲು ಬರುತ್ತಾನೆಯೇ? ಎಂದೆಲ್ಲ ಮಾತನಾಡುವಾಗಲೇ ಚಿತ್ರದ ನಾಯಕನಾದವನ ಪ್ರವೇಶವಾಗಿ ಆತ ಇವರೆಲ್ಲರನ್ನು ಬಡಿದು ಪುರೋಹಿತರನ್ನು ಕಾಪಾಡುತ್ತಾನೆ.

ಆಗ ಪುರೋಹಿತ ತೀರ್ಥ, ಪ್ರಸಾದ ನೀಡಿ ಆತನನ್ನು ಹರಸಿದ್ದಕ್ಕಾಗಿ ಕ್ರೇನ್‌ಗೆ ಅಡ್ಡಲಾಗಿ ಆತನನ್ನು ತೂಗುಹಾಕಿ ಅವನ ಕೇಶಗಳನ್ನು ಕತ್ತರಿಸುತ್ತಿರುವಾಗ ಉಳಿದ ವಠಾರದ ಜನ ಅವರನ್ನು ಕಾಪಾಡಿದ ನೀನೇ ಏಕೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ “ನೋಡಿ ನಾನು ಅಷ್ಟೆಲ್ಲಾ ಬಡಿದಾಡಿ ಅವನನ್ನು ಕಾಪಾಡಿದರೆ ನನಗೆ ತೀರ್ಥ, ಪ್ರಸಾದ ಕೊಟ್ಟು ಪುಣ್ಯ ಬರಲಿ ಎನ್ನುತ್ತಿದ್ದಾನೆ. ನಿಮ್ಮ ಪುಣ್ಯ ತಗೊಂಡು ಏನ್ ಮಾಡಲಿ? ನಿಮ್ಮ ಪುಣ್ಯ ತಗೊಂಡು ದಿನಸಿ ಅಂಗಡಿಗೆ ಹೋಗಿ ಒಂದು ಕೆಜಿ ಸಕ್ಕರೆ ಕೊಡು ಅಂದ್ರೆ ಏನ್ ಕೊಡುತಾನೆ? ಲುಕ್  ಕೊಡುತ್ತಾನೆ” ಎನ್ನುವ ಮಾತುಗಳನ್ನಾಡುತ್ತಾನೆ. ಅಷ್ಟೇ ಅಲ್ಲ ನೀವು ದೇವರ ಹೆಸರನ್ನು ಹೇಳಿ ದುಡ್ಡು ಮಾಡಲ್ಲವಾ? ಹಾಗೇ ನಿಮಗೆ ಅದು ಉದ್ಯೋಗ, ನಮಗೆ ಇದು ಉದ್ಯೋಗ ಎನ್ನುವ ಮಾತುಗಳನ್ನಾಡುತ್ತಾನೆ.

Advertisement

ಮತ್ತೊಂದು ದೃಶ್ಯದಲ್ಲಿ ಚಿತ್ರದ ನಾಯಕ ನಾಯಕಿಯ ಮನೆಗೆ ಪ್ರವೇಶ ಮಾಡುತ್ತಾನೆ. ಮುಂಜಾನೆಯ ಸಮಯ ನಾಯಕಿಯದು ಬ್ರಾಹ್ಮಣ ಕುಟುಂಬವಾದುದರಿಂದ ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಆಗ ನಾಯಕನಾದವನು ಪೂಜೆಗಾಗಿ ತೆಗೆದುಕೊಂಡು ಹೋಗುತ್ತಿದ್ದ ಮಡಿ ನೀರನ್ನು ಕಸಿದು ಮುಖ ತೊಳೆಯುತ್ತಾನೆ. ಪುಷ್ಪಗಳನ್ನು ಎಸೆಯುತ್ತಾನೆ. “ಯಾಕಪ್ಪಾ ಹೀಗೆ ಮಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಕ್ಕೆ “ರೀ ಸುಮ್ನೆ ಇರ್ರಿ, ನಾವು ಎದ್ದಾಗಲೇ ಮುಖ ತೊಳೆಯಲ್ಲಾ. ಇವಾಗಲೇ ಮುಖ ತೊಳೆಯುತ್ತಿರೋದು” ಎಂದೆಲ್ಲಾ ಮಾತನಾಡುತ್ತಾನೆ.

