Advertisement

ಹಳ್ಳ ಹಿಡಿದ ಭಾರತ-ನೇಪಾಳ ಸಂಬಂಧ ಹಳಿಗೆ ಮರಳೀತೇ? 

12:30 AM Apr 26, 2018 | |

ಭಾರತ-ನೇಪಾಳ ಸಂಬಂಧದ ನಡುವೆ ಹುಳಿ ಹಿಂಡುವ ಯಾವ ಅವಕಾಶವನ್ನೂ ಚೀನೀಯರು ಕಳೆದುಕೊಳ್ಳಲು ಸಿದ್ಧರಿಲ್ಲ. ಚೀನಾ-ನೇಪಾಳದ ನಡುವೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಾ ಸಾಮ್ಯತೆಯಿಲ್ಲ. ಒನ್‌ ರೋಡ್‌ ಒನ್‌ ಬೆಲ್ಟ್ನಂಥ ಯೋಜನೆ ಗಳಿಂದ ಪುಟ್ಟ ದೇಶಗಳನ್ನು ಸಾಲದ ಕೂಪಕ್ಕೆ ತಳ್ಳಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ, ತನ್ನ ಸಿದ್ಧವಸ್ತುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಳ್ಳುವ ಚೀನಿ ದುರಾಸೆಯ ಜಾಲಕ್ಕೆ ನೇಪಾಳ ಸಿಕ್ಕಿ ಬೀಳದಂತೆ ಎಚ್ಚೆತ್ತುಕೊಳ್ಳಬೇಕಾಗಿದೆ.

Advertisement

ನೇಪಾಳದಲ್ಲಿ ಹೊಸದಾಗಿ ಅಧಿಕಾರ ಸ್ವೀಕರಿಸಿದ ಪ್ರಧಾನ ಮಂತ್ರಿ ತಮ್ಮ ಮೊದಲ ವಿದೇಶ ಯಾತ್ರೆಗಾಗಿ ಭಾರತವನ್ನು ಆಯ್ಕೆ ಮಾಡಿಕೊಳ್ಳುವುದು ದಶಕಗಳಿಂದ ನಡೆದು ಬಂದ ಸಂಪ್ರದಾಯ. ಇದಕ್ಕೆ ಅಪವಾದವೆಂಬಂತೆ 2008ರಲ್ಲಿ ಆಗಿನ ಪ್ರಧಾನ ಮಂತ್ರಿ ಪುಷ್ಪಕುಮಾರ ದಹಲ್‌ ಪ್ರಚಂಡ ಭಾರತದ ಬದಲಾಗಿ ಚೀನಾಕ್ಕೆ ಭೇಟಿ ನೀಡಿದ್ದರು. ಕೆಲವೇ ತಿಂಗಳಲ್ಲಿ ಅವರು ಅಧಿಕಾರವನ್ನು ಕಳೆದುಕೊಂಡಾಗ ಸಂಪ್ರದಾಯ ಮುರಿದದ್ದು ಮುಳುವಾಯಿತೇ ಎನ್ನುವ ಲಘು ಚರ್ಚೆಗೂ ಕಾರಣವಾಗಿತ್ತು. ಕಳೆದ ವರ್ಷ ಹೊಸದಾಗಿ ಜಾರಿಗೆ ಬಂದ ಸಂವಿಧಾನುಸಾರ ನಡೆದ ಚುನಾವಣೆಯಲ್ಲಿ ವಿಜಯಿಯಾಗಿ ಫೆಬ್ರವರಿಯಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭಾರತ ವಿರೋಧಿ ಧೋರಣೆಯ ಕೆ. ಪಿ. ಶರ್ಮಾ ಓಲಿ ವಿದೇಶ ಯಾತ್ರೆಯ ಕುರಿತಾದ ದಶಕಗಳ ಸ್ಥಾಪಿತ ಸಂಪ್ರದಾಯ ಪಾಲಿಸುವರೋ ಇಲ್ಲವೋ ಎನ್ನುವುದು ಕೌತುಕದ ವಿಷಯವಾಗಿತ್ತು. ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ಜತೆ ಸಂಬಂಧ ಬಲವರ್ಧನೆಯ ಫ‌ಲಪ್ರದ ಮಾತುಕತೆ ನಡೆಸುವುದರ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 2015-16ರಲ್ಲಿ 9 ತಿಂಗಳ ತಮ್ಮ ಮೊದಲ ಸಂಕ್ಷಿಪ್ತ ಅವಧಿಯಲ್ಲಿ ಚೀನಾದತ್ತ ಅವರ ವಾಲುವಿಕೆ ಹಾಗೂ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಆಕರ್ಷಿಸಲು ನಡೆಸಿದ ಭಾರತ ವಿರೋಧಿ ಹೇಳಿಕೆಗಳಿಂದಾಗಿ ಓಲಿ ನಡೆ ರಾಜತಾಂತ್ರಿಕ ವಲಯದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ವಿದೇಶ ಯಾತ್ರೆಯ ಕುರಿತಾದ ಸಂಪ್ರದಾಯ ಪಾಲಿಸುವ ಅವರ ನಿರ್ಧಾರದ ಹಿಂದೆ ಮೂಢನಂಬಿಕೆಗಿಂತ ಅನುಭವೀ ರಾಜಕಾರಣಿಯಾಗಿ ಭಾರತದೊಂದಿಗಿನ ಸಂಬಂಧ ವನ್ನು ಬಲಗೊಳಿಸುವ ಎಚ್ಚರಿಕೆಯ ಹಾಗೂ ಯತಾರ್ಥ ದೃಷ್ಟಿಕೋನವೇ ಕಾರಣವಿರಬಹುದು. 

