Advertisement

Watch; ರಾಜ್ಯಸಭೆ ಕಲಾಪ; ಗುಲಾಂ ನಬಿ ನಿವೃತ್ತಿ- ಗದ್ಗದಿತರಾದ ಪ್ರಧಾನಿ ನರೇಂದ್ರ ಮೋದಿ

01:15 PM Feb 09, 2021 | Team Udayavani |

ನವದೆಹಲಿ:ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ವಿದಾಯದ ಮಾತುಗಳನ್ನಾಡುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾಗಿದ್ದು, ರಾಷ್ಟ್ರರಾಜಕಾರಣದ ಪರಂಪರೆಯನ್ನು ಮುಂದುವರಿಸಲು ಗುಲಾಂ ನಬಿ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ಆರಿಸುವುದು ಕಷ್ಟಕರವಾದ ಕೆಲಸವಾಗಿದೆ ಎಂದರು.

Advertisement

ಇದನ್ನೂ ಓದಿ:ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ

ಮಂಗಳವಾರ(ಫೆ.09, 2021) ಕಲಾಪದಲ್ಲಿ ನಿವೃತ್ತರಾಗುತ್ತಿರುವ ರಾಜ್ಯಸಭಾ ಸದಸ್ಯರಿಗೆ ಶುಭ ವಿದಾಯದ ನುಡಿಗಳನ್ನಾಡಿದ ಪ್ರಧಾನಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಪಕ್ಷದ ರಾಜಕೀಯವನ್ನು ತುಂಬಾ ಸುಲಭವಾಗಿ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ, ಆದರೆ ಗುಲಾಂ ನಬಿ ಆಜಾದ್ ಜೀ ಅವರು ಪಕ್ಷವನ್ನು ಮೀರಿ ಬೆಳೆದವರು, ಅವರ ಮೊದಲ ಆದ್ಯತೆ ದೇಶವಾಗಿತ್ತು ಎಂದು ಶ್ಲಾಘಿಸಿದರು.

ಕೋವಿಡ್ ಸಾಂಕ್ರಾಮಿಕ ಸೋಂಕು ಹಬ್ಬಿದ ಸಂದರ್ಭದಲ್ಲಿ ಸೋಂಕಿನ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸರ್ವ ಪಕ್ಷದ ಸಭೆಯನ್ನು ಕರೆಯುವಂತೆ ಪ್ರಸ್ತಾಪ ಇಟ್ಟವರು ಗುಲಾಂ ನಬಿ ಆಜಾದ್ ಎಂಬುದಾಗಿ ಪ್ರಧಾನಿ ನೆನಪಿಸಿಕೊಂಡರು.

Advertisement

ಗುಲಾಂ ನಬಿ ಆಜಾದ್ ರೀತಿಯ ವಿರೋಧ ಪಕ್ಷದ ನಾಯಕರನ್ನು ಆರಿಸುವುದು ತುಂಬಾ ಕಷ್ಟದ ಕೆಲಸ. ಅವರು ಪಕ್ಷಕ್ಕಿಂತ ಹೆಚ್ಚಾಗಿ ದೇಶಕ್ಕಾಗಿ ದುಡಿದಿದ್ದಾರೆ. ನಾನು ಅವರನ್ನು ನನ್ನ ಗೆಳೆಯ ಎಂದು ಪರಿಗಣಿಸಿ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಹೇಳಿ ಗದ್ಗದಿತರಾದರು. ನೀರು ಕುಡಿದು ಮಾತನ್ನು ಮುಂದುವರಿಸಿದ ಅವರ ಕಣ್ಣಂಚಿನಲ್ಲಿ ನೀರು ಹರಿದಿದ್ದು, ಕೈ ಬೆರಳಿನಿಂದ ಒರೆಸಿಕೊಂಡು ಅಭಿನಂದಿಸಿದರು. ಗುಲಾಂ ನಬಿ ಅವರಿಗೆ ಸದಾ ರಾಜಕೀಯದ ಬಾಗಿಲು ತೆರೆದಿರುತ್ತದೆ. ಅವರು ರಾಜಕೀಯ ವಿಚಾರದಲ್ಲಿ ಯಾವಾಗಲೂ ತಮ್ಮ ಉತ್ತಮವಾದ ಸಲಹೆಗಳನ್ನು ಕೊಡಬಹುದಾಗಿದೆ ಎಂದು ತಿಳಿಸಿದರು.

2014ರಿಂದ ರಾಜ್ಯಸಭೆಯಲ್ಲಿ ಗುಲಾಂ ನಬಿ ಆಜಾದ್ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಫೆ.15ರಂದು ಗುಲಾಂ ನಬಿ ಆಜಾದ್ ಅವರ ರಾಜ್ಯಸಭೆ ಅವಧಿ ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಪಲ್ಲಟದ ಬೆಳವಣಿಗೆ ಸಂದರ್ಭದಲ್ಲಿಯೇ ಗುಲಾಂ ನಬಿ ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next