ಮುಂಬಯಿ: ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚಿಸಿದ ಶಿವಸೇನೆ,ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟ ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸುವಲ್ಲಿ ಯಶಸ್ವೀಯಾಗಿದೆ. ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರು ಶುಭ ಹಾರೈಸಿದ್ದರು.
ತಮ್ಮ ಪಕ್ಷಕ್ಕೆ ಅಧಿಕಾರ ದೊರೆದ ಬಳಿಕ ಮೊದಲ ಸಂಪಾದಕೀಯ ಬರೆದಿರುವ ಸೇನೆಯ ಮುಖವಾಣಿಯಲ್ಲಿ ಉದ್ಧವ್ ಅವರಿಗೆ ರಾಜ್ಯದ ಮೇಲಿರುವ ನಿಷ್ಠೆ ಮತ್ತು ಸಾಧಿಸುವ ಗುರಿಯನ್ನು ಹೇಳಿದೆ. ರಾಜ್ಯದಲ್ಲಿ ಮೋದಿ ಅವರ ಕಿರಿಯ ಸಹೋದರ ಆಡಳಿತ ಮಾಡಲಿದ್ದು, ಪ್ರಧಾನಿ ನರೇಂದ್ರ ಮೋದಿ ದೊಡ್ಡಣ್ಣನಂತೆ ನಿಂತು ಸಹಕಾರ ನೀಡಬೇಕೆಂದು ಸೇನೆ ಹೇಳಿದೆ.
ರಾಜ್ಯದಲ್ಲಿ ನಮ್ಮ ಸರಕಾರ ರಚಿಸುವುದು ಮಹಾರಾಷ್ಟ್ರದ ಜನರ ಆಶೋತ್ತರದಂತೆ ಸಾಗಿದೆ. ಅವರ ನಿರ್ಧಾರವನ್ನು ಕೇಂದ್ರ ಸರಕಾರ ಗೌರವಿಸಬೇಕು. ರಾಜ್ಯದಲ್ಲಿ ನಮ್ಮ ಮೈತ್ರಿಕೂಟ ಸ್ಥಿರ ಸರಕಾರವನ್ನು ನೀಡಲಿದೆ ಆ ಕುರಿತಂತೆ ಯಾರಿಗೂ ಅನುಮಾನ ಬೇಡ ಎಂದಿದೆ. ಪ್ರಧಾನಿ ಮೋದಿ ಅವರು ಈ ಹಿಂದೆ ಬಹಳಷ್ಟು ಸಂದರ್ಭ ಚುನಾವಣ ರ್ಯಾಲಿಯಲ್ಲಿ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ನನ್ನ ಕಿರಿಯ ಸಹೋದರ. ಆತನಿಗೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದ್ದರು. ಇದೀಗ ಶಿವಸೇನೆ ಮೋದಿ ಅವರ ಆ ಹೇಳಿಕೆಯನ್ನು ಉಲ್ಲೇಖೀಸಿ “ಸಾಮ್ನಾ’ದ ಸಂಪಾದಕೀಯಲ್ಲಿ ಹೇಳಿದೆ.
ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಉದ್ಧವ್ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು “ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾದ ಉದ್ಧವ್ ಜೀ ಅವರಿಗೆ ಶುಭಾಶಯಗಳು. ಮಹಾರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಉದ್ಧವ್ ಅಪಾರ ಕಾಣಿಕೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ.’ ಎಂದು ಹೇಳಿದ್ದರು.