ಸಂವಿಧಾನ ರಚನೆಯ ಸಂಕಷ್ಟ
ರಾಜ ಪ್ರಭುತ್ವದಲ್ಲಿದ್ದ ನೇಪಾಳದಲ್ಲಿ ಸೀಮಿತ ಪ್ರಜಾಪ್ರಭುತ್ವದ ಪ್ರಾರಂಭ 1990ರಲ್ಲೇ ಆಯಿತಾದರೂ ನಿಜವಾದ ಅಧಿಕಾರ ರಾಜರ ಕೈಯ್ಯಲ್ಲೇ ಇತ್ತು. ರಾಜಶಾಹಿಯ ವಿರುದ್ಧ ಸುದೀರ್ಘ‌ ಸಂಘರ್ಷದಲ್ಲಿ ಮಾವೋವಾದಿಗಳು ನಡೆಸಿದ ಹಿಂಸೆಯಲ್ಲಿ ಸಾವಿರಾರು ಜನರ ಹತ್ಯೆಗೀಡಾಗಿ ದಶಕಗಳ ಕಾಲ ನೇಪಾಳ ಅಶಾಂತ ರಾಷ್ಟ್ರವಾಗಿತ್ತು. ರಾಜಶಾಹಿ ಅಂತ್ಯಕಂಡರೂ ತನ್ನದೇ 
ಆದ ಸಂವಿಧಾನವೊಂದನ್ನು ತಯಾರಿಸಿ ಅಂಗೀಕಾರಗೊಳ್ಳವ ಪ್ರಕ್ರಿಯೆಗೆ ನೇಪಾಳಿ ರಾಜಕೀಯ ಪಕ್ಷಗಳು ಬರೋಬ್ಬರಿ ಏಳು ವರ್ಷ ತೆಗೆದುಕೊಂಡವು. ಕೊನೆಗೊಮ್ಮೆ 2015ರಲ್ಲಿ ಸಂವಿಧಾನ ವೇನೋ ಅಂಗೀಕಾರವಾಯಿತಾದರೂ ಸಂವಿಧಾನದಲ್ಲಿ ತಮಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿಲ್ಲವೆಂದು ಬಿಹಾರಕ್ಕೆ ಹೊಂದಿಕೊಂಡಂತೆ ಇರುವ ತರಾಯಿ ಪ್ರದೇಶದ ಮಧೇಸಿಗಳು ಚಳವಳಿ ಪ್ರಾರಂಭಿ ಸಿದರು. ಭಾರತ ಅವರ ಬೆಂಬಲಕ್ಕೆ ನಿಂತಿತ್ತೆನ್ನುವುದು 2015-16ರಲ್ಲಿ ಪ್ರಧಾನಿಯಾಗಿದ್ದ ಇದೇ ಕೆ. ಪಿ. ಶರ್ಮಾ ಓಲಿ ಅವರ ನೇತ್ರತ್ವದ ಸರಕಾರದ ಆರೋಪವಾಗಿತ್ತು. ಇಂಧನ ಮತ್ತು ದಿನಬಳಕೆಯ ವಸ್ತುಗಳಿಗಾಗಿ ಭಾರತವನ್ನೇ ಆಶ್ರಯಿಸಿದ ನೇಪಾಳ ಚಳವಳಿ ಯಿಂದಾಗಿ ಭಾರತದ ಕಡೆಯಿಂದ ಸಾಮಾನು ಸರಬರಾಜು ನಿಂತಿದ್ದರಿಂದ ಕಂಗೆಟ್ಟಿತ್ತು. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಚೀನಾ ಅಗತ್ಯ ವಸ್ತುಗಳನ್ನು ಒದಗಿಸಿ ಭಾರತದ ಮೇಲೆ ಅವಲಂಬನೆ ಕಡಿಮೆ ಮಾಡಿಕೊಳ್ಳುವ ಸಲಹೆ ನೀಡಿದ್ದನ್ನು ಮುಕ್ತವಾಗಿ ಸ್ವೀಕರಿಸಿ ದ್ದರು ಕೆ. ಪಿ. ಶರ್ಮಾ ಓಲಿ. ಅಷ್ಟೇ ಅಲ್ಲ ಅನಂತರ ನಡೆದ ಚುನಾ ವಣೆಯಲ್ಲಿ ಭಾರತ ವಿರೋಧಿ ಭಾವನೆ ಕೆರಳಿಸಿದ್ದರು. ಈ ಎಲ್ಲಾ ಕಾರಣಗಳಿಂದ ಓಲಿ ಅವರು ಪುನಃ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಸಹಜವಾಗಿಯೇ ಭಾರತದ ಆತಂಕ ಹೆಚ್ಚಿಸಿತ್ತು.