ಮತ್ತೊಂದು ದೃಶ್ಯದಲ್ಲಿ ಸಂಭಾಷಣೆ ನಡೆಯುತ್ತಿರುವಾಗ ನಾಯಕ “ನಿಮ್ಮ ಅಪ್ಪಾ ಚಿಕ್ಕನ್ ತಿಂತಾನಾ?” ಎಂದು ನಾಯಕಿಗೆ ಕೇಳಿದಾಗ ಹಾಸ್ಯನಟನೊಬ್ಬ “ಇಲ್ಲ, ಇಲ್ಲ ಅವರು ಬ್ರಾಹ್ಮಣರು ಚಿಕ್ಕನ್ ತಿನ್ನಲ್ಲ” ಎಂದು ಹೇಳುತ್ತಾನೆ. ಆಗ ನಾಯಕ ” ಆಯ್ತು ಬಿಡಮ್ಮಾ! ನಾವು ಚಿಕ್ಕನ್ ತಿಂದು ನಿಮಗೆ ರೈಸ್ ಅಷ್ಟೇ ಕೊಡ್ತಿವಿ” ಎಂದು ಲೇವಡಿ ಮಾಡುತ್ತಾನೆ.

ಹರಿಕಥೆಯ ದೃಶ್ಯ ಒಂದರಲ್ಲಿ ಮತ್ತೆ ನಾಯಕ ಪುಂಡಾಟಿಕೆ ಮೆರೆಯುತ್ತಾನೆ. ಅಲ್ಲಿ ಎಲ್ಲವನ್ನೂ ಧ್ವಂಸ ಮಾಡಿ ಹರಿಕಥೆಗಾರರಿಗೆ ತನ್ನ ಪ್ರೇಮ ವೈಫಲ್ಯವಾಗಿದ್ದಕ್ಕೆ “ಪ್ರೀತಿಯ ಪಾರಿವಾಳ ಹಾರಿ ಹೋಯ್ತು ಗೆಳೆಯಾ..” ಎನ್ನುವ ಗೀತೆಯೊಂದನ್ನು ಹೇಳುವಂತೆ ಒತ್ತಾಯಿಸುತ್ತಾನೆ. ಕೊನೆಯ ದೃಶ್ಯ ಒಂದರಲ್ಲೂ “ಚಿಕ್ಕನ್ ನೀನು ತಿಂದು, ಕುಷ್ಕಾ ನನಗೆ ಕೊಟ್ಟರೂ ನಾನು ತಿಂತಿನಿ” ಎಂದು ಬ್ರಾಹ್ಮಣ ಹುಡುಗಿಯಾದ ನಾಯಕ ನಟಿಗೆ ಹೇಳುವುದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿಚಾರವೆ. ಇನ್ನೂ ತಟ್ಟೆಕಾಸಿನ ವಿಚಾರ, ಹುಂಡಿ ಹಣ, ಹೋಮ ಹವನಗಳ ಹೆಸರಿನಲ್ಲಿ ನೀವು ದುಡ್ಡಿ ತಿಂತಿರಿ ಎನ್ನುವ ವಿಚಾರಗಳು ಅವರ ವೃತ್ತಿಯನ್ನು ಅವಹೇಳನ ಮಾಡುವಂತಹವೆ.

