Advertisement

ಮರ್ಸಿಡಿಸ್‌, ಹಾಲಿಗೆ ಏಕ ತೆರಿಗೆ ಸಾಧ್ಯವೇ? ನರೇಂದ್ರ ಮೋದಿ

11:21 AM Jul 02, 2018 | Sharanya Alva |

ನವದೆಹಲಿ: ಜಿಎಸ್‌ಟಿ ದೇಶದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿದೆ. ಇಂಥ ಸುಧಾರಣಾ ಕ್ರಮ ಕೈಗೊಳ್ಳುವ ವೇಳೆ ಕೆಲವೊಂದು ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳನ್ನು ಆಯಾಯ ಕಾಲಕ್ಕೆ ಬಗೆಹರಿಸಲಾಗಿದೆ.’ ಇದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವರಾಜ್‌ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು. ಸಂದರ್ಶನದ
ಪೂರ್ಣಪಾಠ ಇಲ್ಲಿದೆ.

Advertisement

* ಒಂದು ಉತ್ತಮ ಮತ್ತು ಸರಳ ತೆರಿಗೆ ಎಂಬ ಭರವಸೆಯೊಂದಿಗೆ ವರ್ಷದ ಹಿಂದೆ ನೀವೇ ಜಿಎಸ್ಟಿ ಪದ್ಧತಿ ಜಾರಿಗೆ ತಂದಿದ್ದಿರಿ. ವಿಮರ್ಶಕರು ಇದು ತೀರಾ ಕ್ಲಿಷ್ಟಕರ ವಾಗಿದೆ ಎನ್ನುತ್ತಿದ್ದಾರೆ. ಇದು ಒಂದೇ ಹಂತದ ತೆರಿಗೆ ರೂಪದಲ್ಲಿ ಇರಬೇಕಿತ್ತು ಎನ್ನುವುದು ಅವರ ವಾದ. ನಿಮ್ಮ ಅಭಿಪ್ರಾಯ?
ಮೋದಿ: ಹೌದು, ಒಂದೇ ಹಂತದ ತೆರಿಗೆ ರೂಪದಲ್ಲಿ ಇದ್ದಿದ್ದರೆ ಸರಳವಾಗಿ ಇರುತ್ತಿತ್ತು. ಆದರೆ, ಆಹಾರ ಪದಾರ್ಥಗಳನ್ನು ಶೂನ್ಯ ತೆರಿಗೆಯಲ್ಲಿ ಇರಿಸಲು ಆಗುತ್ತಿರಲಿಲ್ಲವಲ್ಲ. ನಾವು ಮರ್ಸಿಡಿಸ್‌ ಬೆಂಜ್‌ ಮತ್ತು ಹಾಲನ್ನು ಸಮಾನ ತೆರಿಗೆಯಲ್ಲಿ ಇರಿಸಲು ಸಾಧ್ಯವೇ? ಆದರೆ ನಮ್ಮ 
ಕಾಂಗ್ರೆಸ್ಸಿನ ಮಿತ್ರರು ಜಿಎಸ್‌ಟಿಯನ್ನು ಒಂದೇ ಹಂತದಲ್ಲಿ ಇರಿಸುತ್ತೇವೆ ಎನ್ನುತ್ತಿದ್ದಾರೆ. ಜತೆಗೆ ಈಗ ಶೂನ್ಯದಿಂದ ಶೇ.5ರ ತೆರಿಗೆ ದರದಲ್ಲಿ ಇರುವ ಆಹಾರ ಮತ್ತು ದಿನನಿತ್ಯದ ವಸ್ತುಗಳಿಗೂ ಶೇ.18ರ ತೆರಿಗೆ ಹಾಕುತ್ತೇವೆ ಎಂದೂ ಪರಿಣಾಮಕಾರಿಯಾಗಿ ಹೇಳುತ್ತಿದ್ದಾರೆ! 