1950ರ ಒಪ್ಪಂದಕ್ಕೆ ವಿರೋಧ 
2008ರ ಅನಂತರ ಮಾವೋವಾದಿ ಪ್ರಚಂಡರ ನೇತೃತ್ವ ನೇಪಾಳದಲ್ಲಿ ಪ್ರಾಬಲ್ಯಕ್ಕೆ ಬಂದಾಗಲೇ ಭಾರತ-ನೇಪಾಳ ಸಂಬಂಧ ಹದಗೆಡಲು ಪ್ರಾರಂಭವಾಗಿತ್ತು. ಭಾರತ-ನೇಪಾಳದ ನಡುವಿನ 1950ರ ಒಪ್ಪಂದವನ್ನು ರದ್ದುಗೊಳಿಸುವ ಚರ್ಚೆ ಪ್ರಾರಂಭಿಸುವ ಮೂಲಕ ಮಾವೋವಾದಿಗಳು ಭಾರತದ ದೊಡ್ಡಣ್ಣನ ವರ್ತನೆ ಯನ್ನು ಸಹಿಸಲಾಗುವುದಿಲ್ಲ ಎನ್ನುವ ಎಚ್ಚರಿಕೆ ನೀಡತೊಡಗಿದ್ದರು. ದೆಹಲಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಪ್ರಚಂಡರ ಚೀನಿ ಪ್ರೇಮ ಭಾರತಕ್ಕೆ ನುಂಗಲಾರದ ತುತ್ತಾಗಿತ್ತು. 1950ರ ಭಾರತ-ನೇಪಾಳ ಸಂಧಿಯ ಪ್ರಕಾರ ರಕ್ಷಣೆ ಹಾಗೂ ಅಂತರಾಷ್ಟ್ರೀಯ ವಿಷಯಗಳ ಕುರಿತಾದ ಮಹತ್ವಪೂರ್ಣ ನಿರ್ಣಯ ಕೈಗೊಳ್ಳುವ ಮೊದಲು ಭಾರತದೊಂದಿಗೆ ಸಲಹೆ ಪಡೆಯಬೇಕಾಗಿದೆ. ಸಾರ್ವಭೌಮ ರಾಷ್ಟ್ರವಾದ ತಮ್ಮ ಆಂತರಿಕ ವಿಷಯದಲ್ಲಿ ಭಾರತ ಹಸ್ತಕ್ಷೇಪ ನಡೆಸುವುದು ಸರಿಯಲ್ಲ ಎನ್ನುವುದರ ಮೂಲಕ ಮಾವೋವಾದಿ ಗಳು ಭಾರತ-ನೇಪಾಳ ಸಂಬಂಧದ ನಡುವೆ ಬಿರುಕು ಮೂಡಿ ಸುವ ಯತ್ನ ಮಾಡುತ್ತಿದ್ದಾರೆ. ಮಾವೋವಾದಿಗಳು ಭಾರತದ ವಿರುದ್ಧ ಕೆಂಡ ಕಾರುವ, ಭಾವನೆಯನ್ನು ಕೆರಳಿಸುವ ಚಟು ವಟಿಕೆಗಳನ್ನು ನಿರಂತರವಾಗಿ ನಡೆಸುತ್ತಲೇ ಬಂದಿದ್ದಾರೆ. ಒಪ್ಪಂದಾ ನುಸಾರ ನೇಪಾಳಿಗಳು ಭಾರತದಲ್ಲಿ ತಡೆರಹಿತವಾಗಿ ಪ್ರವೇಶಿಸುವ, ಆಸ್ತಿ ಖರೀದಿಸುವ, ಸರ್ಕಾರಿ ಸೇವೆ ಸೇರುವ, ಉದ್ಯಮ ನಡೆಸುವ ಹಲವಾರು ಸಕಾರಾತ್ಮಕ ಅಂಶಗಳನ್ನು ಮಾವೋವಾದಿಗಳು ಗಣನೆಗೆ ತೆಗೆದುಕೊಳ್ಳತ್ತಿಲ್ಲ. ಭಾರತ – ನೇಪಾಳದ ಮುಕ್ತ ಗಡಿಯ ಮೂಲಕವಾಗಿ ಭಾರತಕ್ಕೆ ನುಸುಳುತ್ತಿರುವ ಪಾಕಿಸ್ಥಾನಿ ಉಗ್ರವಾದಿಗಳು, ಡ್ರಗ್‌ ಮಾಫಿಯಾಗಳು, ದೇಶದಿಂದ ಸುಲಭ ವಾಗಿ ತಪ್ಪಿಸಿಕೊಳ್ಳುತ್ತಿರುವ ಅಪರಾಧಿಗಳೇ ಮುಂತಾದ ಸಮಸ್ಯೆ ಗಳಿಂದಾಗಿ 1950ರ ಒಪ್ಪಂದ ಭಾರತಕ್ಕೆ ಹಲವು ದೃಷ್ಟಿಯಲ್ಲಿ ಅನನುಕೂಲಕರವಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ನೇಪಾಳ ದಿಂದ ಉದ್ಯೋಗ ಹುಡುಕಿಕೊಂಡು ಬರುತ್ತಿರುವ ಲಕ್ಷಾಂತರ ನೇಪಾಳಿಗರಿಂದ ಉಂಟಾಗುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಒಪ್ಪಂದದಿಂದ ಭಾರತಕ್ಕಿಂತ ನೇಪಾಳ ಪಡೆಯು ತ್ತಿರುವುದೇ ಹೆಚ್ಚು ಎನ್ನುವುದು ಸರ್ವವಿದಿತವಾದರೂ ನೇಪಾಳಿ ಮಾವೋವಾದಿಗಳು ರಾಜಕೀಯ ಲಾಭಕ್ಕಾಗಿ ಭಾರತ ವಿರೋಧಿ ಭಾವನೆಗೆ ಕುಮ್ಮಕ್ಕು ನೀಡುತ್ತಲೇ ಬಂದಿದ್ದಾರೆ.

