Advertisement

ಪಿಎಲ್‌ಸಿ ಯೋಜನಾ ಕೈಪಿಡಿ ಬಿಡುಗಡೆ

10:18 AM Jan 21, 2019 | Team Udayavani |

ಚಿಕ್ಕಮಗಳೂರು: 2019-20ನೇ ಸಾಲಿಗಾಗಿ ನಬಾರ್ಡ್‌ ಸಿದ್ಧಪಡಿಸಿರುವ 5,54,194 ಲಕ್ಷ ರೂ.ಗಳ ಸಂಭವನೀಯ ಸಾಲ ವಿತರಣೆಯ ಅಂಕಿ ಅಂಶಗಳನ್ನೊಳಗೊಂಡ ಪಿಎಲ್‌ಸಿ ಯೋಜನಾ ಕೈಪಿಡಿಯನ್ನು ಜಿ.ಪಂ. ಉಪಕಾರ್ಯದರ್ಶಿ ರಾಜಗೋಪಾಲ್‌ ಬಿಡುಗಡೆ ಮಾಡಿದರು.

Advertisement

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕ್‌ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥರ ಸಭೆಯಲ್ಲಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, 2019ರ ಏಪ್ರಿಲ್‌ 1ರಿಂದ 2020ರ ಮಾರ್ಚ್‌ 31ರವರೆಗೆ ಜಿಲ್ಲಾದ್ಯಂತ ಬ್ಯಾಂಕ್‌ಗಳು ನೀಡಬಹುದಾದ ಸಾಲ ಬಿಡುಗಡೆಗೆ ಸಂಬಂಧಪಟ್ಟ ಯೋಜನೆ ರೂಪಿಸಲು ಇದು ಸಹಕಾರಿ ಎಂದರು.

ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಸಹಕಾರ ಅಗತ್ಯವೆಂದ ರಾಜಗೋಪಾಲ್‌, ಆಧುನಿಕ ತಂತ್ರಜ್ಞಾನ ಬಳಕೆಮಾಡಿಕೊಂಡು ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮತ್ತಿತರ ಫಲಾನುಭವಿಗಳಿಗೆ ತೊಂದರೆಯಾಗದಂತೆ ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.

ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಇ.ಪ್ರತಾಪ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಎಲ್‌ಪಿ(ಪೊಟೆನ್ಷಿಯಲ್‌ ಲಿಂಕ್ಡ್ ಕ್ರೆಡಿಟ್ ಪ್ಲಾನ್‌) ಜಿಲ್ಲೆಯ ಸಾಮರ್ಥ್ಯಕ್ಕನುಗುಣವಾದ ಸಮತೋಲನದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಸಿದ್ಧಪಡಿಸಲಾಗಿದೆ. ಜಿಲ್ಲಾದ್ಯಂತ ಎಲ್ಲ ಪ್ರದೇಶಗಳ ಬೇಡಿಕೆ ಮತ್ತು ಸಾಮರ್ಥ್ಯ ಅರಿತು ಮುಂಬರುವ ದಿನಗಳಲ್ಲಿ ವಿವಿಧ ವಲಯಗಳಿಗೆ ವಿತರಿಸಬಹುದಾದ ಸಾಲದ ಪ್ರಮಾಣದ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದರು.

ಕೃಷಿ ವಲಯ ಪ್ರಥಮ ಆದ್ಯತೆಯಾಗಿದ್ದು, ಬೆಳೆಸಾಲ 2,88,891 ಲಕ್ಷ ರೂ.ಗಳನ್ನು ಜೊತೆಗೆ ಅವಧಿಸಾಲವಾಗಿ 96,276 ಲಕ್ಷ ರೂ. ಸೇರಿದಂತೆ 3,85,167ಲಕ್ಷ ರೂ.ಗಳನ್ನು ವಿತರಿಸುವ ಅವಕಾಶವಿದೆ. ಕೃಷಿ ಚಟುವಟಿಕೆಗಳಿಗೆ ಮೂಲ ಸೌಕರ್ಯ ನಿರ್ಮಾಣಕ್ಕಾಗಿ 32,810ಲಕ್ಷ ರೂ., ಕೃಷಿಗೆ ಪೂರಕವಾಗಿ ಹಸು, ಎಮ್ಮೆ, ಕುರಿ, ಕೋಳಿ, ಹಂದಿ ಮತ್ತಿತರ ಪ್ರಾಣಿಗಳ ಸಾಕಣೆಗಾಗಿ 52,688ಲಕ್ಷ ರೂ. ಸೇರಿದಂತೆ ಒಟ್ಟಾರೆ ಕೃಷಿ ವಲಯಕ್ಕೆ 4,70,666 ಲಕ್ಷ ರೂ.ಗಳ ಸಾಲ ಪಡೆಯುವ ಸಾಮರ್ಥ್ಯ ಜಿಲ್ಲೆಗಿದೆ ಎಂದರು.

