ಮುಂಬಯಿ: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದರೆ ಮತ್ತೊಂದೆಡೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದು ಉತ್ತಮ ರಾಜಕಾರಣಿಯ ಸಂಕೇತವಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.
ಪಕ್ಷದ ಮುಖವಾಣಿ ಸಾಮ್ನಾದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ‘ರೋಖ್ ಥೋಕ್’ನಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದವು ಮಾನವೀಯತೆಯ ಹೋರಾಟವಾಗಿದೆಯೇ ಹೊರತು ಎರಡು ರಾಜ್ಯಗಳ ಜನರು ಮತ್ತು ಸರ್ಕಾರಗಳ ನಡುವಿನ ಹೋರಾಟವಲ್ಲ ಎಂದು ರಾವತ್ ಹೇಳಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಸುತ್ತಮುತ್ತಲಿನ ಗಡಿ ಪ್ರದೇಶಗಳು ಗಣನೀಯವಾಗಿ ಮರಾಠಿ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವುದರಿಂದ ಮಹಾರಾಷ್ಟ್ರವು ಬಹಳ ಹಿಂದಿನಿಂದಲೂ ಹಕ್ಕು ಸಾಧಿಸುತ್ತಿದೆ.
“ರಾಜ್ಯಗಳ ಮರುಸಂಘಟನೆಯ ಸಮಯದಲ್ಲಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಕರ್ನಾಟಕದಲ್ಲಿ ಸೇರ್ಪಡೆಗೊಂಡ ಬೆಳಗಾವಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಮರಾಠಿ ಮಾತನಾಡುವ ಜನಸಂಖ್ಯೆಯ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ರಾವುತ್ ಹೇಳಿದರು.
“ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುತ್ತಾರೆ, ಆದರೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಕಣ್ಣು ಮುಚ್ಚುತ್ತಾರೆ. ಇದು ಉತ್ತಮ ರಾಜಕಾರಣಿಯ ಲಕ್ಷಣವಲ್ಲ,” ಎಂದು ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವುದು ಒಳ್ಳೆಯದು, ಆದರೆ ಕೇಂದ್ರ ಸರ್ಕಾರ ತಟಸ್ಥ ನಿಲುವು ತೆಗೆದುಕೊಳ್ಳುತ್ತದೆಯೇ ಎಂಬುದು ಪ್ರಶ್ನೆ ಎಂದು ರಾಜ್ಯಸಭಾ ಸದಸ್ಯ ರಾವತ್ ಪ್ರಶ್ನಿಸಿ, ಗಡಿ ವಿವಾದಕ್ಕೆ ಸಂಸತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.