ಸೇನೆಯಲ್ಲಿ ಗೂರ್ಖಾಗಳು
ಸಾವಿಗೆ ಅಂಜುವುದಿಲ್ಲ ಎಂದು ಯಾರಾದರೂ ಹೇಳುತ್ತಾರಾ ದರೆ ಒಂದೋ ಆತ ಸುಳ್ಳು ಹೇಳುತ್ತಿರಬೇಕು, ಇಲ್ಲವೇ ಆತ ಓರ್ವ ನೇಪಾಳಿ ಗೂರ್ಖಾ ಆಗಿರಬೇಕು ಎಂದು ಗೂರ್ಖಾ ರೆಜಿಮೆಂಟಿನಲ್ಲೇ ಕಮಿಷನ್‌ ಪಡೆದು ಗೂರ್ಖಾಗಳ ನಡುವೆ ಹಲವಾರು ವರ್ಷ ಸೇವೆ ಸಲ್ಲಿಸಿದ ಫೀಲ್ಡ… ಮಾರ್ಷಲ್‌ ಮಾಣಿಕ್‌ ಷಾ ಹೆಮ್ಮೆಯಿಂದ ನೇಪಾಳಿ ಯೋಧರ ಕುರಿತು ಹೇಳಿದ್ದರು. ನಿಷ್ಠೆಗೆ ಹೆಸರಾದ ಸಾಹಸಿ ಮತ್ತು ಕಷ್ಟ ಸಹಿಷ್ಣುಗಳೆನಿಸಿದ ಸೇನೆಗೆ ಸೇರ ಬಯಸುವ ನೇಪಾಳಿ ಯುವಕರಿಗೆ ತಮ್ಮ ದೇಶದ ಸೇನೆಯಲ್ಲದೇ ಭಾರತದ ಸೇನೆಯನ್ನು ಸೇರಬಹುದಾದ ಎರಡೆರಡು ಆಯ್ಕೆ. ಪ್ರಸ್ತುತ ಭಾರತೀಯ ಸೇನೆಯಲ್ಲಿ ಸುಮಾರು 40,000 ನೇಪಾಳಿಗಳು ಸೇವೆ ಸಲ್ಲಿಸುತ್ತಿ¨ªಾರೆ ಮತ್ತು ಸುಮಾರು 90,000 ನೇಪಾಳಿಗಳು ಭಾರತೀಯ ನಿವೃತ್ತರಾಗಿ ಮಾಜಿ ಸೈನಿಕರ ನೆಲೆಯಲ್ಲಿ ಪೆನ್ಶನ್‌, ವೈದ್ಯಕೀಯ, ಇಖಈ ಕ್ಯಾಂಟೀನ್‌ ಮತ್ತಿತರ ಸೌಲಭ್ಯ ಪಡೆಯುತ್ತಿದ್ದಾರೆ. ಪ್ಯಾರಾಮಿಲಿಟರಿ ಸೇವೆಯಲ್ಲಿದ್ದು ನಿವೃತ್ತರಾಗಿ ಪೆನ್ಶನ್‌ ಪಡೆಯುತ್ತಿರುವ 37,000 ನೇಪಾಳಿಗಳನ್ನು ಸೇರಿಸಿಕೊಂಡರೆ ಈ ಸಂಖ್ಯೆ 1,27,000 ಆಗುತ್ತದೆ . ಇದಲ್ಲದೆ ಒಂದು ಅಂದಾಜಿನಂತೆ ಸುಮಾರು 16 ಲಕ್ಷ ನೇಪಾಳಿಗಳು ಭಾರತದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನೇಪಾಳದಂತೆ ಭಾರತದಲ್ಲಿ ಈ ಕುರಿತು ಯಾವ ಪಕ್ಷಗಳೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಮ್ಮ ನೌಕರಿಯನ್ನು ನೇಪಾಳಿಗಳು ಕಿತ್ತುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿಲ್ಲ. 

