Advertisement

ವಿಶ್ವನಾಥನ ಕಾಶಿ ಇಂದು ಭವ್ಯ ಕಾಶಿ: ಪೇಜಾವರ ಶ್ರೀ

01:17 AM Dec 14, 2021 | Team Udayavani |

ಉಡುಪಿ: ವಾರಾಣಸಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಕಾಶೀ ವಿಶ್ವನಾಥ ಧಾಮದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪಾಲ್ಗೊಂಡರು. ಕರ್ನಾಟಕದಿಂದ ಶ್ರೀ ರವಿಶಂಕರ ಗುರೂಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಭಾಗವಹಿಸಿದ್ದರು.

Advertisement

“ನಾನೊಂದು ದಿನ ಕಾಶಿಗೆ ಹೋಗಬೇಕು. ಅಲ್ಲೇ ವಾಸ ಮಾಡಬೇಕು’ ಎಂದು ನಾವು ನಿತ್ಯವೂ ಕಾಶೀ ವಿಶ್ವೇಶ್ವರನ ಸ್ಮರಣೆ ಮಾಡುವ ಕ್ರಮವಿದೆ. ಈಗ ಪುರಾತನವಾದ ಕಾಶಿ ಭವ್ಯಕಾಶಿಯಾಗಿದೆ, ಸುಂದರ ಕಾಶಿಯಾಗಿದೆ. ಈಗ ಅಲ್ಲಿಗೆ ಹೋಗೋಣ ಅನ್ನಿಸುವಂತಿದೆ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಸ್ವತ್ಛ ಪರಿಸರವನ್ನು ನಿರ್ಮಿಸಲಾಗಿದೆ. ಹಿಂದೆ ಸುಮಾರು 3,000 ಚದರಡಿ ವಿಸ್ತೀರ್ಣವಿದ್ದರೆ ಈಗ 5 ಲಕ್ಷ ಚದರಡಿಗೆ ವಿಸ್ತರಣೆಯಾಗಿದೆ. ಗಂಗಾ ನದಿಯಿಂದ ನೇರವಾಗಿ ದೇವಸ್ಥಾನಕ್ಕೆ ಬರಲು ದಾರಿ ನಿರ್ಮಿಸಲಾಗಿದೆ. ದೇಶದ ಎಲ್ಲ ರಾಜ್ಯಗಳನ್ನು ಪ್ರತಿನಿಧಿಸುವಂತೆ ಕಾರ್ಯಕ್ರಮವನ್ನು ನಡೆಸಲಾಗಿದೆ. ಕಾಶಿಗೆ ಸಂಬಂಧಿಸಿದ ಎಲ್ಲ ಸಂತರ ಹೆಸರುಗಳನ್ನು, ಅವರ ಕೊಡುಗೆಗಳನ್ನು ಕಂಠಸ್ಥವಾಗಿ ಮೋದಿ ಹೇಳಿದ್ದು ಅಚ್ಚರಿ ತರುತ್ತದೆ ಎಂದು ಸ್ವಾಮೀಜಿ ಹೇಳಿದರು.

