Advertisement

ವಂಶಾಡಳಿತ ಮಾರಕ;  ಸುದ್ದಿಸಂಸ್ಥೆಯೊಂದಕ್ಕೆ ಪ್ರಧಾನಿ ಮೋದಿ ಸಂದರ್ಶನ

02:25 AM Feb 10, 2022 | Team Udayavani |

ಸತತ ಎರಡು ದಿನ ಸಂಸತ್‌ನಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಬುಧವಾರವೂ ಕಾಂಗ್ರೆಸ್‌ ಸಹಿತ ವಿಪಕ್ಷಗಳ ವಿರುದ್ಧ ವಾಕ್ಸಮರವನ್ನೇ ನಡೆಸಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಪಂಚರಾಜ್ಯ ಚುನಾವಣೆಯಿಂದ ಹಿಡಿದು, ಇತ್ತೀಚಿನ ಎಲ್ಲ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.

Advertisement

ವಂಶಾಡಳಿತ
ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವುದೇ ವಂಶಪಾರಂಪರ್ಯ ಆಡಳಿತ. ನೀವು ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಹರಿಯಾಣ, ಝಾರ್ಖಂಡ್‌, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವಂಶಾಡಳಿತ ರಾಜಕೀಯ ತುಂಬಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪಕ್ಷಗಳನ್ನು ಎರಡು ಪ್ರತ್ಯೇಕ ಕುಟುಂಬಗಳು ನಡೆಸುತ್ತಿವೆ.

ನಕಲಿ ಸಮಾಜವಾದಿಗಳು
ನಿಜವಾದ ಸಮಾಜವಾದಿಗಳು ಎಂದಾದರೂ ವಂಶಾಡಳಿತ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಿದ್ದರೇ? ಈ ಹಿಂದೆ ಸಮಾಜವಾದಿ ಚಿಂತನೆ ಹೊಂದಿದ್ದ ರಾಮಮನೋಹರ ಲೋಹಿಯ, ಜಾರ್ಜ್‌ ಫೆರ್ನಾಂಡಿಸ್‌ ಅವರು ವಂಶಪಾರಂಪರ್ಯ ಆಡಳಿತ ನಡೆಸಿದ್ದರೇ?    ಬಿಹಾರ ಸಿಎಂ ನಿತೀಶ್‌ ಕುಮಾರ್‌  ಮನೆಯವರು ರಾಜಕೀಯದಲ್ಲಿ ದ್ದಾರೋ? ಇಲ್ಲ. ಆದ್ದರಿಂದ ಇವರೇ ನಿಜವಾದ ಸಮಾಜವಾದಿಗಳು. ಆದರೆ.  ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಒಂದು ಕುಟುಂಬದ 45 ಮಂದಿ ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಇವರು ನಕಲಿ ಸಮಾಜವಾದಿಗಳು.

ಐದು ರಾಜ್ಯಗಳಲ್ಲೂ ನಮ್ಮದೇ ಗೆಲುವು
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ ಮತ್ತು ಮಣಿಪುರದಲ್ಲಿ ಸಂಪೂರ್ಣ ಬಹುಮತದೊಂದಿಗೆ ನಾವೇ ಗೆಲ್ಲುತ್ತೇವೆ. ಅವಕಾಶ ಸಿಕ್ಕ ಕಡೆಗಳಲ್ಲಿ ನಾವು ಸ್ಥಿರವಾದ ಆಡಳಿತ ನೀಡಿದ್ದೇವೆ. ಈಗ ಆಡಳಿತ ವಿರೋಧಿ ಅಲೆ ಇಲ್ಲ, ಬದಲಾಗಿ ಆಡಳಿತ ಪರ ಅಲೆ ಇದೆ. ಈ ಅಲೆಯಿಂದಲೇ ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತದೆ.

ಸೋಲಿನಿಂದಲೂ ಪಾಠ
ನಾವು ಚುನಾವಣೆಗಳನ್ನು ಗೆಲ್ಲುತ್ತೇವೆ ಹಾಗೂ ಸೋಲುತ್ತೇವೆ. ನಾವು ಸೋತಾಗ ಬೇರಿನ ಮಟ್ಟವನ್ನು ಸಂಪರ್ಕಿಸಲು ಪ್ರಯತ್ನಿಸುತ್ತೇವೆ. ಗೆದ್ದಾಗ ಜನರ ಮನಸ್ಸುಗಳನ್ನು ಗೆಲ್ಲುತ್ತೇವೆ. ನಮ್ಮಿಂದ ಗೆಲುವನ್ನು ಬೇರೆಯವರು ಕಿತ್ತುಕೊಳ್ಳಲು ಬಿಡದ ಹಾಗೆ ಕೆಲಸ ಮಾಡುತ್ತೇವೆ. ಸೋಲು ಅಥವಾ ಗೆಲುವಿನಲ್ಲೂ ನಾವು ಪಾಠ ಕಲಿಯುತ್ತೇವೆ.