*ಇಷ್ಟೆಲ್ಲಾ ಆದರೂ ಇದುವರೆಗೂ ನಾವು ಏಕೆ ವ್ಯಾಪಾರ ವಲಯ, ಆರ್ಥಿಕ ತಜ್ಞರಿಂದ ಟೀಕೆ ಕೇಳುತ್ತಿದ್ದೇವೆ? 
ಮೋದಿ: ಜಿಎಸ್‌ಟಿ ಒಂದು ಬಹುದೊಡ್ಡ ಬದಲಾವಣೆ. ಜಗತ್ತಿನ ಅತಿದೊಡ್ಡ ಆರ್ಥಿಕ ವ್ಯವಸ್ಥೆಯನ್ನೇ ಸಂಪೂರ್ಣ ಬದಲಾವಣೆ ಮಾಡಿದ ಪ್ರಯತ್ನವಿದು. ಈ ಸುಧಾರಣೆಯಲ್ಲಿ 17 ತೆರಿಗೆಗಳು, 23 ಸೆಸ್‌ಗಳನ್ನು ಒಂದೇ ಒಂದು ತೆರಿಗೆಗೆ ವಿಲೀನಗೊಳಿಸಲಾಯಿತು. ಅಂತಿಮವಾಗಿ ಇದನ್ನು ಜಾರಿ ಮಾಡಿದಾಗ ನಮ್ಮ ಉದ್ದೇಶ ಸರಳ ಮತ್ತು ಯಾವುದೇ ಗೊಂದಲವಿಲ್ಲದೇ ಮೃದುವಾಗಿ ನಡೆದುಕೊಂಡು ಹೋಗ 
ಬೇಕು ಎನ್ನುವುದಾಗಿತ್ತು.  ಆದರೆ ಕೆಲವೊಮ್ಮೆ ಅನಿರೀಕ್ಷಿತ ತೊಂದರೆಗಳು ಎದುರಾಗುತ್ತವೆ. ಈ ತೊಂದರೆಗಳನ್ನು ಆಯಾಯ ಸಮಯದಲ್ಲೇ ಬಗೆಹರಿಸಿದ್ದೇವೆ. ಇಡೀ ದೇಶಾದ್ಯಂತ ಇದ್ದ ಚೆಕ್‌ ಪೋಸ್ಟ್‌ಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಯಾವುದೇ ರಾಜ್ಯದ ಗಡಿಯಲ್ಲೂ ಸಾಲು ಗಟ್ಟಿ ನಿಲ್ಲುವ ಹಾಗಿಲ್ಲ. ಇದರಿಂದ ಟ್ರಕ್‌ ಚಾಲಕರ ಬಹಳಷ್ಟು ಸಮಯ ಉಳಿತಾಯವಾಗಿದೆ. ಸರಕು ಮತ್ತು ಸಾಗಣೆ ವಲಯಕ್ಕೂ ಭಾರೀ ಪ್ರಮಾಣದ ಅನುಕೂಲವಾಗಿದೆ.

*ಪ್ರಶ್ನೆ: ಒಂದು ವರ್ಷವಾದರೂ ಜಿಎಸ್ಟಿಯಲ್ಲಿ ಪ್ರಕ್ರಿಯೆ ನಡೆಯುತ್ತಲೇ ಇದೆ…
ಮೋದಿ: ಜಿಎಸ್ಟಿ ಎಲ್ಲವನ್ನೂ ಒಳಗೊಳ್ಳುವ ಒಂದು ವ್ಯವಸ್ಥೆಯಾ ಗಿದ್ದು, ಅದು ರಾಜ್ಯ ಸರ್ಕಾರಗಳ, ಜನರ, ಮಾಧ್ಯಮಗಳ ಪ್ರತಿಕ್ರಿಯೆ ಗಳನ್ನು ಗಣನೆಗೆ ತೆಗೆದುಕೊಂಡು ಬದಲಾಗಬೇಕಿದೆ. ಅಲ್ಲದೇ ಈಗಾಗಲೇ ಜನ, ವರ್ತಕರ ಸಲಹೆಗಳನ್ನು ಪಡೆದು, ಅಳವಡಿಕೆ ಮಾಡಿಕೊಂಡಿದ್ದೇವೆ. ಭಾರತದಂಥ ಒಕ್ಕೂಟ ವ್ಯವಸ್ಥೆಯುಳ್ಳ ದೇಶಕ್ಕೆ ಜಿಎಸ್ಟಿ ಉತ್ತಮವಾಗಿದೆ. ನಾವು ಎಲ್ಲ ರಾಜ್ಯಗಳನ್ನು
ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಒಪ್ಪಿಸಿ ಜಾರಿ ಮಾಡಿದ್ದೇವೆ. ಆದರೆ ಹಿಂದಿನ ಸರ್ಕಾರಗಳು ಇದರಲ್ಲಿ ವಿಫ‌ಲವಾಗಿದ್ದವು.

*ಪ್ರಶ್ನೆ: ಮುಂದಿನ ದಿನಗಳಲ್ಲಿ ತೆರಿಗೆ ದರ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಬಹುದೇ?