Advertisement

ಅತಿಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ 17,100ಲಕ್ಷ ರೂ. ರಫ್ತುಸಾಲ 24,192ಲಕ್ಷ ರೂ., ಶಿಕ್ಷಣವಲಯಕ್ಕೆ 9,170 ಲಕ್ಷ ರೂ., ವಸತಿಗಾಗಿ 27,200 ಲಕ್ಷ ರೂ., ಸೋಲಾರ್‌-ಗಾಳಿಯಂತ್ರ ಸೇರಿದಂತೆ ಅಸಂಪ್ರದಾಯಕ ಶಕ್ತಿ ಉತ್ಪಾದನಾ ವಲಯದಲ್ಲಿ 4,078 ಲಕ್ಷ ರೂ., ಶಾಲೆ-ಆಸ್ಪತ್ರೆ ನಿರ್ಮಾಣ ಸೇರಿದಂತೆ ಸಾಮಾಜಿಕ ಸೌಕರ್ಯ ನಿರ್ಮಾಣಕ್ಕೆ 1,787ಲಕ್ಷ ರೂ. ಹೀಗೆ ಒಟ್ಟಾರೆ 5,55,194.04ಲಕ್ಷ ರೂ.ಗಳ ವಿವರವಾದ ವರದಿ ಮುಂದಿಟ್ಟ ಪ್ರತಾಪ್‌, ಜಿಲ್ಲೆಯ ಗ್ರಾಮೀಣ ಚಟುವಟಿಕೆಗಳಿಗೆ ಬ್ಯಾಂಕ್‌ಗಳು ಹಾಗೂ ಇಲಾಖೆಗಳು ಈ ಸಾಮರ್ಥ್ಯ ಅರಿತು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬಹುದು ಎಂದು ಹೇಳಿದರು.

ಕಾರ್ಪೋರೇಷನ್‌ ಬ್ಯಾಂಕ್‌ ಉಡುಪಿ ವಲಯ ಪ್ರಬಂಧಕ ಡೆಲಿಯಾಡಯಾಸ್‌ ಸ್ವಾಗತಿಸಿ ಪ್ರಾಸ್ತಾವಿಸಿದರು. ರಿಜರ್ವ್‌ ಬ್ಯಾಂಕ್‌ ಇಂಡಿಯಾ ಬೆಂಗಳೂರು ವಲಯ ಕಚೇರಿಯ ಲೀಡ್‌ ಡಿಸ್ಟ್ರಿಕ್ಟ್ ಆಫೀಸರ್‌ ಎನ್‌.ನಾಗರಾಜ್‌ ಜಿಲ್ಲೆಯಲ್ಲಿ ಬ್ಯಾಂಕರ್‌ಗಳ ಕಾರ್ಯವಿಧಾನ ವಿಮರ್ಶಿಸಿದರು. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಪ್ರಬಂಧಕ ಪ್ರಶಾಂತ ದೇಸಾಯಿ ನಿರೂಪಿಸಿ, ವಂದಿಸಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 285 ಬ್ಯಾಂಕ್‌ ಶಾಖಾ ಪ್ರತಿನಿಧಿಗಳು, ಡಿ.ಡಿ.ಪಿ.ಐ. ಪ್ರಸನ್ನಕುಮಾರ್‌ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ಹಾಗೂ ಪಶುಸಂಗೋಪನಾ ಇಲಾಖಾ ಪ್ರತಿನಿಧಿಗಳು ಸೇರಿದಂತೆ ಹಲವು ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next