ಒಟ್ಟಿನಲ್ಲಿ ಇಡಿ ಸಿನೆಮಾದ ಉದ್ದಕ್ಕೂ ಈ ಜಾತಿ ನಿಂದನೆ ಎನ್ನುವುದು ಕಂಡುಬರುತ್ತದೆ. ಒಂದು ಕೋಮಿನ ಧಾರ್ಮಿಕ ಭಾವನೆಗಳನ್ನು ಮನ ಬಂದಂತೆ ತೆಗಳುವ, ಅವಹೇಳನ ಮಾಡುವ ದೃಶ್ಯಗಳಂತೂ ತುಂಬಾ ಖೇದವನ್ನುಂಟು ಮಾಡುತ್ತವೆ. ಆತನ ಭುಜದಮೇಲೆ ಕಾಲಿರಿಸಿ ಅವಮಾನಿಸಿದ್ದು, ಕ್ರೇನ್‌ಗೆ ಋತ್ವಿಜನೊಬ್ಬನನ್ನು ತೂಗು ಹಾಕಿ ಅವಮಾನಿಸಿದ್ದು, ಮಡಿವಂತಿಕೆಯನ್ನು ಹಾಳುಗೈದಿದ್ದು, ಮಾಂಸದ ವಿಚಾರ, ತಟ್ಟೆಕಾಸಿನ ವಿಚಾರಗಳೆಲ್ಲವೂ ಇಡೀಯ ಬ್ರಾಹ್ಮಣ ಸಮುದಾಯವನ್ನು ಕೆರಳಿಸಿದೆ. ಅಷ್ಟೇ ಅಲ್ಲ ಅದು ಸಾಂಪ್ರದಾಯಿಕ ಸಮಾಜದ ಎಲ್ಲ ಜನರಿಗೂ ನೋವನ್ನುಂಟು ಮಾಡಿದೆ. ಸನಾತನ ಧರ್ಮದ ಪರಿಪಾಲಕರಿಗೂ ಬೇಸರ ಮೂಡಿಸಿದೆ.

ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ,
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ,
ಕಶ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದನೆಂಬುದನರಿದು,
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ ?
ಇಂತೀ ಸಪ್ತಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ,
ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು
ಹೋರುವ ಹೊತ್ತುಹೋಕರ ಮಾತೇತಕ್ಕೆ ?
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ(ತ್ಮಾ] ರಾಮ ರಾಮನಾ.

ಎನ್ನುವ ಮಾತಿದೆ. ಇದರ ಭಾವ ಹೀಗಿದೆ, ಸಪ್ತರ್ಷಿಗಳಾರೂ ಮೂಲ ಬ್ರಾಹ್ಮಣ ಜಾತಿಯವರಲ್ಲ ಆದರೆ ಅವರ ಪಾಂಡಿತ್ಯ ಮತ್ತು ಶಕ್ತಿಯ ಸಾಮರ್ಥ್ಯದಿಂದ ಬ್ರಾಹ್ಮಣ್ಯಕ್ಕೆ ಏರಿದವರು. ಬ್ರಾಹ್ಮಣ್ಯ ಕೇವಲ ಬ್ರಾಹ್ಮಣರಿಗೆ ಸೀಮಿತವಲ್ಲ. ಅದು ಈ ರಾಷ್ಟ್ರದ ಪ್ರತಿಯೊಬ್ಬ ಸಂಸ್ಕಾರವಂತ ಜ್ಞಾನಿಯ ಸಂಬೋಧನೆ. ಒಂದರ್ಥದಲ್ಲಿ ಈ ರಾಷ್ಟ್ರದ ಬಹುತೇಕ ಸಂಸ್ಕಾರವಂತ ಪಂಡಿತರೆಲ್ಲ ಬ್ರಾಹ್ಮಣರೇ ಅಲ್ಲವೆ?! ಹೀಗೆಂದಾದರೆ ಇಂದು ಅವರು ನಿಂದಿಸಿದ್ದು 3℅ ಜನರನ್ನಲ್ಲ, ಪ್ರತಿ ಭಾರತೀಯ ಪರಂಪರೆಯ ಅನುಚಾರಕರನ್ನು ಬ್ರಾಹ್ಮಣ್ಯವನ್ನು, ಸನಾತನ ಪರಂಪರೆಯ ಪಾಂಡಿತ್ಯವನ್ನು. ತಪ್ಪು ಯಾರ ನಿಂದನೆ ಮಾಡಿದರೂ ತಪ್ಪೆ. ಈಗ ನಾವು ವಿರೋಧಿಸದಿದ್ದರೆ ಅದು ಸ್ವಜನಪಕ್ಷಪಾತವಂತೂ ಖಂಡಿತಾ ಆಗುತ್ತದೆ. ಇನ್ನಾದರೂ ಒಂದು ಕೋಮನ್ನು ತೆಗಳುವ ಅಥವಾ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮುನ್ನ ಚಿತ್ರದ ಕಥೆ ಬರೆಯುವವರು, ನಿರ್ದೇಶಕರು, ಸಂಭಾಷಣೆಕಾರರು ವಿಚಾರ ಮಾಡುವಂತಾಗಬೇಕು.

ಕಿರಣಕುಮಾರ ವಿವೇಕವಂಶಿ
ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next