Advertisement

ಮೋದಿ: ದರಗಳ ಬಗ್ಗೆ ಮಾತನಾಡುವುದಾದರೆ, ಹಿಂದೆ ಹಲವಾರು  ತೆರಿಗೆಗಳು ರಹಸ್ಯವಾಗಿದ್ದವು. ಆದರೆ ನೀವು ಈಗ ಏನು ಪಾವತಿಸುತ್ತೀರೋ ಅದು ನಿಮ್ಮ ಕಣ್ಣಿಗೇ ಕಾಣಿಸುತ್ತದೆ. ಸರ್ಕಾರವು ಸರಿಸುಮಾರು 400 ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಅಂದಾಜು 150 ವಸ್ತುಗಳ ತೆರಿಗೆಯನ್ನೇ ತೆಗೆದುಹಾಕಲಾಗಿದೆ. ನೀವು ತೆರಿಗೆಯನ್ನು ಗಮನಿಸುವುದಾದರೆ, ದಿನಬಳಕೆ ವಸ್ತುಗಳ ಬೆಲೆ ತೀರಾ ಕಡಿಮೆಯಾಗಿದೆ. ಅಕ್ಕಿ, ಗೋಧಿ, ಸಕ್ಕರೆ, ಮಸಾಲೆ ವಸ್ತುಗಳ ದರ ಇಳಿಕೆಯಾಗಿದೆ. ದಿನನಿತ್ಯದ ವಸ್ತುಗಳ ತೆರಿಗೆ ಪೂರ್ಣ ರದ್ದಾಗಿದೆ ಅಥವಾ ಶೇ.5ರಲ್ಲಿದೆ. ಅಲ್ಲದೆ ಶೇ.95ಕ್ಕೂ ಹೆಚ್ಚು ವಸ್ತುಗಳು ಶೇ.18ರ ಕೆಳಗಿನ ಹಂತದಲ್ಲಿವೆ.

ಪ್ರಶ್ನೆ: ಜಿಎಸ್ಟಿಯನ್ನು ನಿಮ್ಮ ಕನಿಷ್ಠ ಸರ್ಕಾರದ ಆರ್ಥಿಕ ತತ್ವಶಾಸ್ತ್ರಕ್ಕೆ ಜೋಡಣೆ ಮಾಡಬಹುದೇ?

ಮೋದಿ: ಜಿಎಸ್ಟಿಯನ್ನು ತಾಂತ್ರಿಕ ವ್ಯವಸ್ಥೆಯ ಸಹಕಾರದಿಂದ ಇನ್ಸ್‌ ಪೆಕ್ಟರ್‌ ರಾಜ್‌ ವ್ಯವಸ್ಥೆಯನ್ನು ತೆಗೆದುಹಾಕಲು ರೂಪಿಸಲಾಗಿದೆ.  ರಿಟರ್ನ್ ನಿಂದ ರಿಫ‌ಂಡ್‌ವರೆಗೆ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯುತ್ತಿವೆ.

*ಸರಕು ಮತ್ತು ಸೇವಾ ತೆರಿಗೆಯಿಂದ ಇದುವರೆಗೆ ಆಗಿರುವ ಲಾಭಗಳೇನು?
ಮೋದಿ: ನಾನು ಕೆಲವು ಸಂಖ್ಯೆಗಳೊಂದಿಗೆ ಶುರು ಮಾಡುತ್ತೇನೆ. ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ದೇಶದಲ್ಲಿ ನೋಂದಣಿಯಾದ ಉದ್ದಿಮೆಗಳ ಸಂಖ್ಯೆ 66 ಲಕ್ಷ. ಆದರೆ, ಜಿಎಸ್‌ಟಿ ಜಾರಿಯಾದ ಒಂದು ವರ್ಷದಲ್ಲಿ ನೋಂದಣಿಯಾದ ಹೊಸ ಉದ್ದಿಮೆಗಳ ಸಂಖ್ಯೆ 48 ಲಕ್ಷ. ಸುಮಾರು 350 ಕೋಟಿ ಇನ್ವಾಯ್ಸಗಳು ವಿಲೇವಾರಿಯಾಗಿವೆ ಮತ್ತು 11 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿವೆ. ಇಷ್ಟೆಲ್ಲಾ ಅಂಕಿಅಂಶಗಳನ್ನು ನೋಡಿದ ಮೇಲೆ ಜಿಎಸ್‌ಟಿ ನಿಜವಾಗಿಯೂ ಕ್ಲಿಷ್ಟ ಎಂದು ಅನ್ನಿಸುತ್ತದೆಯೇ?

Advertisement

Udayavani is now on Telegram. Click here to join our channel and stay updated with the latest news.

Next