Advertisement

ಸಾಂಸ್ಕೃತಿಕ ಸಂಬಂಧ
ಭಾರತ ಮತ್ತು ನೇಪಾಳ ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿಯೂ ನಿಕಟ ಸಂಬಂಧವನ್ನು ಹೊಂದಿವೆ. ಭೌಗೋಳಿಕವಾಗಿ ಚೀನಾಗಿಂತ ಭಾರತಕ್ಕೆ ನಿಕಟವಾಗಿ ರುವ, ಪ್ರವಾಸೋದ್ಯಮವೇ ಮುಖ್ಯ ಆದಾಯವಾಗಿರುವ ಹಿಮಾಲಯದ ತಪ್ಪಲಿನ ದೇಶದಲ್ಲಿ ಸಂಭವಿಸಿದ ಪ್ರಾಕೃತಿಕ ವಿಪತ್ತಿನ ಸಂದರ್ಭಗಳಲ್ಲಿ ಭಾರತ ಧಾವಿಸಿ ನೆರವನ್ನು ನೀಡಿದೆ. ನೇಪಾಳದ ರಾಜಧಾನಿಯಾದ ಕಠ್ಮಂಡುವಿನ ಪ್ರಮುಖ ಆಕರ್ಷಣೆಯಾದ ಪಶುಪತಿನಾಥ ದೇವಾಲಯದ ಯಾತ್ರೆಗಾಗಿ ಲಕ್ಷಾಂತರ ಯಾತ್ರಾರ್ಥಿಗಳು ಭಾರತದಿಂದ ನೇಪಾಳಕ್ಕೆ ಭೇಟಿ ನೀಡುತ್ತಾರೆ. ಪಶುಪತಿನಾಥ ದೇವಾಲಯದಲ್ಲಿ ಪೂಜಾ ಕೈಂಕ ರ್ಯಕ್ಕಾಗಿ ದಕ್ಷಿಣ ಭಾರತೀಯ ಅರ್ಚಕರನ್ನು ನೇಮಿಸಿಕೊಳ್ಳುವ ಪರಂಪರೆ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. 