Advertisement

ಸದನದಲ್ಲಿ ಕುಳಿತರೆ ಗೊತ್ತಾಗುತ್ತದೆ
ಸದನದಲ್ಲಿ ಪ್ರತಿಯೊಬ್ಬ ಸಂಸದರು ಕೇಳಿದ ಪ್ರಶ್ನೆಗೂ ನಾವು ಉತ್ತರಿಸುತ್ತೇವೆ. ವಿದೇಶಾಂಗ ಅಥವಾ ರಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯಾದರೆ ಸಂಬಂಧಪಟ್ಟ ಸಚಿವರು ನೀಡುತ್ತಾರೆ. ಆದರೆ, ಪ್ರಶ್ನೆ ಕೇಳಿದವರೇ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಸದನದಲ್ಲಿ ಕುಳಿತುಕೊಳ್ಳುವುದಿಲ್ಲ. ಹಾಗಾದಾಗ ನಾವು ಮಾಡುವುದಾದರೂ ಏನು? (ಪರೋಕ್ಷವಾಗಿ ರಾಹುಲ್‌ ಗಾಂಧಿ ಅವರನ್ನು ಉದ್ದೇಶಿಸಿ.)

ದೇಶದ ಸಂಪತ್ತು ವಶ
ಭ್ರಷ್ಟಾಚಾರದಿಂದ ದೇಶಕ್ಕೆ ಮಾರಕವಾಗಿದ್ದು, ಇದರಿಂದ ದೇಶದ ಸಂಪತ್ತು ಸೋರಿ ಹೋಗುತ್ತಿದೆ. ಆದರೆ, ತನಿಖಾ ಸಂಸ್ಥೆಗಳು ಅಡ್ಡದಾರಿಯಲ್ಲಿ ಗಳಿಸಿದವರನ್ನು ಪತ್ತೆ ಹಚ್ಚಿ ಅವರಿಂದ ದೇಶದ ಸಂಪತ್ತನ್ನು ವಶ ಮಾಡಿಕೊಳ್ಳುತ್ತಿವೆ. ತನಿಖಾ ಸಂಸ್ಥೆಗಳ ವಿಚಾರದಲ್ಲಿ ಕೇಂದ್ರ ಸರಕಾರ ಮೂಗು ತೂರಿಸುವುದಿಲ್ಲ. ಚುನಾವಣೆ ಕಾರಣಕ್ಕಾಗಿಯೇ ಈ ದಾಳಿಗಳು ನಡೆಸಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ಒಪ್ಪುವುದಿಲ್ಲ. ಚುನಾವಣೆಯಿಂದಾಗಿಯೇ ಆಗುತ್ತಿದೆ ಎಂದಾದಲ್ಲಿ  ವಿಪಕ್ಷಗಳು ಒಂದು ದೇಶ, ಒಂದು ಚುನಾವಣೆಗೆ ಒಪ್ಪಿಕೊಳ್ಳಲಿ. ಆಗ ಇಂಥ ಆರೋಪಗಳೇ ಇರದು.

ದೇಶದ ರೈತರ ಹಿತಕ್ಕಾಗಿ ಕೃಷಿ ಕಾಯ್ದೆ ತಂದಿದ್ದೆವು
ದೇಶದ ರೈತರ ಹಿತಕ್ಕಾಗಿಯೇ ಮೂರು ಕೃಷಿ ಕಾಯ್ದೆಗಳನ್ನು ತಂದಿದ್ದೆವು. ಆದರೆ, ರಾಷ್ಟ್ರೀಯ ಹಿತಾಸಕ್ತಿಗಾಗಿ  ಆ ಕಾಯ್ದೆಗಳನ್ನು ವಾಪಸ್‌ ಪಡೆದೆವು. ಈಗ ಈ ಕೃಷಿ ಕಾಯ್ದೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನಾವು ಇಂಥ ಕ್ರಮಗಳನ್ನು ಯಾಕೆ ತೆಗೆದುಕೊಂಡೆವು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.

ವಿವಿಧತೆಯಲ್ಲೇ ಏಕತೆ
ನಾವು ಪ್ರಾದೇಶಿಕ ಸಮಸ್ಯೆಗಳತ್ತ ಗಮನ ಕೊಡುವುದಿಲ್ಲ ಎಂಬ ಆರೋಪ ಸುಳ್ಳು. ನಾವು ಎಲ್ಲರನ್ನೂ ಜತೆಯಾಗಿಯೇ ಕರೆದುಕೊಂಡು ಹೋಗುತ್ತೇವೆ.  ವಿವಿಧತೆಯಲ್ಲಿ ಏಕತೆಯೇ ನಮ್ಮ ಮಂತ್ರ. ಆದರೆ, ಕೆಲವರು ಸ್ವಹಿತಾ

ಸಕ್ತಿಗಾಗಿ ಸಲ್ಲದ  ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ಭಾರತ ದಲ್ಲಿ ಇದೇ ಮೊದಲ ಬಾರಿಗೆ ರಾಜ್ಯವೊಂದರಲ್ಲಿ ದೀರ್ಘಾವಧಿ ವರೆಗೆ ಮುಖ್ಯಮಂತ್ರಿಯಾಗಿದ್ದ ಒಬ್ಬರು, ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ನನಗೆ ಎಲ್ಲ ರಾಜ್ಯಗಳ ಸ್ಥಳೀಯ ಸಮಸ್ಯೆಗಳು ಗೊತ್ತು.

Advertisement

Udayavani is now on Telegram. Click here to join our channel and stay updated with the latest news.

Next