ಹೊಸದಿಲ್ಲಿ: “ಭಾರತ ಇಂದು ಬಲಿಷ್ಠವಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಸದೃಢವಾಗಿ ಬೆಳೆಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಇನ್ವೆಸ್ಟ್ ಇಂಡಿಯಾ’ ಸಮ್ಮೇಳನದಲ್ಲಿ ಕೆನಡಾ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಎಲ್ಲ ಪ್ರಶ್ನೆಗಳಿಗೂ ಇಂದು ಭಾರತವೇ ಉತ್ತರ. ಇಲ್ಲಿ ಎಲ್ಲರಿಗೂ ಅವಕಾಶ ತೆರೆದುಕೊಂಡಿದೆ’ ಎಂದರು.
“ಕೊರೊನಾ ಪೂರ್ವದ ಜಗತ್ತಿನಲ್ಲಿ ಮೂಲಸೌಕರ್ಯ, ಪೂರೈಕೆ ಸರಪಳಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿದ್ದವು. ಈಗ ಸಮಸ್ಯೆಗಳು ಸ್ವಾಭಾವಿಕವಾಗಿವೆ. ಆದರೆ, ಭಾರತ ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತಿದೆ. ಯೋಗ್ಯ ಆಡಳಿತದ ಮೂಲಕ ನಾವು ಭಾರತವನ್ನು ಪರಿಹಾರದ ನೆಲವನ್ನಾಗಿ ಮಾರ್ಪಡಿಸಿದ್ದೇವೆ’ ಎಂದರು.
ಕೋವಿಡ್ ವಿರುದ್ಧ ಜನಾಂದೋಲನ: ಮುಂಬರುವ ಚಳಿಗಾಲ, ಹಬ್ಬಗಳು, ರಜಾದಿನಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು, ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಕೊರೊನಾ ಯೋಧರನ್ನು ಪ್ರೋತ್ಸಾಹಿಸಲು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಜನಾಂದೋಲನ ಆರಂಭಿಸಿ ದ್ದಾರೆ. #Unite2FightCorona! ಮೂಲಕ ಮೋದಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. “ಬನ್ನಿ, ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ. ಮಾಸ್ಕ್ ಧರಿಸೋದು, ಕೈಗಳನ್ನು ಶುಚಿಗೊಳಿಸೋದು, ಸಾಮಾಜಿಕ ಅಂತರ ಪಾಲಿಸುವ ಮೂಲಕ ಕೊರೊನಾವನ್ನು ಸಂಘಟಿತವಾಗಿ ಎದುರಿಸೋಣ, ಒಗ್ಗಟ್ಟಿನಿಂದ ಗೆಲ್ಲೋಣ’ ಎಂದು ಟ್ವೀಟಿಸಿದ್ದಾರೆ.