ಶಂಕರ, ಮಧ್ವ,ತೀರ್ಥಂಕರರ ಉಲ್ಲೇಖ
ಪ್ರಧಾನಿಯವರು ತಮ್ಮ ಭಾಷಣದಲ್ಲಿ ಕಾಶೀ ಕ್ಷೇತ್ರಕ್ಕೂ ಶಂಕರ, ಮಧ್ವ, ತೀರ್ಥಂಕರರಿಗೂ ಇದ್ದ ಸಂಬಂಧವನ್ನು ಉಲ್ಲೇಖಿಸಿದರು. ಶಂಕರಾಚಾರ್ಯರು ಕಾಶೀ ರಾಜನಿಗೆ ನೀಡಿದ ಪ್ರೇರಣೆಯನ್ನು ತಿಳಿಸಿದರು. ಕಾಸರಗೋಡಿನ ಕಾವು ಮಠದ ತ್ರಿವಿಕ್ರಮ ಪಂಡಿತಾಚಾರ್ಯರು ಬರೆದ ಮಧ್ವಾಚಾರ್ಯರ ಜೀವನಚರಿತ್ರೆ ಸಾರುವ ಮಧ್ವವಿಜಯದ “ತೇನೋಪಯಾತೇನ..’ (ಪಾಪ ಪರಿಹಾರಕ ಕ್ಷೇತ್ರ ಕಾಶೀ ಎಂದು ಶಿಷ್ಯರಿಗೆ ಹೇಳಿದ ವಿವರಣೆಯ) ಶ್ಲೋಕವನ್ನು ಪೂರ್ತಿಯಾಗಿ ಉಲ್ಲೇಖಿಸಿದರು. ತುಲಸೀದಾಸರಿಗೆ ರಾಮಚರಿತ ಮಾನಸವನ್ನು ಕಾಶಿಯಲ್ಲಿ ಬರೆಯಲು ಸ್ಫೂರ್ತಿಯನ್ನೂ ತಿಳಿಸಿದರು. ಜೈನ ತೀರ್ಥಂಕರರಲ್ಲಿ ನಾಲ್ವರು ಕಾಶಿಯವರು ಎಂದು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಉಡುಪಿ ರಥಬೀದಿ, ಆತ್ರಾಡಿಯ ಕವಳೆ ಮಠ, ಬೈಂದೂರು ಶನೀಶ್ವರ ದೇವಸ್ಥಾನ, ಕುಂದಾಪುರದ ಕುಂದೇಶ್ವರ, ಕೋಟದ ಅಮೃತೇಶ್ವರಿ, ಮಂದಾರ್ತಿ – ಮುಂಡ್ಕೂರು ದುರ್ಗಾಪರಮೇಶ್ವರೀ, ಕಾರ್ಕಳ ವೆಂಟರಮಣ ದೇವಸ್ಥಾನದಲ್ಲಿ ನೇರಪ್ರಸಾರ ಮಾಡಲಾಯಿತು.

Advertisement

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೀಠಾರೋಹಣದ 83ನೇ ವರ್ಧಂತಿ ದಿನವೇ ಕಾಶೀ ವಿಶ್ವನಾಥ ಧಾಮದ ಉದ್ಘಾಟನೆ ನೆರವೇರಿತು.

ಜಿಲ್ಲೆಯಾದ್ಯಂತ ವೀಕ್ಷಣೆ
ದ.ಕ. ಜಿಲ್ಲೆಯಲ್ಲಿ ಮಂಗಳೂರಿನ ಕದ್ರಿ ಕ್ಷೇತ್ರ, ಪಣಂಬೂರು ನಂದನೇಶ್ವರ ದೇವಾಲಯ, ಕಟೀಲು, ಸೋಮೇಶ್ವರ, ಬಂಟ್ವಾಳದ ನಂದಾವರ, ಬೆಳ್ತಂಗಡಿಯ ತಾಲೂಕಿನ ಸೌತಡ್ಕ, ಪುತ್ತೂರು ಮಹಾಲಿಂಗೇಶ್ವರ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳ ಆವರಣದಲ್ಲಿ ಅಂತೆಯೇ ಉಡುಪಿ ಜಿಲ್ಲೆಯಲ್ಲಿ ಉಡುಪಿ ರಥಬೀದಿ, ಆತ್ರಾಡಿಯ ಕವಳೆ ಮಠ, ಬೈಂದೂರು ಶನೀಶ್ವರ ದೇವಸ್ಥಾನ, ಕುಂದಾಪುರದ ಕುಂದೇಶ್ವರ, ಕೋಟದ ಅಮೃತೇಶ್ವರಿ, ಮಂದಾರ್ತಿ – ಮುಂಡ್ಕೂರು ದುರ್ಗಾಪರಮೇಶ್ವರೀ, ಕಾರ್ಕಳ ವೆಂಟರಮಣ ದೇವಸ್ಥಾನದಲ್ಲಿ ಬೃಹತ್‌ ಎಲ್‌ಸಿಡಿ ಪರದೆಗಳನ್ನು ಅಳವಡಿಸಿ “ಭವ್ಯಕಾಶಿ-ದಿವ್ಯಕಾಶಿ’ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next