ಭಾರತ-ನೇಪಾಳ ಸಂಬಂಧದ ನಡುವೆ ಹುಳಿ ಹಿಂಡುವ ಯಾವ ಅವಕಾಶವನ್ನೂ ಚೀನೀಯರು ಕಳೆದುಕೊಳ್ಳಲು ಸಿದ್ಧವಿಲ್ಲ. ಚೀನಿ ಮತ್ತು ನೇಪಾಳದ ನಡುವೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಾ ಸಾಮ್ಯತೆಯಿಲ್ಲ. ಒನ್‌ ರೋಡ್‌ ಒನ್‌ ಬೆಲ್ಟ…ನಂತಹ ಯೋಜನೆ ಗಳಿಂದ ನೆರೆಯ ಪುಟ್ಟ ದೇಶಗಳನ್ನು ಸಾಲದ ಕೂಪಕ್ಕೆ ತಳ್ಳಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ, ತನ್ನ ಸಿದ್ಧವಸ್ತುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಳ್ಳುವ ಚೀನಿ ದುರಾಶೆಯ ಜಾಲಕ್ಕೆ ನೇಪಾಳ ಸಿಕ್ಕಿ ಬೀಳದಂತೆ ಎಚ್ಚೆತ್ತುಕೊಳ್ಳಬೇಕಾಗಿದೆ. 2015ರಲ್ಲಿ ನಡೆದ ದಿಗ್ಬಂಧನದಿಂದಾಗಿ ಎರಡೂ ದೇಶಗಳ ನಡುವಿನ ಹಳ್ಳ ಹಿಡಿದ ಸಂಬಂಧ ಪುನಃ ಹಳಿಗೆ ತರುವ ಜವಾಬ್ದಾರಿ ಎರಡೂ ರಾಷ್ಟ್ರಗಳ ಮುಖ್ಯಸ್ಥರ ಮೇಲಿದೆ. ಎರಡೂ ಸರಕಾರಗಳ ನಡುವೆ ಇತ್ತೀಚೆಗೆ ನಡೆದ ಸೌಹರ್ದಯುತ ಮಾತುಕತೆ ಆ ನಿಟ್ಟಿನಲ್ಲಿ ಆಶಾದಾ ಯಕವಾಗಿ ಕಾಣುತ್ತಿದೆ. ಹಳೆಯ ಘಟನೆಗಳಿಂದ ಉಭಯ ದೇಶಗಳು ಪಾಠ ಕಲಿತಿರುವ ಲಕ್ಷಣ ಕಾಣಿಸುತ್ತಿದೆ. “ಬದುಕು ಮತ್ತು ಇತರರನ್ನು ಬದುಕಲು ಬಿಡು’ (Live and let live) ಎನ್ನುವ ಸಿದ್ಧಾಂತದಂತೆ ಸಾರ್ವಭೌಮ ರಾಷ್ಟ್ರವಾದ ನೇಪಾಳದ ಆಸೆ ಆಶೋತ್ತರಗಳಿಗೆ ಸ್ಪಂದಿಸುವ ಭಾರತ ಮತ್ತು ಭಾರತದ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆ. ಪಿ. ಓಲಿ ಸರಕಾರ ಎಚ್ಚರವಹಿಸಿ ನುಡಿದಂತೆ ನಡೆದರೆ ಮತ್ತೂಮ್ಮೆ ಭಾರತ-ನೇಪಾಳ ನಡುವಿನ ಸಂಬಂಧ ಗಾಢವಾಗುವುದರಲ್ಲಿ ಸಂದೇಹವಿಲ್ಲ.

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next